Saturday, December 19, 2009

ಗಂಭೀರ ಕವಿಯ ಹಸನ್ಮುಖ...

ತಮ್ಮ ಶ್ರೀಮದ್ಗಾಂಭೀರ್ಯ, ಬಿಗುವು, ಎಷ್ಟು ಬೇಕೋ ಅಷ್ಟು ಮಾತು, ಸಲೀಸಾಗಿ ಯಾರೊಂದಿಗೂ ಬೆರೆಯದ ಸ್ವಭಾವ-ಇವುಗಳಿಂದ ಜಿಎಸ್ಸೆಸ್ ಜೊತೆ ಸಲುಗೆ ಅಸಾಧ್ಯ ಎಂದೇ ಜನಜನಿತ ಅಭಿಪ್ರಾಯ. ಆದರೆ ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು-ಅವರ ಹಾಸ್ಯ ಮನೋಧರ್ಮ. ಈ ಹಾಸ್ಯ ಸ್ವಭಾವ ತಾವೂ ನಗುತ್ತಾ ಇನ್ನೊಬ್ಬರನ್ನೂ ನಗಿಸುವಂಥ ಸ್ವರೂಪದ್ದು. ಕೆಲವೊಮ್ಮೆ ಅವರು ತರಗತಿಯಲ್ಲೂ ಹಾಸ್ಯ ಚಟಾಕಿ ಹಾರಿಸುತ್ತಿದ್ದುದು ಉಂಟು. ಮೈತುಂಬ ಆಭರಣ ಹೇರಿಕೊಂಡು ಅಡ್ಡಾಡುತ್ತಿದ್ದ ಮಹಿಳೆಯನ್ನು ನೋಡಿದಾಗ ಅವರು ಬರೆದ ಚುಟಕ-"ಇವಳೇನು ನಾರಿಯೋ-ಒಡವೆಗಳ ಲಾರಿಯೋ?". ಒಮ್ಮೆ ಈ ಚುಟುಕ ಕ್ಲಾಸಲ್ಲಿ ಹೇಳಿ ನಮಗಿಂತ ಜೋರಾಗಿ ಅವರೇ ನಗುತ್ತಾ ಕೂತ ದೃಶ್ಯ ನನ್ನ ಕಣ್ಣಿಗೆ ಕಟ್ಟಿದೆ. ಈ ನಮ್ಮ ಗಹನ ಗಂಭೀರ ಕವಿ ಒಂದು ಕಾಲದಲ್ಲಿ ಹಾಸ್ಯಪದ್ಯಗಳನ್ನು ಬರೆಯುತ್ತಿದ್ದರು ಎಂದರೆ ಯಾರು ನಂಬುತ್ತಾರೆ? ಜಿಎಸ್ಸೆಸ್ ದಾವಣಗೆರೆ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿದ್ದಾಗ ಕನ್ನಡದ ಪ್ರಸಿದ್ಧ ಹಾಸ್ಯ ಸಾಹಿತಿ ನಾ.ಕಸ್ತೂರಿ ಕಾಲೇಜಿನ ಸೂಪರಿಂಟೆಂಡೆಂಟರು. ಆಗ ಅವರು ಜಿಎಸ್ಸೆಸ್ ಅವರಿಂದಲೂ ಕೆಲವು ಕನ್ನಡ ಹಾಸ್ಯ ಪದ್ಯಗಳನ್ನು ಬರೆಸುತ್ತಾರೆ. ಸಂಜೆಯಾದರೆ ಜಿಎಸ್ಸೆಸ್ ಮತ್ತು ಅವರ ಗೆಳೆಯರಾದ ಪ್ರಭುಪ್ರಸಾದರು ದಾವಣಗೆರೆಯ ಊರಾಚೆಯ ಬಯಲಿನ ಕಡೆ ತಿರುಗಾಡಲು ಹೋಗುತ್ತಿದ್ದರಂತೆ. ಅಲ್ಲಿದ್ದ ದಿಬ್ಬವೊಂದರ ಮೇಲೆ ಇಬ್ಬರೂ ಕುಳಿತು ಹರಟೆ ಹೊಡೆಯುತ್ತಿದ್ದರಂತೆ. ಇದನ್ನು ಗಮನಿಸಿದ ನಾ.ಕಸ್ತೂರಿ ಜಿಎಸ್ಸೆಸ್ ಅವರಿಗೆ ದಿಬ್ಬಯ್ಯ ಎಂದು ನಾಮಕರಣ ಮಾಡುತ್ತಾರೆ. ಕೊರವಂಜಿಯಲ್ಲಿ ಜಿಎಸ್ಸೆಸ್ ಬರೆದ ಅನೇಕ ಹಾಸ್ಯ ಪದ್ಯಗಳು ದಿಬ್ಬಯ್ಯ ಎಂಬ ನಾಮಾಂಕಿತದಲ್ಲಿ ಪ್ರಕಟವಾಗುತ್ತವೆ. ಅವುಗಳಲ್ಲಿ ಒಂದು ಓದುಗರ ಗಮನಕ್ಕಾಗಿ:


ಇಂದ್ರ ಭವನದಲಿ ಚಂದ್ರ ಮೂಡಿತೋ

ದೋಸೆ ಹಂಚಿನಲ್ಲಿ.

ಮೂಡಿತೆಂದೆಯೊ, ಮತ್ತೆ ಮುಳುಗಿತೋ

ಉದರ ಗಗನದಲ್ಲಿ!

ರಾಶಿಯವರಿಗೆ ತುಂಬ ಮೆಚ್ಚುಗೆಯಾದ ಪದ್ಯವಂತೆ ಇದು!

ಜಿಎಸ್ಸೆಸ್ ತಮ್ಮ ಅಸಮಗ್ರ ಆತ್ಮಕಥೆ ಚತುರಂಗದಲ್ಲಿ ವರ್ಣಿಸಿರುವ ಈ ಪ್ರಸಂಗವನ್ನು ನೋಡಿ: "ಒಂದು ಮಧ್ಯಾಹ್ನ ತರಗತಿ ಮುಗಿಸಿಕೊಂಡು, ಕಸ್ತೂರಿಯವರನ್ನು ನೋಡೋಣವೆಂದು ಅವರ ಕೊಠಡಿ ಪ್ರವೇಶಿಸಿದೆ. ಸಾಮಾನ್ಯವಾಗಿ ತುಂಬ ಲವಲವಿಕೆಯಿಂದ ಇರುತ್ತಿದ್ದ ಅವರು ಅಂದು ಯಾಕೋ ಸ್ವಲ್ಪ ಸುಸ್ತಾದವರಂತೆ ತೋರಿದರು. ನನ್ನನ್ನು ಕಂಡು ಬಾರಯ್ಯಾ ಬಾ, ಕ್ಲಾಸು ಮುಗೀತು ಅಂತ ಕಾಣುತ್ತೆ ಅಂದರು. ನಾನು ಹೌದು ಸಾರ್, ಯಾಕೋ ಇವತ್ತು ಸ್ವಲ್ಪ ಆಯಾಸಗೊಂಡವರಂತೆ ಕಾಣಿಸುತ್ತೀರಲ್ಲಾ? ಎಂದೆ. "ಇವತ್ತು ಬೆಳಿಗ್ಗೆಯಿಂದ ಬರೀ ಪುರಂದರ ದಾಸರ ಕೀರ್ತನೆ ಕೇಳೀ ಕೇಳೀ ಸಾಕಾಗಿದೆ ಕಣಯ್ಯ" ಅಂದರು. ನನಗೆ ಅರ್ಥವಾಗಲಿಲ್ಲ. ಅವರು ಮುಂದುವರೆಸಿದರು. "ಈಗ ಗೊತ್ತಲ್ಲ, ಫ್ರೀಶಿಪ್ಪು, ಸ್ಕಾಲರ್ ಶಿಪ್ಪು, ಡಿಸೈಡ್ ಮಾಡೋ ಕಾಲ. ಅದಕ್ಕಾಗಿ ಹುಡುಗರು ಬೆಳಿಗ್ಗೆಯಿಂದ ಬಂದು ಪೀಡಿಸುತ್ತಾ ಇದ್ದಾರೆ. ಒಬ್ಬ ಬರ್ತಾನೆ. ಸಾರ್ ರಾಮಯ್ಯನಿಗೆ ಹಾಫ್ ಫ್ರೀ ಕೊಟ್ಟಿದ್ದೀರಿ, ವೆಂಕಟಪ್ಪನಿಗೆ ಫುಲ್ ಫ್ರೀ ಕೊಟ್ಟಿದ್ದೀರಿ. ಸೋಮಣ್ಣನಿಗೆ ಸ್ಕಾಲರ್ ಶಿಪ್ ಕೊಡುವುದಾಗಿ ಹೇಳಿದ್ದೀರಿ...ನಂಗ್ಯಾಕೆ ಸಾ, ಒಂದು ಹಾಫ್ ಫ್ರೀನಾದರೂ ಕೊಡಬಾರದು?" ಹೀಗೆ ಪ್ರತಿಯೊಬ್ಬರೂ ಪುರಂದರದಾಸರ ಹಾಗೆ "ಅಜಾಮಿಳನಿಗೆ ನಾರಾಯಣ ಅಂದದ್ದಕ್ಕೆ ಒಲಿದೆ. ದ್ರೌಪದಿ ಕೃಷ್ಣಾ ಎಂದು ಕರೆದದ್ದಕ್ಕೆ ಅಕ್ಷಯ ವಸ್ತ್ರ ಕರುಣಿಸಿದೆ. ಗಜೇಂದ್ರ ಸೊಂಡಿಲೆತ್ತಿ ಕರೆದ. ಅವನಿಗೆ ಒಲಿದೆ. ನನಗ್ಯಾಕೆ ಕೃಪೆ ಮಾಡಬಾರದು?" ಇದೇ ತಾನೆ ದಾಸರ ಕೀರ್ತನೆಗಳ ಧಾಟಿ?"

ಜಿಎಸ್ಸೆಸ್ ಅವರಿಗೆ ಏಕವಚನದ ಗೆಳೆಯರು ತುಂಬಾ ಕಮ್ಮಿ. ಆ ಕಮ್ಮಿ ಜನರಲ್ಲಿ ಜಿ.ಬ್ರಹ್ಮಪ್ಪ ಒಬ್ಬರು. ಜಿಎಸ್ಸೆಸ್ ಬಿ.ಎ.ಆನರ್ಸ್ ಓದುತ್ತಿದ್ದ ಕಾಲ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಮೈಸೂರಿಂದ ಹಂಪೆಗೆ ಬಂದಿದ್ದಾರೆ. ಹಂಪೆಯಿಂದ ಮುಂದೆ ಅವರು ಬಾದಾಮಿಗೆ ಹೋಗಬೇಕು. ಎಲ್ಲ ಗಂಟುಮೂಟೆ ಕಟ್ಟಿ ಹೊಸಪೇಟೆಯ ರೈಲ್ವೇಸ್ಟೇಷನ್ ಗೆ ಹೊರಟಿದ್ದಾರೆ. ಸಹಪಾಠಿ ಜಿ.ಬ್ರಹ್ಮಪ್ಪನವರ ಸುದ್ದಿ ಸುಳಿವಿಲ್ಲ. ಎಲ್ಲಾ ಗಡಿಬಿಡಿಯಿಂದ ಬ್ರಹ್ಮಪ್ಪನವರಿಗಾಗಿ ಹಂಪಿಯಲ್ಲಿ ಅಲ್ಲಿ ಇಲ್ಲಿ ಪರದಾಡುತ್ತಿದ್ದರೆ ಬ್ರಹ್ಮಪ್ಪ ಯಾವುದೋ ಒಂದು ಮುರುಕು ಮಂಟಪದಲ್ಲಿ ಕೂತು ನಿಶ್ಚಿಂತೆಯಿಂದ ಏನೋ ಬರೆಯುತ್ತಿದ್ದಾರೆ. ಹೋಗಿ ಕೂಗಿದರೂ ಮಾತಡುತ್ತಿಲ್ಲ. ಎಲ್ಲರಿಗೂ ತಿಳಿಯುತ್ತದೆ. ಓಹೋ! ಬ್ರಹ್ಮಪ್ಪ ಕಾವ್ಯ ಸಮಾಧಿಯಲ್ಲಿದ್ದಾರೆ ಎಂದು. ರಾತ್ರಿ ಇವರದ್ದು ಪಟ್ಟದಕಲ್ಲಲ್ಲಿ ಬಿಡಾರ. ಜಿಎಸ್ಸೆಸ್ ಅವರ ಗೆಳೆಯರೊಬ್ಬರು ರಾತ್ರಿ ಎಲ್ಲರೂ ಕೂತು ಪಟ್ಟಾಂಗ ಹೊಡೆಯುತ್ತಿರುವಾಗ ಪ್ರಾಧ್ಯಾಪಕ ರಾಘವಾಚಾರ್ ಗೆ ಹೇಳುತ್ತಾರೆ. "ಸಾರ್ ಬ್ರಹ್ಮಪ್ಪನವರು ಒಂದು ಭಾರೀ ಕಾವ್ಯವನ್ನು ಬರೆದು ಮುಗಿಸಿದ್ದಾರೆ ಹಂಪೆಯಲ್ಲಿ. ಅದನ್ನು ಓದಲು ಹೇಳಿ ಸಾರ್" . ಆ ಪ್ರಸಂಗವನ್ನು ಜಿಎಸ್ಸೆಸ್ ವರ್ಣಿಸುವ ಕ್ರಮವನ್ನು ಗಮನಿಸಿ: " ಕೂಡಲೇ ಬ್ರಹ್ಮಪ್ಪನವರು ತಮ್ಮ ಕೈಚೀಲದಿಂದ ಒಂದು ನೋಟ್ ಬುಕ್ ತೆರೆದು, ಒಂದು ಚಿಟಕಿ ನಶ್ಯ ಏರಿಸಿ, ತಮ್ಮ ಹೊಚ್ಚ ಹೊಸ ಕಾವ್ಯವನ್ನು ಓದಲು ಸಿದ್ಧರಾದರು. ರಾತ್ರಿ ಹನ್ನೊಂದೂವರೆ ಗಂಟೆ. ನಿಶ್ಶಬ್ದವಾದ ಹಳ್ಳಿ. ಇಡೀ ಹಳ್ಳಿಯ ಮೇಲೆ ಬೆಳದಿಂಗಳು. ಆದರೆ ಕೆಳಗಿನ ಮುರುಕು ಹೆಂಚಿನ ಮನೆಯೊಳಗೆ ಉರಿಯುವ ಲಾಟೀನಿನ ಸುತ್ತಾ ಕುತೂಹಲಭರಿತರಾದ ಸಹೃದಯ ವೃಂದ. ಕವಿಗೆ ಇದಕ್ಕಿಂತ ಪ್ರಶಸ್ತವಾದ ಸಂದರ್ಭ ಬೇರೆ ಬೇಕೆ? ನಶ್ಯವನ್ನು ಮತ್ತೆ ಒಮ್ಮೆ ಮೂಗಿಗೆ ಏರಿಸಿ ಕರ್ಚೀಫಿನಿಂದ ಮೂಗೊರೆಸಿಕೊಂಡು ಶುರು ಮಾಡಿದರು ಬ್ರಹ್ಮಪ್ಪನವರು.

ಹಂಪೆಯ ಬಳಿ ಹರಿಯುತಿದೆ ತುಂಗಭದ್ರೆ

ಇದ ನೋಡಿದರೆ ನನಗೆ ಬರುವುದು ನಿದ್ರೆ

-ಎಂದು ಅವರು ತಮ್ಮ ಮಹಾಕಾವ್ಯದ ಮೊದಲೆರಡು ಪಂಕ್ತಿಗಳನ್ನು ಓದುತ್ತಲೇ, ಹಂಪೆಯಿಂದ ದೂರದ ಪಟ್ಟದಕಲ್ಲಿನ ಮುರುಕು ಮನೆಯಲ್ಲಿ ನಿದ್ರೆ ಬರುವ ಹಾಗಿದ್ದ ನಾವೆಲ್ಲಾ ಹೋ ಎಂದು ನಕ್ಕು ಪ್ರತಿಕ್ರಿಯೆಯನ್ನು ತೋರಿದೆವು. ತುಂಗಭದ್ರಾ ನದಿಯ ವರ್ಣನೆ, ಹಾಗೂ ಹಾಳು ಹಂಪೆಯನ್ನು ಕುರಿತ ಪ್ರತಿಕ್ರಿಯೆಗಳಿದ್ದ ಆ ಕಾವ್ಯ ಮುಂದೆ-


ರಾಣಿಯರ ರಾಗದ ರಾಟೆ ತಿರುವಿದ ತಾಣದಲಿ

ಕತ್ತೆಗಳು ಲದ್ದಿಯನಿಕ್ಕುತ್ತಿದ್ದವು ಸೋಗಿನಲಿ

ಎಂಬ ಚರಣಕ್ಕೆ ಬಂದ ಕೂಡಲೇ, ರಾಘವಾಚಾರ್ಯರು ಅದೇನಪ್ಪಾ ಸೋಗಿನಲಿ?- ಅಂದರೆ, 'ತಾಣದಲಿ ಅನ್ನೋದಕ್ಕೆ ಪ್ರಾಸವಾಗಿ ಬಂದಿದೆ ಸಾರ್ ಸೋಗಿನಲಿ ಅನ್ನುವುದು' ಅಂದರು ಬ್ರಹ್ಮಪ್ಪ."

ಬೆಂಗಳೂರಿನಲ್ಲಿ ಜಿಎಸ್ಸೆಸ್ ಪ್ರಾಧ್ಯಾಪಕರಾಗಿದ್ದಾಗ(೧೯೭೦ ರ ಸುಮಾರು) ಜಿಎಸ್ಸೆಸ್ ತಮ್ಮ ಸಹೋದ್ಯೋಗಿಗಳೊಡನೆ ಕರಗ ನೊಡಲಿಕ್ಕೆ ಹೋಗುತ್ತಾರೆ. ಕರಗ ಹಾದು ಹೋಗುವ ಕಬ್ಬನ್ ಪೇಟೆಯ ಎರಡೂ ಬದಿಯಲ್ಲಿ ಜನ ಜಮಾಯಿಸಿಬಿಟ್ಟಿದ್ದಾರೆ. ಜಿಎಸ್ಸೆಸ್ ಬರೆಯುತ್ತಾರೆ: " ಇಂಥಾ ಪರಿಸರದಲ್ಲಿ ನಾವೂ ಕಡಲೇ ಕಾಯಿ ತಿನ್ನುತ್ತಾ , ಲುಂಗಿ ಪಂಚೆ ಉಟ್ಟು, ಕೊರಳಿಗೆ ಮಫ್ಲರು ಸುತ್ತಿ, ಕರಗದ ಆ ಬೆಳದಿಂಗಳ ಇರುಳಿನಲ್ಲಿ ಜನಜಂಗುಳಿಯ ನಡುವೆ ಅಡ್ಡಾಡುತ್ತಾ, ಕರಗವನ್ನು ತೀರ ಹತ್ತಿರದಿಂದ ವೀಕ್ಷಿಸಲು ತಕ್ಕ ಸ್ಥಳವೊಂದರ ಸಂಶೋಧನೆಯಲ್ಲಿ ತೊಡಗಿದೆವು. ಕರಗ ಹಾದುಹೋಗುವ ಕಬ್ಬನ್ಪೇಟೆಯಿಕ್ಕಟ್ಟಿನ ಬೀದಿಯ ಎರಡೂ ಬದಿಗೆ ನಿಲ್ಲಲು ಕೂಡಾ ಸ್ಥಳವಿಲ್ಲದಂತೆ ಜಮಾಯಿಸಿದ್ದ ಜನದ ನಡುವೆ ನಿಂತರೆ, ಕೇವಲ ನಿಂತೇ ಇರಬೇಕಾದಂಥ ಸ್ಥಿತಿಗೆ ಹೆದರಿ , ಎಲ್ಲಾದರೂ ಕೂತು ನಿಧಾನವಾಗಿ ವೀಕ್ಷಿಸಲು ಸರಿಯಾದ ಸ್ಥಳ ದೊರೆತೀತೆ ಎಂದು ಅತ್ತ ಇತ್ತ ನೋಡುವಾಗ, ಕೆಲವರು ದೊಡ್ಡದೊಂದು ಏಣಿಯನ್ನು ತಂದು ಅತ್ತ ಇತ್ತ ನಿಂತ ಮನೆಗಳ ತಾರಸಿಯ ಮೇಲೆ ಜನರನ್ನು ಹತ್ತಿಸುವುದನ್ನು ಕಂಡೆವು. ಹೌದಲ್ಲ! ಈ ಏಣಿಯ ಮೇಲಿಂದ ಹೋಗಿ ಮನೆಯ ತಾರಸಿಯ ಮೇಲೆ ಕೂತರೆ ಕೆಳಗೆ ಬರುವ ಕರಗವನ್ನು , ಅದರ ಹಿಂದೆ ಮುಂದೆ ಬರುವ ಉತ್ಸವಗಳನ್ನು ಸಲೀಸಾಗಿ ನೋಡಬಹುದಲ್ಲ ಅನ್ನಿಸಿತು. ಹೋಗಿ ವಿಚಾರಿಸಿದರೆ ಏಣಿ ಹತ್ತಿ ಹೋಗಲು ಒಬ್ಬೊಬ್ಬರಿಗೆ ಕೇವಲ ನಾಲ್ಕೇ ಆಣೆ(ಇಪ್ಪತ್ತೈದು ಪೈಸೆ) ಎಂಬುದು ತಿಳಿಯಿತು. ಸರಿ, ನಾವೂ ಹಿಂದೆ ಮುಂದೆ ನೋಡದೆ , ನಾಲ್ಕು ನಾಲ್ಕು ಆಣೆ ತೆತ್ತು, ಸರಸರನೆ ಏಣಿಯ ಮೆಟ್ಟಿಲ ಮೇಲೆ ಹತ್ತಿ ಯಾರದೋ ಮನೆಯ ತಾರಸಿಯನ್ನು ತಲಪಿದೆವು! ಅದೊಂದು ವಿಸ್ತಾರವಾದ ಮೇಲುಪ್ಪರಿಗೆ. ಅದರ ತುಂಬಾ ಸಾಕಷ್ಟು ಕಸ ಧೂಳು. ಆದರೂ ಅಲ್ಲೇ ಕೂತು, ನಾವು ಕೊಂಡು ತಂದಿದ್ದ ಕಳ್ಳೇಪುರಿ ಹಾಗೂ ಕಡಲೇ ಕಾಯನ್ನು ಮೆಲ್ಲುತ್ತಾ, ಮೇಲಿನ ಆಕಾಶದಲ್ಲಿ ರಾರಾಜಿಸುವ ಪೂರ್ಣಚಂದ್ರನನ್ನೂ, ಆ ಚಂದ್ರಮಂಡಲದಿಂದ ಸುರಿಯುವ ಬೆಳದಿಂಗಳಲ್ಲಿ ಬೆಪ್ಪು ತಕ್ಕಡಿಗಳಂತೆ ಮಂಕಾಗಿ ಪಿಳಿ ಪಿಳಿ ಕಣ್ಣು ಬಿಡುವ ನಗರದ ವಿದ್ಯುದ್ದೀಪಗಳನ್ನೂ , ಕೆಳಗಿನ ಬೀದಿಯಲ್ಲಿ ಗೋಚರಿಸುವ ಜನಸಂದಣಿಯ ಚಲನವಲನವನ್ನೂ ನೋಡುತ್ತಾ ಕುಳಿತೆವು. ಆ ತಾರಸಿಯ ಅಂಚಿಗೆ ಎರಡಡಿಯ ಸಣ್ಣ ಗೋಡೆಯೊಂದು ಇದ್ದುದರಿಂದ ಯಾವುದೇ ಆತಂಕವಿಲ್ಲದೆ , ಬರುವ ಕರಗದ ದಾರಿ ಕಾಯ್ದುಕೊಂಡು, ಅದೂ ಇದೂ ಹರಟೆಹೊಡೆಯುತ್ತಾ ಕೂತೆವು." ಹೀಗೆ ಉಪ್ಪರಿಗೆಯಲ್ಲಿ ಕೂತು ಜಿಎಸ್ಸೆಸ್ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಚಿದಾನಂದ ಮೂರ್ತಿ, ಕೆ.ಮರುಳಸಿದ್ದಪ್ಪ ಮೊದಲಾದವರು ಕರಗದ ವೈಭವವನ್ನೇನೋ ಮನದಣಿಯ ಸವಿಯುತ್ತಾರೆ. ಕರಗ ದರ್ಶನ ಮುಗಿದಾಗ ರಾತ್ರಿ ಎರಡು ಗಂಟೆ ಸಮಯ. ತಾರಸಿ ಮೇಲೆ ಕೂತ ಇವರು ಈಗ ಕೆಳಗೆ ಇಳಿಯ ಬೇಕು. ಇಳಿಯಬೇಕಾದರೆ ಏಣಿಗಳು ಬೇಕು. ಆದರೆ ಅಲ್ಲಿ ಏಣಿಗಳೇ ಇಲ್ಲ. ಇವರಿಂದ ನಾಲ್ಕಾಣೆ ವಸೂಲು ಮಾಡಿ ಮೇಲಕ್ಕೆ ಹತ್ತಿಸಿದವನು ಮಂಗಮಾಯವಾಗಿಬಿಟ್ಟಿದ್ದಾನೆ. ತಾರಸಿ ಹತ್ತಿಸುವುದಕ್ಕೆ ಅವನು ಇವರಿಂದ ನಾಲ್ಕಾಣೆ ವಸೂಲು ಮಾಡಿದ್ದ. ಆಗ ಇಳಿಸುವ ಅಗ್ರೀಮೆಂಟೇನೂ ಆಗಿರಲಿಲ್ಲವಲ್ಲ! ಮುಂದೆ ಜಿಎಸ್ಸೆಸ್ ಮೊದಲಾದವರು ಹೇಗೆ ಏಣಿಯಿಲ್ಲದೆ ತಾರಸಿಯಿಂದ ಕೆಳಗಿಳಿದರು ಎಂಬುದನ್ನು ತಿಳಿಯಲು ನೀವು ಜಿಎಸ್ಸೆಸ್ ಅವರ 'ಚತುರಂಗ'ವನ್ನೇ ಓದಬೇಕು! ನಾನಂತೂ ಸಸ್ಪೆನ್ಸ್ ಉಳಿಸಲು ಬಯಸುತ್ತೇನೆ! ಜಿಎಸ್ಸೆಸ್ ಅವರ ಪ್ರವಾಸ ಕಥನದಲ್ಲೂ ಇಂಥಾ ಅನೇಕ ಹಾಸ್ಯಮಯವಾದ ವರ್ಣನೆಗಳು ಬರುತ್ತವೆ. ಜಿಎಸ್ಸೆಸ್ , ರುದ್ರಾಣಿ ಮತ್ತು ಪದ್ಮಾ ಅವರ ಜೊತೆ ಹಿಮಾಲಯ ಯಾತ್ರೆಗೆ ಹೋಗಿದ್ದಾಗ, ಯಾತ್ರಾರ್ಥಿಗಳು ಕಂಡಿವಾಲಾಗಳ ಬೆನ್ನ ಬುಟ್ಟಿಯಲ್ಲಿ ಕೂತು ಪರ್ವತವನ್ನೇರಬೇಕಷ್ಟೆ? ಜಿಎಸ್ಸೆಸ್, ರುದ್ರಾಣಿ ಮತ್ತು ಪದ್ಮಾ ಅವರು, ಮೂವರು ಕಂಡಿವಾಲಾಗಳ ಬೆಣ್ಣೇರಿ ಪರ್ವತ ಯಾನವನ್ನು ಪ್ರಾರಂಭಿಸುತ್ತಾರೆ. ಕೇದಾರದಿಂದ ನಮ್ಮ ಪಯಣಿಗರು ಕಂಡಿಗಳಲ್ಲಿ ಕುಳಿತು ಬರುತ್ತಿರುವಾಗ ತಮಗೆ ತಮ್ಮ ಶ್ರೀಮತಿಯರು ಹೇಗೆ ಕಂಡರು ಎಂಬುದನ್ನು ಜಿಎಸ್ಸೆಸ್ ವರ್ಣಿಸುತ್ತಾರೆ: "ಸ್ವಲ್ಪ ದೂರ ನಡೆದ ನಂತರ ಅಲ್ಲೊಂದು ಸರಿಯಾದ ಸ್ಥಳ ನೋಡಿ ಮತ್ತೆ ಕಂಡಿಯಲ್ಲಿ ಕೂರುವ ಸಿದ್ಧತೆ ನಡೆಸಿದೆವು. ಮೊದಲು ನಮ್ಮ ಮನೆಯವರು ಕಂಡಿಗಳಲ್ಲಿ ಕುಳಿತರು. ನಾನು ಇನ್ನೂ ಸ್ವಲ್ಪ ದೂರ ನಡೆದೇ ಹೋಗುವ ಅಪೇಕ್ಷೆಯಿಂದ ಹಿಂದೆ ಹೊರಟೆ. ಆ ಎತ್ತರದಲ್ಲಿ , ಹೊತ್ತು ನಡುಹಗಲನ್ನು ಸಮೀಪಿಸುತ್ತಿದ್ದರೂ ಚಳಿಯ ಕೊರೆತವೇನೂ ಕಡಿಮೆಯಾಗಿರಲಿಲ್ಲ. ಮೈತುಂಬ ಶಾಲು ಹೊದ್ದು, ತಲೆಗಳಿಗೆ ಉಣ್ಣೆಯ ಮಫ್ಲರುಗಳನ್ನು ಸುತ್ತಿಕೊಂಡು, ಕಂಡಿಯ ಬಿದಿರು ಬುಟ್ಟಿಯಲ್ಲಿ ಮುದುರಿಕೊಂಡು ಕೂತಿದ್ದ ನಮ್ಮ ಮನೆಯವರಿಬ್ಬರೂ ಗ್ರಾಮದೇವತೆಯರಂತೆ ವಿರಾಜಮಾನರಾಗಿದ್ದರು. ನನಗೆ ಒಂದು ಕ್ಷಣ ನಗು ಬಂತು. ನಾನು ಸಹ ಕೋಟು ತೊಟ್ಟು, ಮುಸುಕು ಟೋಪಿ ಹಾಕಿಕೊಂಡಿದ್ದರಿಂದ , ಕಂಡಿಯಲ್ಲಿ ಕೂತ ಸಮಯದಲ್ಲಿ, ಅವರ ಕಣ್ಣಿಗೆ ನಾನೂ ಏನೇನೋ ಆಗಿ ಕಾಣಿಸಲು ಸಾಧ್ಯ ಎಂದುಕೊಳ್ಳುತ್ತಾ ಹಿಂದೆ ನಡೆದೆ." ಇದು ಜಿಎಸ್ಸೆಸ್ ಅವರ ಹಾಸ್ಯ ಮನೋಧರ್ಮ. ಇನ್ನೊಬ್ಬರನ್ನು ನೋಡಿ ನಗುವಂತೆ , ತಮ್ಮನ್ನೂ ನೋಡಿ ನಗುವುದು ಸಾಧ್ಯವಾದಾಗ ಆ ಹಾಸ್ಯ ಸದಭಿರುಚಿಯ ಹಾಸ್ಯವಾಗುತ್ತದೆ. ಜಿಎಸ್ಸೆಸ್ ಅವರದ್ದು ಆ ಬಗೆಯ ಹಾಸ್ಯ ಮನೋಧರ್ಮ.

Friday, November 20, 2009

ವಿರಾಟಪರ್ವ...

ಅಲ್ಲಾಡಿ ರುದ್ರಣ್ಣನವರ ಪತ್ರ ನನ್ನನ್ನು ಆತಂಕಕ್ಕೆ ಈಡುಮಾಡಿತು. ಎರಡೇ ಸಾಲು. ಭದ್ರಕ್ಕ ನೆಲ ಹಿಡಿದಿದ್ದಾಳೆ. ಅವಳ ಕೊನೆಯ ಆಸೆಯಂತೆ ಗೊಂಬೆ ಮ್ಯಾಳ ಏರ್ಪಡಿಸಲಾಗಿದೆ. ತಕ್ಷಣ ಹೊರಟು ಬರತಕ್ಕದ್ದು. ಭದ್ರಕ್ಕ ನೆಲ ಹಿಡಿದಿದ್ದಾಳೆ ಎನ್ನುವ ಮಾತು ನನ್ನ ಕರುಳನ್ನು ಕಿವುಚಿತು. ಬದ್ರಕ್ಕ ನಮ್ಮ ಮನೆತನಕ್ಕೆ ಮೊದಲಿಂದ ಹತ್ತಿರದವಳು. ಆಕೆಯೂ ನಮ್ಮ ಅಜ್ಜಿಯೂ ಆಪ್ತ ಗೆಳತಿಯರು. ನಮ್ಮ ಕೇರಿಯಲ್ಲೇ ಭದ್ರಕ್ಕನ ಮನೆಯೂ ಇತ್ತು. ಓಣಿಯಾಕಾರದ ದೊಡ್ಡ ಮನೆ. ಅದರಲ್ಲಿ, ಪಾಪ, ಒಬ್ಬಳೇ ಮುದುಕಿ ವಾಸವಾಗಿದ್ದಳು. ಕ್ಷಮಿಸಿ. ಒಬ್ಬಳೇ ಅನ್ನುವುದು ತಪ್ಪು. ಅವಳ ಜೊತೆಗೆ ಅವಳ ಹತ್ತು ರಾಸುಗಳೂ ಆ ಮನೆಯಲ್ಲಿ ಇದ್ದವು. ಒಂದೆರಡು ಒದ್ದುಕೊಂಡಿದ್ದರೂ ಏಳೆಂಟು ಎಮ್ಮೆಗಳಾದರೂ ಅವಳ ಮನೆಯಲ್ಲಿ ಹಾಲು ಕರೆಯುತ್ತಲೇ ಇದ್ದವು. ಜೊತೆಗೆ ಒಂದೆರಡು ಮಣಕ. ನಾಕಾರು ಸಣ್ಣ ಕರುಗಳು. ದೊಡ್ಡ ಸಂಸಾರ ಭದ್ರಕ್ಕನದು. ನಮ್ಮ ಊರಿನ ಹೆಚ್ಚಿನ ಮನೆಗಳಿಗೆ ಭದ್ರಕ್ಕನ ಮನೆಯಿಂದಲೇ ಹಾಲು ಸರಬರಾಜು ಆಗುತಿತ್ತು. ಮನೆಗಳು ಮಾತ್ರವಲ್ಲ ರುದ್ರಣ್ಣನ ಹೋಟೆಲ್ಲಿಗೂ ಭದ್ರಕ್ಕನೇ ಹಾಲು ಕಳಿಸುತ್ತಿದ್ದಳು. ರಾಸು ಸಾಕುವುದರಲ್ಲಾಗಲಿ, ಅವಕ್ಕೆ ಬ್ಯಾನೆ ಬೇಸರಿಕೆ ಆದಾಗ ಔಷಧೋಪಚಾರ ಮಾಡುವುದರಲ್ಲಾಗಲೀ, ಟೊಂಕದ ಮೇಲೆ ಬೆನ್ನನ್ನು ಒತ್ತಿ ಹಿಡಿದು ಅದು ಈದಮೇಲೆ ಎಷ್ಟು ಹಾಲು ಕೊಡಬಹುದು ಎಂಬುದನ್ನು ಕರಾರುವಾಕ್ಕಾಗಿ ಊಹಿಸುವುದರಲ್ಲಾಗಲೀ, ಹಲ್ಲುಬಿಡಿಸಿ ಅವುಗಳ ವಯಸ್ಸು ಹೇಳುವುದರಲ್ಲಾಗಲೀ, ಅವುಗಳ ಸುಳಿ ನೋಡಿ ಶುಭ ಅಶುಭ ಹೇಳುವುದರಲ್ಲಾಗಲೀ ಭದ್ರಕ್ಕನನ್ನು ಮೀರಿಸುವರೇ ಆಸುಪಾಸಲ್ಲಿ ಇರಲಿಲ್ಲ ಎಂದರೆ ನೀವು ನಂಬಬೇಕು. ತಾನಾಯಿತು ತನ್ನ ಎಮ್ಮೆಗಳಾಯಿತು, ಅವುಗಳ ಕರುಗಳಾಯಿತು...ಈ ಪ್ರಪಂಚದಲ್ಲಿ ಇಡೀ ದಿನ ಭದ್ರಕ್ಕನ ಸಮಯ ಕಳೆದು ಹೋಗುತ್ತಿತ್ತು. ಬೆಳಗಾದರೆ ಅವನ್ನು ಮನೆಯಿಂದ ಹಿತ್ತಲಿಗೆ ಒಯ್ದು ಅವುಗಳ ಮೈ ತೊಳೆಯುವುದು, ಆಮೇಲೆ ಕೊಟ್ಟಿಗೆ ಕ್ಲೀನು ಮಾಡಿ ಹೊಸ ಹುಲ್ಲು ಹಾಕಿ ದನಗಳನ್ನು ಒಳಗೆ ಕಟ್ಟುವುದು, ಬಳಿಕ ತಾನು ಮೈತೊಳಕೊಂಡು, ಶಿವಪೂಜೆ ಮುಗಿಸಿ, ಕರುಬಿಟ್ಟು, ಆಮೇಲೆ ಹಾಲು ಕರೆದು, ಮುಖದ ತುಂಬ ಬೆವರ ಹನಿ ಮುಡಕೊಂಡು ಹೊರಕ್ಕೆ ಬಂದು, ಗುಪ್ಪೆ ಮಂಚದ ಮೇಲೆ ಕಾಲು ಚಾಚಿ ಕೂತು ಶಿವನೇ ಎಂದು ಅವಳು ಉದ್ಗಾರ ತೆಗೆಯುವುದು. ಅಷ್ಟರಲ್ಲಿ ಹಾಲಿಗಾಗಿ ವರ್ತನೆಯ ಮನೆಯವರು ಬರಲು ಶುರುವಾಗುತ್ತಿತ್ತು. ಆ ವೇಳೆಗಾಗಲೇ ಭದ್ರಕ್ಕ ಧರ್ಮ ಕರ್ಮ ನೋಡಿ ಹಾಲಿಗೆ ಎಷ್ಟು ನೀರು ಬೆರೆಸಿದರೆ ಅನ್ಯಾಯವಾಗುವುದಿಲ್ಲವೋ ಅಷ್ಟು ಮಾತ್ರ ನೀರು ಬೆರೆಸಿ ವರ್ತನೆಯವರಿಗೆ ಹಾಲು ಅಳೆದು ಕೊಡುತ್ತಿದ್ದಳು. ಭದ್ರಕ್ಕನ ಮನೆಯಷ್ಟು ಗಟ್ಟಿ ಹಾಲು, ಹಾಲು ಹೈನಿಗೆ ಪ್ರಸಿದ್ಧವಾಗಿದ್ದ ಎರಗಟ್ಟೀಹಳ್ಳಿಯಲ್ಲೂ ಸಿಕ್ಕುವುದಿಲ್ಲ ಎಂದು ಆ ಕಾಲದಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಎಮ್ಮೆ ಸಾಕುವುದು, ಹಾಲು ಮಾರುವುದು ಅಷ್ಟೇ ಭದ್ರಕ್ಕನ ಜೀವನವಾಗಿದ್ದರೆ ಅವಳ ನೆನಪು ನನ್ನಲ್ಲಿ ಇಷ್ಟು ಗಾಢವಾಗಿ ಉಳಿಯುತ್ತಿರಲೇ ಇಲ್ಲ. ದನಗಳನ್ನು ಜಂಗ್ಲಿಗೆ ಹೊಡೆದ ಮೇಲೆ ಬೇಗ ಬೇಗ ನಾಷ್ಟ ಮುಗಿಸಿ ಭದ್ರಕ್ಕ ಒಂದು ಸಣ್ಣ ಸರ್ಕೀಟು ಹೊಡೆಯುತ್ತಿದ್ದಳು. ಭದ್ರಕ್ಕ ಆರಡಿಯ ಆಜಾನುಬಾಹು ಆಳು. ಸೀರೆ ಸ್ವಲ್ಪ ಮೇಲಕ್ಕೇ ಉಟ್ಟುಕೊಳ್ಳುತ್ತಿದ್ದಳು. ಅಥವಾ ಹೀಗೆ ಹೇಳೋಣ. ಎಂಥ ದೊಡ್ಡ ಪನ್ನದ ಸೀರೆ ತಂದರೂ ಅದು ಭದ್ರಕ್ಕನ ಎತ್ತರಕ್ಕೆ ಒಂದು ಗೇಣು ಕಮ್ಮಿಯೇ ಆಗುತ್ತಿತ್ತು. ಸರಿ. ಆ ಸೀರೆ ಸೆರಗನ್ನು ಭದ್ರಕ್ಕ ತಲೆ ಅರ್ಧ ಮುಚ್ಚುವಂತೆ ಹೊದ್ದು, ಸೆರಗಿನ ಚುಂಗನ್ನು ಹಲ್ಲಲ್ಲಿ ಕಚ್ಚಿಕೊಂಡು , ಎರಡೂ ಕೈ ರಮ ರಮ ಬೀಸಿಕೊಂಡು ಬೀದಿಯಲ್ಲಿ ಬರುತ್ತಿದ್ದರೆ ಅದೊಂದು ವೈಭವ . ಅವಳ ನಡಿಗೆಯಲ್ಲಿ ಹೆಣ್ತನದ ನಯನಾಜೂಕು ಇರುತ್ತಿದ್ದಿಲ್ಲ. ಜೀಕು ಮೆಟ್ಟು ಹಾಕಿಕೊಂಡು ಜೀಕು ಜೀಕು ಸದ್ದು ಮಾಡುತ್ತಾ ಅವಳು ಬರುತ್ತಾ , ಗಟ್ಟಿಯಾಗಿ ನಗುತ್ತಾ, ತನ್ನ ಗಂಡು ಧ್ವನಿಯಲ್ಲಿ "ಅಕ್ಕಾ...ಕಾಫೀ ಆತೇನೇ?" ಎಂದು ಗಟ್ಟಿಯಾಗಿ ಕೂಗುತಾ ಇದ್ದಳು. ನಮ್ಮಜ್ಜಿ ಬಾರೇ ಬಾರೇ ಭದ್ರಕ್ಕ ಎಂದು ಭದ್ರಕ್ಕನನ್ನು ಕರೆದು, ಅವಳಿಗೆ ಚಾಪೆ ಕೊಡವಿ ಹಾಸಿ-ನಿನ್ನ ಹಾಲಿನ ಉಸಾಬರಿ ಎಲ್ಲಾ ಮುಗೀತಾ ? ಎಂದು ಕೇಳುತ್ತಿದ್ದಳು. "ಹಾಲು ಕಳಿಸೇ ಮತ್ತೆ ನಿಮ್ಮ ಹಟ್ಟೀಗೆ ಕಾಫೀ ನೀರಿಗೆ ಬಂದದ್ದು..!" ಎಂದು ಭದ್ರಕ್ಕ ಗಟ್ಟಿಯಾಗಿ ನಗುತ್ತಾ ಇದ್ದಳು. ಆ ಧ್ವನಿ ಕೇಳಿ ಭದ್ರಕ್ಕ ಬಂದಳೂ ಅಂತ ಕಾಣತ್ತೆ ಎಂದು ಇನ್ನೂ ಹಾಸಗೆಯಲ್ಲಿ ಗುಬುರಿಕೊಂಡಿರುತ್ತಾ ಇದ್ದ ನಾನು ಹೊರಗೆ ಓಡಿ ಬರುತಾ ಇದ್ದೆ. ಭದ್ರಕ್ಕ ನನ್ನನ್ನು ನೋಡಿ-"ಯವ್ವ ನನ್ನ ಚಂದುಳ್ಳಿ ಚಲುವರಾಯ ಬಂತಲ್ಲಪ್ಪಾ... ಏ ನನ್ನ ಬಂಗಾರದ್ ಬುಗುಡಿ...ಯಾವತ್ತೋ ನನ್ನಾನಿನ್ನಾ ಮದವೀ ಮುಹೂರ್ತ?" ಎಂದು ನಗೆಸಾರ ಮಾಡುತ್ತಾ ಅಟ್ಟಿಸಿಕೊಂಡು ಬರುತ್ತಾ ಇದ್ದಳು. ಇಬ್ಬರ ನಡುವೆ ಒಂದು ಸಣ್ಣ ಸ್ಪರ್ಧೆ ನಡೆದು ಕೊನೆಗೆ ನಾನು ಭದ್ರಕ್ಕನ ಕೈವಶವಾಗದೆ ನಿರ್ವಾಹವಿರಲಿಲ್ಲ. ಭದ್ರಕ್ಕ ನನ್ನನ್ನು ಎತ್ತಿಕೊಂಡು ತನ್ನ ಎರಡು ದಿನದ ಗಡ್ಡದ ಮೊಳಕೆ ಕೆನ್ನೆಗೆ ಚುಚ್ಚುತ್ತಾ ಬುಳು ಬುಳು ಮಾಡುತಾ ಇದ್ದಳು.
ಹೀಗೆ ಹಾಸ್ಯ, ನಗೆಚಾಟಿಕೆ, ಜೀವನೋತ್ಸಾಹಗಳಿಂದ ನಮ್ಮ ಸಣ್ಣ ಹಳ್ಳಿಯಲ್ಲಿ ಭದ್ರಕ್ಕ ಎಲ್ಲರ ಮನೆಯ ಹೆಣ್ಣುಮಗಳಾಗಿದ್ದಳು. ಆಕೆಯನ್ನು ಕಂಡರೆ ಎಲ್ಲರಿಗೂ ಒಂದು ಬಗೆಯ ಮಮಕಾರ. ಊರೊಟ್ಟಿನ ಬಾಳಲ್ಲಿ ಭದ್ರಕ್ಕನಿಲ್ಲದೆ ಯಾವುದೂ ನಡೆಯುವಂತಿರಲಿಲ್ಲ. ಜಾತ್ರೆಯಾಗಲೀ, ತೆಪ್ಪವಾಗಲೀ, ಬಯಲುಬಸವನ ನೀರ್ಮಜ್ಜನವಾಗಲೀ ಭದ್ರಕ್ಕ ಗಟ್ಟಿ ದನಿಯಲ್ಲಿ ಕೂಗುತ್ತಾ ನಗುತ್ತಾ ಮುಂದೆ ಇರಲೇ ಬೇಕು. ಗೌಡರು, ಶಾನುಭೋಗರೂ ಎಲ್ಲರ ಜತೆಗೂ ಅವಳಿಗೆ ಬಹಳ ಸಲುಗೆ. ವಯೋವೃದ್ಢರಾದ ಪುರೋಹಿತರ ಕೈ ಹಿಡಿದು ಎಳೆದು ನಗೆಚಾಟಿಕೆ ಮಾಡುವ ಸಲುಗೆ ನಮ್ಮೂರಲ್ಲಿ ಭದ್ರಕ್ಕನಿಗಲ್ಲದೆ ಬೇರೆ ಯಾರಿಗೆ ಇತ್ತು?
ಜೊತೆಗೆ ಭದ್ರಕ್ಕ ಮಹಾ ಕಲಾಪ್ರೇಮಿಯಾಗಿದ್ದಳು. ಚನ್ನಗಿರಿಯ ಟೆಂಟಿಗೆ ಯಾವ ಸಿನಿಮಾ ಬಂದಿದೆ ಎಂಬುದು ಎಲ್ಲರಿಗಿಂತಾ ಮುಂಚೆ ಅವಳಿಗೆ ಗೊತ್ತಾಗುತ್ತಾ ಇತ್ತು. "ಅಕ್ಕಾ...ಮದಾಲಸೆ ಅಂತ ಸಿನಿಮಾ ಬಂದೈತಂತೆ...ಭೋ ಚಂದಾಗದಂತೆ...ಹೋಗೋಣೇನ್ರಿ ಚನ್ನಗಿರಿಗೆ?" ಎಂದು ಸಂಜೆ ನಾಕಕ್ಕೇ ಬಂದು ನಮ್ಮ ಅಜ್ಜಿಗೆ ದುಂಬಾಲು ಬೀಳುತ್ತಿದ್ದಳು. ಗಾಡಿ ಸಿಗಬೇಕಲ್ಲವ್ವಾ ಎಂದು ನಮ್ಮ ಅಜ್ಜಿ ರಾಗ ಎಳೆಯುತ್ತಿದ್ದಳು. "ಬಸಣ್ಣಂದು ಕಾರಿಲ್ವಾ ನಮ್ಮ ತಾವು?". ಎಂದು ಭದ್ರಕ್ಕ ಯಥಾಪ್ರಕಾರ ಗಟ್ಟಿಯಾಗಿ ನಗುತಾ ಇದ್ದಳು. ಅಲ್ಲಿಗೆ ನಾವು ಚನ್ನಗಿರಿಗೆ ಹೋಗೋದು ಖಾತ್ರಿಯಾದಂತೆ. ಬಸಣ್ಣ ಕೀಲು ಹೆರೆದು ಬಂಡಿ ರೆಡಿ ಮಾಡೋನು. ಇನ್ನೂ ಒಂದೆರಡು ಮನೆಯವರು ನಮ್ಮೊಟ್ಟಿಗೆ ಸೇರಿಕೊಳ್ಳುತಾ ಇದ್ದರು. ಬುತ್ತಿಕಟ್ಟಿಕೊಂಡು ಆರುಗಂಟೆಗೆ ನಾವು ನಮ್ಮ ಹಳ್ಳಿಯಿಂದ ಹೊರಟೆವೆಂದರೆ, ಕಣಿವೆ ದಾಟುವಾಗ ಹುಡುಗರಾದ ನಮಗೆಲ್ಲಾ ಪುಕುಪುಕು ಅನ್ನುತಾ ಇತ್ತು. ಎರಡೂ ಪಕ್ಕ ಎತ್ತರೆತ್ತರಕ್ಕೆ ಬೆಳೆದ ಸಾಲ್ಮರಗಳು. ಪಕ್ಕದಲ್ಲೇ ಮಟ್ಟಿಯ ಕಾಡು. ಅಲ್ಲಿ ಹುಲಿ ಚಿರತೆಗಳು ಇವೆ ಅಂತ ನನ್ನ ಸಹಪಾಠಿಗಳು ಯಾವಾಗಲೂ ನನ್ನನ್ನು ಹೆದರಿಸುತ್ತಾ ಇದ್ದರು. ನಾನು ಭದ್ರಕ್ಕನ ತೊಡೆಯ ಮೇಲೆ ತಲೆಯಿಟ್ಟು ಗಟ್ಟಿಯಾಗಿ ಕಣ್ಮುಚ್ಚಿಕೊಂಡು ಮಲಗಿಬಿಡುತ್ತಾ ಇದ್ದೆ. ಘುಲು ಘುಲು ಕೊರಳ ಗಂಟೆಯ ಸದ್ದು ಮಾಡುತ್ತಾ, ಏರ್‍ಇನಲ್ಲಿ ಮುಸುಕರೆಯುತ್ತಾ ಎತ್ತುಗಳು ಗಾಡಿ ಎಳೆಯುತ್ತಾ ಇದ್ದವು. ಪಶ್ಚಿಮದಿಂದ ಗಾಳಿಬೀಸುತ್ತಾ , ಚಕ್ರದ ಧೂಳು ಗಾಡಿಯಮೇಲೆ ಇದ್ದವರ ಕಣ್ಣಿಗೇ ಬರುತ್ತಾ ಇತ್ತು. ಎಲ್ಲಾ ಪೂರ್ವಾಭಿಮುಖವಾಗಿ ತಿರುಗಿ ಕುಳಿತುಕೊಳ್ಳುತ್ತಾ ಇದ್ದರು. ಬಸಣ್ಣ ಎತ್ತಿನ ಬಾಲ ಮುರಿಯುತ್ತಾ -ಏ ಈರಾ... ಹುಲಿಯಾ ..ಎಂದು ಅವನ್ನು ಬೀಸುಹೆಜ್ಜೆಯಲ್ಲಿ ನಡೆಯಲಿಕ್ಕೆ ಹುರಿದುಂಬಿಸುತ್ತಾ ಇದ್ದನು. ನಮ್ಮ ಗಾಡಿ ಚನ್ನಗಿರಿಯ ಟೋಲ್ ಗೇಟು ದಾಟುವ ವೇಳೆಗೆ ಎಂಟುಗಂಟೆಯಾಗಿರೋದು. ಚನ್ನಗಿರಿಯ ವಿದ್ಯುದ್ ದೀಪಗಳು ಆಕಾಶದ ನಕ್ಷತ್ರಗಳೊಂದಿಗೆ ಸ್ಪರ್ಧಿಸುತ್ತಾ ಹುಡುಗರಾದ ನಮ್ಮನ್ನು ನಿಬ್ಬೆರಗುಗೊಳಿಸುತ್ತಾ ಇದ್ದವು. ಅಲ್ಲೇ ಎಡಕ್ಕೆ ತಣ್ಣೀರು ಹೊಂಡ. ಅಲ್ಲಿ ಮೆಟ್ಟಿಲು ಇಳಿದು ಬುತ್ತಿ ಊಟ ಮುಗಿಸುತ್ತಿದ್ದೆವು. ಆಮೇಲೆ ಮತ್ತೆ ಎತ್ತುಹೂಡಿಕೊಂಡು ಟೆಂಟಿನ ಬಳಿಹೋಗಿ ಅಲ್ಲಿ ಕೊಳ್ಳು ಹರಿದು, ಸಿನಿಮಾ ಟೆಂಟಿಗೆ ನುಗ್ಗುತ್ತಾ ಇದ್ದೆವು. ನೆಲ, ಚಾಪೆ, ಬೆಂಚು ಅಂತ ಮೂರು ವಿಭಾಗ. ನಾವು ಚಾಪೆ ಟಿಕೆಟ್ಟು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾ ಇದ್ದೆವು. ಮೊದಲು, "ಬರುತ್ತದೆ", "ಶೀಘ್ರದಲ್ಲಿ ನಿರೀಕ್ಷಿಸಿ" ಎಂದು ಕೆಲವು ಸಿನಿಮಾಗಳ ಪ್ರಕಟಣೆ. ಅಲ್ಲಿ ಪರಿಚಿತರಾದ ಹೊನ್ನಪ್ಪಭಾಗವತರೋ, ಪ್ರೇಮ್ ನಜೀರೋ, ಇಂದುಶೇಖರ್ರೋ ಕಂಡಾಗ ಸಿಳ್ಳೆ ಹೊಡೆಯುವುದು, ಅರಚುವುದು ಆಗುತ್ತಿತ್ತು. ಕೊನೆಗೆ ಮದಾಲಸೆ ಶುರುವಾಯಿತು. ಮಂತ್ರ ತಂತ್ರದ ರೋಮಾಂಚಕಾರೀ ಕಥೆ. ಮಂತ್ರವಾದಿ ಬಂದಾಗಂತೂ ನಾನು ಅಜ್ಜಿಯ ಸೆರಗಲ್ಲಿ ಮುಸುಕು ಹಾಕಿಕೊಂಡು ಮಲಗಿ ಬಿಟ್ಟೆ. ಯಾವ ಮಾಯದಲ್ಲಿ ನಿದ್ದೆ ಬರುತ್ತಾ ಇತ್ತೋ! ಮತ್ತೆ ಯಾವಾಗಲೋ ಎಚ್ಚರವಾದಾಗ ಕಣಿವೆಯ ದಾರಿಯಲ್ಲಿ, ಗವ್ವೆನ್ನುವ ಕತ್ತಲಲ್ಲಿ, ಮೂಕಿಗೆ ಲಾಟೀನು ಕಟ್ಟಿಕೊಂಡ ನಮ್ಮ ಬಂಡಿ ಧಡ ಬಡ ಸಾಗುತಾ ಇರುತ್ತಿತ್ತು. ಸಾಲುಮರಗಳ ಭಯ ಹುಟ್ಟಿಸುವ ಕಪ್ಪು ನೆರಳು. ಮಧ್ಯೆ ಮಧ್ಯೆ ನಕ್ಷತ್ರಗಳ ಮಿನುಕು. ಮತ್ತೆ ಕಣ್ಣನ್ನು ಒತ್ತಿಕೊಂಡು ಬರುವ ನಿದ್ದೆ! ಮತ್ತೆ ನಮಗೆ ಎಚ್ಚರಾಗುತ್ತಿದ್ದುದು ಮರು ದಿನ ಬೆಳಿಗ್ಗೆಯೇ!
ಸಿನಿಮಾ ಭದ್ರಕ್ಕನಿಗೆ ಬರೀ ರಂಜನೆಯ ವಿಷಯವಾಗಿತ್ತು,ಅಷ್ಟೆ! ಅವಳ ನಿಜವಾದ ಕಲಾಪ್ರೇಮ ಆರಾಧನೆಯ ನೆಲೆಯಲ್ಲಿ ವ್ಯಕ್ತವಾಗುವುದನ್ನು ನೋಡಬೇಕೆಂದರೆ ಗೊಂಬೆ ಮ್ಯಾಳದಲ್ಲಿ ಅವಳು ತೊಡಗಿಕೊಳ್ಳುತ್ತಿದ್ದ ರೀತಿಯನ್ನು ಗಮನಿಸಬೇಕು.ಅವಳ ದನಗಳಲ್ಲಿ ಯಾವುದಾದರೂ ಒಂದಕ್ಕೆ ಕಾಲುಜ್ವರವೋ, ಬಾಯಿಜ್ವರವೋ ಬಂತೂ ಎನ್ನಿ, ಭದ್ರಕ್ಕ ಮಟ್ಟೀರಂಗಪ್ಪನಿಗೆ ಹರಕೆ ಹೊರುತ್ತಿದ್ದಳು. ತಾನು ವೀರಶೈವಳು, ವೈಷ್ಣವದೇವರಾದ ರಂಗನಾಥನಿಗೆ ಹರಸಿಕೊಳ್ಳುವುದು ಯುಕ್ತವೇ ಇತ್ಯಾದಿ ಧರ್ಮಸೂಕ್ಷ್ಮಗಳು ಮುಗ್ಧೆಯಾದ ಆಕೆಗೆ ಹೊಳೆಯುತ್ತಲೇ ಇರಲಿಲ್ಲ. ಅವಳು ದೇವರುಗಳ ಸಂಬಂಧವನ್ನು ವಿವರಿಸುವ ರೀತಿಯನ್ನು ಅವಳ ಬಾಯಲ್ಲೇ ಕೇಳಬೇಕು. ಅವಳ ಪ್ರಕಾರ ಮಟ್ಟಿರಂಗ, ಕಲ್ಲುಗುಡಿ ಈಶ್ವರನ ಅಣ್ಣ. ಗ್ರಾಮದೇವತೆ ಕೆಂಚಮ್ಮ ಇಬ್ಬರಿಗೂ ತಂಗಿ. ಬೆಂಕೀಕೆರೆ ಕರಿಯವ್ವ ಕೆಂಚಮ್ಮನ ವಾರಗಿತ್ತಿ. ತಾನು ಕಪ್ಪಾಗಿರುವುದೂ, ಕೆಂಚಮ್ಮ ಕೆಂಪಾಗಿರುವುದೂ ಅವಳಿಗೆ ಸಹಿಸದು. ಆದುದರಿಂದ ಇಬ್ಬರಲ್ಲೂ ಸ್ವಲ್ಪ ತಿಕ್ಕಾಟವಿದೆ. ಆದರೆ ರಂಗಪ್ಪ ಮತ್ತು ಕಲ್ಲುಗುಡಿ ಈಶ್ವರ ಈ ದೇವಿಯರಿಗೆ ಬುದ್ಧಿಹೇಳಿ ಪ್ರತೀ ಯುಗಾದಿಗೊಮ್ಮೆ ಅವರನ್ನು ಒಟ್ಟುಗೂಡಿಸುತ್ತಾರೆ. ಸುಲಭಕ್ಕೆ ಅವರು ರಾಜಿಗೆ ಒಪ್ಪುವುದಿಲ್ಲ. ಆದರೆ ಮಟ್ಟಿರಂಗ ಮತ್ತೂ ಕಲ್ಲುಗುಡಿ ಈಶ್ವರ ಅಷ್ಟು ಸುಲಭಕ್ಕೆ ಬಿಡುವ ಪೈಕಿ ಅಲ್ಲ. ಅವರು ಇಬ್ಬರು ಹೆಣ್ಣು ದೇವತೆಗಳಿಗೂ ಬೈದು ಬುದ್ಧಿ ಹೇಳಿ ಕೊನೆಗೂ ಅವರನ್ನು ಒಂದೇ ಮಂಟಪದಲ್ಲಿ ಕುಳಿತುಕೊಳ್ಳಲು ಮನಸ್ಸು ಒಲಿಸುತ್ತಾರೆ. ಇದೇ ಯುಗಾದಿಯ ಬೆಳಿಗ್ಗೆ ನಮ್ಮೂರಲ್ಲಿ ನಡೆಯುವ ದೊಡ್ಡ ಹಗರಣ! ಇದನ್ನೆಲ್ಲಾ ನಮ್ಮೂರ ಭಕ್ತರು ಬಹಳು ತಮಾಷೆಯಾಗಿ, ಖುಷಿಯಾಗಿ, ಭಯಭೀತಿಗಳ ಸಮೇತ ನೋಡಿ ನೋಡಿ ಆನಂದಿಸುತ್ತಾ ಇದ್ದರು. ನಮ್ಮ ಭದ್ರಕ್ಕ ಕಲ್ಲುಗುಡಿಯ ಈಶ್ವರನ ಭಕ್ತೆಯಾಗಿರುವಂತೇ, ಮಟ್ಟೀರಂಗನ ಅಂತರಂಗದ ಒಕ್ಕಲೂ ಹೌದು! ಹಾಗಾಗಿ ಅವಳು ಮಟ್ಟಿರಂಗನಿಗೆ ಹರಕೆ ಒಪ್ಪಿಸುವುದರಲ್ಲಿ ಏನೂ ತಪ್ಪಿಲ್ಲ. ಕೆಲವುಬಾರು ಕಲ್ಲುಗುಡಿ ಈಶ್ವರನೇ ಮಟ್ಟೀ ರಂಗನಿಗೆ ಹರಕೆ ಒಪ್ಪಿಸುವಂತೆ ಸೂಚಿಸುವುದೂ ಉಂಟು. ಹೀಗೆ ನಮ್ಮ ಊರಿನ ದೇವತೆಗಳು ತಮ್ಮ ತಮ್ಮ ಜಾತಿ ಪಂಥ ಮರೆತು ತುಂಬ ಅನ್ಯೋನ್ಯವಾಗಿ ಹೊಂದಿಕೊಂಡು ಬಾಳುವೆ ಮಾಡುತ್ತಿದ್ದವು. ಸಾಬರ ದೇವರೂ ಕಲ್ಲುಗುಡಿ ಈಶ್ವರನ ಹಿಂದಿನ ಪೌಳಿಯಲ್ಲೇ ವಾಸವಾಗಿರುತ್ತಾ ಅವರಿಬ್ಬರೂ ಆಪ್ತಮಿತ್ರರೆಂದೂ, ರಾತ್ರಿ ನಿದ್ದೆ ಬರದಿದ್ದಾಗ ಇಬ್ಬರೂ ಚಾವಡಿಯಲ್ಲಿ ಕೂತು ಪಗಡೆ ಆಡುತ್ತಾರೆಂದೂ, ನಮ್ಮ ಹಳ್ಳಿಯಲ್ಲಿ ಹಳೇ ಮುದುಕರು ಕಥೆ ಹೇಳುತಾ ಇದ್ದರು. ಗೀಬಿನ ಹಾಲು ಮತ್ತು ಸಕ್ಕರೆ ಈಶ್ವರ ಮತ್ತು ಸಾಬರದೇವರಿಗೆ ಓದಿಸಿ ಭದ್ರಕ್ಕ ಮೀಸಲು ಮುರಿಯುತ್ತಾ ಇದ್ದಳು.
ಭದ್ರಕ್ಕ ಹರಕೆ ಆಟ ಆಡಿಸಲಿಕ್ಕೆ ಅಕ್ಕಿ,ಕಾಯಿ,ಬೆಲ್ಲ, ವೀಳ್ಯ(ಜೊತೆಗೆ ನೂರಾಒಂದು ರೂಪಾಯಿ)ಸಮೇತ ಗಂಗೂರಿಗೆ ಹೋಗಿ ಅಲ್ಲಿದ್ದ ಗೊಂಬೇಮೇಳದ ಗೋಪಾಲಯ್ಯನವರಿಗೆ ವೀಳ್ಯಕೊಟ್ಟು ಬರುತ್ತಿದ್ದಳು. ಭದ್ರಕ್ಕ ಗಂಗೂರಿಗೆ ಹೋಗಿಬಂದದ್ದು ರಾತ್ರಿಯೊಳಗಾಗಿ ಊರಿನ ತುಂಬಾ ಢಾಣಾ ಡಂಗುರವಾಗಿ ಹೋಗುತ್ತಿತ್ತು. ಭಾನುವಾರ ಆಟ ಎಂದರೆ ಶನಿವಾರವೇ ಚಟುವಟಿಕೆ ಶುರು. ತುಟಿದಪ್ಪದ ನಿಂಗಣ್ಣ ತನ್ನ ಗರಡಿ ಹೈಕಳ ಸಮೇತ ಊರ ಹೊರಗಿನ ಕಣಗಳಿಗೆ ಹೋಗಿ, ಅಲ್ಲಿ ಸುಗ್ಗಿಯನ್ನು ಕಾಯುತ್ತಾ ಬಿಸಿಲಲ್ಲಿ ಬಿದ್ದಿರುತ್ತಿದ್ದ ಭಾರೀ ಗಾತ್ರದ ರೋಂಡುಗಲ್ಲುಗಳನ್ನು ಉರುಳಿಸಿಕೊಂಡು ಕಲ್ಲುಗುಡಿಯ ಬಳಿ ಬರುತಾ ಇದ್ದ.ಕಣದಿಂದ ರೋಂಡುಗಲ್ಲುಗಳು ಹೀಗೆ ಊರೊಳಕ್ಕೆ ಬಂದವೂ ಅಂದರೆ ಗೊಂಬೇ ಆಟ ಖಾತ್ರಿ.ನಾವು ಹುಡುಗರೆಲ್ಲಾ ಹೋ ಅಂತ ಅರಚುತ್ತಾ ಗುಡುಗುಡು ಉರುಳುತ್ತಿದ್ದ ರೋಂಡುಗಲ್ಲನ್ನು ಹಿಂಬಾಲಿಸುತ್ತಾ ಇದ್ದೆವು.ಗುಡಿಯ ಮುಂದೆ ರೋಂಡುಗಲ್ಲು ಬಂದಮೇಲೆ ನಾಕು ಮೂಲೆಗೂ ನಾಕು ಕಲ್ಲು ಇಟ್ಟು. ಅವು ಅಲುಗಾಡದಂತೆ ತಳಕ್ಕೆ ಚಪ್ಪೆಕಲ್ಲು ಕೊಟ್ಟು, ಅವುಗಳ ಮೇಲೆ ಅಡಕೆ ಬೊಂಬುಹಾಸಿ. ತುಟಿದಪ್ಪ ಮಂತು ಸಿದ್ಧಪಡಿಸುತ್ತಿದ್ದ.ಸುತ್ತಾ ಚಚ್ಚೌಕಾಕಾರದ ಚಪ್ಪರ. ಅದರ ಮೇಲೆ ತೆಂಗಿನ ಗರಿ. ನಾಕೂ ಕಂಬಕ್ಕೆ ಬಾಳೇ ಕಂದು. ಚಪ್ಪರದ ಮೇಲೆ ಮಾವಿನ ತೋರಣ. ಮಂತಿನ ಅರ್ಧಭಾಗಕ್ಕೆ ಅಡ್ಡ ತರೆ. ಕೆಳಗಿಂದ ಒಂದು ಮೇಲಕ್ಕೆ. ಮೇಲಿಂದ ಒಂದು ಕೆಳಕ್ಕೆ. ಅವೆರಡರ ಮಧ್ಯೆ ಒಂದಡಿ ಜಾಗ. ಅಲ್ಲಿಂದ ಮೇಳದವರು ಬೊಂಬೆಗಳನ್ನು ಮಂತಿನ ಮೇಲೆ ಇಳಿಸಿ ಪ್ರಸಂಗ ನಡೆಸುತ್ತಿದ್ದರು. ಬೊಂಬೆ ಕುಣಿಸುವ ಸೂತ್ರಧಾರಿಗಳು ಪ್ರೇಕ್ಷಕರಿಗೆ ಕಾಣುವುದಿಲ್ಲ. ಬೊಂಬೆಗಳು ಮಾತ್ರ ಕಾಣುತ್ತವೆ. ಇಷ್ಟೆಲ್ಲಾ ಸಿದ್ಧತೆಯಾಗುವಾಗ ನಾವುಗಳು ಸ್ಕೂಲಿಗೂ ಚಕ್ಕರ್ ಹಾಕಿ ಗುಡಿಯ ಮುಂದೇ ಠಿಕಾಣಿ ಹಾಕುತಾ ಇದ್ದೆವು. ನಮಗೆ ಆ ವೇಳೆ ಹಸಿವು ನೀರಡಿಕೆ ಏನೂ ಆಗದು.ಸಂಜೆಯ ವೇಳೆಗೆ ಮಂತು ಕಟ್ಟುವುದು ಮುಗಿಯುತ್ತಿತ್ತು.ಭಾನುವಾರ ಹೇಗೂ ಶಾಲೆಗೆ ಚುಟ್ಟಿ. ಬೆಳಗಿನಿಂದ ಹಳ್ಳಿಯಲ್ಲಿ ನಾವು ಪೇರಿಹೊಡೆಯುವುದು ಶುರುವಾಗುತ್ತಿತ್ತು.ಕೆಂಚಲಿಂಗಪ್ಪ, ಟಿ.ಕೆಂಚಣ್ಣ, ಗಿಡ್ಡ ನಿಂಗಪ್ಪ, ದಳವಾಯಿ, ಕಂಠಮಾಲೆ ಮಲ್ಲಣ್ಣ ಎಲ್ಲರೂ ಕೂಡಿ ಕಲ್ಲುಗುಡಿಯ ಬಳಿ ಹೋಗುತ್ತಿದ್ದೆವು. ಕಲ್ಲುಗುಡಿಯ ಪಕ್ಕದಲ್ಲೇ ಭದ್ರಕ್ಕನ ಮನೆ. ಅಲ್ಲಿಗೆ ತಾನೆ ಗಂಗೂರಿನ ಮೇಳದವರ ಎತ್ತಿನ ಬಂಡಿ ಬರಬೇಕು? ಸಾಮಾನ್ಯವಾಗಿ ಎರಡು ಗಾಡಿಯಲ್ಲಿ ಮೇಳದವರು ಬರುತ್ತಿದ್ದರು. ಒಂದೊಂದು ಗಾಡಿಯಲ್ಲಿ ಒಂದೊಂದು ದೊಡ್ಡ ಪೆಟ್ಟಿಗೆ. ಅವುಗಳಲ್ಲಿ ಗೊಂಬೆಗಳಿರುತ್ತಿದ್ದವು. ಮುಂದಿನ ಗಾಡಿಯಲ್ಲಿ ಪಾಂಡವರ ಪೆಟ್ಟಿಗೆ. ಹಿಂದಿನ ಗಾಡಿಯಲ್ಲಿ ಕೌರವರ ಪೆಟ್ಟಿಗೆ.ಮೊದಲೆಲ್ಲಾ ಪಾಂಡವರು ಮತ್ತು ಕೌರವರ ಬೊಂಬೆಗಳನ್ನು ಒಂದೇ ಪೆಟ್ಟಿಗೆಯಲ್ಲಿ ಇಡುತ್ತಾ ಇದ್ದರಂತೆ. ಹುಣ್ಣೀಮೆ ಅಮಾವಾಸ್ಯೆ ಬಂತೆಂದರೆ ಸರುವೊತ್ತಿನಲ್ಲಿ ಮ್ಯಾಳದವರ ಮನೆಯಲ್ಲಿ ಧಬ ಧಬ ಸದ್ದು ಶುರುವಾಗುತ್ತಿತ್ತು. ಒಬ್ಬರನ್ನೊಬ್ಬರು ಗುದ್ದುವ ಸದ್ದು ಅದು. ಏನಪ್ಪ ಅಂತ ನೋಡಿದರೆ ಸದ್ದು ಗೊಂಬೆ ಪೆಟ್ಟಿಗೆಯಿಂದ ಬರುತ್ತಾ ಇದೆ. ಮ್ಯಾಳದವರಿಗೆ ಗೊತ್ತಾಯಿತು. ರಾತ್ರಿಯಾದ ಮೇಲೆ ಕೌರವರು ಪಾಂಡವರು ಜಗಳ ಶುರು ಹಚ್ಚುತ್ತಾರೆ ಅಂತ. ಕೆಲವು ಗೊಂಬೆಗಳ ಕೈಕಾಲೇ ಮುರಿದು ಹೋಗಿರೋವಂತೆ. ಈ ಅನಾಹುತ ತಪ್ಪಿಸಲಿಕ್ಕಾಗಿ ಎರಡು ಪೆಟ್ಟಿಗೆ ಮಾಡಿ, ಒಂದರಲ್ಲಿ ಕೌರವರನ್ನೂ, ಇನ್ನೊಂದರಲ್ಲಿ ಪಾಂಡವರನ್ನೂ ಇಡುವ ಸಂಪ್ರದಾಯ ರೂಢಿಗೆ ಬಂತಂತೆ. ಇದನ್ನು ನಮಗೆ ಹೇಳಿದ್ದು ಉಷ್ಟುಮರ ಗೋವಿಂದಣ್ಣ. ನಮಗಂತೂ ಈ ವಿಷಯದಲ್ಲಿ ಯಾವುದೇ ಅಪನಂಬಿಕೆ ಇಲ್ಲ. ಕೌರವರು ಪಾಂಡವರು ಒಂದೇ ಪೆಟ್ಟಿಗೆಯಲ್ಲಿ ಹೇಗೆ ತಾನೇ ತಣ್ಣಗೆ ಮಲಗಿರೋದು ಸಾಧ್ಯ?
ಸಂಜೆ ಏಳು ಗಂಟೆ ವೇಳೆಗೆ ಗಂಗೂರಿನವರ ಮೇಳದ ಬಂಡಿಗಳು ಬರುತ್ತಾ ಇದ್ದವು. ಆಗ ನಾವೆಲ್ಲಾ ಕೂಡಿ ಒಮ್ಮೆ ಗಟ್ಟಿಯಾಗಿ ಅರಚಿಕೊಳ್ಳುತ್ತಿದ್ದೆವು. ಆಟ ರಾತ್ರಿ ಇದೆ ಎನ್ನುವುದು ಖಾತ್ರಿಯಾಯಿತಲ್ಲ, ಓಡುತ್ತಿದ್ದೆವು ನೋಡು ಹಾರಿಗ್ಗಾಲು! ನಮ್ಮ ನಮ್ಮ ಜಗಲಿಯ ಮೇಲೆ ಚಾಪೆ, ಜಮಖಾನ ಬಿಡಿಸಿ ಜಾಗ ಕಾದಿರಿಸುವುದಕ್ಕಾಗಿ ಈ ಓಟ. ನಮ್ಮ ಕೇರಿಯಲ್ಲಿ ಗುಂಡಾ ಶಾಸ್ತ್ರಿಗಳು ಬಹಳ ಮಡೀ ಮೈಲಿಗೆ ನೋಡುವ ಜನ. ಯಾರು ಯಾರೋ ಬಂದು ರಾತ್ರಿ ಜಗಲಿಯಮೇಲೆ ಕೂತು, ಕಟ್ಟೆಯ ಕೆಳಗೆಲ್ಲಾ ತಂಬುಲ ಉಗಿದು, ಹೊಲಸು ಮಾಡುತ್ತಾರೆ ಅಂತ ಈ ಪುಣ್ಯಾತ್ಮ, ಕಟ್ಟೆಯ ಮೇಲೆ ಕೊಡಗಟ್ಟಲೆ ನೀರುಸುರಿಯುತ್ತಾ ಇದ್ದರು! ಥೂ! ಎಂಥಾ ಜನವಪ್ಪಾ ಇವರು! ತಾವೂ ನೋಡುವುದಿಲ್ಲ, ಬೇರೆಯವರು ನೋಡಲಿಕ್ಕೂ ಬಿಡುವುದಿಲ್ಲ ಎಂದು ನಾವು ಹುಡುಗರು ಶಾಸ್ತ್ರಿಗಳನ್ನು ಮನಸ್ಸಲ್ಲೇ ಬಯ್ಯುತ್ತಾ ಇದ್ದೆವು.ಇತ್ತ ನಾಡಿಗರ ಮನೆಯಲ್ಲಿ ಮ್ಯಾಳದವರಿಗೆ ರಾತ್ರಿಯೆಲ್ಲಾ ಕಾಫಿ ಸರಬರಾಜು ಮಾಡಲಿಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಾ ಇದ್ದವು. ಭದ್ರಕ್ಕನ ಮನೆಯಿಂದ ಒಂದು ತಪ್ಪಲೆ ಹಾಲು ಬರುತಾ ಇತ್ತು. ಅಂಗಡಿ ಸಾಂಶಿವಣ್ಣ ಎರಡು ದೊಡ್ಡ ಪೊಟ್ಟಣ ಕಾಫೀ ಪುಡಿ, ಆರು ಬೆಲ್ಲದಚ್ಚು ಕಳಿಸುತಾ ಇದ್ದ. ದೊಡ್ಡ ತಪ್ಪಲೆಯಲ್ಲಿ ನೀರು ಕುದಿಯಲಿಕ್ಕೆ ಇಡುತಾ ಇದ್ದರು. ಇಡೀ ರಾತ್ರಿ ಮ್ಯಾಳದವರಿಗೆ ಕಾಫಿ ಸರಬರಾಜು ಆಗಬೇಕಾಗಿತ್ತು. ಮತ್ತೆ, ರಾತ್ರಿಯೆಲ್ಲಾ ಅವರು ನಿದ್ದೆಗೆಟ್ಟು ಕುಣಿಯ ಬೇಕಲ್ಲ? ಅಗೋ! ಭದ್ರಕ್ಕ ಗಟ್ಟಿಯಾಗಿ ಕೈ ಬೀಸಿಕೊಂಡು ನಾಡಿಗರ ಮನೆಯತ್ತ ಬರುತ್ತಾ ಇದ್ದಾಳೆ. "ಅಕ್ಕಾವರೇ... ಹಾಲು ಬೇಕಾದರೆ ಹೇಳ್ರಿ ಮತ್ತೆ...ಭೋ ಚಂದ ಆಗಬೇಕು ನೋಡ್ರಿ ಮತ್ತೆ... ಇಲ್ಲಾ ಅಂದರೆ ಈ ಮ್ಯಾಳದವರು ನನ್ನ ಮಾನ ತೆಗೆದು ಬಿಡ್ತಾರೆ! ಹೋದ ಸಾರಿ ಏನಾಯ್ತು ಗೊತ್ತಾ?" ಎಂದು ಹಳೆಯ ಪ್ರಸಂಗ ನಾಡಿಗರ ಮನೆಯಲ್ಲಿ ಬಿಚ್ಚುತಾ ಇದ್ದಳು. ಗೊಂಬೇ ಮ್ಯಾಳದಲ್ಲಿ ವಿದೂಷಕನದು ಒಂದು ಖಾಯಮ್ ಪಾತ್ರ ಇರುತ್ತದೆ. ಹನುಮನಾಯಕ ಅಂತ ಅವನ ಹೆಸರು. ಅವನ ಹೆಂಡತಿ ಅಕ್ಕಾಸಾಬಿ ಅಂತ. ಅಕ್ಕಾಸಾಬಿಗೆ ಪುಂಡೀನಾರಿನ ಜಡೇ! ಕಾಳಗಪ್ಪು ಬಣ್ಣ. ಅವಳು ರಂಗದ ಮೇಲೆ ಬರಬೇಕಾದರೆ ಎಷ್ಟು ವಯ್ಯಾರ ಮಾಡುತ್ತಾಳೆ ಗೊತ್ತಾ? ಭಾಗವತಣ್ಣಾ...ಬರಲಾ...ಬರಲಾ? ಅಂತ ಮತ್ತೆ ಮತ್ತೆ ಕೇಳುತ್ತಾಳೆ. ಗೌಡರ ಸಾಂಬಣ್ಣ ಇಲ್ಲ ತಾನೇ? ಗಡ್ಡದ ಬುಡೇನ್ ಸಾಬ್ರು ಇಲ್ಲಾ ತಾನೆ? ಅಂತ ಕೇಳುತ್ತಾಳೆ. ಗೌಡರ ಸಾಂಬಣ್ಣ, ಬುಡೇನ್ ಸಾಬ್ರು ಇವರೆಲ್ಲ ನಮ್ಮ ಹಳ್ಳಿಯ ಮುಖ್ಯಸ್ಥರು. ಅಕ್ಕಾಸಾಬಿ ಅವರ ಹೆಸರು ಹಿಡಿದು ಕಿಚಾಯಿಸುತ್ತಾಳೆ. ಅವರಿಬ್ಬರಿಗೂ ಕಚ್ಚೆ ಸ್ವಲ್ಪ ಸಡಿಲು ಭಾಗ್ವತಣ್ಣಾ... ನನ್ನ ನೋಡಿದರೂ ಅಂದರೆ ಮನೆ ಮಾರು ಆಸ್ತಿ ಪಾಸ್ತಿ ಎಲ್ಲಾ ಬಿಟ್ಟು ನನ್ನ ಹಿಂದೇ ಓಡಿ ಬಂದುಬಿಡ್ತಾರೆ! ಎಂದು ಅಕ್ಕಾ ಸಾಬಿ ಹಾಸ್ಯ ಮಾಡುತ್ತಾಳೆ. ಜನ ಎಲ್ಲಾ ಹೋ ಎಂದು ಕಿರುಚುತ್ತಾ ನಗುತ್ತಾರೆ. ಸಾಂಬಣ್ಣಾ... ಅಂತ ಕೆಲವರು ಕೂಗುತ್ತಾರೆ. ಹೋದ ಸಾರಿ ಏನಾಯಿತು ಅಂದರೆ, ಅಕ್ಕಾಸಾಬಿ ಬಹಳ ವಯ್ಯಾರ ಮಾಡಿ ರಂಗದ ಮೇಲೆ ಬಂದ ಮೇಲೆ ಭಾವತಣ್ಣ ಆಕೆಯನ್ನು" ಯಾಕವ್ವಾ ನೀನು ಇಷ್ಟು ಕಪ್ಪಾಗಿದ್ದೀ.. ಹೋದ ಸಾರಿ ಎಷ್ಟೊ ಬೆಳ್ಳಗಿದ್ದೆಯಲ್ಲ?" ಎನ್ನುತ್ತಾನೆ. ಆಗ ಅಕ್ಕಾ ಸಾಬಿ "ಈ ಸಾರಿ ಭದ್ರಕ್ಕ ಮಾಡಿಸಿದ ಕಾಫಿ ಕುಡಿದೆ ನೋಡು ಹಿಂಗಾಗಿ ಹೋತು ನನ್ನ ಕಲ್ಲರ್ರು!" ಅಂದು ಬಿಡೋದೆ?
ಭದ್ರಕ್ಕನಿಗೆ ಮ್ಯಾಳದ ದಿವಸ ಕಾಲೇ ನಿಲ್ಲೋದಿಲ್ಲ. ಮನೆ ಮನೆಗೂ ಅವಳು ಆವತ್ತು ಎಡಕಾಡುತ್ತಾಳೆ. ಕಂಠಮಾಲೆಯವರ ಮನೆಗೆ ಹೋಗಿ, ಈರಕ್ಕಾ...ದ್ರೌಪದಿಗೆ ನಿನ್ನ ಬುಟ್ಟಾ ಹೂವಿನ ರೇಷ್ಮೆ ಸೀರೇನೇ ಆಗಬೇಕು! ಅಂತ ಅದನ್ನ ಇಸಿದುಕೊಂಡು ಶ್ಯಾನುಭೋಗರ ಮನೆಗೆ ಬರುತ್ತಾಳೆ. ಪಾರ್ವತಮ್ಮನೋರೇ ಈವತ್ತು ಕೃಷ್ಣನಿಗೆ ನಿಮ್ಮ ಆನಂದ ಕಲರ್ ಸೀರೇ ಬೇಕು ಕಣ್ರೀ! ಎಂದು ಅವರಿಂದ ಕಡ ಪಡೆಯುತ್ತಾಳೆ. ಹೀಗೆ ಬೇರೆ ಬೇರೆ ಮನೆಯವರ ನಾನಾ ಬಗೆಯ ಸೀರೆಗಳು ಭದ್ರಕ್ಕನ ಮನೆ ಸೇರುತ್ತವೆ. ಇತ್ತ ಭದ್ರಕ್ಕನ ಮನೆಯಲ್ಲಿ ಮ್ಯಾಳದವರು ಹಗ್ಗ ಕಟ್ಟಿ ಸಾಲಾಗಿ ಗೊಂಬೆಗಳನ್ನು ನೇತು ಹಾಕಿದ್ದಾರೆ. ಮ್ಯಾಳದ ಯಜಮಾನರಾದ ನಾರಣಪ್ಪನವರು ಒಂದೊಂದೇ ಗೊಂಬೆಗೆ ಸೀರೆ ಉಡಿಸಿ ರೆಡಿ ಮಾಡುತ್ತಾರೆ. ಗಂಡು ಬೊಂಬೆಗಳ ವೇಷ ಬಹಳ ಸುಲಭ. ಸುಮ್ಮನೆ ಹೆಗಲಿಂದ ಮೂರು ಬಣ್ಣ ಬಣ್ಣದ ಸೀರೆ ಮಡಿಸಿ ಇಳಿಬಿಟ್ಟರೆ ಮುಗಿಯಿತು. ಇನ್ನು ನಮ್ಮ ಅಕ್ಕಾಸಾಬಿಗೆ ಭದ್ರಕ್ಕ ತನ್ನದೇ ಪಟ್ಟಾಪಟ್ಟಿ ಇಳಕಲ್ಲು ಸೀರೆ ಕೊಟ್ಟಿದ್ದಾಳೆ. ಗೊಂಬೆಗಳಿಗೆ ಅಲಂಕಾರ ಮಾಡುವುದು, ಹೂ ಮುಡಿಸುವುದು ಎಲ್ಲಾ ಸಾಂಗೋಪಾಂಗವಾಗಿ ನಡೆಯುತ್ತದೆ. ಒಂಬತ್ತು ಗಂಟೆಗೆ ಇದೆಲ್ಲಾ ಮುಗಿಯಿತು ಎಂದರೆ ಭಾವತರು ಬಂದು ಗೊಂಬೆಗಳಿಗೆ ಪೂಜೆ ಮಾಡಿ ಕರ್ಪೂರದಾರತಿ ಎತ್ತುತ್ತಾರೆ. ಅಲ್ಲಿಗೆ ಆಟಕ್ಕೆ ಎಲ್ಲವೂ ಸಿದ್ಧವಾದಂತೆ ಆಯಿತು. ಆ ರಾತ್ರಿ ಮ್ಯಾಳದವರು ಯಾರೂ ಊಟ ಮಾಡುವುದಿಲ್ಲ. ಊಟ ಮೈಲಿಗೆ ಅಂತ ಕೇವಲ ಉಪ್ಪಿಟ್ಟು ಅಥವಾ ಮಂಡಕ್ಕಿ ಉಸುಳಿಯ ಫಲಾಹಾರ ತೆಗೆದುಕೊಳ್ಳುತ್ತಾರೆ. ಠಾಕೋ ಠೀಕು ಹತ್ತು ಗಂಟೆಗೆ ಮಂತಿನ ಮುಂದೆ ಜನಸಾಗರವೇ ನೆರೆದುಬಿಟ್ಟಿರುತ್ತದೆ. ನಾವು ರಾತ್ರಿಯೆಲ್ಲಾ ಬಯಲಲ್ಲೇ ಕಳೆಯಲು ಮನೆಯಿಂದ ಸಿದ್ಧರಾಗಿಯೇ ಬಂದಿರುತ್ತೇವೆ. ತಲೆಗೆ ಮಂಕೀಕ್ಯಾಪು. ಮೈತುಂಬ ಸ್ವೆಟ್ಟರ್ರು. ನಿದ್ದೆ ಬಂದರೆ ಅಲ್ಲೇ ಮಲಗಲಿಕ್ಕೆ ಒಂದು ದುಪಟಿ! ಇದು ನಮ್ಮ ಸಿದ್ಧತೆಯಾದರೆ ನಮ್ಮಜ್ಜಿ ಹುರಿಗಾಳು, ಚಕ್ಕುಲಿ, ಕೋಡಬಳೆಯ ಡಬ್ಬವನ್ನೇ ತಂದಿಟ್ಟುಕೊಂಡಿದ್ದಾಳೆ! ಬೀದಿಯ ತುದಿಯಲ್ಲಿ ಒಡೆಮಲ್ಲಣ್ಣ ಆಗಲೇ ಬಿಸಿಬಿಸಿ ಒಡೆ ಕರಿಯಲಿಕ್ಕೆ ಶುರು ಹಚ್ಚಿದ್ದಾನೆ. ಒಡೇ ಮಂಡಕ್ಕಿ ಕೊಂಡು ಜನ ಆಟ ನೋಡಲು ಜಮಾಯಿಸುತ್ತಿದ್ದಾರೆ. ಆ ಗಮ್ಮು, ಆ ವಾಸನೆ ಇವೆಲ್ಲಾ ವರ್ಣಿಸಲಿಕ್ಕೆ ಸಾಧ್ಯವೇ ಇಲ್ಲ. ಯಾವಾಗ ಆಟ ಶುರುವಾಗುವುದೋ ಎಂದು ನಾವೆಲ್ಲಾ ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು ಕೂತಿದ್ದೇವೆ!

***
ಅಲ್ಲಾಡಿರುದ್ರಣ್ಣನವರ ಪತ್ರ ಬಂದಾಗ ಈ ನನ್ನ ಬಾಲ್ಯದ ನೆನಪುಗಳೆಲ್ಲಾ ಒಂದೊಂದಾಗಿ ಸಿನಿಮಾದಂತೆ ನನ್ನ ಕಣ್ಣುಮುಂದೆ ಸುಳಿದು ಹೋದವು.ನನ್ನ ಹೆಂಡತಿ ಬಂದು"ಏನು? ಹಿಂಗೆ ಗರಬಡಿದಹಂಗೆ ಕೂತಿದ್ದೀರಿ?"ಎಂದು ಕೇಳಿದಾಗಲೇ ನಾನು ಜಾಗೃತ ಪ್ರಪಂಚಕ್ಕೆ ಬಂದದ್ದು. ನಾನು ಊರಿಗೆ ಹೋಗಬೇಕು ಕಣೇ...ಭದ್ರಕ್ಕ ನೆಲ ಹಿಡಿದು ಬಿಟ್ಟಿದ್ದಾಳಂತೆ.ಅವಳ ಕೊನೇ ಆಸೆಯಂತೆ ಗೊಂಬೆ ಮ್ಯಾಳ ಏರ್ಪಾಡುಮಾಡಿದಾರಂತೆ..ನೋಡು...ಅಲ್ಲಾಡಿರುದ್ರಣ್ಣನೋರ ಕಾಗದ ಬಂದಿದೆ ಎಂದು ಪತ್ರವನ್ನು ಅವಳ ಕೈಗೆ ಕೊಡುತ್ತೇನೆ. ಭದ್ರಕ್ಕಾ ಅಂದರೆ ಮೊದಲಿಂದಲೂ ನಿಮಗೆ ಜೀವ. ಹೋಗಿ ಬನ್ನಿ...ಪಾಪ... ನಾವು ಮದುವೆಯಾದ ಹೊಸದರಲ್ಲಿ ನನ್ನನ್ನ ಮನೆಗೆ ಕರೆದು ಜರಿಯಂಚಿನ ಕ್ರೇಪು ಸೀರೆ ಕೊಟ್ಟಿದ್ದಳು..ಎಂದು ನನ್ನ ಹೆಂಡತಿ ನೆನಪು ಮಾಡಿಕೊಳ್ಳುತ್ತಾಳೆ.
ರಾತ್ರಿ ಆಟ ಎನ್ನುವಾಗ ಬೆಳಿಗ್ಗೆ ನಾನು ಮೇಲ್ ಟ್ರೇನ್ ಹಿಡಿದು ಊರು ತಲಪಿದೆ. ಹೋದವನೇ ಹಣ್ಣು ಹೂ ಹಿಡಿದುಕೊಂಡು ಭದ್ರಕ್ಕನ ಮನೆಗೆ ಹೋದೆ. ಭದ್ರಕ್ಕ ತನ್ನ ಗುಪ್ಪೆಮಂಚದಮೇಲೆ ಮಲಗಿಕೊಂಡಿದ್ದಳು. ನನ್ನ ನೋಡಿದವಳೇ ಗುರುತು ಹಿಡಿದು...ಯಂಟೇಶಣ್ಣಾ..ಬಾ..ಬಾ..ಕುಂತ್ಕಾ...ಎಂದು ಪ್ರಯಾಸದಿಂದ ಎದ್ದು ಕುಳಿತಳು. ಭದ್ರಕ್ಕಾ ..ಆಯಾಸ ಮಾಡಿಕೋ ಬ್ಯಾಡ..ನೀನು ಮಲಗೂ ಅಂದರೂ ಕೇಳದೆ ಅವಳು ಗೋಡೆಗೆ ಒರಗಿ ಕುಳಿತಳು. ಆ ಆಜಾನುಬಾಹು ಹೆಂಗಸು ಒಂದು ಹಿಡಿಯಾಗಿ ಬಿಟ್ಟಿದ್ದಳು. ಕಣ್ಣಲ್ಲಿ ಮಂಕು ಕಳೆ. ಮುಖದ ಮೇಲೆ ಮೂರುದಿನದ ಕೂಳೆ. ತಲೆ ಕೂಡಾ ಬಾಚಿಕೊಂಡಿರಲಿಲ್ಲ. ಕೆನ್ನೆಯ ಮೂಳೆಗಳು ಹಾದು ಮುಖ ಒಂದಂಗೈ ಅಗಲ ಆಗಿಹೋಗಿತ್ತು. ನಾನು ಭದ್ರಕ್ಕನ ಕೈ ಹಿಡಿದುಕೊಂಡು ಹೇಗಾಗಿ ಬಿಟ್ಟಿದೀಯಲ್ಲ ಭದ್ರಕ್ಕಾ...ಎಂದಾಗ ಅವಳು ನಕ್ಕು, ಸಂತೇ ಪಯಣ ಹಿಂಚುಮುಂಚು ಅಂತ ವೈರಾಗ್ಯದ ಮಾತಾಡಿದಳು.
ರಾತ್ರಿ ಭದ್ರಕ್ಕನ ಆಸೆಯಂತೆ ಊರ್ವಶೀ ಪ್ರಸಂಗ ಇಡಿಸಿದ್ದರು. ಯಾವುದಾದರೂ ಭಕ್ತಿಯ ಪ್ರಸಂಗ ಇಡಿಸದೆ, ಭದ್ರಕ್ಕ, ಊರ್ವಶೀ ಪ್ರಸಂಗ ಯಾಕೆ ಬಯಸಿದಳು ಎಂಬುದು ನನಗೆ ಹೊಳೆಯಲಿಲ್ಲ. ಆಟ ಶುರುವಾಗುವ ವೇಳೆಗೆ ಭದ್ರಕ್ಕನನ್ನು ಅನಾಮತ್ತಾಗಿ ಎತ್ತಿಕೊಂಡು ವೀರಾಚಾರ್ಯರ ಜಗಲಿಗೆ ತಂದರು. ಹಿಂದೆ ಹಾಸಿಗೆ ಸುರುಳಿ ಇರಿಸಿ ವರಗಿಕೊಳ್ಳುವುದಕ್ಕೆ ಏರ್ಪಾಡು ಮಾಡಿದ್ದರು. ನಾನೂ ಮತ್ತು ಅಲ್ಲಾಡಿ ರುದ್ರಣ್ಣ ತನ್ನ ಪಕ್ಕವೇ ಕುಳಿತುಕೊಳ್ಳಬೇಕೆಂದು ಭದ್ರಕ್ಕ ಬಯಸಿದ್ದರಿಂದ ನಾವೂ ಅವಳ ಪಕ್ಕದಲ್ಲೇ ಕುಳಿತುಕೊಂಡೆವು. ಆಟ ಶುರುವಾಯಿತು. ಭದ್ರಕ್ಕನ ಸ್ಥಿತಿ ಭಾವವತರಿಗೂ ಗೊತ್ತಿದ್ದುದರಿಂದ , ಹನುಮನಾಯಕ ಮತ್ತು ಅಕ್ಕಾಸಾಬಿಯ ಹಾಸ್ಯ ಪ್ರಸಂಗಗಳನ್ನು ಕಟ್ಟು ಮಾಡಿ ನೇರವಾಗಿ ಮುಖ್ಯ ಪ್ರಸಂಗವನ್ನೇ ಭಾಗವತರು ಶುರು ಮಾಡಿದರು.
ಧರೆಯೊಳು ಹೆಸರಾದ ಗಂಗೂರ ಪುರವಾಸಿ-ಎಂದು ಭಾಗವತರು ಪ್ರಾರ್ಥನಾ ಗೀತೆಯನ್ನು ತಮ್ಮ ಕಂಚು ಕಂಠದಲ್ಲಿ ಮೊಳಗಿಸಿಯಾದ ಮೇಲೆ ಇಂದ್ರನ ಒಡ್ಡೋಲಗ. ಊರ್ವಶಿಯ ನರ್ತನ. ಊರ್ವಶಿಯನ್ನ ನಿಬ್ಬೆರಗಿಂದ ಅರ್ಜುನ ನೋಡುವುದು. ರಾತ್ರಿ ಇಂದ್ರ ಊರ್ವಶಿಯನ್ನ ಅರ್ಜುನನ ಶಯನ ಗೃಹಕ್ಕೆ ಕಳಿಸುವುದು. ಅರ್ಜುನ , ಊರ್ವಶಿಯು ತನ್ನ ವಂಶದ ಹಿರೀಕನಾದ ಪುರೂರವನ ರಾಣಿಯಾಗಿದ್ದುದರಿಂದ ತನಗೆ ತಾಯಿ ಸಮಾನಳೆಂದು ಹೇಳಿ, ಆಕೆಯನ್ನು ತಿರಸ್ಕರಿಸುವುದು, ಊರ್ವಶಿ ರೋಷಭೀಷಣಳಾಗಿ ನಪುಂಸಕನಾಗೆಂದು ಅರ್ಜುನನಿಗೆ ಶಾಪ ಕೊಡುವುದು, ಅರ್ಜುನ ಭೂಮಿಗೆ ಹಿಂದಿರುಗಿ ವಿರಾಟನ ಮನೆಯಲ್ಲಿ ವೇಷ ಮರೆಸುವಾಗ ಹೆಣ್ಣುಡುಗೆ ತೊಟ್ಟು ನಪುಂಸಕನಾಗುವುದು..ಈ ದೃಶ್ಯ ಬಂದಾಗ ಭದ್ರಕ್ಕ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ಸಮಾಧಾನ ಪಡಿಸುವುದು ನಮಗ್ಯಾರಿಗೂ ಸಾಧ್ಯವಾಗಲಿಲ್ಲ. ಆಕೆಯನ್ನು ಮತ್ತೆ ಎತ್ತಿಕೊಂಡು ಮನೆಗೆ ಸಾಗಿಸಬೇಕಾಯಿತು.
ಆಮೇಲೆ ಬಹಳ ದಿನಗಳೇನೂ ಭದ್ರಕ್ಕ ಬದುಕಿರಲಿಲ್ಲ. ಅವಳು ಮೃತಳಾದಾಗ ಯಥಾಪ್ರಕಾರ ಅಲ್ಲಾಡಿರುದ್ರಣ್ಣನವರ ಎರಡು ಸಾಲಿನ ಪತ್ರ ಬಂತು. ಅರ್ಜುನ ಹೆಣ್ಣುಡುಗೆ ತೊಡುವಾಗ ಭದ್ರಕ್ಕ ಬಿಕ್ಕಿಬಿಕ್ಕಿ ಅತ್ತದ್ದು ನೆನಪಾಗುತ್ತಾ, ಮೂಗು ಕಣ್ಣಿಂದ ನೀರು ಸುರಿಯುತ್ತಿದ್ದ ಆಕೆಯ ಮುಖ ಮತ್ತೆ ನನ್ನ ಕಣ್ಣ ಮುಂದೆ ಬಂದು, ನಾನು ಕರವಸ್ತ್ರದಿಂದ ಕಣ್ಣನ್ನು ಒತ್ತಿಕೊಂಡೆ.

(ಉದಯವಾಣಿ ದೀಪಾವಳಿ ಸಂಚಿಕೆಯಲ್ಲಿ ಪ್ರಕಟಿತ)

****

Saturday, October 17, 2009

ಅಶ್ವತ್ಥ ಎಂಬ ಅಯಸ್ಕಾಂತ...

ಸಮಕಾಲೀನ ಸಂದರ್ಭದಲ್ಲಿ ನಾನು ಕಂಡ ಮಹಾನ್ ಪ್ರತಿಭಾಶಾಲಿಗಳಲ್ಲಿ ಅಶ್ವಥ್ ಒಬ್ಬರು. ಸುಮಾರು ಮೂವತ್ತು ವರ್ಷಗಳ ಸುದೀರ್ಘವಾದ ಒಡನಾಟ ನಮ್ಮದು. ಸೃಷ್ಟಿಶೀಲವಾದ ಅನೇಕ ಗಟ್ಟಿ ಕ್ಷಣಗಳನ್ನು ಅವರೊಟ್ಟಿಗೆ ಕಳೆದಿರುವ ಅನುಭವ ನನಗುಂಟು. ಇಷ್ಟಾಗಿಯೂ ಅವರ ಬಗ್ಗೆ ಬರೆಯುವುದು ಒಂದು ಸವಾಲಿನ ಸಂಗತಿಯೇ. ಕಾರಣ ಸುಲಭವಾದ ಗ್ರಹಿಕೆಗೆ ಸಿಕ್ಕುವ ಸರಳ ವ್ಯಕ್ತಿಯಲ್ಲ ಅವರು. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬುದೇ ಅವರ ಜೀವನ ಸೂತ್ರ. ಸದಾ ಹೊಸ ಹೊಸ ಕನಸು ಕಾಣುತ್ತಾ, ಅವನ್ನು ಕಾರ್ಯ ರೂಪಕ್ಕೆ ತರುತ್ತಾ, ನನ್ನನ್ನು ಸದಾ ವಿಸ್ಮಿತಗೊಳಿಸುತ್ತಾ ಬಂದಿರುವ ವ್ಯಕ್ತಿ ಇವರು. ಇವರಂಥಾ ಕನಸುಗಾರರನ್ನು ನಾನು ಕಂಡೇ ಇಲ್ಲ ಎಂದರೂ ತಪ್ಪಾಗದು.ಇವರ ವ್ಯಕ್ತಿತ್ವದಲ್ಲಿ ಎರಡು ಧ್ಯಾನ ಕೇಂದ್ರಗಳಿವೆ. ಒಂದು ಸುಗಮಸಂಗೀತ. ಇನ್ನೊಂದು ಸ್ವತಃ ಅಶ್ವಥ್. ಈ ಎರಡು ಕೇಂದ್ರಗಳು ದೂರ ಸರಿಯುತ್ತಾ , ಹತ್ತಿರವಾಗುತ್ತಾ ಒಂದು ಬಗೆಯ ವಿಚಿತ್ರವಾದ ಖೋ ಆಟದಲ್ಲಿ ತೊಡಗಿರುವ ಹಾಗೆ ನನಗೆ ಯಾವಾಗಲೂ ಅನ್ನಿಸಿದೆ. ಕೆಲವೊಮ್ಮೆ ಸುಗಮ ಸಂಗೀತ ಅಶ್ವಥ್ ಅವರನ್ನು ಆವರಿಸಿಬಿಡುತ್ತದೆ. ಮತ್ತೆ ಕೆಲವೊಮ್ಮೆ ಅಶ್ವಥ್ ಸುಗಮ ಸಂಗೀತವನ್ನು ಆವರಿಸಿಬಿಡುತ್ತಾರೆ. ವಿಶೇಷವಾದ ಅರ್ಥದಲ್ಲಿ ಸುಗಮ ಸಂಗೀತ ಎಂಬುದು ಅಶ್ವಥ್ ಅವರ ಅಹಂಅಭಿವ್ಯಕ್ತಿಯೇ ಆಗಿದೆ. ಪ್ರಾಯಃ ಒಬ್ಬ ಸಾಹಿತಿ, ಚಿತ್ರಗಾರ, ಶಿಲ್ಪಿಗಿಂತ ಇದು ಭಿನ್ನವಾದ ನಿಲುವು. ಸಂಗೀತಗಾರ, ನೃತ್ಯಪಟು, ನಟ- ತಮ್ಮ ಹಾಜರಿಯಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಗೆ ಒಳಗಾದವರು. ಅಶ್ವಥ್ ಇಲ್ಲದೆ ಅಶ್ವಥ್ ಗಾಯನವಿಲ್ಲ; ಮಾಯಾರಾವ್ ಇಲ್ಲದೆ ಮಾಯಾರಾವ್ ಅವರ ನರ್ತನವಿಲ್ಲ; ರಾಜಕುಮಾರ್ ಇಲ್ಲದೆ ರಾಜಕುಮಾರ್ ಅವರ ಅಭಿನಯವಿಲ್ಲ. ಈ ಮಾಧ್ಯಮದವರು ವ್ಯಕ್ತಿ ನಿರಸನವನ್ನು ಸಾಧಿಸುವ ಬಗೆಯೆಂತು? ಅಸಾಮಾನ್ಯವಾದ ನಡಾವಳಿ, ಲಯಪ್ರತೀತಿ, ವೇಷಾಂತರಗಳು, ಮತ್ತು ಶಿಷ್ಯನಿರ್ಮಾಣಗಳಿಂದ ತಕ್ಕಮಟ್ಟಿಗಿನ ವ್ಯಕ್ತಿನಿರಸನವನ್ನು ಸಾಧಿಸಬಹುದೇನೋ! ಆದರೂ ಬೇರೆ ಕಲಾಮಾಧ್ಯಮಗಳಲ್ಲಿ ಸಾಧ್ಯವಾಗುವ ವ್ಯಕ್ತಿನಿರಪೇಕ್ಷತೆ (ವ್ಯಕ್ತಿತ್ವನಿರಪೇಕ್ಷತೆ ಅಲ್ಲ) ಸಂಗೀತ, ನೃತ್ಯ, ಅಭಿನಯದ ಮಾಧ್ಯಮಗಳಲ್ಲಿ ಸಾಧ್ಯವಾಗುವುದಿಲ್ಲವೇನೋ...!ಈ ತೊಡಕಿನ ಅರಿವು ಅಶ್ವಥ್ ಅವರನ್ನು ಅರ್ಥೈಸುವಲ್ಲಿ ನಮ್ಮ ನೆರವಿಗೆ ಬಂದೀತು!

***

ಅಶ್ವಥ್ ಅವರನ್ನು ಮೊಟ್ಟಮೊದಲಬಾರಿ ನಾನು ನೋಡಿದ್ದು ಯವನಿಕಾ ಕಲಾಮಂದಿರದಲ್ಲಿ. ಗೆಳೆಯ ವ್ಯಾಸರಾವ್, ಅವರನ್ನು ನನಗೆ ಪರಿಚಯಿಸಿದರು. ಅಶ್ವಥ್, ನಾನು ಮತ್ತು ಬಿ.ಆರ್.ಎಲ್. ಅವರನ್ನು ನೋಡಲಿಕ್ಕಾಗಿ ಯವನಿಕಾಕ್ಕೆ ಬಂದಿದ್ದರು. ಯವನಿಕಾದ ಮುಂಭಾಗದ ಅಂಗಳದಲ್ಲಿ ಸುತ್ತ ಇರುವ ಮಂದಿಯ ಗಮನವೇ ಇಲ್ಲದೆ ಅಶ್ವಥ್ ತಮ್ಮ ಒಂದು ಕನಸನ್ನು ನಮ್ಮ ಮುಂದೆ ತೆರೆದಿಡತೊಡಗಿದರು! ಹೀಗೆ ಒಂದು ಕನಸಿನ ಸಮೇತವೇ ಅಶ್ವಥ್ ಅವರನ್ನು ನಾನು ಮೊಟ್ಟಮೊದಲು ನೋಡಿದ್ದು. ಮುಂದೆ ಅದೆಷ್ಟು ಬಾರಿ ನಾನು ಅವರು ಸೇರಿ ಮಾತಾಡಿದ್ದೇವೋ. ಕನಸಿಲ್ಲದ ಬರಿಗಣ್ ಅಶ್ವಥ್ ಯಾವತ್ತೂ ನನ್ನ ಕಣ್ಣಿಗೆ ಬಿದ್ದಿಲ್ಲ. ಮೊದ ಮೊದಲು ಸಣ್ಣಪುಟ್ಟ ಕನಸುಗಳನ್ನು ಅಶ್ವಥ್ ಕಾಣುತ್ತಿದ್ದರು. ಬರು ಬರುತ್ತಾ ಅವು ವಿಶ್ವೋವಿಶಾಲವಾಗತೊಡಗಿದವು! ಅವರ ಕನಸಿನ ಪ್ರಪಂಚ ಅಳತೆಮೀರಿ ದೊಡ್ಡದಾಗತೊಡಗಿತು. ಅಸಂಖ್ಯ ಅನಾಮಿಕ ಮುಖಗಳು ಆ ಕನಸುಗಳಲ್ಲಿ ಕಿಕ್ಕಿರಿಯತೊಡಗಿದವು. ಅದೆಲ್ಲಾ ಅಶ್ವಥ್ ಅವರ ಆಯಸ್ಕಾಂತಪ್ರತಿಭೆಯಿಂದ ದೋಚಲ್ಪಟ್ಟ ಅನಾಮಿಕ ಅಭಿಮಾನಿಗಳ ಸಾಂದ್ರ ದಟ್ಟಣೆ. ಅಶ್ವಥ್..ಅಶ್ವಥ್..ಅಶ್ವಥ್..ಎಂದು ಅಭಿಮಾನದಿಂದ ಒಕ್ಕೊರಳಲ್ಲಿ ಘೋಷಿಸುವ ಅಭಿಮಾನಿಗಳು ಅವರು. ಇಂಥ ಒಂದು ವಿಶ್ವವ್ಯಾಪೀ ಕನಸು ಕನ್ನಡವೇ ಸತ್ಯ ಕಾರ್ಯಕ್ರಮದ್ದು! ಎಂಥಾ ಜನ ಸಾಗರ ನೆರೆದಿತ್ತು ಅಲ್ಲಿ! ಒಂದು ಸುಗಮಸಂಗೀತ ಕಾರ್ಯಕ್ರಮಕ್ಕೆ ಆಪಾಟಿ ಮಂದಿ ಸೇರುತ್ತಾರೆಂದು ನಾವು ಕಲ್ಪಿಸುವುದೇ ಸಾಧ್ಯವಿರಲಿಲ್ಲ. ಅದು ಅಶ್ವಥ್ ಕಲ್ಪಿಸಿದ್ದ ಅತ್ಯಂತ ಬೃಹತ್ ಆದ ಕನಸಾಗಿತ್ತು. ಆ ಅಸಾಧ್ಯವೆನಿಸುವ ಕನಸನ್ನು ಅವರು ಈ ನೆಲದ ಪಾತಳಿಗೇ ಎಳೆದು ತಂದಿದ್ದರು. ಇದೊಂದು ಅದ್ಭುತ ಪ್ರಮಾಣಾತ್ಮಕ ಕನಸು.

***

ಅಶ್ವಥ್ ಕಂಡ ಬೇರೆ ಬಗೆಯ ಕನಸುಗಳೂ ನನ್ನ ಕಣ್ಮುಂದೆ ಇವೆ. ನಿರ್ಜನವಾದ ಒಂದು ಅರಣ್ಯಪ್ರದೇಶ. ಇರುಳು ಮೆಲ್ಲಗೆ ತಾಯ ಮುಸುಕಿನಂತೆ ಭೂಮಿಯ ಮೇಲೆ ಇಳಿಬಿದ್ದಿದೆ. ಒಂದು ದೊಡ್ಡ ಹಸಿರುಕಪ್ಪು ಮರದ ಕೆಳಗೆ ಅಶ್ವಥ್ ಕುಳಿತಿದ್ದಾರೆ. ಕೆಲವರು ಕವಿಗಳು, ಕಾವ್ಯರಸಿಕರು, ಆಪ್ತೇಷ್ಟರು, ಅಶ್ವಥ್ ಅವರ ಮಿತ್ರಬಾಂಧವರು ಅಲ್ಲಿ ನೆರೆದಿದ್ದಾರೆ. ಪ್ರಖರವಾದ ಬೆಳಕೂ ಇಲ್ಲ. ಸಣ್ಣಗೆ ಒಂದು ಹಣತೆಯ ದೀಪ. ಅಷ್ಟೆ. ಅಶ್ವಥ್ ತಂಬೂರಿಯ ಮಂಗಲಶ್ರುತಿಯ ಹಿನ್ನೆಲೆಯಲ್ಲಿ ಮೆಲ್ಲಗೆ ಹಾಡ ತೊಡಗುತ್ತಾರೆ. ವಿಲಂಬ ಗತಿಯ ಗಂಭೀರವಾದ ಕವಿತೆಗಳು. ಸಾವಧಾನದ ಗಾಯನ. ಗಾಯಕ ಮತ್ತು ಕೇಳುಗ ಇಬ್ಬರೂ ಆ ಗಾಯನದಲ್ಲಿ ತನ್ಮಯರಾಗಿಬಿಟ್ಟಿದ್ದಾರೆ. ರಾತ್ರಿ ಎಷ್ಟುಹೊತ್ತಿನವರೆಗೆ ಈ ಕಾರ್ಯಕ್ರಮ ನಡೆಯಿತೋ...ಯಾರ ಅರಿವಿಗೂ ಬರುವುದಿಲ್ಲ. ಬೇಂದ್ರೆ, ಕುವೆಂಪು, ಕೆ.ಎಸ್.ನ, ಷರೀಫ್ ಇವರ ಗೀತೆಗಳು ಕೇಳುಗರ ಮನದ ಆಳಕ್ಕೆ ಇಳಿಯುತ್ತಾ ಗಾಢವಾದ ಸಂವೇದನೆಯನ್ನು ನಿರ್ಮಿಸುತ್ತಾ ಇವೆ...ಕೆಲವರು ಕೇಳುಗರ ಕಣ್ಣಂಚು ಕೂಡಾ ಒದ್ದೆಯಾಗುತ್ತಾ ಇದೆ. ಇದು ಇನ್ನೊಂದು ಬಗೆಯ ಕನಸು. ಈ ಕನಸನ್ನು ನಮ್ಮ ಕಣ್ಣಮುಂದೆ ನೆಲಕ್ಕಿಳಿಸಿದವರು ಅಶ್ವಥ್ ಅವರೇ!

***

ತಮ್ಮ ಮಾಧ್ಯಮ ಕೇವಲ ಒಪ್ಪಿಸುವ ಮಾಧ್ಯಮವಲ್ಲ; ಚಿಂತಿಸುವ ಮಾಧ್ಯಮ ಎಂದು ದೃಢವಾಗಿ ನಂಬಿದವರು ಅಶ್ವಥ್. ತನ್ನದೇ ಕಾವ್ಯ ಮೀಮಾಂಸೆಯನ್ನು ಬೆಳೆಸದೆ ಒಬ್ಬ ಕವಿ ಹೇಗೆ ಬೆಳೆಯಲಾರನೋ, ಹಾಗೇ ತನ್ನ ಗಾಯನ ಮೀಮಾಂಸೆಯನ್ನು ಬೆಳೆಸದೆ ಒಬ್ಬ ಗಾಯಕನೂ ಬೆಳೆಯಲಾರ. ತಮ್ಮ ಮಾಧ್ಯಮದ ವ್ಯಾಕರಣದ ಬಗ್ಗೆ ಆಳವಾಗಿ ಚಿಂತಿಸುವ ಒಬ್ಬನೇ ಗಾಯಕ ಸಿ.ಅಶ್ವಥ್. ಅಶ್ವಥ್ ಚಾಲ್ತಿಗೆ ಬರುವ ತನಕ , ರಾಗ ಸಂಯೋಜನೆ ಎನ್ನುವ ಮಾತೇ ನಮ್ಮಲ್ಲಿ ರೂಢಿಯಲ್ಲಿದ್ದುದು. ಅಶ್ವಥ್ "ಸ್ವರ ಸಂಯೋಜನೆ " ಎಂಬ ಹೊಸ ವ್ಯಾಕರಣ ಸೂತ್ರವನ್ನು ಹುಟ್ಟು ಹಾಕಿದರು. ಇದು ಸುಲಭಸಾಧ್ಯವಾದುದಲ್ಲ. ಹಗಲೂ ಇರುಳೂ ತನ್ನ ಮಾಧ್ಯಮವನ್ನ ಹಚ್ಚಿಕೊಂಡು ಚಿಂತಿಸದೆ ಹೊಸ ಕಲ್ಪನೆಗಳು ಆವಿರ್ಭವಿಸಲಾರವು.ಸ್ವರ ಸಂಯೋಜನೆ ಎಂಬುದು ಸುಗಮ ಸಂಗೀತಕ್ಕೆ ಅಶ್ವಥ್ ಕೊಟ್ಟ ಬಹು ದೊಡ್ಡ ಕಾಣಿಕೆ. ಇದು ಸರ್ವ ಸಮ್ಮತವಾಗುವ ತನಕ ಚರ್ಚೆಗಳು ನಡೆಯಬಹುದು. ಆದರೆ ಇದು ಚರ್ಚೆಗೆ ಯೋಗ್ಯವಾದ ನವೋನವ ಕಲ್ಪನೆ. ಈಚಿನ ದಿನಗಳಲ್ಲಿ ಅಶ್ವಥ್ ಹಾಡುತ್ತಾರೆ ಅಥವಾ ಹಾಡಿನ ಶಾಸ್ತ್ರವನ್ನು ಚಿಂತಿಸಿ, ತಮ್ಮ ಹೊಸ ಹೊಳಹುಗಳನ್ನು ಭಾಷೀಕರಿಸಲು ಹರಸಾಹಸ ಮಾಡುತ್ತಾರೆ. ಮಂಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಅವರು ನೀಡಿದ ಸೋದಾಹರಣ ಉಪನ್ಯಾಸ ನನ್ನ ನೆನಪಲ್ಲಿದೆ. ಅಷ್ಟು ದೊಡ್ಡ ಸಭೆಗೆ ಸೂಕ್ಷ್ಮವಾದ ಸುಗಮಸಂಗೀತದ ವ್ಯಾಕರಣವನ್ನು ತಿಳಿಸಲು ಅಶ್ವಥ್ ಹೇಗೆ ಸಮರ್ಥರಾದರು? ಇದು ನನಗೆ ಇವತ್ತೂ ಆಶ್ಚರ್ಯ ಹುಟ್ಟಿಸುವ ಸಂಗತಿ. ಇದು ವಾಗ್ಮಿತೆಯ ಬಲವಲ್ಲ. ಹೊಸದನ್ನು ಹೊಸದಾಗಿ ಹೇಳಬೇಕೆಂಬ ಒಬ್ಬ ಆಳಚಿಂತಕನ ಮನಸ್ಸಿನ ಒಳಾಂದೋಳನದ ಕೊಡುಗೆ. ಬುದ್ಧಿ ಮತ್ತು ಭಾವ ಇವುಗಳ ಬೆಸುಗೆಗಾರನಾಗಿ ಹೀಗೆ ಅಶ್ವಥ್ ನನಗೆ ಪ್ರಿಯರಾದ ಕಲಾವಿದರಾಗಿದ್ದಾರೆ.

***

ಅಶ್ವಥ್ ಒಬ್ಬ ಮೋಡಿಕಾರ ಎಂಬುದು ಸಾಮಾನ್ಯವಾಗಿ ಹೇಳಲಾಗುವ ಮಾತು. ಹಾಗೇ ಅವರು ಮೂಡಿಕಾರನೂ ಹೌದು! ಈ ಮೋಡಿ ಮತ್ತು ಮೂಡಿ ಎಷ್ಟು ಹತ್ತಿರದ ಪದಗಳಾಗಿವೆ! ಮೊದಲನೆಯದು ಕನ್ನಡದ ಮೋಡಿ. ಎರಡನೆಯದು ಇಂಗ್ಲಿಷ್ ಮೂಡಿ! ಕಲಾವಿದರೆಲ್ಲಾ ಸಾಮಾನ್ಯವಾಗಿ ಮೂಡಿ ಮನುಷ್ಯರೇ! ಅಶ್ವಥ್ ಅತಿ ಎನ್ನಬಹುದಾದಷ್ಟು ಮೂಡಿ. ಶೀಘ್ರಕೋಪಿ; ಅಪರಿಮಿತ ಭಾವುಕ; ಮಹಾನ್ ಹಠಗಾರ; ಸ್ವಕೇಂದ್ರಿತವ್ಯಕ್ತಿ. ಈ ಎಲ್ಲ ಮಾತಿಗೂ ವಿರುದ್ಧವಾದುದನ್ನೂ ಅವರ ಬಗ್ಗೆ ಹೇಳ ಬಹುದು. ಮಹಾ ಮುಗ್ಧ; ತಕ್ಷಣ ಕರಗಿಬಿಡುವ ಸ್ವಭಾವ; ವಿಮರ್ಶೆ, ಟೀಕೆಗಳಿಗೆ ಅತಿಯಾಗಿ ಘಾಸಿಗೊಳ್ಳುವ ಮನಸ್ಸು; ಮಹಾ ಸ್ನೇಹಜೀವಿ; ಬೀಸುಗೈ ಧಾರಾಳಿ! ಎಂಥಾ ಕಲಸುಮೇಲೋಗರ ವ್ಯಕ್ತಿತ್ವ ಈ ಮನುಷ್ಯನದ್ದು! ಈ ವಿಕ್ಷಿಪ್ತತೆಗಳ ನಡುವೆ ಅಶ್ವಥ್ ಅವರನ್ನು ಗರಿಷ್ಠ ಪ್ರಮಾಣದಲ್ಲಿ ನಾವು ನೋಡ ಬಹುದಾದದ್ದು ಎಲ್ಲಿ?

ನಾನು ಕಂಡಂತೆ ನಾನು ಅತ್ಯಂತ ಆಳದಲ್ಲಿ ಪ್ರೀತಿಸುವ ಅಶ್ವಥ್ ವ್ಯಕ್ತಿತ್ವದ ಅಭಿವ್ಯಕ್ತಿ ಕೆಳಕಂಡಂತೆ:

"ಅಶ್ವಥ್ ಮಸುಕು ಬೆಳಕಿನ ಕೋಣೆಯೊಂದರಲ್ಲಿ ತಮ್ಮ ಹಾರ್ಮೋನಿಯಮ್ಮಿನ ಹಿಂದೆ ಕೂತು ಅರೆಗಣ್ಣಿನಲ್ಲಿ ತನ್ಮಯರಾಗಿ ಹೋಗಿದ್ದಾರೆ. ಕೆಲವರೇ ಅತ್ಯಾಪ್ತ ಗೆಳೆಯರು ಅವರ ಎದುರು ಕೂತಿದ್ದಾರೆ. ಅಶ್ವಥ್ ಕವಿತೆಯೊಂದಕ್ಕೆ ಸ್ವರ ಸಂಯೋಜಿಸುವ ಸೃಷ್ಟಿಶೀಲ ಕ್ಷಣವದು. ಎಲ್ಲರೂ ತುಟಿಪಿಟ್ಟೆನ್ನದೆ ಕಾಯುತ್ತಾ ಇದ್ದಾರೆ. ಕಾಯುತ್ತಿದ್ದಾರೆ-ಗೆಳೆಯರು. ಕಾಯುತ್ತಿದ್ದಾರೆ-ಪಕ್ಕವಾದ್ಯದ ಆತ್ಮೀಯರು. ಕಾಯುತ್ತಿದ್ದಾರೆ-ಸ್ವತಃ ಅಶ್ವಥ್. ಕಾಯುತ್ತಿದ್ದಾರೆ ಬೇಂದ್ರೆ, ಕುವೆಂಪು, ಕೆ.ಎಸ್.ನ.,ಜಿ.ಎಸ್.ಎಸ್., ಷರೀಫ್....ಮೆಲ್ಲಗೆ ಏನೋ ಒಡಲಾಳದಿಂದ ಒಡಮುರಿದು ಮೇಲೇಳುತ್ತಾ ಇದೆ. ಏನೋ ಸಿಕ್ಕಂತೆ ತಕ್ಷಣ ಇಷ್ಟಗಲ ಕಣ್ಣರಳಿಸುತ್ತಾರೆ ಅಶ್ವಥ್. ಅದೊಂದು ವಿಲಕ್ಷಣ ಕ್ಷಣ; ಹೆಚ್ಚೂ ಕಮ್ಮಿ ಸಮಾಧಿ ಸ್ಥಿತಿ. ಅಶ್ವಥ್ ತಮಗೆ ತಾವೇ ಎಂಬಂತೆ ಮೆಲ್ಲಗೆ ಹಾಡ ತೊಡಗುತ್ತಾರೆ....ಷ್! ಸುಮ್ಮನಿರಿ. ಇದು ಕವಿತೆ ಮತ್ತು ಗೀತೆ ಸಂಲಗ್ನಗೊಳ್ಳುತ್ತಿರುವ ಶುಭ ಮುಹೂರ್ತ..!"

******

Tuesday, September 29, 2009

ಸ್ನೇಹ ಪ್ರೀತಿಗಳನ್ನೇ ದೇವರೆಂದು ನಂಬಿರುವ ಜಿ.ಎಸ್.ಎಸ್.

ಸುವರ್ಣ ಕರ್ನಾಟಕ ಸಂದರ್ಭದ ಈ ಬಾರಿಯ ರಾಜ್ಯೋತ್ಸವದ ಆಚರಣೆಯಲ್ಲಿ ಒಂದು ಮಹತ್ವದ ಸಂಗತಿಯೆಂದರೆ ರಾಷ್ಟ್ರಕವಿ ಗೋವಿಂದಪೈ ಮತ್ತು ರಾಷ್ಟ್ರಕವಿ ಕುವೆಂಪು ಅವರ ನಂತರ ಮತ್ತೋರ್ವ ಮಹತ್ವದ ಸಾಧಕನನ್ನು ನಮ್ಮ ಸರ್ಕಾರ ರಾಷ್ಟ್ರಕವಿಯಾಗಿ ನಾಮಕರಣ ಮಾಡಿ ಗೌರವಿಸುತ್ತಿರುವುದು! ಆ ವಿಶೇಷ ಗೌರವಕ್ಕೆ ಪಾತ್ರರಾಗುತ್ತಿರುವ ವ್ಯಕ್ತಿ ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿ ಮತ್ತು ಸಾಂಸ್ಕೃತಿಕ ನಾಯಕರಾದ ಡಾಜಿ.ಎಸ್.ಶಿವರುದ್ರಪ್ಪ ಅವರು. ತಿಂಗಳ ಹಿಂದೆ ಒಮ್ಮೆ ಜಿ.ಎಸ್.ಎಸ್. ಅವರೊಂದಿಗೆ ಮಾತಾಡಿದಾಗ-" ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಸರ್ಕಾರ ಮತ್ತೊಬ್ಬ ಮಹಾ ಸಾಧಕರನ್ನು ರಾಷ್ಟ್ರ ಕವಿಯಾಗಿ ನಾಮಕರಣ ಮಾಡುತ್ತದೆಂದು ಸುದ್ದಿ... ಆ ಗೌರವ ಅಕಸ್ಮಾತ್ ನಿಮ್ಮ ಪಾಲಾದರೆ...ನಿಮ್ಮ ಸಹಜ ಪ್ರತಿಕ್ರಿಯೆ?" ಎಂದಾಗ, ಜಿಎಸೆಸ್ ಹೇಳಿದರು:"ಆದಾಗ ತಾನೇ ಆ ಪ್ರಶ್ನೆ?"....."ಒಂದು ವೇಳೆ ಆದರೆ?"..ಜಿಎಸೆಸ್ ನಕ್ಕು :"ಕೆ.ಎಸ್.ನರಸಿಂಹಸ್ವಾಮಿ ಅವರು ಹೇಳಿಲ್ಲವಾ? ಮಲ್ಲಿಗೆ ಹಾರ ಕೊರಳಿಗೆ ಭಾರ!"

ಪ್ರಾಯಃ ಇದು ಸಹಜ ಕವಿ ಒಬ್ಬರು ಮಾತ್ರ ನೀಡಬಹುದಾದ ಪ್ರತಿಕ್ರಿಯೆ. ಜಿಎಸೆಸ್ ತಮ್ಮ ಗುರುಗಳಾದ ಕುವೆಂಪು ಅವರನ್ನು ರಾಷ್ಟ್ರಕವಿಯೆಂದು ಗೌರವಿಸಿದ್ದನ್ನು ನೆನೆಸಿಕೊಂಡರು.ಅಂಥ ಗೌರವ ತಮಗೆ ಅನ್ನುವುದು ಅವರಿಗೆ ಸುಲಭವಾಗಿ ಒಪ್ಪಿಕೊಳ್ಳಬಹುದಾದ ಸಂಗತಿಯಾಗಿರಲಿಲ್ಲ. ಅದು ಅವರ ಸ್ವಭಾವಕ್ಕೆ ಸಹಜವಾದ ವಿನಯದ ಅಭಿವ್ಯಕ್ತಿಯಾಗಿತ್ತು.ಆದರೆ ಸದ್ಯದ ಸಂದರ್ಭದಲ್ಲಿ ಒಬ್ಬ ಕವಿ,ವಿಮರ್ಶಕ,ಕಾವ್ಯಚಿಂತಕರಾಗಿ ಜಿಎಸ್ಸೆಸ್ ಬಹು ಎತ್ತರದ ವ್ಯಕ್ತಿಯಾಗಿದ್ದಾರೆ ಅನ್ನುವುದು ನಿರ್ವಿವಾದದ ಸಂಗತಿ.ಜೊತೆಗೆ ಅವರು ಒಬ್ಬ ಸಾಂಸ್ಕೃತಿಕ ನಾಯಕರಾಗಿ ರೂಪಗೊಂಡಿದ್ದಾರೆ ಎನ್ನುವುದು ಇನ್ನೂ ಮಹತ್ವದ ಸಂಗತಿ. ಎಷ್ಟೋ ಜನ ಮಹತ್ವದ ಲೇಖಕರಿಗೆ ಈ ಸಾಂಸ್ಕೃತಿಕ ನಾಯಕತ್ವದ ಪ್ರಭಾವಲಿ ಸಿದ್ಧಿಸಿರುವುದಿಲ್ಲ! ಜಿ.ಎಸ್.ಎಸ್. ತಮ್ಮ ಸುದೀರ್ಘ ಜೀವಿತದ ಹರಹಿನಲ್ಲಿ ಉದ್ದಕ್ಕೂ ತಾವು ತೆಗೆದುಕೊಂಡ ರಾಜಕೀಯ ಸಾಂಸ್ಕೃತಿಕ ನಿಲುವುಗಳಿಂದ ಕರ್ನಾಟಕ ಒಂದು ಎಚ್ಚರದ ಪ್ರಜೆಯಾಗಿ ರೂಪಗೊಂಡಿದ್ದಾರೆ. ಇಂಥ ವ್ಯಕ್ತಿ ಅಖಂಡ ಕರ್ನಾಟಕದ ಬಿಕ್ಕಟ್ಟು ಮತ್ತು ಉಲ್ಲಾಸದ ಘಳಿಗೆಗಳಿಗೆ ಸಾಕ್ಷಿ ಮಿಡಿತಗಳನ್ನು ನೀಡುತ್ತಾ ಬಂದಿರಬೇಕಾಗುತ್ತದೆ.ಕರ್ನಾಟಕದ ಒಟ್ಟಾರೆ ಹಿತ ಈ ಬಗೆಯ ವ್ಯಕ್ತಿತ್ವದ ನಿರಂತರ ನಿಲುವಿನ ಅವಿಭಾಜ್ಯ ಅಂಗವಾಗಿರುತ್ತದೆ. ಒಂದು ಧರ್ಮ, ಒಂದು ರಾಜಕೀಯ ಪಕ್ಷ, ಒಂದು ನಿರ್ದಿಷ್ಟ ಸಂಸ್ಥೆ ,ಒಂದು ಸಾಹಿತ್ಯಕ ಗುಂಪು-ಇವುಗಳೊಂದಿಗೆ ತನ್ನನ್ನು ಸಮೀಕರಿಸಿಕೊಳ್ಳದೆ ಅನಿಕೇತನತ್ವ ಸಾಧಿಸದ ಹೊರತು ಅಖಂಡ ಕರ್ನಾಟಕದ ಸಾಕ್ಷೀಪ್ರಜೆಯಾಗಿ ರೂಪಗೊಳ್ಳುವುದು ಸಾಧ್ಯವಾಗುವುದಿಲ್ಲ.ತಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಲಿ ಅವನ್ನು ಸಮಷ್ಟಿಯ ಹಿತಕ್ಕಾಗಿ ಮೀರಿನಿಲ್ಲುವುದು ಅಗತ್ಯವಾಗುತ್ತದೆ. ತಾವು ನವೋದಯ ಕಾವ್ಯವನ್ನು ಮೆಚ್ಚುವವರಾಗಿರಬಹುದು. ಆದರೆ ನವ್ಯದ ಸತ್ವ ಸಾಮರ್ಥ್ಯಗಳಿಗೆ ತೆರೆದ ಮನಸ್ಸುಳ್ಳವರಾಗಿರಬೇಕಾಗುತ್ತದೆ. ಹೊಸದಾಗಿ ಕಾಣಿಸಿಕೊಳ್ಳುವ ಬಂಡಾಯ ದಲಿತ ಚಳುವಳಿಗಳು ಸಾಮಾಜಿಕ ಸಾಂಸ್ಕೃತಿಕ ನೆಲೆಯಲ್ಲಿ ಅನಿವಾರ್ಯವೆನಿಸಿದಾಗ ಅವನ್ನು ಮೆಚ್ಚಿ ಪ್ರೋತ್ಸಾಹಿಸುವ ಭವಿಷ್ಯದ್ ಹಿತಾಕಾಂಕ್ಷಿಯಾದ ನಿಲುವನ್ನು ಹೊಂದಿರಬೇಕಾಗುತ್ತದೆ. ಇಂತಹ ನಿರ್ಮಮ ನಿಷ್ಠುರತೆ ಕೇವಲ ಸಾಹಿತ್ಯಕ ಸಂದರ್ಭಕ್ಕೆ ಅನ್ವಯಿಸಿ ಮಾತ್ರವಲ್ಲ. ಸಾಮಾಜಿಕ ಸಾಂಸ್ಕೃತಿಕ ಸಂದರ್ಭಗಳಲ್ಲೂ ಜಿ.ಎಸ್.ಎಸ್ ಅವರು ಹೇಗೆ ತಮ್ಮ ನಿರ್ಮಮ ನಿಷ್ಠುರ ಪ್ರಜೆಯನ್ನು ಕಾಯ್ದುಕೊಂಡು ಬಂದಿದ್ದಾರೆ ಅನ್ನುವುದನ್ನು ಇಡೀ ಕನ್ನಡ ನಾಡೇ ಬಲ್ಲುದು.ಅದು ಜಾತಿವಿಷಯದಲ್ಲಿ ಆಗಿರಬಹುದು; ಧರ್ಮದ ವಿಷಯದಲ್ಲಿ ಆಗಿರಬಹುದು; ಭಾಷೆಯ ವಿಷಯದಲ್ಲಿ ಆಗಿರಬಹುದು. ನಮ್ಮಲ್ಲಿ ತೀವ್ರವಾದ ಅಭಿಪ್ರಾಯಭೇದಗಳು ಇರಬಹುದು. ಆದರೆ ನಾವೆಲ್ಲ ಒಟ್ಟು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ಹೊತ್ತಿರುವವರು. ಆದಕಾರಣ ನಾವು ಒಂದುಕಡೆ ಸೇರಿ ಕೂತು ಚರ್ಚೆ ಮಾಡೋಣ. ಸಾಧ್ಯವಾದರೆ ಒಮ್ಮತದ ನಿಲುವಿಗೆ ಬರೋಣ. ಸಾಧ್ಯವಾಗದಿದ್ದರೆ ಪರಸ್ಪರ ಗೌರವ ಇಟ್ಟುಕೊಂಡೆ ಅಭಿಪ್ರಾಯ ಭೇದಗಳನ್ನು ಹೊಂದೋಣ ಎನ್ನುವ ಪ್ರಜಾಪ್ರಭುತ್ವವಾದೀ ನಿಲುವನ್ನು ತಮ್ಮ ಬದುಕಿನ ಉದ್ದಕ್ಕೂ ಪ್ರಕಟಿಸುತ್ತಾ, ನಿತ್ಯದ ಆಚರಣೆಯಲ್ಲಿ ರೂಢಿಸುತ್ತಾ ಬಂದಿರುವವರು ಡಾಜಿ.ಎಸ್.ಶಿವರುದ್ರಪ್ಪನವರು. ರಾಜಕೀಯ ,ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ವಲಯಗಳ ವಿರೋಧೀನೆಲೆಯ ವಕ್ತಾರರೂ ಜಿ.ಎಸ್.ಎಸ್ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡು ಬಂದಿರುವುದು ಇದೇ ಕಾರಣಕ್ಕೆ ಎಂದು ನಾನು ಭಾವಿಸುತ್ತೇನೆ. ಇಂಥ ಸರ್ವ ಸಮ್ಮತ ವ್ಯಕ್ತಿತ್ವವನ್ನು ಹೊಂದಿರುವವರು ಯಾವತ್ತೂ ವಿರಲವೇ. ಸದ್ಯದ ಸಂದರ್ಭದಲ್ಲಿ ಜಿ.ಎಸ್.ಎಸ್. ಅಂತಹ ವಿರಲ ವ್ಯಕ್ತಿಗಳಲ್ಲಿ ಒಬ್ಬರು...ಮತ್ತು ಮುಖ್ಯರು. ಹಾಗಾಗಿ ಅವರನ್ನು ರಾಷ್ಟ್ರಕವಿ ಎಂದು ಸರ್ಕಾರ ಗೌರವಿಸುತ್ತಿರುವುದು ಕನ್ನಡ ನಾಡಿನ ಸಮಷ್ಟಿಪ್ರಜೆಯ ಸಮ್ಮತಿಯ ಚಿಹ್ನೆ ಎಂದು ನಾನು ಭಾವಿಸುತ್ತೇನೆ.

*****

ಕೆಲವು ದೃಷ್ಟಿಯಲ್ಲಿ ನಾನು ತುಂಬಾ ಅದೃಷ್ಟಶಾಲಿ. ೧೯೭೧ರಲ್ಲಿ ನಾನು ಬೆಂಗಳೂರಿಗೆ ನನ್ನ ಹಳ್ಳಿಯಿಂದ ಒಲಸೆ ಬಂದಾಗ ಅನೇಕ ಸಾಹಿತ್ಯ ದಿಗ್ಗಜರು, ಸಾಂಸ್ಕೃತಿಕ ನಾಯಕರು ನನ್ನನ್ನು ತಮ್ಮ ಅಂತರ್ವಲಯಕ್ಕೆ ತೆಗೆದುಕೊಂಡರು. ನಾನು ಅವರ ಆಪ್ತವರ್ಗದಲ್ಲಿ ಒಬ್ಬನಾಗಿ ಹೋದೆ. ಡಾಪುತಿನ, ಡಾಗೋಪಾಲಕೃಷ್ಣ ಅಡಿಗ, ಶ್ರೀ ಕೆ.ಎಸ್.ನರಸಿಂಹಸ್ವಾಮಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಡಾಜಿ.ಎಸ್.ಶಿವರುದ್ರಪ್ಪ -ಅವರಲ್ಲಿ ಮುಖ್ಯರು.ನಾನು ಎಂ.ಎ. ದಲ್ಲಿ ಜಿ.ಎಸ್.ಎಸ್.ಅವರ ವಿದ್ಯಾರ್ಥಿ. ಆಮೇಲೆ ಉದ್ದಕ್ಕೂ ಜಿ.ಎಸ್.ಎಸ್. ನನ್ನ ಜೀವನದಲ್ಲಿ ನಿರ್ಣಾಯಕ ಕ್ಷಣಗಳಲ್ಲಿ ಮಹತ್ವದ ಭೂಮಿಕೆ ನಿರ್ವಹಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿಯನ್ನು ಆಪ್ತ ಸ್ನೇಹಿತನಂತೆ ನಡೆಸಿಕೊಂಡಿದ್ದಾರೆ. ಸ್ನೇಹಿತನನ್ನು ಪರಮಬಂಧುವಿನಂತೆ ನಡೆಸಿಕೊಂಡಿದ್ದಾರೆ. ನನ್ನ ಸಾಹಿತ್ಯಕ ಜೀವನದ ಬಿಕ್ಕಟ್ಟುಗಳಲ್ಲಿ ನನಗೆ ಆಸರೆಯಾಗಿ ನಿಂತವರು ಅವರು. ಹಾಗೇ ಬದುಕಿನ ಕಷ್ಟ ನಿಷ್ಠುರದ ಸಂದರ್ಭಗಳಲ್ಲೂ. ವಿದ್ಯಾರ್ಥಿಗಳ ಬಗ್ಗೆ ಅವರ ಪ್ರೀತಿ ಅಪರಿಮಿತವಾದುದು. ನಮ್ಮ ಈವತ್ತಿನ ಅನೇಕ ಮುಖ್ಯ ಲೇಖಕರು ಜಿ.ಎಸ್.ಎಸ್. ಅವರ ಶಿಷ್ಯರು! ಆ ಶಿಷ್ಯರ ಬಗ್ಗೆ ಯುಕ್ತ ಸಂದರ್ಭಗಳಲ್ಲಿ ಅವರೇ ಸೊಗಸಾದ ಲೇಖನಗಳನ್ನು ಬರೆದು ತಮ್ಮ ಶಿಷ್ಯ ಪ್ರೀತಿಯನ್ನು ಮೆರೆದಿದ್ದಾರೆ.ತಮಗಿಂತ ಕಿರಿಯರ ವಿಷಯ ಇರಲಿ, ತಮ್ಮ ಸಮಕಾಲೀನ ಲೇಖಕರ ಬಗ್ಗೆ ಬರೆಯುವುದು ಕೂಡಾ ತಮ್ಮ ಘನತೆಗೆ ಕುಂದು ಎಂದು ಭಾವಿಸುವ ಅನೇಕ ಲೇಖಕರು ನಮ್ಮ ಸುತ್ತಾ ಇರುವಾಗ ಜಿ.ಎಸ್.ಎಸ್. ಅವರಂತೆ ಶಿಷ್ಯರ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಬರೆಯುವುದು ಆಶ್ಚರ್ಯಕರ ವಿದ್ಯಮಾನವೇ ಸೈ!

ಈ ಶಿಷ್ಯ ಪ್ರೀತಿಗೆ ಶಿವರುದ್ರಪ್ಪನವರು ತಮ್ಮ ಮೂವರು ಮಹಾಗುರುಗಳಿಂದ ಪಡೆದ ಸ್ಫೂರ್ತಿಯೇ ಮುಖ್ಯ ಪ್ರೇರಣೆ ಎಂದು ನಾನು ಭಾವಿಸುತ್ತೇನೆ. ಜಿ.ಎಸ್.ಎಸ್. ಮತ್ತೆ ಮತ್ತೆ ನೆನೆಯುವ ಅವರ ಮೂವರು ಗುರುಗಳೆಂದರೆ ಶ್ರೀ ಕುವೆಂಪು, ಪ್ರೊ.ತೀನಂಶ್ರೀ , ಮತ್ತು ಪ್ರೊ.ತ.ಸು.ಶ್ಯಾಮರಾಯರು! ಕುವೆಂಪು ಎಂದರೆ ಜಿ.ಎಸ್.ಎಸ್. ಅವರಿಗೆ ಎಣೆಯಿಲ್ಲದ ಪ್ರೀತಿ ಗೌರವ. ಕುವೆಂಪು ಬಗ್ಗೆ ಅವರು ಬರೆದಿರುವ ಈ ಪದ್ಯ ಅದನ್ನು ಅತ್ಯಂತ ಸ್ವಾರಸ್ಯಕರವಾಗಿ ನಿರೂಪಿಸಬಲ್ಲುದು:

ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ.

ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವದನ್ನು,
ಕಿರಿಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆವುದನ್ನು,
ಸದ್ದಿರದೆ ಬದುಕುವುದನ್ನು.

ಎಷ್ಟೊಂದು ಕೀಲಿ ಕೈಗಳನ್ನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನ್ನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ

ಸದ್ದು ಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಶಬದಲ್ಲಿ ನೆನೆಯುತ್ತೇನೆ
ಗೌರವದಿಂದ.

ನಕ್ಷತ್ರಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ.

ಕುವೆಂಪು ಅವರ ಬಗ್ಗೆ ಒಂದು ಸಮಗ್ರ ವಿಮರ್ಶಾಗ್ರಂಥವನ್ನು ಬರೆಯಬೇಕೆಂಬುದು ಜಿ.ಎಸ್.ಎಸ್.ಅವರ ಬಹುದಿನದ ಆಶೆಯಾಗಿತ್ತು. ಜಿ.ಎಸ್.ಎಸ್. ಇತ್ತೀಚೆಗೆ ತಮ್ಮ ಆರೋಗ್ಯ ಅಷ್ಟು ಚೆನ್ನಾಗಿರದಿದ್ದರೂ ತಮ್ಮ ನಚ್ಚಿನ ಗುರು ಕುವೆಂಪು ಅವರ ಬಗ್ಗೆ ಒಂದು ಅಚ್ಚುಕಟ್ಟಾದ ವಿಮರ್ಶಾಕೃತಿಯನ್ನು ಬರೆದು ಪ್ರಕಟಿಸಿದ್ದಾರೆ.

ಜಿ.ಎಸ್.ಎಸ್.ಅವರ ಮೇಲೆ ತೀವ್ರವಾದ ಪ್ರಭಾವ ಬೀರಿದ ಅವರ ಇನ್ನೊಬ್ಬ ಗುರು ತೀ.ನಂ.ಶ್ರೀಕಂಠಯ್ಯನವರು. ಕನ್ನದದ ಕೊರಳಲ್ಲಿ ಶ್ರೀಕಂಠಿಕೆ ಎಂದು ತೀ.ನಂ.ಶ್ರೀ ಅವರನ್ನು ಜಿ.ಎಸ್.ಎಸ್. ಕೈವಾರಿಸುತ್ತಾರೆ.ಅಚ್ಚುಕಟ್ಟಿನ ಸ್ವಚ್ಛತೆಯ ಸಂಕೇತವಾದ ತೀನಂಶ್ರೀ ಅವರ ಒಂದೊಂದು ಕೃತಿಯೂ ಕೃತಾರ್ಥ. ಅವರು ಪರಿಪೂರ್ಣತೆಯ ಅತೃಪ್ತ ಅನ್ವೇಷಕ ಮತ್ತು ಪಾಂಡಿತ್ಯ ಪ್ರತಿಭೆಗಳ ಹದವಾದ ಪಾಕ ಎಂಬುದಾಗಿ ತಮ್ಮ ಗುರುಗಳನ್ನು ಮೆಚ್ಚಿಕೊಳ್ಳುತ್ತಾರೆ. ಜಿ.ಎಸ್.ಎಸ್. ವವರ ವ್ಯಕ್ತಿತ್ವ ನಿರ್ಮಿತಿಯಲ್ಲಿ ತೀನಂಶ್ರೀ ಅವರದ್ದು ಗಾಢವಾದ ಪ್ರಭಾವ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.ಇನ್ನು ತಸು ಶ್ಯಾಮರಾಯರಂತೂ ಜಿ.ಎಸ್.ಎಸ್. ಅವರಿಗೆ ತಾಯ್ತನದ ವಾತ್ಸಲ್ಯವನ್ನು ಧಾರೆಯೆರೆದ ಮಹಾನುಭಾವರು. ಶ್ಯಾಮರಾಯರು ಬದುಕಿರುವವರೆಗೂ ಅವರ ಹುಟ್ಟುಹಬ್ಬದ ದಿನ ಜಿ.ಎಸ್.ಎಸ್. ಎಲ್ಲೇ ಇರಲಿ ಮೈಸೂರಿಗೆ ಧಾವಿಸುತ್ತಿದ್ದರು.ಅನೇಕರಿಗೆ ಗೊತ್ತಿರುವಂತೆ ಜಿ.ಎಸ್.ಎಸ್. ಅವರ ಜನಪ್ರಿಯ ಗೀತೆ "ಎದೆತುಂಬಿ ಹಾಡಿದೆನು" ಈ ಶ್ಯಾಮರಾಯರನ್ನು ಉದ್ದೇಶಿಸಿ ಬರೆದ ಹಾಡು.ಅದೀಗ ಸುಗಮ ಸಂಗೀತ ಕಛೇರಿಗಳ ಮಂಗಳ ಗೀತೆಯಾಗಿ ಪರಿಣಮಿಸಿದೆ.ಮೈಸೂರು ಅನಂತಸ್ವಾಮಿಯವರ ಅತ್ಯದ್ಭುತ ಸಂಯೋಜನೆಯಾದ ಎದೆತುಂಬಿ ಹಾಡಿದೆನು ಸುಗಮಸಂಗೀತದ ಮನೋಹರ ಮಂಜುಲ ಗೀತೆಗಳಲ್ಲಿ ಒಂದು.ಜಿ.ಎಸ್.ಎಸ್. ಆಗಾಗ ಹೇಳುತ್ತಿರುತ್ತಾರೆ: "ಇಂಥ ಒಂದು ಗೀತೆ ಜನತೆಯ ಹೃದಯದಲ್ಲಿ ಸ್ಥಾನ ಗಿಟ್ಟಿಸಿತು ಎಂದರೆ ಕವಿಯ ಹೆಸರು ಅಜರಾಮರವಾಗಿಬಿಡುತ್ತದೆ! ಈ ಗೀತೆಗೆ ರಾಗ ಸಂಯೋಜನೆ ಮಾಡಿದ ಅನಂತಸ್ವಾಮಿಅವರನ್ನು ಜಿ.ಎಸ್.ಎಸ್. ಬಹಳ ಪ್ರೀತಿಯಿಂದ ನೆನೆಯುತ್ತಾರೆ.(ಅನಂತಸ್ವಾಮಿ ಅವರು ಆಸ್ಪತ್ರೆಯಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿದ್ದಾಗ ಜಿ.ಎಸ್.ಎಸ್.ಅವರಿಗೆ ಬಹುಪ್ರಿಯರಾದ ಇನ್ನೊಬ್ಬ ಸಂಗೀತ ನಿರ್ದೇಶಕ ಸಿ.ಅಶ್ವಥ್ ಅವರು ಜಿ.ಎಸ್.ಎಸ್. ಮತ್ತು ನನ್ನನ್ನು ಅನಂತಸ್ವಾಮಿ ಅವರನ್ನು ನೋಡಲು ಕರೆದೊಯ್ದಿದ್ದು ನೆನಪಾಗುತ್ತಿದೆ).ಎದೆ ತುಂಬಿ ಹಾಡಿದೆನು ಎಂಬ ಈ ಗೀತೆಯನ್ನು ರತ್ನಮಾಲಾಪ್ರಕಾಶ್ ಅವರ ಕೊರಳಲ್ಲಿ ಕೇಳುವುದೆಂದರೆ ಜಿ.ಎಸ್.ಎಸ್.ಅವರಿಗೆ ಇಂದಿಗೂ ತುಂಬ ಇಷ್ಟ.

ಕುವೆಂಪು ಅವರ ನಂತರ ಬೇಂದ್ರೆ ಮತ್ತು ಪುತಿನ -ಜಿ.ಎಸ್.ಎಸ್ ಅವರಿಗೆ ಬಹು ಪ್ರಿಯರಾದ ಕವಿಗಳು. ಪುತಿನ ಅವರ ಎಣೆಯಿಲ್ಲದ ಪ್ರೀತಿಗೆ ಜಿ.ಎಸ್.ಎಸ್ ಮಾರುಹೋಗಿದ್ದರು. ಅನೇಕ ಬಾರಿ ಜಿ.ಎಸ್.ಎಸ್. ಮತ್ತು ನಾನು ಒಟ್ಟಿಗೇ ಪುತಿನ ಅವರ ಮನೆಗೆ ಹೋಗಿದ್ದೇವೆ. (ಮೊಟ್ಟಮೊದಲು ನನ್ನನ್ನು ಕುವೆಂಪು ಮತ್ತು ಪುತಿನ ಅವರ ಮನೆಗೆ ಕರೆದುಕೊಂಡು ಹೋದವರು ಜಿ.ಎಸ್.ಎಸ್.ಅವರೇ). ಗಂಟೆ ಗಟ್ಟಲೆ ಪುತಿನ ವರೊಂದಿಗೆ ಸರಸ ಸಂಭಾಷಣೆ ನಡೆಸಿದ್ದೇವೆ.ಸಾಯುವ ಕೆಲವು ತಿಂಗಳು ಮುನ್ನ ಪುತಿನ ಅವರು ತಮ್ಮ ಹೆಸರಿನಲ್ಲಿ ಸರ್ಕಾರ ಸ್ಥಾಪಿಸಲಿರುವ ಟ್ರಸ್ಟ್ ನಲ್ಲಿ ಅವರಿಗೆ ತುಂಬ ಪ್ರಿಯರಾದ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರೂ, ಜಿ.ಎಸ್.ಶಿವರುದ್ರಪ್ಪನವರೂ ಇರಬೇಕೆಂದು ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಒಮ್ಮೆ ನನ್ನ ಬಳಿ ಮಾತಾಡುವಾಗ "ನಮ್ಮ ಶಿವರುದ್ರಪ್ಪ ತುಂಬಾ ಗಟ್ಟಿಗ ಕಾಣಯ್ಯ ..!"ಎಂದು ಪುತಿನ ತುಂಬು ಪ್ರೀತಿಯಿಂದ ನುಡಿದದ್ದು ನನಗೆ ನೆನಪಾಗುತ್ತಿದೆ.

ಜಿ.ಎಸ್.ಎಸ್. ಪುತಿನ ಟ್ರಸ್ಟ್ ನ ಅಧ್ಯಕ್ಷರಾದ ಮೇಲೆ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬುದನ್ನು ನಾನು ಹತ್ತಿರದಿಂದ ಬಲ್ಲೆ. ಮೇಲುಕೋಟೆಯ ಪುತಿನ ಮನೆಯನ್ನು ಪುನಾರಚಿಸಿ ನಾಡಿಗೆ ಸಾಂಸ್ಕೃತಿಕ ನೆನಪಾಗಿ ನೀಡುವಾಗ ಒಂದು ದಿನ ಮೊದಲೇ ಜಿ.ಎಸ್.ಎಸ್., ಚೆನ್ನವೀರ ಕನವಿ, ಅಚ್ಯುತಕಾದ್ರಿ, ಕಮಲೇಶ್ ಮತ್ತು ನಾನು ಮೇಲುಕೋಟೆಗೆ ಹೋಗಿದ್ದೆವು.ಇಡೀ ರಾತ್ರಿ ನಾವು ಪುತಿನ ಮನೆಯ ಅಲಂಕರಣ ಕಾರ್ಯದಲ್ಲಿ ತೊಡಗಿದ್ದೆವು. ಯಾವ ಫೋಟೊ ಎಲ್ಲಿರಬೇಕು, ಪುತಿನ ಅವರ ಯಾವ ಕವಿತೆಯ ಸಾಲು ಯಾವ ಗೋಡೆಯ ಮೇಲೆ ಇರಬೇಕು ಎಲ್ಲದರಲ್ಲೂ ಜಿ.ಎಸ್.ಎಸ್. ಅವರ ಮಾರ್ಗದರ್ಶನ! ಮಾರ್ಗದರ್ಶನ ಎಂಬ ಮಾತು ತಪ್ಪು. ಮೊದಲು ಸ್ವತಹ ಅವರು ಮಾಡಲು ಹೊರಡುವುದು. ಆಮೇಲೆ ನಾವು ಅವರಿಗೆ ಅಸರೆಯಾಗಿ ನಿಲ್ಲುವುದು. ದೂರದಿಂದ ನೋಡಿ , ತಲೆದೂಗುತ್ತಾ ಕಣವಿಯವರು(ಇವರು ಜಿಎಸ್ಸೆಸ್ ಅವರ ಪರಮಾಪ್ತ ಗೆಳೆಯರು ಎಂಬುದನ್ನು ಕನ್ನದ ಸಾರಸ್ವತ ಲೋಕ ಬಲ್ಲುದು): " ಈಗ ಅಗ್ದೀ ಚಲು ಆತು ನೋಡ್ರಿ..!" ಎಂದು ಉದ್ಗರಿಸುವುದು. ಹೀಗೆ ಜಿ.ಎಸ್.ಎಸ್ ಕಾರ್ಯಶ್ರದ್ಧೆ, ಸ್ನೇಹಪ್ರೀತಿ, ರುಚಿಶುದ್ಧಿ ಎಲ್ಲಕ್ಕೂ ನಮಗೆ ಆದರ್ಶವಾಗಿ ನಿಂತವರು!

ಊಟ ತಿಂಡಿಗಳಲ್ಲಿ ಜಿ.ಎಸ್.ಎಸ್. ಅವರು ಒಳ್ಳೇ ರಸಿಕರು! ಹೂರಣದ ಹೋಳಿಗೆಯ ಊಟವನ್ನು ಅವರ ಮನೆಯಲ್ಲೇ ಮಾಡಬೇಕು.ಹೋಳಿಗೆ ಹಾಕಿಸಿಕೊಂಡು, ಅದರಮೇಲೆ ತುಪ್ಪ ಸುರುವಿಕೊಂಡು, ಅದಕ್ಕೆ ಕಸಿಮಾವಿನ ಸೀಕರಣೆ ಬೆರೆಸಿಕೊಂಡು ಅದನ್ನೆಲ್ಲಾ ಹದವಾಗಿ ಕಿವುಚಿ ರಸಪಾಕ ಮಾಡಿಕೊಂಡು ಸಶಬ್ದವಾಗಿ ಅದನ್ನು ತಿನ್ನಿವುದು ಜಿ.ಎಸ್.ಎಸ್.ಕ್ರಮ!. " ಹೀಗೆ ....ಹೋಳಿಗೆ ತಿನ್ನಬೇಕಾದ್ದು..!" ಎಂದು ಅವರು ನಮ್ಮತ್ತ ನೋಡುತ್ತಾ ಪಾಪ ತಿಳಿಯದ ಮುಗ್ಧರು ನೀವು ಎಂದು ಅನುಕಂಪೆ ತೋರುವ ಗತ್ತನ್ನು ನೋಡಿಯೇ ಅನುಭವಿಸಬೇಕು! ಹಾಗೇ ವಿದ್ಯಾರ್ಥಿಭವನದ ದೋಸೆ ಅವರಿಗೆ ಪ್ರಿಯವಾದುದು! ಮೈಸೂರಿಗೆ ಹೋದಾಗ ಮೈಲಾರಿ ಹೋಟೆಲ್ ಗೆ ಅವರೇ ನಮ್ಮನ್ನು ಕರೆದೊಯ್ದಾರು! ಆರೋಗ್ಯಕ್ಕೆ ತೊಂದರೆಯಿಲ್ಲ ತಗೊಳ್ಳಿ ತಗೊಳ್ಳಿ ಎಂದು ಉಪಚಾರಮಾಡುವುದು ಬೇರೆ! ಕೊನೆಗೆ ಮಾಣಿ ಬಂದು ಬಿಲ್ಲು ಬಡಿಯುತ್ತಾನೆ. ಅದನ್ನು ಜಿ.ಎಸ್.ಎಸ್. ಇರುವಾಗ ಅವರ ವಿದ್ಯಾರ್ಥಿಗಳು ಹೇಗೆ ತಾನೆ ಮುಟ್ಟುವ ಧೈರ್ಯ ಮಾಡಬಲ್ಲರು! ಚಿಕ್ಕವರಿಗೆ ತಿನ್ನಿಸುವುದು ದೊಡ್ಡವರ ಆಜನ್ಮ ಸಿದ್ಧ ಹಕ್ಕು ಎಂಬ ಘೋಷಣೆಯಲ್ಲಿ ದೃಢವಾದ ವಿಶ್ವಾಸ ಉಳ್ಳವರು ನಮ್ಮ ಮೇಷ್ಟ್ರು! ಅಥವಾ ಆ ಘೋಷಣೆಯನ್ನು ಹುಟ್ಟಿ ಹಾಕಿದವರು ಅವರೇ ಎನ್ನೋಣ!

ಕನ್ನದ ಕಾವ್ಯದಲ್ಲಿ ನಮ್ಮ ಪ್ರತಿಯೊಬ್ಬ ಮುಖ್ಯ ಕವಿಯನ್ನೂ ಒಂದಲ್ಲ ಒಂದು ದನಿ ಕಾಡುತ್ತಾ ಹೋಗುತ್ತದೆ. ಅದು ಮೋಹನ ಮುರಲಿ ಆಗಬಹುದು! ವನಮಾಲಿಯ ವೇಣು ವಾದನ ಇರಬಹುದು. ಅಸರಂತ ಒಂದೇ ಸಮ ಕೂಗುವ ಕೋಗಿಲೆಯ ಕಾಡುವ ಧ್ವನಿ ಇರಬಹುದು! ಜಿ.ಎಸ್.ಎಸ್. ಅವರನ್ನೂ ಒಂದು ಧ್ವನಿ ಕಾಡುತ್ತಾ ಇದೆ! ಅದು ಒಂದು ಒಂದು ಮಗುವಿನ ನೀಳ್ದನಿಯ ರೋದನ!

ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ-
ದೂರದ ಬಿರುಗಾಳಿಯ ಮೊರೆಯಂತೆ
ಮುಗಿಲಿಂದಿಳಿಯುವ ಧಾರಾಕಾರದ
ಮಳೆಯಂತೆ
ದದವನು ಅಪ್ಪಳಿಸುವ ಅಲೆಯಂತೆ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ!

ಕೈಗೆಟುಕದ ರೊಟ್ಟಿಯ ಚೂರಾಗಿದೆಚಂದಿರ
ಬಾನಿನ ತಟ್ಟೆಯಲಿ!
ಹಸಿವಿನ ತುಣುಕುಗಳಂದದಿ ಚಿಕ್ಕೆಗಳುರಿಯುತ್ತಿವೆ
ಶೂನ್ಯದ ಹೊಟ್ಟೇಯಲಿ
ಸೊಕ್ಕಿದ ತೇಗಿನ ತೆರ ಝಗಝಗಿಸಿವೆ
ನಗರದ ಬೆಳಕಿನ ವಿಸ್ತಾರ
ಸುತ್ತಲು ಛಳಿಗಾಳಿಗೆ ನಡುಗತಲಿವೆ
ಎಲೆಯುದುರಿದ ಕೈ ಚಾಚಿದ
ಅನಾಥ ಮರಗಲ ಪರಿವಾರ!


ಪದ್ಯವನ್ನು ಪೂರ್ತಿ ಓದಿದ ಮೇಲೆ ಗೊತ್ತಾಗುತ್ತದೆ ಈ ಮಗು ಮನುಷ್ಯಕುಲದ ದೀನತೆಯ ಪ್ರತೀಕ ಎಂದು. ಈವತ್ತಿನ ಸಾಮಾಜಿಕ ವಿಷಮತೆಯ ಸಂದರ್ಭದಲ್ಲಿ ಮಾನವತೆ ದೀನವಾಗಿ ಅಳುತ್ತಿರುವುದನ್ನು ಈ ಕವಿತೆ ಅದ್ಭುತವಾಗಿ ವರ್ಣಿಸುತ್ತದೆ!

ಶೋಷಿತವರ್ಗದ ಪರವಾದ ಜಿ.ಎಸ್.ಎಸ್.ನಿಲುವು ಆರೋಪಿತವಾದುದಲ್ಲ. ಅವರ ರಕ್ತದ ದಮನಿಯಲ್ಲಿ ಸಹಜವಾಗಿ ಪ್ರವಹಿಸುವಂಥದ್ದು! ಜಿ.ಎಸ್.ಎಸ್.ಜಗತ್ತು ಕಾಯುವ ದೈವದಲ್ಲಿ ನಂಬಿಕೆ ಕಳೆದುಕೊಂಡ ಜಗತ್ತು. ಜಿ.ಎಸ್.ಎಸ್. ದೈವದ ಹಂಗಿಲ್ಲದ ಕವಿ ನಿಜ. ಮನುಷ್ಯನೇ ತನ್ನ ಕರ್ಮಕ್ಕೆ ಹೊಣೆಗಾರಿಕೆ ಒಪ್ಪಿಕೊಂಡು ಬದುಕಬೇಕಾದ ಜಗತ್ತು ಇದು ಎಂದು ಜಿ.ಎಸ್.ಎಸ್ ಕಾವ್ಯ ನಂಬಿದೆ.ಅವರ ಪ್ರಸಿದ್ಧವಾದ ಒಂದು ಕವಿತೆಯೇ ಇದೆಯಲ್ಲ!

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ -ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ!

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೇ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ!

ಮೂವತ್ತೆರಡು ವರ್ಷಗಳ ಹಿಂದೆ ರಚಿತವಾದ ಈ ಗೀತೆ ಜಿ.ಎಸ್.ಎಸ್. ಕಾವ್ಯದ ಕೇಂದ್ರ ಸ್ಪಂದನವನ್ನು ಸೂಚಿಸಬಲ್ಲುದು. ಅಂತರದ ನಿವಾರಣೆ, ಪ್ರೀತಿ ಸ್ನೇಹಗಳ ಆವಾಹನೆ ಅವರ ಕಾವ್ಯದ ಬಹು ಮುಖ್ಯ ಆಶಯವಾಗಿದೆ.

ಸಿ.ಅಶ್ವಥ್ ಈ ಗೀತೆಗೆ ಅದ್ಭುತವಾಗಿ ಸ್ವರಸಂಯೋಜನೆ ಮಾಡಿದ್ದಾರೆ. ದೈವಶ್ರದ್ಧೆಯ ಅವರಿಗೆ ಇಲ್ಲದ ದೇವರು ಅನ್ನುವ ಮಾತು ಒಂದು ನುಂಗಲಾರದ ತುತ್ತು! ಅದನ್ನು ಕಾಣದ ದೇವರು ಕೆಲವರು ತಿದ್ದಿ ಹಾಡಿದ್ದೂ ಉಂಟು! ಜಿ.ಎಸ್.ಎಸ್. ಈ ಕವಿತೆಯಲ್ಲಿ ವ್ಯಕ್ತ ಪಡಿಸಿರುವ ಭಾವ ಸ್ಪಷ್ಟವಾಗಿದೆ. ಕಲ್ಲುಮಣ್ಣಿನ ಗುಡಿಯಲ್ಲಿ ದೇವರು ಇಲ್ಲ ಎಂಬುದೇ ಸೂಚ್ಯಾರ್ಥ! ದೇವರು ಇದ್ದರೆ ಅವನು ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳಲ್ಲಿ ಇದ್ದಾನೆ ಎನ್ನುತ್ತಾರೆ ಅವರು. ಇದು ದೈವವಿರೋಧೀ ನಿಲುವಲ್ಲ. ದೈವದ ವ್ಯಾಖ್ಯಾನದಲ್ಲಿ ಇರುವ ಭಿನ್ನತೆಯ ನಿಲುವು.

ಜಿ.ಎಸ್.ಎಸ್. ಕಾವ್ಯದ ಪರಮ ಲಕ್ಷಣವನ್ನೂ ಈ ಕವಿತೆಯ ಭಾಷಿಕ ಸ್ವರೂಪ ಪ್ರತಿನಿಧಿಸುವಂತಿದೆ. ಜಿ.ಎಸ್.ಎಸ್. ಅವರದ್ದು ವಚನಕಾರರಂತೆ(ಅದರಲ್ಲೂ ಬಸವಣ್ಣನವರಂತೆ) ನೇರವಾಗಿ ಹೃದಯಕ್ಕೆ ತಾಗುವ ಮಾತು. ಅವರ ಯಾವುದೇ ಜನಪ್ರಿಯ ಗೀತೆಯನ್ನು ತೆಗೆದುಕೊಳ್ಳಿ ಅದು ಹೀಗೆ ನೇರ ಮಾತು ಗಾರಿಕೆಯ ಫಲವಾಗಿದೆ. ಆ ನೇರ ಮಾತುಗಾರಿಕೆಗೆ ಕನ್ನಡ ಭಾಷೆಯ ಹೃದಯವನ್ನು ಬಲ್ಲ ನುಡುಗಾರಿಕೆ ಶಕ್ತಿಯನ್ನು ನೀಡುತ್ತದೆ. ಕನ್ನಡದ ಅಚ್ಚ ನುಡಿಗಟ್ಟನ್ನು ಜಿ.ಎಸ್.ಎಸ್. ಅಂತೆ ಬಳಸುವ ಕವಿಗಳು ವಿರಳ.ರಮ್ಯತೆಯನ್ನು ಅದರ ನುಡಿಗಟ್ಟಲ್ಲೇ ಛಿದ್ರಿಸಿ ಹೊಸ ಅರ್ಥವಂತಿಕೆಯನ್ನು ಅವರ ಕಾವ್ಯ ಕಟ್ಟಬಲ್ಲದು. ನಕ್ಷತ್ರಗಳನ್ನು ಶೂನ್ಯದ ಹೊಟ್ಟೆಯಲ್ಲಿ ಉರಿಯುವ ಹಸಿವಿನ ತುಣುಕುಗಳು ಎನ್ನುವಲ್ಲಿ ಇಂಥಾ ಪ್ರಯತ್ನವಿರುವುದನ್ನು ನೋಡಬಹುದು. ಅಸುಂದರವಾದುದನ್ನು ಹೀಗೆ ಕಾವ್ಯದಲ್ಲಿ ಒಳಗೊಳ್ಳಬಲ್ಲ ಕವಿ ರಮ್ಯಮಾರ್ಗದಲ್ಲಿ ಇದ್ದೂ ಒಳ ಬಂಡಾಯ ನಡೆಸುವ ಕವಿಯಾಗಿರುತ್ತಾನೆ. ಜಿ.ಎಸ್.ಎಸ್.ಅಂಥ ಕವಿಯಾಗಿದ್ದಾರೆ.ಖಾಸಗೀ ದುಗುಡ ದುಮ್ಮಾನಗಳನ್ನು ಅವರ ಕಾವ್ಯ ಸಾಮಾಜಿಕ ಪರಿಪ್ರೇಕ್ಷ್ಯದಲ್ಲೇ ಒಳಗೊಳ್ಳುವ ಯತ್ನ ಮಾಡುತ್ತದೆ. ಆದುದರಿಂದಲೇ ಅವರು ಅಖಂಡ ಕರ್ನಾಟಕದ ಹೃದಯಸ್ಪಂದನವನ್ನು ಹಿಡಿಯಬಲ್ಲ ಕವಿಯಾಗಿದ್ದಾರೆ. ಅವರು ರಾಷ್ಟ್ರ ಕವಿಯಾಗುವುದು ಈ ನೆಲೆಯಲ್ಲೂ ಯುಕ್ತವಾದುದು ಅನ್ನಿಸುತ್ತದೆ.ಈ ನೆಲೆಯಲ್ಲಿ ಅವರ ಕಾವ್ಯ ಮತ್ತು ಜೀವಿತದ ಅಧ್ಯಯನ ನಮ್ಮನ್ನು ನಮ್ಮ ನಾಡಿನ ಹೃದಯದ ಹತ್ತಿರಕ್ಕೆ ಕೊಂಡೊಯ್ಯಬಲ್ಲುದು.

**********************
ಜೀವನಪಥ:
ಜನನ:೧೯೨೬,ಫೆಬ್ರವರಿ ೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ
ಶಿಕ್ಷಣ:ಎಂ.ಎ.,ಪಿಎಚ್.ಡಿ,
ಡಾಕ್ಟರೇಟ್: ಸೌಂದರ್ಯಸಮೀಕ್ಷೆ-೧೯೬೦(ಕುವೆಂಪು ಮಾರ್ಗದರ್ಶನದಲ್ಲಿ)
೧೯೪೯ರಲ್ಲಿ ಮಹರಾಜಾ ಕಾಲೇಜಿನಲ್ಲಿ ಕನ್ನದ ಅಧ್ಯಾಪಕ ವೃತ್ತಿ ಪ್ರಾರಮ್ಭ
೧೯೬೩ ರಿಂದ ೧೯೬೬ ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಮತ್ತು ಕನ್ನದ ವಿಭಾಗದ ಮುಖ್ಯರು
೧೯೭೦ ರಿಂದ ೧೯೮೬ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು ಮತ್ತು ನಿರ್ದೇಶಕರು
೧೯೭೪-ಮಾಸ್ಕೋದಲ್ಲಿ ೨೨ದಿನ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ.
೧೯೮೨ರಲ್ಲಿ ರಾಜ್ಯಸಾಹಿತ್ಯ ಅಕಾಡೆಮಿ ಪುರಸ್ಕಾರ.
೧೯೮೪-ಕಾವ್ಯಾರ್ಥ ಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
೧೯೮೭-ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ
೧೯೮೭-೬೧ನೇ ಅ.ಭಾ.ಕನ್ನದ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪದವಿ.
೧೯೯೪-೯೫ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರು.
೧೯೯೮-ಪಂಪ ಪ್ರಶಸ್ತಿ.

Friday, September 18, 2009

ಬಾರೋ ಬಾರೋ ಮಳೆರಾಯ ಸಂಗ್ರಹದ ಕೆಲವು ಕವಿತೆಗಳು ನಿಮ್ಮ ಮಕ್ಕಳಿಗಾಗಿ:





ಮಲ್ಲಿ ಮಲ್ಲಿ ಎಲ್ಲಿಗೆ?

ಮಲ್ಲಿ ಮಲ್ಲಿ ಎಲ್ಲಿಗೆ? ಮಲ್ಲೀಪಟ್ಣದ ಗಲ್ಲಿಗೆ!
ಯಾತಕ್ಕಮ್ಮ ಅಲ್ಲಿಗೆ? ಗೋಲೀ ಮಾಡೋ ಕಲ್ಲಿಗೆ!
ಗೋಲೀಮಾಡೋ ಕಲ್ಲನ್ ತಂದು ಯಾರಿಗೆ ಕೊಡ್ತೀ ಮಲ್ಲಿಗೆ?
ರಾತ್ರಿ ಎಲ್ಲಾ ಅಳ್ತಾ ಇರೋ ಅಡುಗೇಮನೆ ನಲ್ಲಿಗೆ!

ಪೋಲೀ ಗುಂಡ!

ಪೋಲೀ ಗುಂಡ ಬಂದ! ಕೋಳೀವಾಡದಿಂದ!
ಬಗಲಲ್ಲೊಂದು ಕೋಳಿ! ಬೆಳಗಾಯ್ತಣ್ಣ ಏಳೀ!
ಕೂಗ್ತಾ ಇತ್ತು ಕೊಕ್ಕೋ! ಉದ್ರೀಗಾದ್ರೂ ತಕ್ಕೋ!

ರಾಣೀ ಬೆಕ್ಕು-ರಾಜಾ ಬೆಕ್ಕು

ರಾಣೀ ಬೆಕ್ಕು, ರಾಜಾ ಬೆಕ್ಕು ಸಿಕ್ಕಿದ ಇಲಿಗಾಗಿ
ರೇಗಾಡುತ್ತಾ ಕೂಗಾಡುತ್ತಾ ಜಗಳಕ್ಕೇ ರೆಡಿಯಾಗಿ
ನಿಂತಿದ್ದಾಗ ಅಲ್ಲಿಗೆ ಬಂತು ನಾಯಿ-ತೆರೆದೇ ಬಾಯಿ!
ಜಗಳ ಇಲ್ಲ, ಪಗಳ ಇಲ್ಲ ಎರಡೂ ಬೆಕ್ಕು ಮಾಯ!

ಹಿರಿಯೂರಲ್ಲಿ

ಹಿರಿಯೂರಲ್ಲಿ ಕರಿಯಣ್ಣೋರು ಕುರೀ ಕಾಯ್ತಾ ಇದ್ರು!
ಕುರಿ ಕಾಯ್ತಾ ಕಾಯ್ತಾ ಒಮ್ಮೆ ಕರೀ ಬಾವೀಲಿ ಬಿದ್ರು!
ಕರೀಬಾವೀಲಿಲ್ಲ ನೀರು. ಬರೀಕತ್ತಲ ಜೋರು!
ಮೊದಲೇ ಬಿದ್ದೋರ್ ಕೇಳ್ತಾ ಇದ್ರು: "ಈಗ ಬಿದ್ದೋರ್ ಯಾರು?"

ಪಾಪನ ಚಡ್ಡಿ!

ಪುಟ್ಟ ಕಂದ ಹೈ!
ಪಾಪ! ಬರೀ ಮೈ!
ಚಡ್ಡಿ ಕೂಡ ನೈ!
ಥೈ! ಥೈ! ಥೈ!

ತಾತ ಎನ್ನುತ
ಕಣ್ಣ ತಿಕ್ಕುತ
ಅಳುತ ಇದ್ದ ತಾ
ಛೆ! ಛೆ! ಛೆ!

ತಾತ ಬಂದರು!
ಕೊಟ್ಟು ಒಂದು ರೂ
ಚಡ್ಡಿ ತಂದರು!!
ಹ! ಹ! ಹ!

ತೊಡಿಸಿ ನಿಕ್ಕರು
ತಾತ ನಕ್ಕರು
ಝಿಪ್ಪೆ ಚಕ್ಕರ್ರು!!
ಹೊ! ಹೊ! ಹೊ!

ಧೋ ಧೋ ಎಂದು!

ಧೊ! ಧೊ! ಎಂದು ಮಳೆ ಸುರಿವಂದು
ಅರಳಿದ ನಾಯಿಕೊಡೆ!
ಮುರಿಯದ ಹಾಗೆ ಬೀದಿಯ ನಾಯಿ
ನಿಂತಿದೆ ಮೇಲುಗಡೇ!

ಇಂದು ಚಿಕ್ಕ ಕೊಡೆ ಬೆಳೆದರೆ ಮುಂದೆ
ಆಗುವುದೂರಗಲ!
ಚೂರೂ ತೊಯ್ಯದೆ ನಿಲ್ಲುವೆ ಕೆಳಗೆ
ಮುಂದಿನ ಮಳೆಗಾಲ!

ಗಿಲ್! ಗಿಲ್! ಗಿಲ್!

ಗಿಲ್! ಗಿಲ್! ಗಿಲ್!
ಹೋಗ್ಬೇಡ ನಿಲ್!
ಹನಿ ಹನಿ ಮಳೆ ಜತೆ
ತಲೆ ಮೇಲೆ ಕಲ್!!

ನಮ್ಮ ಚೋಟು ನಾಯಿಗೆ

ನಮ್ಮ ಚೋಟು ನಾಯಿಗೆ
ನಾಕು ಫೀಟು ನಾಲಗೆ!
ಈಗ ಚೋಟು ಬೌ ಅಂದರೆ
ಕೇಳಿಸುವುದು ನಾಳೆಗೆ!

ಬಾವಿಯಾಮೆಚಿಪ್ಪಲಿ

ಬಾವಿಯಾಮೆಚಿಪ್ಪಲಿ
ಮಾಡಿಕೊಂಡು ಚಪ್ಪಲಿ
ಉರ್‍ಅ ತಿರುಗುತಿತ್ತು ಕತ್ತೆ
ವಾಕಿಂಗಿನ ನೆಪ್ಪಲಿ!

ಓಟೇ ರೇಟು!

ಒಂದು ಹಳೇ ಕೋಟೆ; ಕೋಟೆ ಒಳಗೊಂದು ಪೇಟೆ;
ಪೇಟೆ ಉದ್ದಕ್ಕು ಮಾರ್ತಾ ಇದ್ದಾರೆ ಒಣಾ ಮಾವಿನ ಓಟೆ!
ಓಟೇ ರೇಟು ಜಾಸ್ತಿ ಅಂದ್ರ ಶ್ರೀಮಾನ್ ಜೆಮ್ ಷೆಡ್ ತಾತ!
"ಓಟೇ ರೇಟೇ ಹಾಗೇ" ಅಂತು ಕುರುಚಲು ಗಡ್ಡದ ಹೋತ!

ಮಿತ್ರರೆ,ಈ ಕವಿತೆಗಳನ್ನ ನಿಮ್ಮ ಮಕ್ಕಳಿಗೆ ಹೇಳಿಕೊಡಿ. ಶುಭಾಶಯಗಳೊಂದಿಗೆ -ಎಚ್.ಎಸ್.ವಿ.

Friday, September 11, 2009

ಬಾರೋ...ಬಾರೋ...ಮಳೆರಾಯ...


ಕರ್ಣಾಟ ಮಾತೆಯಾ ಮಕ್ಕಳಿರ ಕೂಡಿ
ತಾಯ್ನುಡಿಯ ಸೇವೆಯನು ಮನಸಿಟ್ಟು ಮಾಡಿ!
-ಕುವೆಂಪು


ಇದೇ ತಿಂಗಳ ಐದನೇ ತಾರೀಖು ಭಾನುವಾರ ಬೆಳಿಗ್ಗೆ (೫.೯.೨೦೦೯) ನನ್ನ ಹೊಸ ಪುಸ್ತಕ ಬಾರೋ ಬಾರೋ ಮಳೆರಾಯ ಬಿಡುಗಡೆ ಆಯಿತು. ಮಕ್ಕಳಿಗಾಗಿ ನಾನು ಈವರೆಗೆ ಬರೆದಿರುವ ಎಲ್ಲ ಕವಿತೆಗಳ ಸಮಗ್ರ ಸಂಪುಟ ಅದು. ಅಂಕಿತ ಪುಸ್ತಕದ ಗೆಳೆಯರು ತುಂಬ ಚೆನ್ನಾಗಿ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬಾರೋಬಾರೋ ಮಳೆರಾಯ ಒಂದೇ ಅಲ್ಲ. ಈಚೆಗೆ ನಿರಂತರವಾಗಿ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಾ ಇವೆ. ಮಕ್ಕಳಿಗಾಗಿ ಬರೆಯಬೇಕೆಂಬ ಉಮೇದು ಮತ್ತೆ ನಮ್ಮ ಲೇಖಕರಲ್ಲಿ ಮೂಡುತ್ತಾ ಇದೆ. ಇದು ಶುಭ ಲಕ್ಷಣ. ಹಿರಿಯ ಕವಿಗಳಾದ ಚೆನ್ನವೀರ ಕಣವಿಯವರ ಮಕ್ಕಳ ಕವಿತಾ ಸಂಗ್ರಹ ಈಚೆಗೆ ಹೊರಬಂದಿದೆ. ಶ್ರೀನಿವಾಸ ಉಡುಪ, ಎನ್.ಎಸ್.ಎಲ್, ನಾಡಿಗ, ವೈದೇಹಿ, ಆನಂದ ಪಾಟೀಲ, ಲಕ್ಷ್ಮೀಶ ತೋಳ್ಪಾಡಿ ಮತ್ತಿತರ ಮುಖ್ಯ ಲೇಖಕರು ಮಕ್ಕಳಿಗಾಗಿ ನಿರಂತರ ಬರೆಯುತ್ತಾ ಇದ್ದಾರೆ.ಜೊತೆಗೆ ಮಕ್ಕಳ ಸಾಹಿತ್ಯ ಹರಿಗಡಿಯದಂತೆ ಯಾವತ್ತಿನಿಂದಲೂ ನೋಡಿಕೊಂಡಿರುವ ಉತ್ತರಕರ್ನಾಟಕದ ಅಧ್ಯಾಪಕ ಕವಿಗಳು. ಇದೆಲ್ಲಾ ಸಂತೋಷಪಡಬೇಕಾದ ಸಂಗತಿಯೇ. ಆದರೆ ಈ ಸಂತೋಷದ ಮಧ್ಯೆ ನನ್ನನ್ನು ಚಿಂತೆಗೆ ಹಚ್ಚುವ ಸಂಗತಿಯೆಂದರೆ, ಯಾರಿಗಾಗಿ ನಾವು ಮಕ್ಕಳ ಸಾಹಿತ್ಯವನ್ನು ನಿರ್ಮಿಸುತ್ತಿದ್ದೇವೆಯೋ ಆ ಮಕ್ಕಳು ಕನ್ನಡದಿಂದ ದೂರವಾಗುತ್ತಿರುವುದು. ನಗರಗಳಲ್ಲಂತೂ ನೂರಕ್ಕೆ ತೊಂಭತ್ತು ಭಾಗ ಮಕ್ಕಳಿಗೆ ಕನ್ನಡ ಈಗ ಓದುವ ಭಾಷೆಯಾಗಿಲ್ಲ. ಅದು ಕೇವಲ ಮಾತಾಡುವ ಭಾಷೆ. ಅವರೀಗ ಇಂಗ್ಲಿಷ್ ರೈಮ್ಸ್ ಓದುತ್ತಾರೆ. ಹ್ಯಾರೀಪಾಟ್ಟರ್ ಓದುತ್ತಾರೆ. ಕಾಮಿಕ್ಸ್ ನೋಡುತ್ತಾರೆ. ಪಂಜೆ, ಕುವೆಂಪು, ರಾಜರತ್ನಂ, ಹೊಯಿಸಳರ ಹೆಸರೂ ಅವರಿಗೆ ಗೊತ್ತಿಲ್ಲ. ತಪ್ಪು ಮಕ್ಕಳದಲ್ಲ. ಮಕ್ಕಳನ್ನು ಹಾಗೆ ಬೆಳೆಸುತ್ತಿರುವ ಪೋಷಕರದ್ದೂ ಅಲ್ಲ. ಈವತ್ತಿನ ಸಾಮಾಜಿಕ, ಶೈಕ್ಷಣಿಕ ಒತ್ತಡಗಳು ಹಾಗಿವೆ. ಕನ್ನಡದ ಬಗ್ಗೆ ಪ್ರೀತಿಯುಳ್ಳವರೂ ಈಗ ಅಸಾಹಯಕರಾಗಿದ್ದೇವೆ. ಶಾಲೆಗಳಲ್ಲಿ ಮಕ್ಕಳು ಕನ್ನಡ ಕಲಿಯುವ ಅವಕಾಶ ಕಡಿಮೆಯಾಗುತ್ತಾ ಇದೆ. ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸುವಷ್ಟು ವ್ಯವಧಾನ ಈವತ್ತಿನ ತುರ್ತು ಜಗತ್ತಿನಲ್ಲಿ ತಂದೆ ತಾಯಿಯರಿಗೆ ಇಲ್ಲ. ನಗರಗಳಿರಲಿ ಹಳ್ಳಿ ಹಳ್ಳಿಗಳಲ್ಲೂ ಇಂಗ್ಲಿಷ್ ಶಾಲೆಗಳು ತಲೆಯೆತ್ತುತ್ತಾ ಇವೆ. ಕನ್ನಡವನ್ನು ಮಕ್ಕಳಿಗೆ ಕಲಿಸಲು ಈಗ ನಾವು ಯಾವುದಾದರೂ ಪರ್ಯಾಯವ್ಯವಸ್ಥೆಯನ್ನೇ ಕಲ್ಪಿಸಿಕೊಳ್ಳಬೇಕಾಗಿದೆ. ಅಮೆರಿಕೆಯಲ್ಲಿ ನಮ್ಮ ಕನ್ನಡ ಬಂಧುಗಳು ತಮ್ಮ ಮಕ್ಕಳಿಗೆ ಹೇಗಾದರೂ ಮಾಡಿ ಕನ್ನಡ ಕಲಿಸ ಬೇಕೆಂಬ ಸಂಕಲ್ಪದಿಂದ ರಜಾದಿನಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಶಾಲೆಗಳನ್ನು(ಏಕೋಪಾಧ್ಯಾಯ ಶಾಲೆಗಳು) ಪ್ರಾರಂಭಿಸಿದ್ದಾರೆ. ಇದರಿಂದ ಕನ್ನಡ ಓದುವುದು ಮಕ್ಕಳಿಗೆ ತಕ್ಕಮಟ್ಟಿಗಾದರೂ ಪರಿಚಯ ಆಗುತ್ತದೆ. ಹತ್ತಾರು ವರ್ಷಗಳಿಂದ ಇಂಥ ಕನ್ನಡ ಶಾಲೆ ನಡೆಸುತ್ತಿರುವ ಕನ್ನಡಾಭಿಮಾನಿಗಳು ಅಮೆರಿಕಾದಲ್ಲಿ ಇದ್ದಾರೆ. ಹೊರಗೆ ಪಕ್ಕಾ ಇಂಗ್ಲಿಷ್ ವಾತಾವರಣ. ಹಾಗಾಗಿ ಮಕ್ಕಳನ್ನು ಕನ್ನಡದ ಕಡೆ ಸೆಳೆಯುವ ಪ್ರಯತ್ನಗಳು ಅಮೆರಿಕೆಯಲ್ಲಿ ಹೆಚ್ಚು ಫಲಕಾರಿಯಾಗಿಲ್ಲ ಎಂಬುದನ್ನು ಅಲ್ಲಿನ ಗೆಳೆಯರು ವಿಷಾದದಿಂದ ಹೇಳುತ್ತಾರೆ. ಮತ್ತೆ ಕೆಲವರು ಮಕ್ಕಳಿಗೆ ಕನ್ನಡ ಸಂಪರ್ಕ ಉಳಿಯಬೇಕು ಎಂಬ ಸಂಕಲ್ಪದಿಂದ ಅವರನ್ನು ರಜಾದಿನಗಳಲ್ಲಿ ಬೆಂಗಳೂರಿಗೋ, ಧಾರವಾಡಕ್ಕೋ, ಮೈಸೂರಿಗೋ ಕಳಿಸಿಕೊಡುತ್ತಾರೆ. ಇಲ್ಲಿ ಆ ಮಕ್ಕಳು ತಿಂಗಳು ಒಪ್ಪತ್ತು ಇರುವಂತೆ ನೋಡಿಕೊಳ್ಳುತ್ತಾರೆ. ಈ ಉಪಾಯ ತಕ್ಕಮಟ್ಟಿಗೆ ಧನಾತ್ಮಕ ಫಲಿತಾಂಶ ಕೊಟ್ಟಿದೆ. ಪ್ರತಿವರ್ಷವೂ ಮಕ್ಕಳನ್ನು ಹೀಗೆ ಸೀಮಿತ ಕಾಲಾವಧಿಗೆ ಇಂಡಿಯಾಕ್ಕೆ ಕಳಿಸುವುದರಿಂದ ಆ ಮಕ್ಕಳು ಸುಲಲಿತವಾಗಿ ಕನ್ನಡ ಮಾತಾಡುವಂತಾಗಿದೆ. ಅನಿವಾಸೀಭಾರತೀಯರಾದ ನನ್ನ ಮಿತ್ರರೊಬ್ಬರ ಮಗಳು ಅಮೆರಿಕೆಯಲ್ಲಿದ್ದೂ ಸೊಗಸಾಗಿ ಕನ್ನಡ ಮಾತಾಡುತ್ತಾಳೆ. ಈ ಪ್ರಯೋಗವನ್ನು ಇನ್ನೊಂದು ಬಗೆಯಲ್ಲಿ ಬೆಂಗಳೂರು ನಿವಾಸಿಗಳಾದ ನಾವೂ ಮಾಡಬಹುದೇ? ಮಕ್ಕಳನ್ನು ರಜಾದಿನಗಳಲ್ಲಿ ಹಳ್ಳಿಗಳಿಗೆ ಕಳುಹಿಸುವುದು. ಅಲ್ಲಿ ಅವರು ಅಜ್ಜ ಅಜ್ಜಿಯರೊಂದಿಗೋ. ಅತ್ತೆಮಾವಂದಿರೊಂದಿಗೋ ತಿಂಗಳೊಪ್ಪತ್ತು ಇದ್ದು ಬರಲಿ. ಮೂರು ನಾಲಕ್ಕು ವರ್ಷ ಈ ಪ್ರಯೋಗ ಮಾಡುವುದರಿಂದ ಕನ್ನಡ ಮಾತಾಡುವುದು, ಓದುವುದು ಅವರಿಗೆ ಸಾಧ್ಯವಾಗಬಹುದು. ಗ್ರಾಮಗಳು ಹೀಗೆ ನಮ್ಮ ದೇಸೀಯತೆಯನ್ನು ಉತ್ಪಾದಿಸುವ, ಉಳಿಸುವ, ಪ್ರಚೋದಿಸುವ ಕಾರ್ಯಾಗಾರಗಳಾಗಬೇಕಾಗಿದೆ. ಹಳ್ಳಿಯಿಂದ ಮಕ್ಕಳು ರಜಾದಿನಗಳನ್ನು ಮುಗಿಸಿ ಬೆಂಗಳೂರಿಗೆ ಬಂದ ಮೇಲೆ, ಕನ್ನಡ ಹಾಡುಗಳನ್ನು ಕೇಳಲು, ಕನ್ನಡ ನಾಟಕಗಳನ್ನು, ಚಲನಚಿತ್ರಗಳನ್ನು ನೋಡಲು ನಾವು ಅವರನ್ನು ಪ್ರೋತ್ಸಾಹಿಸೋಣ. ಅವರು ಓದುತ್ತಾರೋ ಬಿಡುತ್ತಾರೋ ಒಂದು ಕನ್ನಡ ಪತ್ರಿಕೆ ನಮ್ಮ ಮನೆಗೆ ಬಂದು ಬೀಳುತ್ತಾ ಇರಲಿ. ನಾವು ಮನೆಯಲ್ಲಿ ಹಠತೊಟ್ಟವರಂತೆ ಕನ್ನಡ ಮಾತಾಡೋಣ. ಮಕ್ಕಳು ಕನ್ನಡದಲ್ಲಿ ಮಾತಾಡುವ ವಾತಾವರಣ ಕಲ್ಪಿಸೋಣ. ಶಾಲೆಯಲ್ಲಿ ಅವರು ಹೇಗೂ ಇಂಗ್ಲಿಷ್ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ! ಅವರು ಎಲ್ಲಿ ಸಮಕಾಲೀನ ಸಂದರ್ಭಕ್ಕೆ ನಿರುಪಯುಕ್ತರಾಗಿಬಿಡುತ್ತಾರೋ ಎಂಬ ಆತಂಕ ಬೇಡ. ಶಾಲೆಗಳಲ್ಲಿ ತಪ್ಪಿಯೂ ಅವರು ಕನ್ನಡ ಮಾತಾಡುವುದಿಲ್ಲ. ಮಾತಾಡಿದರೆ ದಂಡ ವಿಧಿಸುವ, ಛೀಮಾರಿ ಹಾಕುವ ವ್ಯವಸ್ಥೆ(!)ಯೂ ಇದೆ ಅಂತ ಕೇಳಿದ್ದೇನೆ. ನನ್ನ ಹೊಸ ಮಕ್ಕಳ ಕವಿತಾ ಸಂಗ್ರಹ ಪ್ರಕಟವಾದ ಬಗ್ಗೆ ತಿಳಿಸಿದೆನಲ್ಲಾ? ಆ ಪುಸ್ತಕದ ಒಂದು ಪ್ರತಿಯನ್ನು ನಿಮ್ಮ ಶಾಲೆಯ ಪುಸ್ತಕಭಂಡಾರಕ್ಕೆ ಕೊಡು ಎಂದು ನಾನು ನನ್ನ ಮೊಮ್ಮಗಳಿಗೆ ಹೇಳಿದಾಗ ಅವಳು ತಕ್ಷಣ ಉತ್ತರಿಸಿದ್ದು: ನಮ್ಮ ಸ್ಕೂಲಲ್ಲಿ ಕನ್ನಡ ಪುಸ್ತಕ ಲೈಬ್ರರಿಯಲ್ಲಿ ಇಡುವಂತಿಲ್ಲ! ಸರ್ಕಾರ ಇಂಥ ಕಡೆ ಮಧ್ಯೆ ಪ್ರವೇಶಿಸಬೇಕಾದ ಅಗತ್ಯವಿದೆ. ಶಿಕ್ಷಣ ಇಲಾಖೆ ಈ ಕೆಲಸವನ್ನು ತಕ್ಕ ಮಟ್ಟಿಗೆ ಮಾಡುತ್ತಾ ಇದೆ. ಆಯ್ದ ಪುಸ್ತಕಗಳನ್ನು ಹಳ್ಳಿ ಹಳ್ಳಿಯ ಶಾಲೆಗಳಿಗೆ ಉಚಿತವಾಗಿ ಹಂಚುವ ಕಾರ್ಯಕ್ರಮ. ಈ ಯೋಜನೆ ಇನ್ನೂ ವಿಸ್ತೃತವಾಗಬೇಕು. ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಿಗೂ ಕನ್ನಡ ಪುಸ್ತಕಗಳನ್ನು ಹಂಚಬೇಕು. ಬಿಟ್ಟಿ ಸಿಕ್ಕುವಾಗ ಯಾರೂ ಬೇಡಾ ಅನ್ನಲಾರರು. ಕನ್ನಡ ಭಾಷೆಯನ್ನ ಒಂದು ಭಾಷೆಯಾಗಿಯಾದರೂ ಕಲಿತ ಮಕ್ಕಳಿಗೆ ವಿಶೇಷ ಅನುಕೂಲಗಳನ್ನು ಸರ್ಕಾರ ಕಲ್ಪಿಸಬೇಕು. ಶಿಷ್ಯವೇತನಗಳನ್ನು ಕೊಡಬೇಕು. ಮುಂದೆ ಅವರು ವೈದ್ಯಕೀಯ, ತಾಂತ್ರಿಕ ಕಾಲೇಜುಗಳಲ್ಲಿ ಓದುವ ಅವಕಾಶ ಕಲ್ಪಿಸಬೇಕು...(ಈಗ ಕಲ್ಪಿಸಿರುವ ಪ್ರೋತ್ಸಾಹ ಏನೇನೂ ಸಾಲದು)!ಇದೆಲ್ಲಾ ಇನ್ನೊಬ್ಬರು ಮಾಡಬೇಕಾದದ್ದು. ಸ್ವತಃ ನಾವು ಮಾಡಬಹುದಾದದ್ದು ಏನು? ಮಕ್ಕಳಿಗೆ ಮನೆಯಲ್ಲೇ ಕನ್ನಡ ಓದಲು ಬರೆಯಲು ಹೇಗಾದರೂ ಮಾಡಿ ಕಲಿಸುವುದು. ಅವರಿಗೆ ಅತ್ತ್ಯುತ್ತಮ ಕನ್ನಡ ಪುಸ್ತಕಗಳನ್ನು ಕೊಂಡುಕೊಟ್ಟು ಅವರ ಕೋಣೆಯಲ್ಲಿ ಪುಟ್ಟ ಒಂದು ಕನ್ನಡ ಪುಸ್ತಕ ಭಂಡಾರ ತೆರೆಯುವುದು.ನಮ್ಮ ಭಾಷೆಯನ್ನು ಮೊದಲು ನಾವು ಪ್ರೀತಿಸತೊಡಗುವುದು. ನಾವು ನಮ್ಮ ಭಾಷೆಯನ್ನು ಪ್ರೀತಿಸ ತೊಡಗಿದರೆ ಮಕ್ಕಳಿಗೂ ನಮ್ಮ ಭಾಷೆಯ ಬಗ್ಗೆ ಗೌರವ ಅಭಿಮಾನ ಆದರ ಮೂಡುವುದು.....ಮಕ್ಕಳೊಂದಿಗೆ ಅಗಾಗ ನಾವು ಕನ್ನಡ ಪುಸ್ತಕದ ಅಂಗಡಿಗಳಿಗೆ ಭೆಟ್ಟಿಕೊಡುವುದು ಒಳ್ಳೆಯ ಪರಿಣಾಮ ಬೀರಬಲ್ಲುದು...ಯಾವುದೇ ಭಾಷೆ ಒಂದು ಸಾಮಾಜಿಕ ಪ್ರತಿಷ್ಠೆಯ ಸೂಚಿಯಾಗುವುದನ್ನು ಮಾತ್ರ ಹೇಗಾದರೂ ಮಾಡಿ ತಪ್ಪಿಸ ಬೇಕಾದದ್ದು ನಾವು ಮುಖ್ಯವಾಗಿ ಮಾಡಬೇಕಾದ ಕೆಲಸ....ಕೊನೆಗೂ ಕನ್ನಡ ಉಳಿಯಬೇಕಾದದ್ದು ಪುಸ್ತಕಗಳಲ್ಲಿ ಅಲ್ಲ; ನಮ್ಮ ಮಕ್ಕಳ ನಾಲಗೆ ಮೇಲೆ.
"ಉಳಿವುದು ಕನ್ನಡ ನಾಳೆ, ಉಳಿದರೆ ಮಕ್ಕಳ ನಾಲಗೆ ಮೇಲೆ"

Thursday, September 3, 2009

ಅಡಿಗರ ನೆನಪು....

ಅಡಿಗರು ಜಯನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ದರು. ನಾನು ಆಗಾಗ ಅವರನ್ನು ಕಾಣಲು ಆ ಮನೆಗೆ ಹೋಗುತ್ತಿದ್ದೆ. ಆಗ ಅವರ ಮನೆಯಲ್ಲಿ ತುಂಬ ಬೆಕ್ಕುಗಳು ಇದ್ದವು. ಅಡಿಗರು ಅವಕ್ಕೆಲ್ಲಾ ನಾಮಕರಣ ಮಾಡಿದ್ದರು. ನಾನು ಅವರೊಂದಿಗೆ ಮಾತಾಡಲು ಕುಳಿತಾಗ ಅವರಿಗೆ ಪ್ರಿಯವಾದ ಬೆಕ್ಕೊಂದು ಕೋಣೆಗೆ ನುಸುಳಿ, ಮಿಯಾವ್ ಮಿಯಾವ್ ಎಂದು ಸ್ವಲ್ಪ ಕಾಲ, ಕಾಲ ಬಳಿ ಸುತ್ತಾಡಿ ಆಮೇಲೆ ಚಂಗನೆ ಹಾರಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಅಡಿಗರು ಬೆಕ್ಕನ್ನು ಮುದ್ದು ಮಾಡುತ್ತ ಅದರ ಸಾಹಸಗಳನ್ನು ಜಾಣ್ಮೆಯನ್ನು ಎಷ್ಟೋ ಹೊತ್ತು ವಿವರಿಸುತ್ತಾ, ಆ ಮಾತಿನಲ್ಲೇ ತನ್ಮಯರಾಗುತ್ತಿದ್ದರು. ರಾತ್ರಿ ಒಂದು ಕಿಟಕಿಯ ಬಾಗಿಲು ಈ ಬೆಕ್ಕಿಗಾಗಿ ತೆರೆದಿಡುತ್ತೇವೆ. ಇವನು ರಾತ್ರಿ ಅಲೆದಾಡಿಕೊಂಡು ಯಾವ ಮಾಯದಲ್ಲೋ ಮತ್ತೆ ಮನೆಯೊಳಗೆ ಬಂದು ಮಲಗಿರುತ್ತಾನೆ. ಮನೆಯೊಳಗೆ ಕೊಳೆ ಮಾಡುವುದಿಲ್ಲ. ಬಹಳ ನೀಟಾದ ಶೋಕೀವಾಲ...ಇತ್ಯಾದಿ ಹೇಳುತ್ತಾ ಇದ್ದರು. ಅವರ ಮಾತಿನಲ್ಲಿ ಬೆಕ್ಕು ಬೆಕ್ಕಾಗಿರಲಿಲ್ಲ. ಮನೆಯ ಒಬ್ಬ ಸದಸ್ಯನಾಗಿತ್ತು. ಹಾಗೇ ಅಡಿಗರಿಗೆ ಅವರ ನಾಯಿಯ ಬಗ್ಗೆಯೂ ಅಪಾರ ಪ್ರೇಮ. ಪುಟ್ಟ ಎಂದು ಆ ನಾಯಿಯ ಹೆಸರು. ಅವನ ಚೇಷ್ಟೆಯನ್ನು ಖುಷಿಯಾಗಿ ವಿವರಿಸುತ್ತಿದ್ದರು. ಅವನಿಗೆ ಚಿಂದಿ ಉಟ್ಟ ಯಾರಾದರು ಕಂಡರೆ ಆಗುವುದಿಲ್ಲ. ಅವರು ರಸ್ತೆ ದಾಟುವವರೆಗೂ ಬಗುಳುತ್ತಾ ಇರುತ್ತಾನೆ. ನೀಟಾಗಿ ಉಡುಪು ಹಾಕಿಕೊಂಡವರು ಬಂದರೆ ಬಾಲ ಕುಣಿಸುತ್ತಾ ಹರ್ಷ ವ್ಯಕ್ತಪಡಿಸುತ್ತಾನೆ-ಹೀಗೆಲ್ಲಾ ತಮ್ಮ ಪ್ರೀತಿಯ ನಾಯಿಯ ಬಗ್ಗೆ ವಿವರ ಕೊಡುತ್ತಾ ಎಷ್ಟೋ ಹೊತ್ತು ಮಾತಾಡುತ್ತಿದ್ದರು.
******
ಅಡಿಗರು ಜಯನಗರದ ಮನೆಯಿಂದ ಬನಶಂಕರಿಗೆ ತಮ್ಮ ಸ್ವಂತ ಮನೆಗೆ ಬಂದಮೇಲೆ ಒಮ್ಮೆ ಅವರ ಮನೆಗೆ ಹೋಗಿದ್ದಾಗ ಬಹಳ ಹೊತ್ತು ಅವರೊಂದಿಗೆ ಮಾತಾಡುತ್ತಾ ಕುಳಿತಿದ್ದರೂ ಅವರ ಪ್ರೀತಿಯ ಬೆಕ್ಕು ಕಾಣಿಸಲೇ ಇಲ್ಲ. ಸಾರ್...ನಿಮ್ಮ ಬೆಕ್ಕು ಕಾಣ್ತಾ ಇಲ್ಲವಲ್ಲಾ..? ಎಂದೆ. ಅಡಿಗರ ಮುಖ ಸ್ವಲ್ಪ ಸಪ್ಪಗಾಯಿತು. ಆ ಮನೆಯಿಂದ ಬರುವಾಗ ಅವನು ಎಲ್ಲೋ ಹೊರಗೆ ಹೋಗಿದ್ದ. ಎಷ್ಟು ಕಾದರೂ ಬರಲಿಲ್ಲ. ಇಲ್ಲಿಗೆ ಬಂದ ಮೇಲೆ ಅವನನ್ನು ಹುಡುಕಿಕೊಂಡು ಎಷ್ಟೋ ಬಾರಿ ಆ ಮನೆಯ ಹತ್ತಿರ ಹೋಗಿದ್ದೇವೆ. ಕೆಲವೊಮ್ಮೆ ಕಾಣುತ್ತಾನೆ. ಆದರೆ ಆ ಮನೆಯನ್ನು ಬಿಟ್ಟು ಬರಲು ಅವನಿಗೆ ಇಷ್ಟವಿಲ್ಲ. ಬೆಕ್ಕುಗಳಿಗೆ ಸಾಕಿದ ವ್ಯಕ್ತಿಗಳಿಗಿಂತ , ತಾನು ಬೆಳೆದ ಸ್ಥಳ ಮುಖ್ಯ ಎನ್ನುತ್ತಾರೆ. ನಮ್ಮನ್ನು ಬಿಟ್ಟಿರಲು ಅವನಿಗೂ ತುಂಬ ದುಃಖವಾಗಿರಬೇಕು. ಆದರೆ ಆ ಮನೆಯನ್ನು ಬಿಟ್ಟು ಬರುವುದು ಇನ್ನೂ ಹೆಚ್ಚುದುಃಖಕರ ಅನ್ನಿಸಿರಬೇಕು ಅವನಿಗೆ...!ಎಂದು ಸ್ವಲ್ಪ ಕಾಲ ಆ ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು.
*****
ಅಡಿಗರ ಪ್ರೀತಿಪಾತ್ರ ನಾಯಿಯೇನೋ ಅವರನ್ನು ಹೊಸಮನೆಗೆ ಹಿಂಬಾಲಿಸಿತ್ತು. ನಾನು ಯಾವಾಗ ಹೋದರೂ ಅದರ ಬಗುಳು, ಮತ್ತು ಸಂತೋಷಾಧಿಕ್ಯದಿಂದಲೋ, ಬೇಸರದಿಂದಲೋ ಗಿರಿಗಿಟ್ಟಲೆಸುತ್ತುವ ಸ್ವಾಗತ ನನಗೆ ದೊರಕುತ್ತಾ ಇತ್ತು. ಮನೆಯನ್ನು ಪ್ರವೇಶಿಸಿದ ಕೂಡಲೇ ಒಂದು ವರಾಂಡ. ಅದಕ್ಕೆ ಹೊಂದಿಕೊಂಡಂತೆ ಅಡಿಗರ ಬರೆಯುವ ಕೋಣೆ ಇತ್ತು. ಅವರ ಟೇಬಲ್ಲಿನ ಮೇಲೆ ಕಿಟ್ಟೆಲ್ಲಿಂದ ಹಿಡಿದು ಎಲ್ಲ ಡಿಕ್ಷ್ಣರಿಗಳೂ ಇರುತ್ತಿದ್ದವು. ಮಾತಾಡುವಾಗ ಯಾವುದೇ ಶಬ್ದದ ಬಗ್ಗೆ ಅನುಮಾನ ಉಂಟಾದರೂ ತಕ್ಷಣ ಡಿಕ್ಷ್ಣರಿ ತೆರೆದು ಆ ಪದವನ್ನು ಹುಡುಕಿ ಅನುಮಾನ ಬಗೆಹರಿಸಿಕೊಳ್ಳುವವರೆಗೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಆಗ ದೂರದರ್ಶನದಲ್ಲಿ ಇದೀಗ ದೆಹಲಿಗೆ ಎಂಬ ಪ್ರಕಟಣೆ ಪದೇ ಪದೇ ಬರುತ್ತಾ ಇತ್ತು. ಅಡಿಗರು ಆ ಪ್ರಕಟಣೆ ಬಂದಾಗ -ಇದೇನಯ್ಯಾ...? ಇದೀಗ ದೆಹಲಿಗೆ...! ಇದೀಗ ಎನ್ನುವುದು ತಪ್ಪು ಪ್ರಯೋಗ..ಈ ಬಗ್ಗೆ ದೂರದರ್ಶನದವರಿಗೆ ಬರೆದೆ ಕೂಡಾ. ಅವರೇನೂ ತಿದ್ದಿಕೊಳ್ಳಲಿಲ್ಲ...ಎಂದು ಬೇಸರ ವ್ಯಕ್ತಪಡಿಸಿದರು.
*******
ಹೆಚ್ಚುಕಮ್ಮಿ ಅದೇ ದಿನಗಳಲ್ಲಿ ನನ್ನ ಸಿಂದಬಾದನ ಆತ್ಮಕಥೆ ಎನ್ನುವ ಕವನಸಂಗ್ರಹ ಪ್ರಕಟವಾಯಿತು. ಆ ಪುಸ್ತಕವನ್ನು ಪ್ರಕಟಿಸಿದ ನರಹಳ್ಳಿಯವರು ಅದರ ಬಿಡುಗಡೆಯ ಕಾರ್ಯಕ್ರಮವನ್ನು ಶೇಷಾದ್ರಿಪುರಮ್ ಕಾಲೇಜಿನಲ್ಲಿ ಇಟ್ಟುಕೊಂಡಿದ್ದರು. ಅಡಿಗರು ಪುಸ್ತಕವನ್ನು ಬಿಡುಗಡೆ ಮಾಡಿದರು. ಸಿಂದಬಾದನ ಆತ್ಮಕಥೆ ಎಂದಿದ್ದರೆ ಸಾಕಾಗಿತ್ತು. ಸಿಂದಾಬಾದನ ಎಂದು ದೀರ್ಘ ಎಳೆಯುವ ಅಗತ್ಯವಿರಲಿಲ್ಲ ಎಂದು ನಗುತ್ತಾ ಹೇಳಿದರು.
********
ನಾನು ಎಂ.ಎ. ಓದುತ್ತಿರುವಾಗ(೧೯೭೨-೭೩) ಕರ್ನಾಟಕಸಂಘಕ್ಕೆ ಅಧ್ಯಕ್ಷನಾಗಿದ್ದೆ. ಅಡಿಗರನ್ನು ಒಮ್ಮೆ ವಿಶೇಷ ಉಪನ್ಯಾಸಕ್ಕೆ ಕರೆದಿದ್ದೆವು. ನನಗೆ ಆಗ ಸಭೆಯಲ್ಲಿ ಮಾತಾಡುವ ಅಭ್ಯಾಸವಿರಲಿಲ್ಲ. ಗಾಭರಿಯಲ್ಲಿ ಅಡಿಗರು ಉಪನ್ಯಾಸ ಮಾಡುತ್ತಾರೆ ಎನ್ನುವ ಬದಲು ಪ್ರವಚನ ಮಾಡುತ್ತಾರೆ ಎಂದುಬಿಟ್ಟೆ! ಅಡಿಗರು ತಾವು ಮಾತಾಡುವಾಗ -ನಾನು ಉಪನ್ಯಾಸ ನೀಡಲಿಕ್ಕೆ ಬಂದಿದ್ದೇನೆ; ಪ್ರವಚನ ಕೊಡಲಿಕ್ಕಲ್ಲ...! ಎಂದರು. ಇಂಥದೇ ಇನ್ನೊಂದು ಪ್ರಸಂಗ: ನನ್ನ ವಿಮುಕ್ತಿ ಕವಿತೆಯನ್ನು ಅವರಿಗೆ ಓದಲಿಕ್ಕೆ ಕೊಟ್ಟಿದ್ದೆ. ಓದಿ ಹಿಂದಿರುಗಿಸುವಾಗ ಕಾರ್ಮುಖ ಎನ್ನುವ ಪ್ರಯೋಗ ಸರಿಯೇ ಯೋಚನೆ ಮಾಡಿ ಎಂದರು. ಆ ರಾತ್ರಿ ಮತ್ತೆ ಅಡಿಗರಿಂದ ದೂರವಾಣಿ. ಕಾರ್ಮುಖ ಇಟ್ಟುಕೊಳ್ಳಿ..ಪರವಾಗಿಲ್ಲ...ಕಾವ್ಯದಲ್ಲಿ ಬರುವ ಅವನ ವ್ಯಕ್ತಿತ್ವಕ್ಕೆ ಈ ಅಪಪ್ರಯೋಗ ಧ್ವನಿಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದರು.
**********
ಅಡಿಗರಿಗೆ ಹೊಸದಾಗಿ ಏನಾದರೂ ಬರೆದಾಗ ಓದಲಿಕ್ಕೆ ಕೊಡುತ್ತಿದ್ದೆ. ಅವರು ಓದುವಾಗ ಕಾತರದಿಂದ ಅವರು ಏನನ್ನುವರೋ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ. ಪದ್ಯವಾದರೆ ಒಂದು ಸಲ ಮೇಲಿಂದ ಕೆಳಗೆ ಉದ್ದಕ್ಕೂ ಕಣ್ಣಾಡಿಸಿ...ಚೆನ್ನಾಗಿದೆ-ಎನ್ನುತ್ತಿದ್ದರು. ಅವರಿಗೆ ಇಷ್ಟವಾಗದಿದ್ದರೆ-ಏನೂ ಹೇಳದೆ ಸುಮ್ಮನೆ ತಲೆಕೊಡವುತ್ತಿದ್ದರು. ನನಗೆ ಪದ್ಯ ಅವರಿಗೆ ಹಿಡಿಸಲಿಲ್ಲ ಎಂಬುದು ಖಾತ್ರಿಯಾಗುತ್ತಿತ್ತು. ಅಡಿಗರೂ ತಾವು ಬರೆದದ್ದನ್ನು ಕಿರಿಯರಿಗೆ ತೋರಿಸಲಿಕ್ಕೆ ಸಂಕೋಚಪಡುತ್ತಿತಲಿಲ್ಲ. ಅವರ ಅನೇಕ ಪದ್ಯಗಳನ್ನು ಹಸ್ತಪ್ರತಿಯಲ್ಲೇ ಓದಿದ್ದೇನೆ. ನಮಗೆ ಅನ್ನಿಸಿದ್ದು ಏನೋ ಹೇಳಿದರೆ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು.
***********
ಆಗ ಅಡಿಗರು ಏನು ಬರೆದರೂ ರೋಮಾಂಚಿತರಾಗುವ ಓದುಗವರ್ಗವಿತ್ತು. ಒಮ್ಮೆ ನನ್ನ ಗೆಳೆಯರೊಬ್ಬರು ಬಂದು ಅಡಿಗರು ಹೊಸ ಪದ್ಯ ಬರೆದಿದ್ದಾರೆ. ಅದರಲ್ಲಿ ಗಂಗಾನದಿಯನ್ನು ಗಂಗಜ್ಜಿ ಎಂದು ಕರೆದಿದ್ದಾರೆ! ಎಂಥ ಅದ್ಭುತ ಪ್ರಯೋಗ ಅಲ್ವಾ?-ಎಂದು ಕಣ್ಣು ಬಾಯಿ ಅರಳಿಸಿದರು. ಅಡಿಗರ ಕೆಲವು ಪ್ರತಿಮೆಗಳು ನನ್ನನ್ನು ಸಹಜವಾಗಿಯೇ ಬೆರಗುಪಡಿಸುತ್ತಿದ್ದವು. ಒಮ್ಮೆ ಮುಗ್ಧವಾಗಿ ಇಂಥಾ ಪ್ರತಿಮೆಗಳು ನಿಮಗೆ ಹೇಗೆ ಹೊಳೆಯುತ್ತವೆ? ಎಂದು ಕೇಳಿದೆ. ಅವು ಧೊಪ್ಪನೆ ಆಕಾಶದಿಂದ ನನ್ನ ಮುಂದೆ ಬಂದು ಬೀಳುತ್ತವೆ! ಎಂದು ನಗುತ್ತಾ ಹೇಳಿದ್ದರು. ನನ್ನ ಸೌಗಂಧಿಕಾ ಕವಿತೆಯನ್ನು ಅಡಿಗರಿಂದ ಓದಿಸಿ ಅಭಿಪ್ರಾಯ ತಿಳಿಯಬೇಕು ಎಂದು ತುಸು ಅಧೈರ್ಯದಿಂದಲೇ ಅವರ ಮನೆಗೆ ಹೋಗಿದ್ದೆ. ಅಧೈರ್ಯ ಯಾಕೆ ಎಂದರೆ ಸೌಗಂಧಿಕಾ ಪದ್ಯವನ್ನು ನಾನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದೆ. ಆ ಸಮಯದಲ್ಲಿ(೧೯೭೭) ಫ್ರೀವರ್ಸ್ ತುಂಬಾ ಚಲಾವಣೆಯಲ್ಲಿತ್ತು. ಅಡಿಗರು ಫ್ರೀವರ್ಸ್, ಮತ್ತು ಸಾಲಿನ ಕೊನೆಯಲ್ಲಿ ಮುಕ್ತಾಯವಾಗದೆ ಮುಂದಿನ ಸಾಲಿಗೆ ಪ್ರವಹಿಸುವ ರೀತಿಯ ಲಯಬದ್ಧ ಲಲಿತರಗಳೆಯ ಓಟದ ಚೌಪದಿಗಳನ್ನು ಬರೆಯುತ್ತಿದ್ದರು. ಷಟ್ಪದಿಯಲ್ಲಿ ಪದ್ಯ ಬರೆದಿದ್ದು ಹಿನ್ನೆಡೆಯಾಯಿತೇನೋ ಎನ್ನುವ ಆತಂಕ ನನಗಿತ್ತು. ಆದರೆ ಅಡಿಗರು ಪದ್ಯ ಓದಿ , ಗಂಭೀರವಾಗಿ ತಲೆದೂಗಿ -ಕೊಡಿ..ಇದನ್ನು ಸಾಕ್ಷಿಯಲ್ಲಿ ಹಾಕೋಣ ಎಂದರು. ಇದು ಸಸ್ಪೆನ್ಸಾಗಿ ಇರಲಿ ಸಾರ್...ನಾನು ಸಾಕ್ಷಿಗೆ ನೀವು ಓದಿ ಒಪ್ಪಿರುವ, ಸಿಂದಾಬಾದನ ಆತ್ಮಕಥೆ ಕೊಡುತ್ತೇನೆ -ಎಂದೆ.
********
ಕಡೆ ಕಡೆಯ ದಿನಗಳಲ್ಲಿ ಅಡಿಗರು ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು. ಒಮ್ಮೆ ಅವರ ಮನೆಗೆ ಹೋಗಿದ್ದಾಗ ತಮ್ಮ ಕಥಾಸಂಗ್ರಹಕ್ಕೆ ಮುನ್ನುಡಿ ಬರೆಯಲು ಕೇಳಿದರು. ನಿಮಗೆ ಏನು ಅನ್ನಿಸುತ್ತೋ ಅದನ್ನು ಬರೆಯಿರಿ. ಸಂಕೋಚ ಬೇಡ..ಎಂದರು. ಅಡಿಗರು ನನಗೆ ಮುನ್ನುಡಿ ಬರೆಯಲು ಹೇಳಿದ್ದು ನನ್ನ ಮೇಲೆ ಅವರಿಗಿದ್ದ ಪ್ರೀತಿಯನ್ನು ತೋರಿಸುವುದಕ್ಕೆ ಅವರು ಕಂಡುಕೊಂಡ ದಾರಿ ಎಂಬುದು ನನ್ನ ತಿಳುವಳಿಕೆ. ಇಂಥಾ ಪ್ರೀತಿಯನ್ನು ಅನೇಕ ಸಾಹಿತ್ಯದಿಗ್ಗಜಗಳಿಂದ ನಾನು ಪಡೆದಿದ್ದೇನೆ. ಇದು ನನ್ನ ಭಾಗ್ಯ ಎನ್ನುವುದು ನನ್ನ ಭಾವನೆ.
*********
ಅಡಿಗರ ಆರೋಗ್ಯ ದಿನೇ ದಿನೇ ಹಸಗೆಡುತ್ತಿತ್ತು. ಅವರನ್ನು ಆ ಸ್ಥಿತಿಯಲ್ಲಿ ನೋಡುವಾಗ ಸಂಕಟವಾಗುತ್ತಿತ್ತು. ಯಾರಾದರೂ ಆಪ್ತರು ಹೋದಾಗ ಅವರ ಕಣ್ಣಿಂದ ನೀರು ಬರುತ್ತಿತ್ತು. ಅವರಿಗೆ ಸಮಾಧಾನ ಹೇಳುವಷ್ಟು ನಾವು ದೊಡ್ಡವರಾಗಿರಲಿಲ್ಲ. ದೂರವಾಣಿ ಮೂಲಕ ಕರೆ ಮಾಡಿ-ಬಂದು ಹೋಗಯ್ಯ ಎನ್ನುತ್ತಿದ್ದರು. ಒಮ್ಮೆ ಹೋದಾಗ ಉಪನಿಷತ್ತಿನ ಬಗ್ಗೆ ಇರುವ ಒಂದು ಪುಸ್ತಕವನ್ನು ಸಹಿಮಾಡಿ ನನಗೆ ಆಶೀರ್ವಾದ ರೂಪವಾಗಿ ಕೊಟ್ಟು, ಇದನ್ನ ಗಂಭೀರವಾಗಿ ಅಭ್ಯಾಸ ಮಾಡು ಎಂದರು. ಅಡಿಗರ ಆಶಿರ್ವಾದದ ಕುರುಹಾಗಿ ಆ ಪುಸ್ತಕವನ್ನು ಈಗಲೂ ಜತನವಾಗಿ ಇಟ್ಟುಕೊಂಡಿದ್ದೇನೆ.
---

Monday, August 31, 2009

ವಂದನೆಗಳು

ನನ್ನ ಬ್ಲಾಗ್ ಗಮನಿಸಿ ಪ್ರತಿಕ್ರಿಯಿಸಿರುವ ಮಿತ್ರರಿಗೆ ತುಂಬ ಆಭಾರಿಯಾಗಿದ್ದೇನೆ.ಪ್ರೀತಿಯಿಂದ-ಎಚ್.ಎಸ್.ವಿ

Sunday, August 30, 2009

ಆಲಯವನ್ನು ಹೊಕ್ಕ ಆಕಾಶ : ಶ್ರೀರಾಮಚಂದ್ರ

ಬಿಸಿಲಧಗೆ ನಿಧಾನವಾಗಿ ಏರುತ್ತಿರುವಂತೆ ಮತ್ತೆ ರಾಮನವಮಿ ಬರುತ್ತಿದೆ.ತಕ್ಷಣ ನೆನಪು ನನ್ನ ಬಾಲ್ಯದ ದಿನಗಳತ್ತ ಹಾಯುತ್ತಿದೆ. ಚನ್ನಗಿರಿಯಲ್ಲಿ ಆ ಬೆಳಿಗ್ಗೆ ಬಂಡಿಗಳ ಹಿಂದೆ ಬಂಡಿ ಬೆಟ್ಟದ ಮೇಲಿನ ಆಂಜನೇಯನ ಗುಡಿಗೆ ಹೊರಟಿದ್ದವು. ನನ್ನ ಗೆಳೆಯರು ಹೇಳಿದರು. ಈವತ್ತು ಮಧ್ಯಾಹ್ನ ನಾವು ಬೆಟ್ಟದ ಗುಡಿಗೆ ಹೋಗೋಣ...ರಾಮನವಮಿ ಅಲ್ಲವಾ? ಅಲ್ಲಿ ರುಚಿರುಚಿಯಾದ ಕೋಸಂಬರಿ, ತಿಳಿಮಜ್ಜಿಗೆ, ಪಾನಕ ಕೊಡುತ್ತಾರೆ. ಓಹೋ....ನಾನೂ ಬರುತ್ತೇನೆ...!


ಮನೆಯಲ್ಲಿ ನಮ್ಮ ಅಜ್ಜಿ ಪೂಜೆಗೆ ಸಿದ್ಧಮಾಡುತ್ತಿದ್ದರು.ಹಸೆಹಾಕಿ ಹಾಕಿ, ನಡುಮನೆಯಲ್ಲೇ ರಾಮದೇವರ ಫಟ ಇಟ್ಟಿದ್ದರು! ಆ ಫಟ ಈ ರಾಮನವಮಿಗಾಗಿಯೇ ದಾವಣಗೆರೆಯಿಂದ ತಂದದ್ದು...!ಯಥಾಪ್ರಕಾರ ರಾಮದೇವರ ಫ಼್ಯಾಮಿಲಿ ಫೋಟೊ!ನಡುವೆ ರಾಮ.ಪಕ್ಕದಲ್ಲಿ ಸೀತಾದೇವಿ.ಹಿಂದೆ ಚಾಮರ ಹಾಕುತ್ತಿರುವ ಲಕ್ಷ್ಮಣ, ಶತ್ರುಘ್ನ. ಚತ್ರಿ ಹಿಡಿದಿರುವ ಭರತ. ಕಾಲ ಬುಡದಲ್ಲಿ ಪಾದಸೇವೆ ಮಾಡುತ್ತಿರುವ ಆಂಜನೇಯ.ಆ ಈ ಪಕ್ಕ ಲಂಕಾಧೀಶ ವಿಭೀಷಣ...ಸುಗ್ರೀವಾದಿ ಕಪಿವೀರರು....! ಇದನ್ನು ಫ್ಯಾಮಿಲಿ ಫೋಟೊ ಅನ್ನದೆ ಇನ್ನೇನೆಂದು ಕರೆಯೋಣ? ಭಾರತದ ಆದ್ಯಂತ ರಾಮ ಪೂಜಿತನಾಗುವುದೇ ಹೀಗೆ. ರಥದ ಮೇಲೆ ಕೂತು ಧನುಸ್ಸನ್ನು ಬಾಗಿಸಿ , ಬಾಣವನ್ನು ಯಾವುದೋ ಅಜಾತ ವೈರಕ್ಕೆ ಗುರಿಹೂಡಿ ನಿಂತಿರುವ ರಾಮ ಇತ್ತೀಚಿನ ಕಲ್ಪನೆ ! ಶ್ರೀ ರಾಮನನ್ನು ಹೀಗೆ ನಾನು ಕಲ್ಪಿಸಲೇ ಆರೆ. ಪತ್ನಿ, ತಮ್ಮಂದಿರು, ಗೆಳೆಯರು, ಆಳುಕಾಳುಗಳೊಂದಿಗೆ ಪೂಜೆ ಕೈಗೊಳ್ಳುವ ರಾಮ ನನ್ನ ದೃಷ್ಟಿಯಲ್ಲಿ ನಿಜವಾದ ಅರ್ಥದಲ್ಲಿ ಒಂದು ಕುಟುಂಬ ದೈವ. ರಾಮನ ಪೂಜೆ ಅಂದರೆ ಒಂದು ಕುಟುಂಬ ವ್ಯವಸ್ಥೆಯ ಆರಾಧನೆ!ಗಂಡ-ಹೆಂಡತಿ-ಮಗುವಿನ ಆಧುನಿಕ ವಿಭಿಜಿತ ಕುಟುಂಬವಲ್ಲ ಇದು!ತಮ್ಮಂದಿರು, ನಾದಿನಿಯರು, ಸೇವಕರು, ಗೆಳೆಯರು ಎಲ್ಲ ಒಟ್ಟಿಗೇ ನಗುನಗುತ್ತಾ ಸ್ಮಿತವದನರಾಗಿ ಒಗ್ಗೂಡಿರುವ ಅವಿಭಾಜ್ಯ ಕೂಡುಕುಟುಂಬ! ಈ ಕುಟುಂಬ ವಾನರ ಜಾತಿಯ ಆಂಜನೇಯ ಸುಗ್ರೀವರನ್ನು ಒಳಗೊಳ್ಳುತ್ತದೆ. ರಾಕ್ಷಸ ಮತದ ವಿಭೀಷಣನನ್ನೂ ಒಳಗೊಳ್ಳುತ್ತದೆ. ಭಲ್ಲೂಕ ಮತದ ಜಾಂಬವನಿಗೂ ಇಲ್ಲಿ ಗೌರವಾನ್ವಿತ ಸ್ಥಾನವಿದೆ.ಅಂದರೆ ರಾಮನ ಮನೆಯಲ್ಲಿ, ಮನೆಯ ಖಾಸಗಿ ಫಟದಲ್ಲಿ ಅಯೋಧ್ಯೆ ಮಾತ್ರ ಇಲ್ಲ. ಕಿಷ್ಕಿಂಧ, ಮತ್ತು ಸ್ವರ್ಣ ಲಂಕೆಯೂ ಇವೆ.ಆರ್ಯ, ದ್ರಾವಿಡ, ಗುಡ್ಡಗಾಡಿನ ಸಂಸ್ಕ್ರುತಿ ಎಲ್ಲ ಇವೆ. ಅದಕ್ಕೇ ಇದು ಆಕಾಶವನ್ನು ಒಳಗೊಂಡ ಆಲಯ ಅಂತ ಮತ್ತೆ ಮತ್ತೆ ನನಗೆ ಅನ್ನಿಸುತ್ತದೆ.ವಸುಧೈವಕ ಕುಟುಂಬ ಅಂದರೆ ಇದೇ ಇರಬಹುದೇ? ಬೇರೆ ಬೇರೆ ಸಮಾಜಗಳನ್ನು, ಬೇರೆ ಬೇರೆ ಜಾತಿಧರ್ಮಗಳನ್ನು ಒಪ್ಪಿಡಿಯಲ್ಲಿ ಹಿಡಿಯುವ ಹಸನ್ಮುಖಗಳ ಒಂದು ಅವಿಭಾಜ್ಯ ಕುಟುಂಬ! ರಕ್ತ ಸಂಬಂಧಿಗಳನ್ನು ಮಾತ್ರವಲ್ಲ , ಗೆಳೆಯರು , ಆಳು ಕಾಳುಗಳನ್ನೂ ಒಂದೇ ಪಂಕ್ತಿಯಲ್ಲಿ ಆಲಂಗಿಸಿಕೊಳ್ಳುವ ಕುಟುಂಬ ವ್ಯವಸ್ಥೆ!


ಬೇರೆ ದೇವರುಗಳ ದೇವಾಲಯಗಳಲ್ಲಿ ಇಂಥ ಚಿತ್ರವನ್ನು ನಾನು ನೋಡಿಲ್ಲ! ಗರ್ಭಾಂಕಣದಲ್ಲಿ ಪ್ರಧಾನ ದೈವ ಮಾತ್ರ ಆರಾಧಿತವಾಗುತ್ತದೆ ; ಪೂಜಾಕೈಂಕರ್ಯಗಳನ್ನು ಕೈಗೊಳ್ಳುತ್ತದೆ.ವಿಷ್ಣು ದೇವಾಲಯಗಳಲ್ಲಿ ಮೂರ್ತಿಯ ಎದೆಯಲ್ಲಾದರೂ ಲಕ್ಷ್ಮಿಯ ಸನ್ನಿಧಾನವಿರುತ್ತದೆ. ಲಿಂಗಾಕಾರಿಯಾದ ಶಿವನಂತೂ ನಿಜಕ್ಕೂ ಏಕಾಂಗಿ! ಗರ್ಭಾಂಕಣದ ಹೊರಗೆ ಮನೆಯ ಪೋರ್ಟಿಕೋದಲ್ಲಿ ಪಾರ್ಕ್ ಮಾಡಿರುವ ವಾಹನದಂತೆ ಬಸವಣ್ಣ ಕೂತಿದ್ದಾನೆ! ಅದು ಮನೆಯೊಳಗೆ ಮನೆಯೊಡೆಯ ಇದ್ದಾನೆ ಎಂಬುದಕ್ಕೆ ಗುರುತು!....ಏಕದೇವೋಪಾಸನೆಗೆ ರಾಮದೇವಾಲಯಗಳು ಒಂದು ಸಾಂಕೇತಿಕ ಅಸಮ್ಮತಿ ತೋರಿದ ಹಾಗೆ ಇವೆ. ಪುರಿಯ ಜಗನ್ನಾಥನ ಗುಡಿಯಲ್ಲಿ ಬಲರಾಮ, ಕೃಷ್ಣ, ಸುಭದ್ರೆಯರ ಪೂಜೆ ಒಟ್ಟಿಗೇ ನಡೆಯುತ್ತಿದೆ! ಅದನ್ನು ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು. ಅಣ್ಣ -ತಮ್ಮ -ತಂಗಿ..ಈ ಸೋದರ ಪ್ರೇಮದ ಆರಾಧನೆ ಮೆಚ್ಚಬೇಕಾದ್ದೆ! ರಾಮನ ಗುಡಿಯಲ್ಲಿ ಇಡೀ ಕುಟುಂಬವೇ ಆರಾಧ್ಯದೈವವಾಗಿರುತ್ತಾ, ಬಹಳ ಹಿಂದೆಯೇ ಒಂದು ಹೊಸ ಮೌಲ್ಯವನ್ನು ನಮ್ಮ ಹಿರೀಕರು ಎತ್ತಿಹಿಡಿದಿದ್ದಾರೆ! ಅಣ್ಣ ತಮ್ಮಂದಿರ ಜಗಳವೇ ಮುಖ್ಯ ಸಂಘರ್ಷದ ವಿಷಯವಾಗಿರುವ ಮಹಾಭಾರತದ ಕಥೆ ನೆನಪಾಗುತ್ತಿದೆ. ಪಾಂಡವರು ಕೌರವರು ಹೀಗೆ ಒಟ್ಟಿಗೇ ಆರಾಧಿತವಾಗುವ ಚಿತ್ರ ಅನೂಹ್ಯವಾದುದು. ಇಂಥ ಚಿತ್ರವೊಂದನ್ನು ಕುಮಾರವ್ಯಾಸಭಾರತದಲ್ಲಿ ಕೃಷ್ಣನೇನೋ ಒಂದು ಕನಸು ಎಂಬ ಹಾಗೆ ನಮ್ಮ ಕಣ್ಣಮುಂದೆ ಚಿತ್ರಿಸುತ್ತಾನೆ! ಉದ್ಯೋಗ ಪರ್ವದಲ್ಲಿ ಅಂಥ ಒಂದು ಚಿತ್ರ ಬರುತ್ತದೆ. ಅದು ಕರ್ಣಭೇದನ ಸಂದರ್ಭ.ಒಂದು ವೇಳೆ ಕರ್ಣ ಪಾಂಡವರ ಪಕ್ಷಕ್ಕೆ ಬಂದರೆ ಪಾಂಡವರು ಹಿರಿಯಣ್ಣ ಎಂದು ಅವನನ್ನು ಗೌರವಿಸುತ್ತಾರೆ. ದುರ್ಯೋಧನ ಕರ್ಣನ ಪ್ರಾಣ ಮಿತ್ರನಾದ ಕಾರಣ ಅವನು ರಾಜ್ಯವನ್ನು ಕರ್ಣನಿಗೇ ಒಪ್ಪಿಸುತ್ತಾನೆ. ಕುರುಕ್ಷೇತ್ರ ಯುದ್ಧವೇ ನಡೆಯುವುದಿಲ್ಲ. ಆಗ ಅವರೆಲ್ಲಾ ಒಟ್ಟಿಗೇ ಕೂತ ಚಿತ್ರ ಹೇಗಿರುತ್ತದೆ?

ಕೃಷ್ಣ ವರ್ಣಿಸುತ್ತಾನೆ :


ಎಡದ ಮೈಯಲಿ ಕೌರವೇಂದ್ರರ

ಗಡಣ. ಬಲದಲಿ ಪಾಂಡುತನಯರ

ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು

ನಡುವೆ ನೀನೋಲಗದಲೊಪ್ಪುವ ಕಡುವಿಲಾಸವ ಬಿಸುಟು ಕುರುಪತಿ

ನುಡಿಸೆ ಜೀಯ ಹಸಾದವೆಂಬುದು ಕಷ್ಟನಿನಗೆಂದ

ಕೃಷ್ಣ ಕೊಡುವ ಈ ಕನಸಿನ ಚಿತ್ರ ಕರ್ಣನಿಗೆ ಅಪ್ರಿಯವಾದುದು. ಕೃಷ್ಣ ಕೂಡ ಈ ಕನಸು ಒಡೆಯಲಿಕ್ಕೇ ಹೊರಟವನು. ಅದು ಬೇರೆ ವಿಷಯ . ಆದರೆ ನನ್ನ ಮನಸ್ಸಿಗೆ ಹಿಡಿಸಿದ್ದು ಈ ಚಿತ್ರ ಮತ್ತು ರಾಮನ ಕುಟುಂಬಚಿತ್ರಕ್ಕೂ ಇರುವ ಸಾಮ್ಯ ಮತ್ತು ವೈಷಮ್ಯದ ಹೊಳಹು.ಮಹಾಭಾರತ ಇಂಥ ಒಂದು ಚಿತ್ರ ಅಸಾಧ್ಯ ಎನ್ನುತ್ತದೆ. ಏಕೆಂದರೆ ಯಾವುದೇ ಗದ್ದುಗೆಯಲ್ಲೂ ಇಬ್ಬರು ಕೂಡಲು ಅಸಾಧ್ಯ ಎನ್ನುತ್ತದೆ ಮಹಾಭಾರತ. ರಾಮಾಯಣ ಒಂದು ಗದ್ದುಗೆಯಲ್ಲಿ ನಾವೆಲ್ಲಾ ಒಟ್ಟಿಗೇ ಮಂದಸ್ಮಿತದೊಂದಿಗೆ ಆಸೀನರಾಗುವುದು ಸಾಧ್ಯ ಎನ್ನುತ್ತದೆ.


ಹಾಗೆ ನೋಡಿದರೆ ರಾಮನಿಗೆ ಗದ್ದುಗೆ ಅನಿವಾರ್ಯ ಎನ್ನಿಸಿಯೇ ಇಲ್ಲ. ಭರತನಿಗೆ ಎಷ್ಟು ಸುಲಭವಾಗಿ ಗದ್ದುಗೆಯನ್ನು ಬಿಟ್ಟುಕೊಟ್ಟು ವನವಾಸಕ್ಕೆ ಅವನು ಸಿದ್ಧನಾಗುತ್ತಾನೆ! ಹದಿನಾಲಕ್ಕು ವರ್ಷದ ಅವಧಿಯಲ್ಲಿ ಒಮ್ಮೆಯಾದರು ಸೀತೆಯಾಗಲೀ ರಾಮನಾಗಲಿ ಅಯೋಧ್ಯೆಯ ರಾಜಕಾರಣದ ಬಗ್ಗೆ ಚಿಂತಿಸುವುದಿಲ್ಲ. ಮಹಾಭಾರತದಲ್ಲಿ ಪಾಂಡವರನ್ನು ನೋಡಿ...!ಸದಾ ಅವರಿಗೆ ಹಸ್ತಿನಾವತಿಯ ಗದ್ದುಗೆಯದೇ ಚಿಂತೆ. ಸದಾ ಕಾಡುವ ಬೆಂಕಿಯ ನೆನಪು ಅದು. ಅದಕ್ಕೆ ಕೊಂಚ ಬೂದಿ ಮುಸುಕಿದರೂ ಅದನ್ನೂದಿ ಊದಿ ಗಾಳಿ ಹಾಕುವ ದ್ರೌಪದಿ!ಈ ಗಾಳಿಬೆಂಕಿಯ ಅಪವಿತ್ರ ಮೈತ್ರಿಯನ್ನು ಅದೆಷ್ಟು ಕೀರ್ತಿಸುತ್ತದೆ ಮಹಾಭಾರತ. ರನ್ನನ ಗದಾಯುದ್ಧ ಹೇಳುತ್ತದೆ: ದ್ರೌಪದಿ ಬೆಂಕಿಯ ಮಗಳು. ಭೀಮ ಗಾಳಿಯ ಮಗ. ಅವರಿಬ್ಬರೂ ಕೂಡಿದಾಗ ಕೌರವ ವಂಶವನ್ನು ದಹಿಸದೆ ಬಿಡುತ್ತಾರೆಯೇ? ದಾಂಪತ್ಯಕ್ಕೆ ಎಂತಹ ವಿಷಮ ರೂಪಕ. ಮನುಕುಲದ ತಂದೆ ತಾಯಿ ನಾವು ಆಗೋಣ ಎಂದು ಆಧುನಿಕ ಕನ್ನಡ ಕಾವ್ಯ ಹಪಹಪಿಸುತ್ತಿದೆ. ಮನುಕುಲದ ನಾಶ ಮಾಡುವ ಗಾಳಿಬೆಂಕಿಯ ಸಂಗಮ ನಾವಾಗೋಣ ಎಂದು ರನ್ನನ ಮಹಾಭಾರತದ ನಾಯಕ ನಾಯಕಿ ಆಶಿಸುತ್ತಾರೆ!


ರಾಮಾಯಣದ ಭರತನ ಬಗ್ಗೆ ಯೋಚಿಸೋಣ. ಎಂಥ ಮಹಾತ್ಮ ಅವನು! ಅಣ್ಣ ಬಿಟ್ಟುಕೊಟ್ಟರೂ ಗದ್ದುಗೆ ತನಗೆ ಬೇಡ ಅನ್ನುವವನು ಅವನು. ಗದ್ದುಗೆಯಮೇಲೆ ಅಣ್ಣನ ಪಾದುಕೆಗಳನ್ನು ಇಟ್ಟು ಪೂಜಿಸಿದವನು.ಇದು ಆದಿಪುರಾಣದ ಬಾಹುಬಲಿಯ ನಿಲುವಿಗಿಂತ ಭಿನ್ನವಾದುದು! ನನಗೆ ಗದ್ದುಗೆ ಬೇಡ, ಪ್ರಜಾಪರಿಪಾಲನೆಗೆ ಗದ್ದುಗೆಯ ಅಗತ್ಯವಿಲ್ಲ ಎನ್ನುತ್ತಾನೆ ಭರತ! ತನ್ನ ತಾಯಿ ಸಿಂಹಾಸನ ತನಗೆ ದೊರಕಿಸಲು ಮಾಡಿದ ಎಲ್ಲ ಯತ್ನಗಳಿಗೂ ಭರತನೇ ಪ್ರಥಮ ವಿರೋಧಿ! ಆಧುನಿಕ ಭಾರತದಲ್ಲಿ ಅಪರೂಪ ಅಲ್ಲವೇ ಇಂಥ ದೃಶ್ಯ?ತಾಯಿ ತಂದೆ ಮಕ್ಕಳಿಗೆ ಅಧಿಕಾರದ ಹಸ್ತಾಂತರವನ್ನು ಮಾಡಲಿಕ್ಕೆ ಎಂತೆಂಥಾ ರಾಜಕೀಯ ಚದುರಂಗದಾಟದಲ್ಲಿ ತೊಡಗುವುದಿಲ್ಲ ಈವತ್ತು? ಅಧಿಕಾರವನ್ನು ಧಿಕ್ಕರಿಸಿ ಹೊರಡುವ ರಾಮ , ಗದ್ದುಗೆ ಕೈನಿಲುಕಿನಲ್ಲಿದ್ದರೂ ಅದರ ಕಡೆ ಕಡೆಗಣ್ಣೂ ಹಾಯಿಸದ ಭರತ ಬಹಳ ದೊಡ್ಡ ಮೌಲ್ಯಗಳನ್ನು ಪ್ರತಿನಿಧಿಸುವಂತಿದ್ದಾರೆ!


ಕುಟುಂಬಸಂಘಟನೆ ರಾಮಾಯಣ ಎತ್ತಿಹಿಡಿಯುವ ಮೌಲ್ಯವಾಗಿದೆ. ಕುಟುಂಬ ವಿಘಟನೆ ಅನಿವಾರ್ಯವೆನ್ನುವುದನ್ನು ಮಹಾಭಾರತ ಧ್ವನಿಸುತ್ತಿದೆ. ಮಹಾಭಾರತದಲ್ಲಿ ಕೃಷ್ಣನಿಗೆ ನಡೆಯುವುದು ಅಗ್ರಪೂಜೆ.ಒಬ್ಬನನ್ನೇ ಒಂದು ಗದ್ದುಗೆಯಲ್ಲಿ ಕೂಡಿಸಿ ನಡೆಸುವ ಆರಾಧನೆ. ರಾಜಸೂಯಯಾಗದಲ್ಲಿ ಎಂತೆಂಥ ಉತ್ಪಾತಗಳಿಗೆ ಈ ಅಗ್ರಪೂಜೆ ಕಾರಣವಾಯಿತು ನೋಡಿ! ಪೂಜಾಗೃಹದಲ್ಲೇ ಕೃಷ್ಣನ ವೈರಿಯಾದ ಶಿಶುಪಾಲನ ಕೊಲೆಯೇ ಆಗಿಹೋಯಿತು! ಆ ಶಿಶುಪಾಲ ಮತ್ಯಾರೂ ಅಲ್ಲ. ಕೃಷ್ಣನ ಸೋದರತ್ತೆಯ ಮಗ. ಇಡಿ ಮಹಾಭಾರತವೇ ಬಂಧುವಿನಾಶದ ಕಥೆಯಾಗಿದೆ. ಕುರುಕ್ಷೇತ್ರದಲ್ಲಿ ಕೂಡ ಹೊರಗಿನವರು ಯಾರೂ ಇಲ್ಲ. ಅಲ್ಲಿ ನಂಟರು ಪರಸ್ಪರ ಹೊಡೆದಾಡಿಕೊಂಡು ಸತ್ತಿದ್ದಾರೆ. ಹಿರಿಯರ, ತಾಯಿ ತಂದೆಯರ, ಗುರುಗಳ ಮಾತನ್ನು ಅಲ್ಲಿ ಹೊಸಪೀಳಿಗೆಯ ಜನ ಕೇಳುತ್ತಿಲ್ಲ. ದುರ್ಯೋಧನ ತನಗೆ ತೋರಿದ್ದನ್ನೇ ಮಾಡುವವನಾಗಿದ್ದಾನೆ. ತಂದೆ ತಾಯಿ ಅಜ್ಜ ಗುರು ಯಾರ ಮಾತನ್ನು ಕೇಳಿದ್ದರು ಯುದ್ಧದ ವಿನಾಶ ತಪ್ಪುತ್ತಿತ್ತು!


ಪಿತೃವಾಕ್ಯಪರಿಪಾಲನೆ ಎನ್ನುವುದು ರಾಮನಿಗೆ ಅನುಲ್ಲಂಘನೀಯವಾದ ಜೀವ ಮೌಲ್ಯವಾಗಿದೆ. ತಾಯಿಯ ಬಗ್ಗೆ ಅವನಿಗೆ ಅದೆಂಥಾ ಗೌರವ. ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಶ್ರೇಷ್ಠವಾದುದು ಅನ್ನುವವನು ಅವನು.ಕುಟುಂಬ ಎನ್ನುವ ವಿಶ್ವವನ್ನು ರಾಮಪ್ರಜೆ ಕೈವಾರಿಸುತ್ತದೆ. ಹಾಗೇ ವಿಶ್ವ ಎನ್ನುವ ಕುಟುಂಬವನ್ನು. ಅದಕ್ಕೇ ರಾಮ ಎಂದರೆ ಆಲಯವನ್ನು ಹೊಕ್ಕ ಆಕಾಶ ಎನ್ನುತ್ತೇನೆ ನಾನು! ರಾಮನದು ಬದ್ಧವ್ಯಕ್ತಿತ್ವ ಎನ್ನಲಾರೆ! ರಾಮನದು ಮೌಲ್ಯಬದ್ಧ ವ್ಯಕ್ತಿತ್ವ ಎನ್ನುತ್ತೇನೆ. ಅದಕ್ಕೆ ವಿರುದ್ಧವಾಗಿರುವ ರಾಮಜೀವನದ ಎಳೆಗಳನ್ನು ಈಗ ಪುನರ್ನೇಯ್ಗೆಗೆ ಒಳ ಪಡಿಸಿ ಪುರುಷೋತ್ತಮ ತತ್ವವನ್ನು ಮತ್ತೆ ಈ ಕಾಲಕ್ಕೆ ತಕ್ಕ ರೂಪಕವಾಗಿ ಕಡೆದುಕೊಳ್ಳ ಬೇಕಾಗಿದೆ.


ನನ್ನ ಅಳಿಲು ರಾಮಾಯಣದಲ್ಲಿ ರಾಮ ತನಗೆ ಸೇತುಬಂಧನ ಕಾರ್ಯದಲ್ಲಿ ಸಹಕರಿಸಿದ ಅಳಿಲಿನ ಪ್ರೀತಿಗೆ ಸೋತು ನಿನಗೆ ಬೇಕಾದ ವರ ಕೇಳು ಕೊಡುತ್ತೇನೆ ಅನ್ನುತ್ತಾನೆ. ಆಗ ಅಳಿಲುಮರಿ ನೀನು ನನ್ನ ಜೋಡಿ ಕಬಡಿ ಆಡುತ್ತೀಯ ಎಂದು ಕೇಳುತ್ತದೆ! ರಾಮ ಆಗ ನಕ್ಕು ಆಹಾ ಎಂಥಾ ಬೇಡಿಕೆ...ಎನ್ನುತ್ತಾ ತನ್ನ ಬತ್ತಳಿಕೆ ಬಿಲ್ಲು ಲಕ್ಷ್ಮಣನಿಗೆ ಹಿಡಿದುಕೊಳ್ಳಲು ಕೊಟ್ಟು ಅಳಿಲಿನೊಂದಿಗೆ ಕಬಡಿ ಆಡಲು ಸಿದ್ಧನಾಗುತ್ತಾನೆ! ಬಿಲ್ಲು ಬಾಣ ಮೈಯಿಂದ ಇಳಿಸಿದಾಗ ಎಷ್ಟು ಹಗುರ ಆಗುತ್ತದೆ ಅವನಿಗೆ . ಆಹಾ ಈಗ ಹಗುರಾಯಿತು ಅನ್ನುತ್ತಾನೆ. ಕೋದಂಡವನ್ನು ಕೆಳಗಿಟ್ಟು ಅಳಿಲನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ರಾಮ ನನ್ನ ಆದರ್ಶವಾಗಿದ್ದಾನೆ!


ರಾಮನ ಫೋಟೋದಲ್ಲಿ ಈಗ ಒಂದು ಖಾಲಿಬಿದ್ದ ಜಾಗವಿದೆ.ಅದು ಶ್ರೀರಾಮನ ಹೆಗಲು. ಆ ಹೆಗಲಿನ ಮೇಲೆ ಹಾವಿನ ಹೆಡೆಯ ಹಾಗೆ ಬಾಗಿರುವ ಕೋದಂಡದ ಕೊಂಕು ಕಾಣುತ್ತಿದೆ. ಫೋಟೋಗ್ರಾಫರ್ ಹೇಳುತ್ತಾನೆ. ಸರ್...ದಯವಿಟ್ಟು ಆ ಬಿಲ್ಲನ್ನು ತೆಗೆದು ಕೆಳಗಿಡಿ...ಅಲ್ಲಿ ಈ ಪುಟ್ಟ ಅಳಿಲುಮರಿ ಕೂಡಿಸಿಕೊಳ್ಳಿ...!


ಕುಟುಂಬಪೂಜೆಯ ಮೂರ್ತರೂಪವಾದ ರಾಮಸಂಸಾರದ ಪರ್ಯಾಯ ಪ್ರತೀಕವಾಗಿ ಈಗ ನಮ್ಮ ಭಾರತದ ಚಿತ್ರವನ್ನು ದಯವಿಟ್ಟು ಕಲ್ಪಿಸಿಕೊಳ್ಳಿ. ನಡುವೆ ತಾಯಿ ಭಾರತಿ. ಮಕ್ಕಳು ಮೊಮ್ಮಕ್ಕಳು ಬಂಧುಗಳು ಬಳಗದವರು ಬೀಗರು ಬಿಜ್ಜರು ಹೊರದೇಶದ ಅತಿಥಿಗಳು...ಸ್ವಲ್ಪ ನಗಿ ಪ್ಲೀಝ್...ಇದು ಸರ್ವ ಜನಾಂಗದ ಶಾಂತಿಯ ತೋಟ...ಇದೇ ನಮ್ಮ ಗ್ರೂಪ್ ಫೋಟೋದ ಶೀರ್ಷಿಕೆ ಕೂಡ...

Tuesday, August 4, 2009

ಪರಸ್ಪರ

ನನ್ನ ಹೊಸ ಕವಿತೆಗಳನ್ನ, ಮತ್ತು ಆಗಾಗ ಬರೆವ ಲೇಖನಗಳನ್ನ ಸಾಹಿತ್ಯಾಭಿಮಾನಿಗಳ ಗಮನಕ್ಕೆ ತರಬೇಕೆಂಬ ಅಪೇಕ್ಷೆಯಿಂದ "ಪರಸ್ಪರ" ಪ್ರಾರಂಭವಾಗಿದೆ. ಕಾವ್ಯಾಭಿಮಾನಿಗಳು ತಮ್ಮ ಸ್ಪಂದನ ತಿಳಿಸಿದರೆ ತುಂಬ ಸಂತೋಷವಾಗುವುದು. ಉತ್ತರಾಯಣ ಪದ್ಯವನ್ನು ನನ್ನ ಅನಿವಾಸೀಭಾರತೀಯ ಗೆಳೆಯರು ಓದಬೇಕೆಂದು ಅಪೇಕ್ಷೆ ಪಟ್ಟರು. ಅವರಿಗೆಲ್ಲ ಕೃತಿಯನ್ನು ಕಳಿಸುವುದು ಸಾಧ್ಯವಾಗಲಿಲ್ಲ. ಈಗ ಪರಸ್ಪರದ ಮೂಲಕ ನನ್ನ ದೂರದ ಗೆಳೆಯರಿಗೂ ಈ ಕವಿತೆ ಓದಿಸುವುದು ಸಾಧ್ಯವಾಗುತ್ತಿದೆ. ನನ್ನ ಪತ್ನಿ ಅಕಾಲಿಕ ಮರಣಕ್ಕೆ ತುತ್ತಾದಾಗ ಬರೆದ ಪದ್ಯ ಇದು. ಬದುಕು ಮತ್ತು ಸಾವಿನ ಬಗ್ಗೆ ಚಿಂತಿಸುವ ಈ ಪದ್ಯದ ಬಗ್ಗೆ ನನ್ನ ಹೊಸ ಮಿತ್ರರ ಅನಿಸಿಕೆ ತಿಳಿಯಲು ಕುತೂಹಲವಿದೆ.-ಎಚ್.ಎಸ್.ವಿ.

Saturday, August 1, 2009

ಉತ್ತರಾಯಣ


ಬತ್ತಿ ಸುಟ್ಟು, ಎಣ್ಣೆ ತೀರಿ, ಉದ್ವಿಗ್ನದೀಪ ನಿಷ್ಪಂದ ಶಾಂತ.
ಮತ್ತೆ ಬತ್ತಿ ಪೋಣಿಸಿ, ಎಣ್ಣೆ ರೆಡಿಮಾಡಿ, ದೀಪ ಹಚ್ಚಿಟ್ಟಾಗ
ಖಾಲಿ ಗೋಡೆಯ ನಡುವೆ ಒಂದು ನಿಶ್ಶಬ್ದ ನಿರುಂಬಳ ನಗೆ.
ದೀಪಶಿಖಿಯಿಂದೇಳುತ್ತಿದೆ ಸುರುಳಿ ಸುರುಳಿ ಕಪ್ಪು ಹೊಗೆ

ಕಣ್ಣಿಂದ ನೀರು ಸುರಿಯುತ್ತೆ ತನಗೆ ತಾನೇ, ಗಂಟಲಲ್ಲಿ
ಬೆಂಕಿ ಉರಿಯುತ್ತೆ ತನಗೆ ತಾನೇ, ಶುರುವಾಗಿದೆ ಬಟ್ಟಂಬಯಲಲ್ಲಿ
ನಿರಂತರ ನೆಪ್ಪಿನ ನಾಟಕ...ಶಬ್ದದ ಹಂಗಿಲ್ಲದ ಮಾತು;
ಬಣ್ಣದ ಹಂಗಿಲ್ಲದ ರೂಪು; ಗಾಳಿಯ ಹಂಗಿಲ್ಲದ ಉಸಿರಾಟ.

ಈಗ ನನ್ನ ನಾಟಕದಲ್ಲಿ ನಾನೇ ಅಭಿನೇತೃ, ನಾನೇ ಪ್ರೇಕ್ಷಕ.
ನೋಡುತ್ತಿದ್ದೇನೆ ನನ್ನನ್ನ ನಾನೇ...ಮುಗಿಲಿಲ್ಲದೆ ಮಳೆ ಸುರಿಯುತ್ತಿದೆ...
ಗಾಳಿಯಿಲ್ಲದೆ ಸೆರಗು ಹಾರುತ್ತಿದೆ...ಚಂದ್ರನಿಲ್ಲದ ಬೆಳದಿಂಗಳಲ್ಲಿ
ನಗುತ್ತಿದ್ದಾಳೆ ನನ್ನಾಕೆ-ಯಾವ ಗುರಿಯೂ ಇಲ್ಲದ ಕಟ್ಟಾ ಖಾಸಗಿ ನಗೆ.

ಕನ್ನಡಿಯಾಚೆ ಪ್ರತಿಬಿಂಬ...ಹಿಡಿಯಲು ಕೈ ಚಾಚಿದರೆ
ಅಡ್ಡನಿಂತಿದೆ ಬೂತಗನ್ನಡಿ...ಕನ್ನಡಿಯನ್ನು ಒಡೆಯುವಂತಿಲ್ಲ
ಪ್ರತಿಬಿಂಬವನ್ನು ಹಿಡಿಯುವಂತಿಲ್ಲ...ಕನ್ನಡಿಯ ಸುತ್ತಾ
ಕತ್ತಲು...ಕನ್ನಡಿಯೊಳಗಿದೆ ಬೆಳಕು -ದೀಪದ ಕಣ್ಣು ಧಿಗ್ಗನುರಿಯುತ್ತ.



ಪಶ್ಚಿಮವಾಹಿನಿಯಲ್ಲಿ ನಡುಹಗಲ ಬಿಸಿಲಲ್ಲೂ ತಣ್ಣಗೆ
ಕೊರೆಯುವ ನದಿ. ಮೆಲ್ಲಗೆ ಕಾಲೂರಿ ನದಿಗಿಳಿದಾಗ
ಗದಗುಟ್ಟುತ್ತಿದೆ ಇಡೀ ಶರೀರ...ಗಂಟು ಬಿಚ್ಚಿ
ಕುಡಿಕೆಯಲ್ಲಿದ್ದ ಕನಕಾಂಬರಿ, ಮಲ್ಲಿಗೆ ತೆಗೆದು ಮೆಲ್ಲಗೆ

ಅಲೆಯ ಮೇಲಿಟ್ಟಾಗ ಹೊತ್ತುಕೊಂಡೊಯ್ಯುತ್ತಿವೆ
ಹೆಗಲಬದಲಾಯಿಸುತ್ತ ಓಡೋಡಿ ಬರುವ ಅಲೆ.
ಬೆಳ್ಳಗೆ ಹುಡಿ ಹುಡಿ ಮೂಳೆತುಂಡ
ಕನಸೊಡೆಯದಂತೆ ಮೆಲ್ಲಗಿಳಿಸಿ ನಿದ್ದೆಗೆ
ನೀರಲ್ಲಿ ಡಬಕ್ಕನೆ ಅದ್ದಿದರೆ ತಲೆ, ಬರೀ ಕತ್ತಲೆ

ಕಿವಿಯೊನ್ನೊತ್ತುವ ಪ್ರವಾಹದ ಸದ್ದು. ತಿರುಗಿ
ತಲೆ ಎತ್ತಿದಾಗ ಕಡಲ ಕಡೆ ಯಾನ ಹೊರಟಿವೆ
ಅಸಂಖ್ಯ ಪುಟ್ಟ ಪುಟಾಣಿ ಹಾಯಿ ದೋಣಿ. ತನ್ನ ಗುರಿಯತ್ತ
ಹರಿವ ಹೊಳೆಯಲ್ಲಿ ಮೆಲ್ಲಗೆ
ಕರಗುತ್ತಾ ಕರಗುತ್ತಾ....


ಕಣ್ಣಿದೆ; ಕಾಣಿಸುತ್ತಿಲ್ಲ. ಕಿವಿಯಿದೆ; ಕೇಳಿಸುತ್ತಿಲ್ಲ.
ನಾಲಗೆಯಿದೆ; ನುಡಿಯುತ್ತಿಲ್ಲ. ನೀನಿದ್ದೀಯ-ಇಲ್ಲದ ಹಾಗೆ.
ಕ್ರಿಯಾಹೀನ ಕಾರ್ಯವ್ಯವಸ್ಥೆಯ ಮುಚ್ಚಿಟ್ಟ ಸಂಪುಟವೇ...
ನೀನು ತೆರೆದ ಕಣ್ಣಿಂದ ಮತ್ತೆ ನೋಡಬಹುದೆಂದು ಕಾಯುತ್ತಿರುವೆ.

ಯಾರೋ ಪರದೆ ಎಳೆಯುತ್ತಿದ್ದಾರೆ. ಮುಗಿಯಿತು ಸ್ವಾಮಿ ನಾಟಕ.
ನೀವಿನ್ನು ಹಿಡಿಯಿರಿ ಮನೆ ದಾರಿ. ಅಕ್ಕ ನೀನಿದ್ದಾಗಲೇ
ಬೆಕ್ಕು ಕೊಂಡು ಹೋಯಿತು. ನಾಕೂ ಮಂದಿ ಮಕ್ಕಳು, ಸೊಸೆಯಂದಿರು,
ಪಾಣಿಗ್ರಹಣ ಮಾಡಿದ ಪತಿ ಸುತ್ತಾ ನಿಂತಿರುವಾಗಲೇ ಹೋಗಿಬಿಟ್ಟೆ!

ಬಿದ್ದು ಹೋಗಿತ್ತು ಕಾಲು. ಕಾಲಕ್ಕಿಲ್ಲವೇ ಇಲ್ಲ ಕಾಲಿನ ಮರ್ಜಿ.
ಮಣ್ಣಲ್ಲಿ ಮೈಯೂರಿದ ಮೇಲೆ ಇದ್ದಲ್ಲೇ ವಿಶ್ವವಿಭ್ರಮಣೆ.
"ಏಳಿ ಊರು ಬಂತು" ಎಂದು ಹೇಳಲೇ ಇಲ್ಲ ನೀನು.
ನನಗೂ ಮೈಮರೆವೆ. ಅರ್ಧ ಪಂಚೆ ಸುತ್ತಿಕೊಂಡು ಹೆಂಡತಿ ಹೊರಟಾಗ ಹೊರಕ್ಕೆ,
ಗಂಡನಿಗಿನ್ನೂ ಮರಣಾಂತಿಕ ನಿದ್ದೆ.



ಬಾ ಬಾ ಕಪ್ಪು ಹಕ್ಕಿಯೇ...ನಿನಗೆ ಯಾವತ್ತೂ ಹೀಗೆ
ಅನ್ನವಿಟ್ಟು ಕಾಯ್ದಿರಲಿಲ್ಲ. ಆತಂಕದಿಂದ ಕುದಿಯುತ್ತಿದ್ದಾರೆ
ನೆರೆದ ಹತ್ತೂ ಸಮಸ್ತರು.
ಒಲ್ಲೆನೆನ್ನ ಬೇಡ...ಹೀಗೆ ನಿಷ್ಕರುಣೆಯಿಂದ ತಲೆಯೊನೆಯ ಬೇಡ.
ಕುಪ್ಪಳಿಸಿ ಕುಪ್ಪಳಿಸಿ ಹತ್ತಿರ ಬಂದು ಮತ್ತೆ ಮತ್ತೆ ಹಿಂದಕ್ಕೆ ಜಿಗಿಯ ಬೇಡ.

ಎಷ್ಟು ಕೂರಾಗಿದೆಯಲ್ಲ ನಿನ್ನ ಕಣ್ಣು. ಯಾವುದೋ ಘನಂದಾರಿ ಪಾರ್ಟಿ
ಯೆಂದು ಸುಳ್ಳು ಬಗುಳಿ ತಡವಾಗಿ ಬಂದಿದ್ದುಂಟು ಮನೆಗೆ. ಸದ್ಯ ನಿನಗೆ
ನಿದ್ದೆ ಬಂದಿದ್ದರೆ ಸಾಕು. ಮೆಲ್ಲಗೆ ಕಾರಿಂದಿಳಿದು ಬಂದಾಗ ಬಾಗಿಲಿಗೆ
ಕೂತೇ ಇದ್ದೀಯ ನೀನು ಕುರ್ಚಿಯಲ್ಲಿ ತೂಕಡಿಸುತ್ತಾ

ಟೀವಿಯಲ್ಲಿ ತನ್ನ ಪಾಡಿಗೆ ತಾನು
ನಡೆದಿದೆ ಅಳುಬುರುಕ ನಾಟಕ. ಕಣ್ಣಲ್ಲಿ ಹೀಗೆ ಚೂರಿ
ಬಚ್ಚಿಡಬಾರದು. ಬಾ ಬಾ ಕಪ್ಪು ಹಕ್ಕಿಯೇ...ಹೊಟ್ಟೆಕುದಿಯೊಂದಿಗೆ
ನಿನಗಾಗಿ ಕಾಯುತ್ತಿದ್ದೇವೆ...ಕ್ಷಮಿಸಿ ಸರ್ವಾಪರಾಧವನ್ನ ಮುಟ್ಟು ಮಿಟ್ಟಿಗೆ ಅನ್ನ.



ನಿರುಪಯುಕ್ತ ನಿನ್ನೀ ದೇಹ. ತಿನ್ನಲಿಕ್ಕಿಲ್ಲ, ಉಣ್ಣಲಿಕ್ಕಿಲ್ಲ
ಕೊಡಲಿಕ್ಕಿಲ್ಲ, ಪಡಲಿಕ್ಕಿಲ್ಲ. ಯಕೃತ್ತಿನ ವಿಕೃತಿಗೆ
ತುತ್ತು ಇಡೀ ಒಡಲು. ರಸಸರಸ್ಸಾಗಿ ಉನ್ಮುಖಸುಖೋನ್ಮಾದದಲ್ಲಿ
ತೇಲಿಸಿ ಮುಳುಗಿಸಿ ಸುಳಿಸುತ್ತಿ ತಳಕ್ಕೆಳೆದ ಇದೇ ದೇಹ ಈಗ
ತತ್ತರಸುವಡಿಗೆ ವ್ಯರ್ಥ ಭಾರ.



ಅಲ್ಲಲ್ಲ...
ನಿನ್ನ ಒಡಲೀಗ ಸೇವಾಕಾರ್ಯಕ್ಕೆ ತೆರೆದ
ಪವಿತ್ರಕ್ಷೇತ್ರ; ಮೆಲ್ಲಮೆಲ್ಲಗೆ ಕಾಲೊತ್ತುವೆ..ಕಣ್ಣಲ್ಲಿ
ತೇಲಿಹೋಗುವ ಕ್ಷಣನೆಮ್ಮದಿ ಅಲೆ ಹುಟ್ಟಿಸಿದ್ದೇ ಈ ಕೈಯ ಕೈಂಕರ್ಯ
ಇಗೋ ಹಿಡಿದ ತೊಡೆಯ ಸ್ನಾಯುಗೆ ನಿಷ್ಕಾಮದಿಂದ ಮೂವೊತ್ತಿಮೆತ್ತಿ

ಮೃದುವಾಗಿ ಆಡಿಸುವೆ ಕೈ, ಹಾಯೆನಿಸಿ ನಿರಾಳವಾಗುವ ಉಸಿರಾಟವಾಲಿಸುತ್ತಾ.
ಸ್ಪೂನಲ್ಲಿ ಗುಟುಕು ಗುಟುಕು ಗಂಜಿಯೂಡಿಸುತ್ತಾ ತುಟಿಯೊದ್ದೆಯಲ್ಲಿ ಮೆಲ್ಲಗೆ
ಅರಳಿ ಬಾಡುವ ನಗೆಯೆಸಳು ನೋಡುವೆ. ನಿರುಪಯುಕ್ತವಲ್ಲ ಈ ದೇಹ.
ಸೇವಾಯೋಗಕ್ಕೆ ಈಗಷ್ಟೇ ನನ್ನಿಷ್ಟದೈವ ತೆರೆದ ಸೇವಾಕ್ಷೇತ್ರ. ಮೆಲ್ಲಗೆ

ಬಿಗಿಮಾಡಿ ತಿರುಪು, ವೀಣೆಯೆತ್ತಿ ತೊಡೆಮೇಲಿಟ್ಟು, ನಿಧಾನ ಮಿಡಿದಾಗ ತಂತಿ,
ತುಟಿ ಮಧ್ಯೆ ಸದ್ದಿಲ್ಲದೆ ತಲೆಯೆತ್ತುವ ನಿರಾಕಾರ ಓಂಕಾರವಾಲಿಸುವೆ ಕಿವಿಗೊಟ್ಟು.



ಕೈಯಲ್ಲಿದೆ ಹತ್ತು ವರ್ಷಗಳ ಹಿಂದೆ ತೆಗೆಸಿದ್ದ ಫೋಟೊ.
ಕೇಮರಾ ಎಂದರೆ ಮೊದಲಿಂದಲೂ ವಿಚಿತ್ರ ಭಯ ನಿನಗೆ.
ನಗುತ್ತಿದ್ದಾಕೆ ಸಹಜ ಇದ್ದಕ್ಕಿದ್ದಂತೆ ಗುಮ್ಮಾಗಿದ್ದೀ.
ಸ್ಮೈಲ್ ಪ್ಲೀಸ್ ಅಮ್ಮಾ...ಬಲವಂತವಾಗಿ ಎಳೆದು ತಂದ

ನಗುವಿನ ಮಸ್ಲಿನ್ ಫರದೆ ಕ್ಷಣಾರ್ಧದಲ್ಲಿ ಕೆಳಕ್ಕೆ
ಜಾರಿ ಮತ್ತದೇ ಜೋಲು ಮುಖ...ಈಗ ಕೋತಿ ಕುಣಿಯುತ್ತಾನೆ
ಕೊನೆ ಮಗ...ತಾಯಿದೇವಿ ಕೇಮರಾ ಮರೆತು ಥಟ್ಟನೆ ನಕ್ಕದ್ದು
ಶಾಶ್ವತ ಉಳಿದು ಬಿಟ್ಟಿದೆ ತೊಳೆದಿಟ್ಟ ಫಟದಲ್ಲಿ

ಸತ್ತಮೇಲೆ ಸತ್ತವರ ಫಟದ ಅರ್ಥವೇ ಬದಲಾಗಿ ಹೋಗಿ
ದೆ ಶಿವಶಿವಾ! ಹಳೆಯ ಹಕ್ಕಿ ಹಾರಿ ಹೊಸದೊಂದು ಹಕ್ಕಿ ಫರ್ರನೆ
ಎಗರಿ ಬಂದು ಕೂತಿದೆ ಕಟ್ಟಿನ ಮೇಲೆ, ಈಗ ಬಿಟ್ಟೂ ಬಿಡದ ಮಳೆ. ಕಾಲ ಕೆಳಗೆ
ನಡೆದಾಡುವ ರೋಡಲ್ಲೇ ತಣ್ಣಗೆ ಹರಿದುಹೋದಂತೆ ಅಂಕುಡೊಂಕು ಹೊಳೆ.



ಆವತ್ತು ಮಳೆಮಿಂಚಿನಿರುಳು.ಯಾವತ್ತಿನಂತೆ
ಹೋಗಿತ್ತು ವಿದ್ಯುತ್ತು.ತೊಯ್ದು ತೊಪ್ಪಡಿಯಾಗಿ
ಮನೆಗೆ ಬಂದಾಗ ಏನೇನೂ ಕಾಣುತ್ತಿಲ್ಲ.
ಹೇಗೊ ಬಾಗಿಲ ತೆಗೆದು ಒಳಗೆ ಬಂದೆ .

ಕತ್ತಲ ಮುಸುಕಲ್ಲಿ ಸೋಫಕುರ್ಚಿಗಳೆಲ್ಲ ಗಪ್ಪುಚುಪ್ಪು.
ಇನ್ನು ಕಡ್ಡಿಪೆಟ್ಟಿಗೆಗಾಗಿ ದರಿದ್ರ ಪತ್ತೆದಾರಿ
ಹಾಳಾದದ್ದು ಸಿಗಲಿಲ್ಲ.
ಸಿಡಿಮಿಡಿ.
ರಜ ಎಂದು ಮಕ್ಕಳಿಗೆ
ಸಂಜೆಯೇ ಹಿಡಿದಿದ್ದೆ
ಚಿತ್ರದುರ್ಗದ ರೈಲು.
ಚಡಪಡಿಕೆ ಈಗ.
ಹೋಗಿದ್ದರಾಗಿತ್ತು ನಾಳೆಯೋ ನಾಡಿದ್ದೊ...
ಅಥವ ಮುಂದಿನ ವಾರ.
ಕದ್ಡಿಪೆಟ್ಟಿಗೆಗಾಗಿ ತಡಕಾಟ ನಡೆದೆ ಇದೆ.

ಅರೆ ಅರೆ! ಅಡುಗೆ ಮನೆ ಕಿಡಕಿಯಲ್ಲಿಡುತ್ತಿದ್ದೆಯಲ್ಲವೆ ಅದನ್ನ?
ಅಲ್ಲೆ ಕೆಳಗಡೆ ಹಣತೆ.
ಕಡ್ಡಿಗೀರಿದೆ.

ದೀಪವಷ್ಟೇ ಮೊದಲು ಕಂಡದ್ದು

ಆಮೇಲೆ ತಡವಾಗಿ

ಪ್ಲಾಸ್ಕು
ಬಿಸಿ ಅಡುಗೆ
ಕಾಸಿದ ಹಾಲು
ಹಾಳು ಕಳಕಳಿ ಅಕ್ಕರಾಸ್ತೆ ಕವಿತೆಯ ಸಾಲು.



ಇದು ಹರಳ ಬಳೆ. ಹವಳದ ಹಾರವಿದು. ಇದು
ಚೈನು. ವಂಕಿಯುಂಗುರವಿದು. ಇದು ಸವೆದು ಮಾಸಿದ ಕಾಲ್ಗೆಜ್ಜೆ.
ಇದು ಹರಿದ ಮುತ್ತಿನ ಹಾರ. ಇವು ಚೂರು ಪಾರು
ಮುರಿದಾಭರಣ ತುಣುಕು. ಹಂಚಿಬಿಡಿ ಸೊಸೆಯರಿಗೆ.

ಇದು ಧಾರೆ ಸೀರೆ. ಇದಿದೆಯಲ್ಲಾ ಇದು ಮಗ ಮದುವೆಗುಡಿಸಿದ್ದು.
ಇದು ಹೊಸಮನೆಯ ಗೃಹಪ್ರವೇಶದಲ್ಲಿ ಬಂದದ್ದು
ತೌರಿಂದ. ಇದು ನಿಮಗೂ ಗುಟ್ಟು ಬಿಟ್ಟು ಕೊಡದೆ
ಕಾಸಿಗೆ ಕಾಸು ಕೂಡಿಕ್ಕಿ ಕೊಂಡ ನಕ್ಕಿ ಮಿರುಗಿನ ತಿಳಿ ಗುಲಾಬಿ

ಜರತಾರಿ ಪತ್ತಲ. ಈ ಎಲ್ಲ ಕಳಚಿ ಬೆತ್ತಲೆ ನಿಂತ
ನಿರಾಭರಣ ಸುಂದರಿ ನಾನು. ಜಗ್ಗುವ ಬೊಜ್ಜು. ಜೋತು
ಸುಕ್ಕಿದ ಮೊಲೆ. ಬತ್ತಿದ ನಿತಂಬ. ಮೈ ಮುಚ್ಚ
ಲಾರದ ಅರೆನರೆ ಬೆರೆತ ಕುರುಚಲು ಮುಡಿ.

ಬಾ ಬಾ ತಿರುಗುಣಿ ಹಲ್ಲು ಹೀರಿ ಉಗಿದ ಕಬ್ಬೇ ಎನ್ನುತ್ತಾ ತಬ್ಬಿ ಎಳೆದಾಗ
ತೂಗುಮಂಚಕ್ಕೆ, ಒದ್ದೆ ಕಣ್ಣಿಗೆ ಉಪ್ಪುಪ್ಪು ಮುದ್ದು. ನಿಧಾನ ಬೆನ್ನ ಮೇಲೆ
ಕೈ ಆಡಿಸುತ್ತಾ ಬತ್ತಿದ ತೊರೆಯನ್ನೊತ್ತಿಕೊಳ್ಳುತ್ತೇನೆ
ಎದೆಗೆ. ಇಂಗಿದ ಇಮ್ಮುಖೀ ಹೊಳೆಗೀಗ ಜಿನುಗುವ ನಾಲಕ್ಕು ನೀರ್ಗಣ್ಣು.

೧೦

ಒಂಬತ್ತು ತಿಂಗಳು ಸಾಕು ಮತ್ತೆ ಹುಟ್ಟಲಿಕ್ಕೆ.
ಹನ್ನೆರಡು ತಿಂಗಳಾದವು ನೀನು ಹೋಗಿ ಗೊತ್ತೇ ಇಲ್ಲದ
ಪರಸ್ಥಳಕ್ಕೆ. ಬಂದಿರಬೇಕಲ್ಲ ಮತ್ತೆ ಮೂರು ತಿಂಗಳ ಚಿಗುರಾಗಿ
ಯಾರೋ ಉತ್ತ ನೆಲಕ್ಕೆ?
ಕಿಟಕಿಯಲ್ಲಿಣುಕುವ ದಾಸವಾಳವೇ? ಕಣಗಿಲೆ ಮೇಲೆ ಸರಸರ ಹರಿವಳಿಲೆ?

ವಿನಾಕಾರಣ ದೀಪ ಸುತ್ತುವ ಪತಂಗವೇ? ಎಳೆಗಂದಮ್ಮನ ತುಟಿಯಂಚಲ್ಲಿ
ಜಿನುಗುವ ಜೊಲ್ಲುನಗೆಯೇ? ಎಲ್ಲಿರಬಹುದೆಂದು ಹುಡುಕುತ್ತಿದ್ದೇನೆ
ನಿನ್ನಕ್ಕರೆಯ ಆಲಿಬಿಂದು. ನಡೆಯುತ್ತಿದೆ ಕೊನೆಯಿರದ ಪತ್ತೇದಾರಿ.
ಉರಿಯುವ ನಂದಾದೀಪದ ಕತ್ತಲ್ಲಿ ಸುಡುಸುಡುತ್ತೇರುತ್ತಿರುವ

ಎಣ್ಣೆಯ ಮೇಲ್ಮುಖೀ ಬೆಂಕಿಗುಟುಕು ನೀಲಾಂಜನದ ಕುತ್ತಿಗೆಗಲ್ಲದೆ ತಿಳಿಯದು
ಮತ್ತಾರಿಗೂ.

೧೧

ಊದುಬತ್ತಿಯ ಬಳ್ಳಿ ಕೇವಲ ಕಂಪಾಗಿ ಕರಗಿ ಹೋಯಿತೆ ಗಾಳಿಬಯಲಲ್ಲಿ?
ರಪ ರಪ ರಾಚಿದ ಜರಡಿಮಳೆ ತೇವ ತೇಲಿಸಿ ಮೇಲೆ ಮಣ್ಣಲ್ಲಿಂಗಿ ಹೋಯಿತೆ?
ತಣ್ಣೀರಲ್ಲಿ ಮೀಹಕ್ಕಿಳಿದ ಅಗ್ನಿಪಿಂಡದ ದಾಹ
ತಣಿದು ತೇಲಿತೇ ಕೊಳದ ಮೇಲೊಂದು ಬೆಳಕಿನ ಹೆಣ?

೧೨

ಮರವೆತ್ತಿದೆ ತನ್ನ ಅಷ್ಟೂ ಬೋಳು ಕೈ ಆಕಾಶಕ್ಕೆ
ಕ್ಷಣ ಕ್ಷಣಕ್ಕೆ ದೂರ ದೂರ... ಅಂಗೈಯಗಲದ ಗಾಳಿಪರವಶ ಮೋಡ-
ರಾಮಗಿರಿಯಿಂದಲಕೆಗೂ ನಿಲುಕದೆ, ಹಿಮಾಲಯದ, ಗಸಗಸ ಮಸೆದ ಕಲಶಕ್ಕೆ,
ಯಾರೋ ಎಸೆದ ವಿಚ್ಛಿದ್ರ ಕಣ್ಣೊದ್ದೆ ಕರವಸ್ತ್ರ.

೧೩

ಕಣ್ಮುಚ್ಚಿದಾಗ ನೀನು.... ಪಕ್ಕೆಯಲ್ಲಿ ಬಚ್ಚಿಟ್ಟುಕೊಂಡಿದ್ದ
ರೆಕ್ಕೆಗಳ ಛಕ್ಕನೆಳೆದು ಹೊರಕ್ಕೆ
ಶೂನ್ಯಕ್ಕೆಗರಿ ಹಾರಿಯೇ ಹೋಯಿತು
ಹುಣ್ಣಿವೆಗಿಂಡಿ ಕಚ್ಚಿದಾಕಾಶಪಕ್ಷಿ.

ಕಣ್ಮುಚ್ಚಿದಾಗ ನೀನು.... ನೆಲದಾಯಿ ಕೆಚ್ಚಲ ಸಾಲು
ಪಾತಾಳದಾಳಕ್ಕೆ ಬೊಕ್ಕ ಬೋರಲೆ ಬಿದ್ದು ಗೋಧೂಳಿಯಲ್ಲಿ
ಮಣ್ಣಲ್ಲಿ ಮಣ್ಣು.

ಕಣ್ಮುಚ್ಚಿದಾಗ ನೀನು...ಓತಪ್ರೋತ ನುಗ್ಗುತ್ತಿದ್ದಾ
ವೇಶಿತ ನದಿ ನದ ಹಳ್ಳವೆಲ್ಲ
ಸುಯ್ಯೆಂದರೆಕ್ಷಣದಲ್ಲಿಂಗಿ ಹೋದವು
ಕಾದ ಕಾವಲಿ ಎಣ್ಣೆಗಿಮಟು ನೆಲದಲ್ಲಿ.

ನೀನೆಳೆದಾಗ ಕೊನೆಯುಸಿರು...
ನೆಲವನ್ನಾವರಿಸಿ ಬಳಸಿದ್ದ
ಗಾಳಿಸೀರೆಯು ಜಾರಿ
ನಿಷ್ಕಂಪವಾಯಿತಡಿಗಿಳಿದಿದ್ದ ಜೋಲು ಮುಡಿ.

ಸಂಜೆಯುರಿಲಿಂಗಕ್ಕೆ
ನಿಗಿ ನಿಗೀ ತಾರೆಮರದೆತ್ತರದ ಪ್ರಣತಿಯಲಿ
ಕೊನೆಸುತ್ತಿನಾರತಿಯನ್ನೆತ್ತಿ
ಉಳಿದದ್ದು ಕೊನೆಗೆ ಉರಿಗಣ್ಣ ರೆಪ್ಪೆಗೆ ಕಪ್ಪು.

ಪಂಚಭೂತದ ಪಿಂಡ ಮತ್ತೆ ಅಲುಗುತ್ತುಂಟು
ಈಗಷ್ಟೆ ಹುಟ್ಟಿ
ಕಣ್ತೆರೆವ ಕೂಸಿನ ಜೋಡಿ
ತಿರುಗಿ ಹುಟ್ಟುವ ವೃತ್ತರೂಪೀ ಚಲನಕ್ಕೆ.

೧೪

ಆಗಿತ್ತು
ಕಣ್ಣು ನಕ್ಷತ್ರಗೂಡು. ಬಾನಾಡಿ ಬಂದು ನೆಲೆಸುವುವು ಇಲ್ಲಿ ಒಂದು ಕ್ಷಣ
ನಿಮಿಷ ನಿಮಿಷದ ನಡುವೆ ಅನಿಮಿಷತೆ

ಎತ್ತಿಕೊಡು ಮಧುಪಾತ್ರೆ
ಹೊಂಡದಲ್ಲಿ ಅಲೆಯ ಒತ್ತಡಕ್ಕೆ ತೊನೆದಾಡುತ್ತಿವೆ
ದುಂಬಿಗಳ ಭಾರಕ್ಕೆ ತಾವರೆಯ ಮೊಗ್ಗು.
ಹಿಂದೆ ಅಕಾಶ
ತೆರೆದ ಕಿಡಕಿಗೆ ಫರದೆ
ಜಗ್ಗಿದರೆ ಬಗ್ಗುವುದು ಭೂಮಿಗೇ ಬೆಳ್ದಿಂಗಳಿನ ರೆಂಬೆ
ಉದುರುವುವು ಸೂಜಿಮಲ್ಲಿಗೆ ನಿನ್ನ ತುರುಬಿಂದ

ಹೊಸಹಸಲೆ ಗುಂಗುರಿನ ಸ್ಪ್ರಿಂಗು
ತೊಡೆನಡುವೆ ಹೊತ್ತುರಿವ ಪಂಜು
ಒಂದೊಂದು ಕೇಶಕ್ಕು ವಿದ್ಯುತ್ತಿನಾವೇಶ
ಆಳುವೇಳುವ ಸ್ನಿಗ್ಧಲೀಲೆ
ಮೈಯೋ ಒಂದು ತೆರೆದಿಟ್ಟ ಮಧುಶಾಲೆ
ಎಲ್ಲ
ಕೆಲವೇ ಕ್ಷಣಕ್ಕೆ ಮುಗಿದು

ದೇಹಗಳಾಗ ಗಂಧರ್ವರೀಸಾಡಿ ಹೋದ ಜೋಡಿಕೊಳ.

೧೫

ಪ್ಲೀಜ್ ಕಣ್ಮುಚ್ಚಿ ನೀವು. ಬಟ್ಟೆಬಿಚ್ಚಲಿಕ್ಕಿದೆ.
ಕಿಸಿದ ಲಂಗದ ಮೇಲೆ ಹೊಚ್ಚ ಹೊಸ ಸೀರೆ.
ಹೊಂಬಣ್ಣ ಚುಕ್ಕಿ ಮೈತುಂಬ ಗರಿ ಗರಿ ಬೇರೆ
ಮೊದಲಿಂದಲೂ ಅಷ್ಟೆ ಸುಳಿಗೆ ಬೈತಲೆ ಓರೆ.

ಬೆನ್ನ ಹಿಂದಿನ ಹುಕ್ಕು ಹಾಕಿ ಬಿಡಿ ಮತ್ತೆ. ಬಿಚ್ಚುವುದು
ಸುಲಭ-ಹಾಕುವುದಲ್ಲ ನೆನಪಿಡಿ. ಅಗೊ ಅಗೋ
ಅಲ್ಲಿಗೇಕೋಡುತ್ತೆ ಈ ಪೋಲಿ ಕೈ?
ಕಡಿವಾಣವೇ ಇಲ್ಲ ಕುದುರೆಗೆ.ಈಗೀಗ

ಮೈ ಕಾದ ಕಾವಲಿ. ತಲೆಯೊ ಸಿಡಿಮಿಡಿ ಸ್ಟೌ.
ಹೆಕ್ಕತ್ತು ಬೆಂಕಿ ಜಾರ್ಬಂಡೆ. ಆಳಕ್ಕಿಳಿದ ಕಣ್ಣು
ಕಾಫಿಬಸಿ ಇಂಗುತ್ತಿರುವ ಬೋಸಿ. ಉಸಿರು
ಬಿಸಿಯೋಡಲ್ಲಿ ಹಾಯುವ ಹಬೆ.

ಅನಾಮತ್ತೆತ್ತಿ ಅದ್ದಿಬಿಡಿ ಯಾವುದಾದರೂ
ತಣ್ಣನೆ ಹೊಳೆಯಲ್ಲಿ.

೧೬

ಅದೇನು ಭಾರ ಶರೀರ. ನಿಧಾನ...ನಿಧಾನ..
ಹಾಗೆ ಹಾಗೇ ಹಿಡಿದುಕೊಳ್ಳುತ್ತೆ ತೊಡೆ. ಒತ್ತೊತ್ತಿ ಬರುತ್ತೆ ಉಸಿರು.
ಇಡೀ ಒಡಲ ತುಂಬಿ ಹೊರಕ್ಕುಕ್ಕುತ್ತಿದೆ ನೋವು. ತುಟಿಯೊಣಗುತ್ತ
ಗಂಟಲಾರುತ್ತ, ಉರಿಗೊಳ್ಳಿ ಇಕ್ಕಟ್ಟಿನಲ್ಲಿ ಭಗಭಗ ಬೇಗೆ.

ಬಿಟ್ಟುಬಿಡಿ. ಬಿಟ್ಟುಬಿಡಿ ನನ್ನ. ಒತ್ತಿ ಬರುತ್ತಿದೆ ನಿದ್ದೆ.
ಮುಚ್ಚುತ್ತಿವೆ ತಮಗೆ ತಾವೇ ಕಣ್ಣು. ಬರುತ್ತೀನಿನ್ನು.
ಝಾಡಿಸಿ ಗಂಟು ಗಂಟು ಮೆತ್ತೆ, ಬರೀಬೆತ್ತಲು
ಮೈಚಾಚುವೆ ಮಣ್ಣಲ್ಲಿ. ಬೆಳಗಾಗದಿರಲಿನ್ನು ಮತ್ತೆ.

೧೭

ಕೊನೆಕೊನೆಗೆ ಮಣ್ಣೆಂದರೇನು ಮೋಹವೊ ನಿನಗೆ
ಮೆಲ್ಲಗೆ ಕಾಲೆಳೆಯುತ್ತ ಹೋಗಿ ಹಿತ್ತಲಿಗೆ ಕುರ್ಜಿಗೆ ಸಮೇತ
ಒದ್ದೆ ನೆಲ ಕುಕ್ಕುತ್ತ ಗಸಗಸ ಉಸಿರಿಕ್ಕುತ್ತ
ಕೈ ಸಾಗದಿದ್ದಾಗಲೂ ನಡೆಯಲೇಬೇಕು ಕೈತುಂಬ ಕೈಂಕರ್ಯ.

ಮುಷ್ಠಿ ತುಂಬ ಮುಚ್ಚಿಟ್ಟುಕೊಂಡ ಬಣ್ಣ ಬಣ್ಣದ ಬೀಜ
ತದೇಕಚಿತ್ತೇಕಾಗ್ರತೆಯಿಂದ ಧ್ಯಾನಿಸುತ್ತ ಮಂಕು ಕಣ್ಣಲ್ಲಿ
ಮೆಲ್ಲಗೆ ಬದಮಾಡಿ ಮಣ್ಣಲ್ಲಿ ಬಣ್ಣದ ಬಿತ್ತವ
ನ್ನೊತ್ತೊತ್ತಿ ಬಚ್ಚಿಡುತ್ತಾ ಪುಟ್ಟ ಮಗುವಂತೆ

ಒಳಗೊಳಗೇ ಕುಲುಕುಲು ನಗುತ್ತಿ. ಇದ್ಯಾವ ಬಾಲ ಲೀಲೆಯೋ
ಈ ಅಕಾಲ ಮುಪ್ಪಲ್ಲಿ! ನೀನು ಹೋದ ಮೇಲೆ
ಬೆಳ್ಮೊಳಕೆ ಬದಿಯಲ್ಲಿ ಬಗಿದು ನೋಡಿದರೆ ಫಳಕ್ಕನೆ
ಹೊಳೆಯುತ್ತವೆ ಮಂಚಗುದುಮುರುಗಿಯಲ್ಲೊಡೆದ ಹಲವಾರು ಬಳೆ ಚೂರು.

೧೮

ಇದೇನು ರೀ ..ಈಪಾಟಿ ಸುಕ್ಕು ನನ್ನೀ ಮುಂಗೈ ಮೇಲೆ?
ಕೆನ್ನೆ ಮೇಲೆ? ಜಾರು ಬಾರೆಯ ಹಣ್ಣಗಲ್ಲದಲ್ಲಿ?
ಮೊನ್ನೆ ತಾನೇ ಬಣ್ಣ ಬಳಿದ ಗೋಡೆಯ ಮೇಲೆ?
ಕೆಲಸದ ಹೆಣ್ಣು ತಿಕ್ಕಿ ತಿಕ್ಕಿ ಒರೆಸಿದ ಕಿಡಕಿ ಹರಳಿನ ಮೇಲೆ?

೧೯

ಬಿಂದಿಗೆ ಬಿಂದಿಗೆ ತಣ್ಣೀರು ಸುರಿದು ಹಣೆಯಲ್ಲಿದ್ದ
ಬಿಂದಿ ಕರಗಿ ಮುಚ್ಚಿದ ಕಣ್ಣಂಚಿಂದ ಹರಿಯುತಿದೆ ಕೆನ್ನೀರು.
ಮೂಗ ತುದಿಯಲ್ಲೊಂದು ವಜ್ರದ ನತ್ತು-ಹೊತ್ತಿಲ್ಲ ಗೊತ್ತಿಲ್ಲ-
ಹೊಳೆಯುತ್ತಿದೆ. ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಈ ನಕ್ಷತ್ರ.

೨೦

ಮಹಡಿಗೆ ಬಂದು ನೋಡಿದರೆ ಖೋಲಿ ತುಂಬಾ
ಕುಬುಸ, ಸೀರೆ, ಬ್ರೇಜಿಯರ್ ಚೆಲ್ಲಾಪಿಲ್ಲಿ.
ಬರಿಮೈ ನದರೇ ಇಲ್ಲದೆ ಒಂದೊಂದೇ ಸೀರೆ
ಕೊಡವಿ ಕೊಡವಿ ಹುಡುಕುತ್ತಿದ್ದೀ!

ಅಯ್ಯಯ್ಯೋ..ಇದೇನು ರಾಣಾರಂಪೆಂದರೆ
ಇಲ್ಲೇ ಎಲ್ಲೋ ಇಟ್ಟಿದ್ದೆ ಎಂದು ಸಣ್ಣಗೆ ಮುಲುಕುತ್ತಿ.
ಹದಿನಾರರ ಹದಿಹಯದ ಕುಬುಸ ಬೆದಕುತ್ತಿ.
ಹಳೆಯ ಬಟ್ಟೆಗಳಲ್ಲಿ ಕಳೆದುಹೋದದ್ದೇನು ?

೨೧

ನೀನು ಹುಟ್ಟಿದ ಕ್ಷಣವೇ ಹುಟ್ಟಿಸಿದೆ ಅಮ್ಮನ್ನ
ನಗೆಮಿಂಚಿನೊಡನೆ ಸಂಚಲಿಸುವಪ್ಪನ್ನ
ಅಕ್ಕ ಅಣ್ಣಂದಿರಾಡೊಂಬಲದ ಮನೆಯನ್ನ
ಮನೆಮುಂದಿನರಳಿಮರವ ಹೆಬ್ಬಾವಂತೆ ನುಂಗುತ್ತಿರುವ

ಬಸಿರಿಮರವನ್ನ, ಹಾದಿಬದಿ ಸದಾ ಉಗ್ಗುತ್ತಿದ್ದ ಬಾಯ್ಬಡುಕಿ
ಚಚ್ಚೌಕ ಸೀನೀರ ಬಾವಿಯನ್ನ, ಯಕ್ಷಿಣಿಯ ಹಸ್ತಮುದ್ರಿಕೆಯ
ವಿಲಕ್ಷಣ ತಿರುಪಿನಂತಿರುವ ರಾಮಗಿರಿಗುಡ್ಡವನ್ನ
ಬಂಡೆಸಂದಿಗಳಿಂದ ಚಿಮ್ಮಿ ಚಾಮರವಿಕ್ಕೊ

ಹೊನ್ನೆ ಹೂ ಮರವನ್ನ, ಮರಕ್ಕೆ ಹಗ್ಗವಕಟ್ಟಿ
ಗಾಳಿತೂಗುತ್ತಿರುವ ಸಾದುಗಪ್ಪಿನ ನೆರಳ ಕೂಸುಮರಿಯನ್ನ
ಮಾಸದಿರಲೆಂದು ವರ್ಣಮಯ ಗುಡ್ಡಕ್ಕೆ ಹೊದ್ದಿಸಿದ ಹಾಗಿರುವ
ಆಕಾಶ ನೆಟ್ಟನ್ನ, ನೀನು ಹುಟ್ಟಿದ ಕ್ಷಣವೆ

ಹುಟ್ಟಿಸಿದೆ. ನೀನು ಬೆಳೆದಂತೆ ಬೆಳೆದು, ನೀನು ಕುಣಿದಂತೆ
ಕುಣಿದು, ನೀನು ನಮೆದಂತೆ ನಮೆದು, ನೀನು ನಿರಾಳ ಮಲಗಿ
ಮುಚ್ಚಿದ ಹಾಗೆ ಕಣ್ಣು, ನಿನ್ನಾ ಸಮಸ್ತ ಜಗತ್ತೂ
ನಿನ್ನೊಂದಿಗೇ ಸತ್ತು ಮುಚ್ಚಿತ್ತು ಕಣ್ಣು. ನಿನ್ನ ಜಗತ್ತಿಗಿದೋ

ನನ್ನ ಜಗತ್ತಿನ ಕೊನೆಯ ವಿದಾಯ...

೨೨

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿನಗೆ?
ಕಣ್ಣಿಗಂಟಿದ ಕನಸೇ...ಅರಿವಲ್ಲಿಂಗಿದ ಜಿನುಗು ಬೆವರೇ
ಬಾಯೊಳಗುಳಿದ ನಾಲಗೆಯೆಂಜಲ ಮೈಲಿಗೆ ಮುತ್ತೆ...
ವಿದ್ಯುತ್ಪಾತವನ್ನ ತಂತಿಮುಖೇನ ಒಳಕ್ಕಿಳಿಸಿಕೊಳ್ಳೋ

ಒದ್ದೆಮೈ ಮಣ್ಣೆ...!ನಿನ್ನ ಮರವಾಗಲೆನ್ನ ಕೈಗೋಲು.
ಬಾಡಿಯುದುರಿದ ನಗೆಪಕಳೆಯೆನ್ನ ಉರಿಗಣ್ಣಿಗೆಣ್ಣೆ.
ಜಗುಳಿದ ಕಣ್ಣಹನಿಯೆನ್ನ ಮಣ್ಣ ಪ್ರಣತಿಯ ನಿಶ್ಚಲ ಮೂಕ ಸನ್ನೆ.
ಮೈಬೆಂಕಿ, ಆರುತ್ತಿರುವಗ್ಗಿಷ್ಟಿಕೆಯ ಕೊನೆಯ ಕೆಂಡ.

೨೩

ಅಲೆಯ ಬಲೆ ಬೀಸಿ ಯಾರಾದರೂ ಹೊಳೆಯ ಹೆಡೆಮುರಿಕಟ್ಟಿ.
ದಯಮಾಡಿ ಸೂರ್ಯಛತ್ರಿಯ ಹಿಡಿದು ಸುಡುವ ನೆತ್ತಿಗೆ ನೆರಳ ನೀಡಿ.
ಏನಾದರೂ ಮಾಡಿ, ಕಾಲಕಸ ನೆರಳನ್ನು ಬಿಸಿಲಿಂದ ಪಾರುಮಾಡಿ.
ಯಾರೊ ರಚಿಸಿದ ಕವಿತೆ ಹರಿದು ಚಲ್ಲಾಪಿಲ್ಲಿ ಆಕಾಶಪಟದಲ್ಲಿ-

ಪದ ಪಂಕ್ತಿ ಹಂಗಿಲ್ಲದೋದಿಕೊಳ್ಳಿ...

೨೪

ಛಂದಸ್ಸು ಹೇಳಿದ್ದು:

ಮಳ್ಳಿ ಮೀನಿನ ಸುತ್ತ ಒತ್ತು ನೀರಿನ ಕವಚ;
ಮಣ್ಣ ಗೋಳಕ್ಕೆ ಆಕಾಶ ಕವಚ!
ನಕ್ಷತ್ರದುಂಗುರಕ್ಕಿರುಳ ಶಾಪದ ಕವಚ;
ಲಿಂಗಕ್ಕಾಲಿಂಗನದ ನಿರ್ವಯಲ ಕವಚ!

ಶಾಂತಿರಸ್ತು

ಈಗಲೂ ಅಷ್ಟೆ

ಅವಳು ಹೋಗಿಯೆ ಬಿಟ್ಟಳೆಂದರೆ ನಂಬುವುದೇ ಇಲ್ಲ
ನಾನು. ಎಂಜಿ ರೋಡಿರಲಿ ಗಾಂಧಿಬಜಾರಿಗೂ ಒಬ್ಬಳೇ
ಹೋದವಳಲ್ಲ. ಪಿಕ್ನಿಕ್ಕಿಗೆ ಹೇಗೋ ಹಾಗೇ ಕ್ಲಿನಿಕ್ಕಿಗೂ
ಒಟ್ಟಿಗೇ ಹೋಗಿಬಂದದ್ದು ನಾವು ಜಗಳಪಗಳ ಸಮೇತ.
ಸಿನಿಮಾ ನಾಟಕ ರಾಮನವಮಿ ಕಚೇರಿ-ಒಟ್ಟಿನಲಿ
ಬೆಂಗಳೂರಲ್ಲೂ ನಾನಿರಬೇಕು ಜತೆಯಲ್ಲೆ. ಹೀಗಿರುವಾಗ
ಹೋಗಿಬಿಟ್ಟಳೆ ಪರಸ್ಥಳಕ್ಕೆ ಎಡಗೈಬೀಸಿಕೊಂಡೊಬ್ಬಳೇ?
ದಾರಿಯಲಿ ಜೋಲಿಗೀಲಿ ಹೊಡೆದರೆ ಯಾರಿದ್ದಾರೆ ಪಕ್ಕ?
ಜನನಿಬಿಡ ರಸ್ತೆಯಲಿ ನಡೆಯುವುದೆಂದರವಳಿಗೆ
ಬಲೇ ಖುಷಿ. ನನಗಿಷ್ಟ ಸಾಲ್ಮರದ ಮಬ್ಬಿಳಿದ ರಸ್ತೆ.
ಗುಡಿಗಿಡಿಯೆಂದರೆ ಮುಗಿಯಿತು. ಚಪ್ಪಲಿ ಮೆಟ್ಟಿ ನಿಂತಳೆಂದೇ
ಬೀದಿಯಲಿ. ನಾನಿನ್ನೂ ಕಾರ ಕೀ ಹುಡುಕುತ್ತ ಮನೆಯಲ್ಲಿ.

ಪುಸ್ತಕ ಹಿಡಿದರೆ ಮುಗೀತು ಜಗತ್ತೇ ಬೇಡ ಎಂದು ಗೊಣಗುತ್ತ
ಈಗಲೂ ನಿಂತಿರಬೇಕಾಕೆ ನನಗಾಗಿ ಬೀದಿತಿರುವಲ್ಲಿ ಕಾಯುತ್ತ.