Saturday, February 13, 2010

ಕವಿತೆ,ಕಥೆ,ನಾಟಕ,ಇತ್ಯಾದಿ.....

ಪ್ರಿಯ ಓದುಗಾ,

ನಾಳೆ ನನ್ನ ಸಮಗ್ರ ಕಾವ್ಯ, ಸಮಗ್ರ ಕಥೆ, ಸಮಗ್ರ ಮಕ್ಕಳ ನಾಟಕ ಬಿಡುಗಡೆಯಾಗಲಿವೆ. ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಮಯ: ಬೆಳಿಗ್ಗೆ ಹತ್ತು. ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ: ಡಾ ಜಿಎಸ್ಸೆಸ್, ಡಾ ಅನಂತಮೂರ್ತಿ, ಡಾ ಸಿ ಎನ್ ರಾಮಚಂದ್ರನ್, ಪ್ರೊ ಗೋವಿಂದ ರಾವ್, ಜಿ.ಎನ್.ಮೋಹನ್, ಸಿ.ಆರ್.ಸಿಂಹ, ಎಂ ಡಿ ಪಲ್ಲವಿ, ರಾಘವೇಂದ್ರ ಪಾಟೀಲ, ಡಾ ಬೈರೇಗೌಡ, ಟಿ ಎಸ್ ಛಾಯಾಪತಿ. ನಿಮ್ಮಲ್ಲಿ ಪ್ರೀತಿಯ ಕೋರಿಕೆ: ದಯಮಾಡಿ ನೀವೂ ಬನ್ನಿ.


ತಾನು ಬರೆದದ್ದನ್ನು ಒಟ್ಟಿಗೇ ಹೀಗೆ ಜೋಡಿಸಿಕೊಡುವವಾಗ ತಾನು ಇಷ್ಟೆಲ್ಲಾ ಬರೆದದ್ದುಂಟಾ ಎಂದು ಲೇಖಕನಿಗೇ ಆಶ್ಚರ್ಯವಾಗುತ್ತದೆ. ಒಟ್ಟು ಸಂಗ್ರಹಗಳು ಬಂದ ಮೇಲೆ ಆಸಕ್ತರು ದಶಕಗಳ ಹಿಂದಿನ ಬಿಡಿಪ್ರತಿಗಳಿಗಾಗಿ ತಡಕಾಡುವ ಅಗತ್ಯವಿರುವುದಿಲ್ಲ. ದಪ್ಪ ಪುಸ್ತಕ ರ್‍ಯಾಕಿನಲ್ಲಿ ಇದ್ದಾಗ ಅದು ಕಣ್ಣುತಪ್ಪಿಹೋಗುವ ಭಯವಿಲ್ಲ! ಬೇಡವೆಂದರೆ ನಾವೇ ಮರೆಸಿ ಇಡಬೇಕಷ್ಟೆ!


ಈ ಕೃತಿಗಳನ್ನು ಕಣ್ಣ ಮುಂದೆ ಹರಡಿಕೊಂಡು ಕೂತಾಗ, ನನ್ನ ಅನೇಕ ಹಳೆಯ ನೆನಪುಗಳು ಅಜ್ಞಾತದಿಂದ ನಿಧಾನಕ್ಕೆ ಮೇಲೇಳುವ ಬೆರಗು ವಿಶೇಷ ಖುಷಿ ಕೊಡುತ್ತದೆ. ಸಿಂದಾಬಾದನ ಆತ್ಮಕಥೆ ಸಾಕ್ಷಿಯಲ್ಲಿ ಪ್ರಕಟವಾದಾಗ ನನ್ನ ಪ್ರಿಯ ಮಿತ್ರ ಉಪಾಧ್ಯ(ಆಗಿನ್ನೂ ಡಾ ಆನಂದರಾಮ ಉಪಾಧ್ಯ ಆಗಿರಲಿಲ್ಲ) ನನ್ನ ಮನೆಗೆ ಬಂದು-"ಸಾಕ್ಷಿಯಲ್ಲಿ ನಿಮ್ಮ ಸಿಂದಾಬಾದನ ಆತ್ಮಕಥೆ ಓದಿ ನನ್ನ ಪರಿಚಯದ ಗೆಳೆಯರೊಬ್ಬರು ತುಂಬಾ ಇಷ್ಟಪಟ್ಟಿದ್ದಾರೆ. ನಿಮ್ಮನ್ನು ಪರಿಚಯಮಾಡಿಕೊಡಲು ಕೇಳಿದ್ದಾರೆ" ಎಂದರು. ಹೀಗೆ ಪದ್ಯವೊಂದರ ಮೂಲಕ ನನಗೆ ಹತ್ತಿರವಾದ ಗೆಳೆಯ ಕೆ.ಸತ್ಯನಾರಾಯಣ. ಆಗ ಅವರು ರಿಸರ್ವ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಬಸವನಗುಡಿ ಪಾರ್ಕ್ ಬಳಿ ಒಂದು ವಟಾರದ ಮನೆಯಲ್ಲಿ ಅವರು ಗೆಳೆಯರೊಂದಿಗೆ ವಾಸವಾಗಿದ್ದರು(೧೯೭೭ರ ಸುಮಾರು). ಆಮೇಲೆ ಅದೆಷ್ಟು ಬಾರಿ ನಾವು ಆ ಪುಟ್ಟ ಮನೆಯಲ್ಲಿ ಕೂತು ಸಾಹಿತ್ಯದ ಬಗ್ಗೆ ಚರ್ಚಿಸಿದ್ದೇವೆಯೋ!
ತುಷಾರದಲ್ಲಿ ನನ್ನ ಪುಟ್ಟಾರಿಯ ಮತಾಂತರ ಪ್ರಕಟವಾಯಿತು. ಆ ಪುಟ್ಟಾರಿಯ ಮತಾಂತರ ಬರೆದದ್ದು ಚನ್ನಗಿರಿ ತಾಲ್ಲೋಕಿನ ತಾವರಕೆರೆ ಎಂಬ ಸಣ್ಣ ಊರಿನಲ್ಲಿ. ಅಲ್ಲಿ ನನ್ನ ಷಡ್ಕ ಎನ್ ಆರ್ ಕೆ ಶಾಲಾ ಅಧ್ಯಾಪಕರಾಗಿದ್ದರು. ನಾನು ರಜಾಕಾಲದಲ್ಲಿ ಬಂದು ಅವರಲ್ಲಿ ವಾರೊಪ್ಪತ್ತು ಇದ್ದು ಅಲ್ಲೇ ಒಂದು ಕಥೆಗಿತೆ ಬರೆಯಬೇಕೆಂಬುದು ಅವರ ಅಪೇಕ್ಷೆ!ಅದಕ್ಕಾಗಿ ಆ ಮಹಾರಾಯರು ಏನೆಲ್ಲಾ ಸಿದ್ಧತೆ ಮಾಡಿದ್ದರು! ನನಗಾಗಿ ಒಂದು ಖಾಲಿ ಮನೆಯನ್ನು ತೆರವುಗೊಳಿಸಿದ್ದರು. ಅಲ್ಲಿಗೆ ಹೊತ್ತು ಹೊತ್ತಿಗೆ ನನಗೆ ತಿಂಡಿ ಕಾಫಿ ಬರುತ್ತಾ ಇತ್ತು. ದಿನವೆಲ್ಲಾ ಬರೆಯುತ್ತಾ ಇದ್ದೆ. ರಾತ್ರಿ ಆಗಿನ್ನೂ ಚಿಕ್ಕವರಾಗಿದ್ದ ನನ್ನ ಷಡ್ಕರ ಮಕ್ಕಳು ಬರೆದದ್ದಷ್ಟನ್ನೂ ಓದಿ ಮತ್ತೆ ನಾಳೆ ಕಥೆಯ ಮುಂದಿನ ಭಾಗವನ್ನು ಓದುವುದಕ್ಕೆ ಕಾತರತೆಯಿಂದ ಸಿದ್ಧರಾಗುತ್ತಾ ಇದ್ದರು! ಆ ಕಥೆಯಲ್ಲಿ ಬರುವ ಸಾಹಸೀ ರೈತ ಭೋಜಣ್ಣ ಅಲ್ಲಿಯೇ ನಾನು ಕಂಡವರು! ತಮ್ಮ ಪಾತ್ರ ಕಥೆಯಲ್ಲಿ ಮೂಡುವುದನ್ನು ಓದಿ ಓದಿ ಅವರೂ ರೋಮಾಂಚಿತರಾಗುತ್ತಿದ್ದರು. ಹೀಗೆ ವಾಸ್ತವ ಕಲ್ಪನೆ ಎಲ್ಲವನ್ನೂ ಮಿದ್ದುಕೊಂಡು ನಿರ್ಮಾಣವಾದ ಕಥೆಯದು. ಅದನ್ನು ಮುಗಿಸಲಿಕ್ಕೆ ನಾನು ತೆಗೆದುಕೊಂಡ ಸಮಯ ಸರಿಯಾಗಿ ಒಂದು ವಾರ. ಮುಂದೆ ಪುಟ್ಟಾರಿಯ ಮತಾಂತರ ಪತ್ರಿಕೆಯಲ್ಲಿ ಪ್ರಕಟವಾದಾಗ , ಮೈಸೂರಿಂದ ಅನಿರೀಕ್ಷಿತವಾಗಿ ಕಾಳೇಗೌಡ ನಾಗವಾರರು ಪತ್ರವೊಂದನ್ನು ಬರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾವು ಬೇರೆ ಬೇರೆ ತಾತ್ವಿಕತೆಯ ಲೇಖಕರಾಗಿದ್ದರೂ ಪರಸ್ಪರ ಮೆಚ್ಚುವ ಸೌಹಾರ್ದತೆ ಇದ್ದದ್ದು ನನಗೆ ಈವತ್ತೂ ತುಂಬ ಪ್ರಿಯವಾದ ಸಂಗತಿ ಅನ್ನಿಸುತ್ತಿದೆ.


ನನ್ನ ಒಣಮರದ ಗಿಳಿಗಳು ಎಂಬ ಕೃತಿಯ ಬಹಳಷ್ಟು ಕವಿತೆಗಳನ್ನು ಹುಚ್ಚುಹಿಡಿದವನ ಹಾಗೆ ನಾನು ಪರೀಕ್ಷೆಯ ಬಿಡುವಿನಲ್ಲಿ ಸ್ಟಾಫ್ ರೂಮಿನ ಏಕಾಂತದಲ್ಲಿ ಬರೆದದ್ದು. ಬರೆದ ಪದ್ಯಗಳನ್ನೆಲ್ಲಾ ಜೋಡಿಸಿ, ಕೀರ್ತನಾಥ ಕುರ್ತಕೋಟಿಯವರಿಗೆ ಮುನ್ನುಡಿ ಕೇಳಿ ಪದ್ಯಗಳನ್ನು ಕಳಿಸಿಕೊಟ್ಟೆ. ಆಗ ನನ್ನ ನೇರ ಪರಿಚಯವೂ ಅವರಿಗೆ ಇರಲಿಲ್ಲ. ಬರೆದರೆ ಬರೆಯುತ್ತಾರೆ, ಇಲ್ಲವಾದರೆ ಆಗುವುದಿಲ್ಲ ಎನ್ನುತ್ತಾರೆ! ಅಷ್ಟೇ ತಾನೆ ಎಂದುಕೊಂಡು ಒಂದು ಮೊಂಡು ಧೈರ್ಯದಲ್ಲಿ ಕವಿತೆಗಳನ್ನ ಕೀರ್ತಿಯವರಿಗೆ ಕಳಿಸಿ, ಈ ವಿಷಯ ನನ್ನ ಆಪ್ತಗೆಳೆಯರಿಗೂ ಹೇಳದೆ ತೆಪ್ಪಗೆ ನನ್ನ ದೈನಿಕದಲ್ಲಿ ತೊಡಗಿಕೊಂಡಿದ್ದೆ. ನಾನು ಕವಿತೆಗಳನ್ನು ಕಳಿಸಿ ಒಂದು ತಿಂಗಳಾಗಿರಬಹುದು. ಆವತ್ತು ನಮ್ಮ ಮನೆಗೆ ಪ್ರಿಯ ಮಿತ್ರರಾದ ಎಚ್.ಎಸ್.ಮಾಧವರಾವ್, ಮತ್ತು ನನ್ನ ಅತ್ಯಂತ ಪ್ರೀತಿಯ ವಿದ್ಯಾರ್ಥಿಮಿತ್ರ ಡಾ ಮೂರ್ತಿ ಊಟಕ್ಕೆ ಬಂದಿದ್ದರು. ಮೂರ್ತಿ ಲಂಡನ್ನಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ್ದ ಸಂದರ್ಭ. ತ್ಯಾಗರಾಜನಗರದಲ್ಲಿ ಒಂದು ಸಣ್ಣ ಮನೆಯಲ್ಲಿ ಬಾಡಿಗೆಗಿದ್ದೆ. ನನ್ನ ಇಬ್ಬರು ಅಜ್ಜಿಯರು, ನನ್ನ ನಾಲ್ವರು ಮಕ್ಕಳು, ಪತ್ನಿ-ಎಲ್ಲಾ ಆ ಕಿಷ್ಕಿಂಧೆಯಲ್ಲಿ ಹೇಗೆ ಬದುಕುತ್ತಿದ್ದೆವೋ ಈವತ್ತು ಆಶ್ಚರ್ಯವಾಗುತ್ತದೆ. ಒಳಗೆ ಕೂತು ಬರೆಯುವುದಕ್ಕೆ ಜಾಗವಿರಲಿಲ್ಲ. ಹಾಗಾಗಿ ನನ್ನ ಬಹುಪಾಲು ಬರವಣಿಗೆಯನ್ನು ಒಂದು ಕಡ್ಡಿ ಚಾಪೆ ಹಾಕಿಕೊಂಡು ನಾಕಡಿ ಅಗಲದ ಕಾಂಪೌಂಡಿನ ಜಾಗದಲ್ಲಿ ಬರೆಯುತ್ತಾ ಇದ್ದೆ. ಆ ಪಾರಿವಾಳದ ಗೂಡಿಗೆ ಅಡಿಗರು, ಅನಂತಮೂರ್ತಿ, ಕಿರಂ, ಬಾಲು, ಸತ್ಯನಾರಾಯಣ, ಉಪಾಧ್ಯ, ರಾಮಚಂದ್ರಶರ್ಮ, ಎನ್.ಎಸ್.ಎಲ್, ಸುಬ್ಬಣ್ಣ, ಸಿ.ಅಶ್ವಥ್-ಇಂಥಾ ಘಟಾನುಘಟಿಗಳೆಲ್ಲಾ ಬಂದುಹೋಗಿದ್ದಾರೆ. ಆ ವಿಷಯ ಇರಲಿ. ಮಾಧು ಮತ್ತು ಡಾ ಮೂರ್ತಿ ನಮ್ಮ ಮನೆಗೆ ಊಟಕ್ಕೆ ಬಂದ ವಿಷಯ ಹೇಳುತ್ತಾ ಇದ್ದೆ. ಮುಂಬಾಗಿಲು ಹಾಕಿದ್ದೆವೇ? ಪೋಸ್ಟಿನವನು ಒಂದು ಭಾರವಾದ ಲಕೋಟೆಯನ್ನು ಕಿಟಕಿಯಲ್ಲಿ ತೂರಿಸಿ ನಾವು ಊಟಮಾಡುತ್ತಾ ಕೂತಿದ್ದ ಹಾಲಿಗೇ ಇಳಿಬಿಟ್ಟ. ಧೊಪ್ಪೆಂದು ಸಶಬ್ದವಾಗಿ ನೆಲಕ್ಕೆ ಬಿದ್ದ ಆ ಲಕೋಟೆಯನ್ನು ಒಡೆದು ನೋಡುತ್ತೇನೆ: ಕೀರ್ತಿ ತಮ್ಮ ಮುನ್ನುಡಿ ಬರೆದು ಕಳಿಸಿದ್ದಾರೆ! ಆಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಮುನ್ನುಡಿಯನ್ನು ಮೊಟ್ಟ ಮೊದಲು ಓದಿದವರು ಮಾಧು ಮತ್ತು ಮೂರ್ತಿ.
ನನಗೆ ಹೆಸರು ಮತ್ತು ಪ್ರತಿಷ್ಠೆ ತಂದುಕೊಟ್ಟ ಋತುವಿಲಾಸ ನಾನು ಬರೆದದ್ದು ತ್ಯಾಗರಾಜನಗರದ ಮನೆಯ ಕಾಂಪೌಂಡಿನಲ್ಲಿ ಕೂತು! ನಾನೂ ಡಾ ಶ್ರೀರಾಮ ಭಟ್ಟರು ಋತುಸಂಹಾರ ಅಭ್ಯಾಸ ಮಾಡಿದ್ದು ಅದೇ ಜಾಗದಲ್ಲಿ. ಕೆಲವು ಬಾರಿ ಭಟ್ಟರ ಅವ್ಟ್ ಹೌಸಿನ ಪುಟ್ಟ ಮನೆಯಲ್ಲಿ. ಇಡೀ ಋತುವಿಲಾಸ ೧೦೧ ನಂಬರಿನ ಆ ಮನೆಯ ಉಸಿರುಕಟ್ಟಿಸುವ ಕಿರುಕೋಣೆಯಲ್ಲಿ ಓದಿ ಎನ್.ಎಸ್.ಎಲ್ ಶಹಬಾಸ್ ಹೇಳಿದ್ದು ಅದೇ ಮನೆಯಲ್ಲಿ!


ನನ್ನ ಅನೇಕ ಬರವಣಿಗೆಯ ಹಿಂದೆ ಇರುವ ದಾರುಣ ನೆನಪುಗಳೂ ಆ ನೂರೊಂದನೇ ನಂಬರಿನ ಮನೆಯನ್ನ ಧ್ಯಾನಕ್ಕೆ ತರುತ್ತಾ ಇವೆ. ಸದ್ಯಕ್ಕೆ ಆ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ, ಒಂದು ಖುಷಿಯ ನೆನಪನ್ನು ನಿಮ್ಮ ಎದುರಿಗಿಟ್ಟು ಈ ಬರವಣಿಗೆ ಮುಗಿಸುತ್ತೇನೆ. ಕ್ರಿಯಾಪರ್ವ ಬರೆದು ಮುಗಿಸಿದ್ದೆ(೧೯೮೦). ಆ ಪದ್ಯವನ್ನ ಅನಂತಮೂರ್ತಿಗಳಿಗೆ ಓದಬೇಕೆಂದು ನಾನು ಮತ್ತು ಬಾಲು ಮೈಸೂರಿಗೆ ಹೋಗಿದ್ದೆವು. ಕಂಚಿನ ತೇರು ಮೊದಲಾದ ಪದ್ಯಗಳನ್ನು ಕ್ರಿಯಾಪರ್ವದೊಂದಿಗೆ ಅನಂತಮೂರ್ತಿಯವರಿಗೆ ಓದಿ ಮುನ್ನುಡಿ ಬರೆಯಲು ಕೇಳಿದ್ದಾಯಿತು. ಅವರು ಮುಗುಳ್ನಕ್ಕು ಸ್ವಲ್ಪ ಕಾಲಾವಕಾಶ ಬೇಕು! ಪರವಾಗಿಲ್ಲ ತಾನೇ?ಎಂದರು. ಆಯಿತು-ಎಂದು ನಾವು ಬೆಂಗಳೂರಿಗೆ ಹಿಂದಿರುಗಿದೆವು. ಆಮೇಲೆ ಪ್ರತಿದಿನ ಮುನ್ನುಡಿಯಿರುವ ಲಕೋಟೆಯನ್ನು ಕಾಯುತ್ತಾ ಇದ್ದೆ. ಲಕೋಟೆ ಬರಲಿಲ್ಲ. ಒಂದು ರಾತ್ರಿ ಕಾಲೇಜಿನಿಂದ ಮನೆಗೆ ಬಂದಾಗ ನನ್ನ ಹೆಂಡತಿ ಸಂಭ್ರಮದಿಂದ ಅನಂತಮೂರ್ತಿಯವರು ಬಂದು ಮುನ್ನುಡಿ ಕೊಟ್ಟು ಹೋಗಿದ್ದಾರೆ. ಸ್ವಲ್ಪಹೊತ್ತು ಕಿರಂ ಮನೆಯಲ್ಲಿ ಇರುತ್ತಾರಂತೆ. ಹೋಗಿ ನೋಡಿ. ಇದ್ದರೂ ಇರಬಹುದು-ಎಂದಳು. ಆಗ ಮೊಬೈಲ್ ಇತ್ಯಾದಿ ಸೌಕರ್ಯವಿರಲಿಲ್ಲ. ನನ್ನ ಸುವೇಗ ಹತ್ತಿಕೊಂಡು ನಾಗಸಂದ್ರದ ಬಳಿ ಇದ್ದ ಕಿರಂ ಮನೆಗೆ ದೌಡಾಯಿಸಿದೆ. ಅನಂತಮೂರ್ತಿ ಅಲ್ಲಿ ಇದ್ದರು. ಬಹಳಹೊತ್ತು ಅನಂತಮೂರ್ತಿ, ಕಿರಂ ಜೊತೆ ಮಾತಾಡಿ ನಾನು ಮನೆಗೆ ಹಿಂದಿರುಗಿದಾಗ ರಾತ್ರಿ ಹನ್ನೊಂದೇ ಆಗಿ ಹೋಗಿತ್ತು.


ಉಳಿದದ್ದು ನಾಳೆ ನಿಮ್ಮನ್ನು ಭೇಟಿ ಮಾಡಿದಾಗ...!

Wednesday, February 3, 2010

ಮಾಸ್ತಿಯವರ ಕಾವ್ಯ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡದ ಆದ್ಯ ಮತ್ತು ಅಭೂತಪೂರ್ವ ಕತೆಗಾರರು. ಅವರು ಗದ್ಯವನ್ನು ಬರೆಯಲಿ ಪದ್ಯವನ್ನು ಬರೆಯಲಿ ಮುಖ್ಯವಾಗಿ ನಮ್ಮ ಮನಸ್ಸನ್ನು ಸೆಳೆಯತಕ್ಕದ್ದು ಅವರ ಕಥನ ಪ್ರತಿಭೆಯೇ. ಅವರು ಮಾತಾಡುವಾಗ ಕೂಡಾ ಕತೆಗಾರಿಕೆಯ ವರಸೆಗಳೇ ಎದ್ದು ಕಾಣುತ್ತಿದ್ದವು. ಲೋಕಾಭಿರಾಮವಾಗಿ ಮಾತಾಡುವಾಗ ಇರಲಿ, ಸಭೆಗಳಲ್ಲಿ ಭಾಷಣ ಮಾಡುವಾಗಲೂ ಮಾಸ್ತಿ ಸಲೀಸಾಗಿ ಕಥನಕ್ಕೆ ಇಳಿದುಬಿಡುತ್ತಿದ್ದರು. ಹೀಗಾಗಿ ಕಥನ ಎಂಬುದು ಮಾಸ್ತಿಯವರ ಪಾಲಿಗೆ ಒಂದು ಅಭಿವ್ಯಕ್ತಿಕ್ರಮವಷ್ಟೇ ಅಲ್ಲ; ಅದು ಅವರ ಬದುಕಿನ ಅನುಸಂಧಾನದ ಮಾರ್ಗ. ಅದಕ್ಕೇ ನಾವು ಮುಖ್ಯವಾಗಿ ಹೇಳಬೇಕಾದದ್ದು ಮಾಸ್ತಿ ನೂರಕ್ಕೆ ನೂರು ಕತೆಗಾರ. ಬರೆಹ ಬದುಕು ಎರಡರಲ್ಲೂ ಕತೆಗಾರರಾಗಿಯೇ ಅವರು ಕಾಣಿಸಿಕೊಳ್ಳುತ್ತಾರೆ. ಕತೆಗಾರ ರಾಮಣ್ಣ ಎಂಬ ಅವರದೊಂದು ಉಕ್ತಿಯಿದೆ. ಆ ಮಾತು ಸ್ವತಃ ಮಾಸ್ತಿ ಅವರಿಗೇ ಹೆಚ್ಚಾಗಿ ಅನ್ವಯಿಸುತ್ತದೆ.

ಕಥೆಯ ಆಸಕ್ತಿ ಬದುಕನ್ನು ಸಂಬಂಧಿಸಿ ನೋಡುವುದರಲ್ಲಿ ಇದೆ. ವ್ಯಕ್ತಿಗಳ ಜೀವಿತ ಕ್ರಮವನ್ನು- ಪರಿಸರ , ಅವರು ಬದುಕುತ್ತಿರುವ ಸಮಾಜ, ಅವರು ನಂಬಿರುವ ಧರ್ಮ, ತತ್ವ, ಮತ್ತು ಜೀವನಾದರ್ಶಗಳೊಂದಿಗೆ ತಳುಕು ಹಾಕಿ ಮಾಸ್ತಿ ನೋಡುವುದರಿಂದ ಆಂಗ್ಲಕವಿ ಚಾಸರನಂತೆ ಮಾಸ್ತಿಯೂ ಒಬ್ಬ ಜೀವನ ವಿಜಾನಿಯಾಗಿದ್ದಾರೆ.(ಚಾಸರ್ ಒಬ್ಬ ಜೀವನ ವಿಜಾನಿ ಎಂಬುದು ಮಾಸ್ತಿಯವರದ್ದೇ ಮಾತು). ಕಥನಕ್ಕೆ ತೊಡಗುವುದು ಎಂದರೆ ಬದುಕಿನೊಂದಿಗೆ ಅನುಸಂಧಾನಕ್ಕೆ ತೊಡಗುವುದು ಮಾತ್ರವಲ್ಲ; ಕೇಳುಗನೊಬ್ಬನೊಂದಿಗೆ ಆತ್ಮೀಯ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು ಕೂಡ. ಮಾಸ್ತಿಯವರ ಕತೆಗಾರ ಪಂಡಿತಮಾನ್ಯರೊಂದಿಗೆ ಸಂವಾದಕ್ಕೆ ತೊಡಗಿಲ್ಲ. ಸಾಮಾನ್ಯ ಜನರೊಂದಿಗೆ ಸಂವಾದಕ್ಕೆ ತೊಡಗಿದ್ದಾನೆ. ಕಥನವು ಪ್ರೌಢವಾಗುವುದು ಅಥವ ಸರಳವಾಗುವುದು ಕತೆಗಾರನ "ಕೇಳುಗನ" ಕಲ್ಪನೆಯನ್ನು ಆಧರಿಸಿದೆ. ಪಂಪನಂಥ ಕವಿ ಆಸ್ಥಾನ ಪಂಡಿತರನ್ನು ಕೂರಿಸಿಕೊಂಡು ಅವರಿಗೆ ಕಥೆ ಹೇಳಲು ತೊಡಗಿದ್ದರಿಂದಲೇ ಅವನ ಭಾಷೆ, ಲಯ, ಅಭಿವ್ಯಕ್ತಿಯ ವರಸೆಗಳು ತಮ್ಮದೇ ಆದ ಒಂದು ವಿಶಿಷ್ಟ ಸ್ವಭಾವವನ್ನು ರೂಢಿಸಿಕೊಳ್ಳುತ್ತವೆ. ಕುಮಾರವ್ಯಾಸನ ಕೇಳುಗರು ಶ್ರೀಸಾಮಾಜಿಕರಾಗಿರುವುದರಿಂದ ಆತನ ಕಾವ್ಯದ ಹದ ಬೇರೆಯದೇ ಬಗೆಯದಾಗಿದೆ. ಮುದ್ದಣ ಆಧುನಿಕನಾಗಿಯೂ ರಾಮೇಶ್ವಮೇಧದಲ್ಲಿ ಒಂದು ಸ್ವಯಂಕಲ್ಪಿತ ರಾಜಾಸ್ಥಾನದಿಂದ ಮನೆಗೆ ಹಿಂದಿರುಗಿ, ಮನೆಯಲ್ಲಿ ತನ್ನ ಮನದರಸಿ ಮನೋರಮೆಯನ್ನು ಉದ್ದೇಶಿಸಿ ಕಥನಕ್ಕೆ ತೊಡಗುತ್ತಾನೆ. ಇದು ಓದುಗವರ್ಗದ ಪಲ್ಲಟತೆಯ ಸಂಘರ್ಷವಾಗಿದೆ. ಕುವೆಂಪು ತಮ್ಮ ಕಾವ್ಯಸಂದರ್ಭದಲ್ಲಿ ಎರಡು ಬಗೆಯ ಓದುಗ ವರ್ಗವನ್ನು ತಮ್ಮ ಕಣ್ಣ ಮುಂದೆ ಇರಿಕೊಂಡಿದ್ದಾರೆ. ಒಂದು, ಊಹಾ ನಿರ್ಮಿತಿಯಿಂದ ಕಲ್ಪಿಸಿಕೊಂಡ ಪಂಡಿತವರ್ಗವೊಂದರ ಕಾಲ್ಪನಿಕ ಸಮಷ್ಟಿ. ಇನ್ನೊಂದು, ವಾಸ್ತವವಾಗಿ ಕಣ್ಣೆದುರು ಇರುತ್ತಿರುವ ಶ್ರೀಸಾಮಾನ್ಯ ವರ್ಗ. ಕಿಂದರಜೋಗಿ ಮತ್ತು ಶ್ರೀರಾಮಾಯಣದರ್ಶನಂ ಕೃತಿಗಳು ಈ ಎರಡು ವರ್ಗದ ಓದುಗರನ್ನು ಪ್ರತ್ಯೇಕವಾಗಿ ಉದ್ದೇಶಿಸಿವೆ. ಪುತಿನ ಅವರ ಓದುಗವರ್ಗವೂ ಹೀಗೆ ಎರಡಾಗಿ ವಿಭಜಿತಗೊಂಡಿದೆ. ಆದರೆ ಮಾಸ್ತಿ ಉದ್ದೇಶಿಸಿರುವುದು ಒಂದೇ ಸಮಷ್ಟಿಯನ್ನು. ಅದು ಪ್ರಜಾಭುತ್ವದ ಸಂದರ್ಭದಲ್ಲಿ ಕತೆಗಾರ ತನ್ನ ನಿತ್ಯಜೀವನದ ಸಂದರ್ಭದಲ್ಲಿ ಮುಖಾಮುಖಿಯಾಗುತ್ತಿರುವ ಶ್ರೀಸಾಮಾನ್ಯವರ್ಗ. ಸಾಹಿತ್ಯದ ಸಂಸ್ಕಾರವುಳ್ಳ ಶ್ರೀಸಾಮಾನ್ಯ ವರ್ಗ. ಮಾಸ್ತಿಯವರ ಮದಲಿಂಗನ ಕಣಿವೆಯ ಓದುಗ ವರ್ಗ ಮತ್ತು ಶ್ರೀರಾಮಪಟ್ಟಾಭಿಷೇಕದ ಓದುಗ ವರ್ಗ ಒಂದೇ. ಅದು ಅವಿಭಜಿತವಾದ ಮತ್ತು ಸಾಹಿತ್ಯ ಸಂಸ್ಕಾರವುಳ್ಳ ಶ್ರೀಸಾಮಾನ್ಯ ಓದುಗ ವರ್ಗ. ಇದು ವಿಶೇಷವಾಗಿ ಗಮನಿಸಬೇಕಾದ ಅಂಶ. ಈ ಓದುಗ ವರ್ಗ ಮಾಸ್ತಿ ಅವರ ಕಥನ ಕಾವ್ಯದ ಭಾಷೆ ಶೈಲಿ ಲಯಗಳನ್ನು ನಿರ್ಧರಿಸುತ್ತದೆ. ಹೀಗಾಗಿಯೇ ಸ್ವಯಂ ವಿಜೃಂಭಣೆ ಮಾಸ್ತಿಗೆ ಮುಖ್ಯವಾಗುವುದಿಲ್ಲ. ಸರಳತೆ, ಸ್ವಭಾವೋಕ್ತಿ, ಸ್ಪಷ್ಟತೆ, ಸಾಮಾನ್ಯತೆ ಅವರ ಭಾಷೆ ಮತ್ತು ಕಥನವನ್ನು ರೂಪಿಸುತ್ತವೆ. ಮಾಸ್ತಿಯವರ ಕತೆಯಾಗಲಿ ಕಾವ್ಯವಾಗಲಿ ಮಂದ್ರಸ್ಥಾಯಿಯ ಬರವಣಿಗೆ ಯಾಗುವುದಕ್ಕೆ ಮುಖ್ಯ ಕಾರಣವಿದು. ತತ್ಕಾಲೀನ ಬಹುಸಂಖ್ಯಾಕ ಸಮಾಜದೊಂದಿಗೆ ಗೌರವಾದರ ಬೆರೆತ ಸಂಪನ್ನ ಸಂವಾದ ಮಾಸ್ತಿಯವರ ಮೂಲ ಶ್ರುತಿಯನ್ನು ನಿರ್ಧರಿಸಿದೆ. ಸಮಾನ ನೆಲೆಯೇ ಅಲ್ಲಿ ಹೇಳುಗ ಮತ್ತು ಕೇಳುಗರ ನಿಲುವು. ಹಾಗಾಗಿಯೇ ಅದು ಅಧಿಕಾರವಾಣಿಯೂ ಅಲ್ಲ; ಅಪ್ಪಣೆಕೊಡಿಸುವ ಗುರುವಾಣಿಯೂ ಅಲ್ಲ. ಸಹಪ್ರಯಾಣಿಗರೊಂದಿಗೆ ನಿಗರ್ವಿಯಾದ ಯಾತ್ರಿಕನ ಮಾತುಕತೆ. ಸಮಾನಸ್ಕಂಧತೆ ಮಾಸ್ತಿ ಅವರ ಕಥನದ ಶೈಲಿ ಮತ್ತು ಮನೋಧರ್ಮವನ್ನು ನಿಸ್ಸಂದಿಗ್ಧವಾಗಿ ರೂಪಿಸಿದೆ. ಈ ಸಮಾನಸ್ಕಂಧತೆಯ ನೆಲೆ ಅವರ ಸಾಹಿತ್ಯ ಜೀವಿತದ ಉದ್ದಕ್ಕೂ ಅವರ ಜೀವನಾನುಸಂಧಾನವನ್ನು ನಿಯೋಜಿಸಿದೆ. ಯಾವನೇ ಕತೆಗಾರ ಕೇಳುಗನೊಬ್ಬನಿಲ್ಲದೆ ತನ್ನ ಅಸ್ತಿತ್ವವನ್ನೇ ಪಡೆಯಲಾರ. ಮಾಸ್ತಿಯವರ ಭಾಷೆ ಮತ್ತು ಶೈಲಿ ಅಂತರ್ಮುಖಿಯಾಗದಿರುವುದಕ್ಕೆ ಕಾರಣ ಇಲ್ಲಿದೆ. ಪುತಿನ ಅವರ ಸ್ವಗತ ಅವರ ವ್ಯಕ್ತಿತ್ವಕ್ಕೆ ಸಹಜವಾದದ್ದು. ಸಭೆಯಲ್ಲೂ ಕೂಡ ಅವರು ಒಮ್ಮೆಗೇ ಏಕಾಂಗಿಯಾಗಿಬಿಡುತ್ತಿದ್ದರು. ಮಾತು ಸ್ವಗತವಾದಾಗ ಹೊರಗಿನ ಯಾವ ಉಪಾಧಿಯನ್ನೂ ಅದು ಲಕ್ಷಿಸುವುದಿಲ್ಲ. ಪುತಿನ ಪ್ರಧಾನವಾಗಿ ಸ್ವಗತದ ಕವಿ. ಕುವೆಂಪು ಏಕಾಂತ ಮತ್ತು ಲೋಕಾಂತ ಎರಡರಲ್ಲೂ ವ್ಯವಹರಿಸಬಲ್ಲರು. ಬೇಂದ್ರೆಯೂ ಹಾಗೇ ಏಕಾಂತ ಲೋಕಾಂತ ಎರಡರಲ್ಲೂ ಸಹಜವಾಗಿ ಪ್ರವರ್ತಿಸಬಲ್ಲರು. ಮಾಸ್ತಿ ಪ್ರಧಾನಾವಾಗಿ ಲೋಕಾಂತದ ಲೇಖಕರಾಗಿದ್ದಾರೆ. ಅವರಿಗೆ ಏಕಾಂತದ ಧ್ಯಾನವಿಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಅವರು ಏಕಾಂತದಲ್ಲಿ ಧ್ಯಾನಿಸುತ್ತಾರೆ. ಆದರೆ ಅವರ ಅಭಿವ್ಯಕ್ತಿ ಸಾಧ್ಯವಾಗುವುದು ಲೋಕಾಚರಣೆಯಲ್ಲೇ. ಸಮುದಾಯದ ಮುಖಾಮುಖಿಯಲ್ಲೇ. ಮಾಸ್ತಿ ಬಹಳ ಶಕ್ತಿಯುತ ಲೇಖಕರಾಗಿ ಕಾಣುವುದು ಕೂಡ ಅವರು ಬಹಿರ್ಮುಖಿಯಾದಾಗಲೇ. ಇದು ಕತೆಗಾರಿಕೆಯ ಪ್ರಾರಬ್ಧ.

ಮಾಸ್ತಿಯವರ ಕಾವ್ಯದಲ್ಲಿ ಎರಡು ಬಗೆಯ ರಚನೆಗಳಿವೆ. ಅದನ್ನು ನಮ್ಮ ವಿಮರ್ಶಕರೂ ಗುರುತಿಸಿದ್ದಾರೆ. ಭಕ್ತಿಭಾವ ಪೂರಿತವಾದ ಗೀತಾತ್ಮಕ ರಚನೆಗಳು ಒಂದು ಬಗೆ. ಓದುಗ ವರ್ಗವನ್ನು ಕುರಿತು ತೊಡಗುವ ಕಥನಾತ್ಮಕ ಬರವಣಿಗೆ ಎರಡನೆಯ ಬಗೆ. ಅವರು ಶಕ್ತಿಶಾಲಿ ಲೇಖಕರಾಗಿ ಕಾಣಿಸುವುದು ಎರಡನೆಯ ಬಗೆಯ ಬರವಣಿಗೆಯಲ್ಲಿ. ಮಾಸ್ತಿಯವರ ಭಾವಗೀತೆಗಳು ಬೇಂದ್ರೆ, ಕುವೆಂಪು, ಪುತಿನ ಅವರ ಭಾವಗೀತೆಗಳ ಹತ್ತಿರಕ್ಕೂ ಬರಲಾರವು. ಮಾಸ್ತಿ ಅವರ ಏಕಾಂತದ ಧ್ವನಿ ದೃಢವಾಗುವುದೇ ಇಲ್ಲ. ಮಧುರ ಭಕ್ತಿಯ ಆರ್ದ್ರತೆ ಮಾತ್ರ ಅಲ್ಲಿ ಕಾಣುತ್ತದೆ. ಅದೂ ನಿವೇದನೆಯ ಸ್ವರೂಪದ್ದು. ಮಧುರಚೆನ್ನರಲ್ಲಿ ಕಾಣುವಂತೆ ಜೀವವನ್ನೇ ಹಿಡಿದು ಅಲ್ಲಾಡಿಸುವಂಥದಲ್ಲ. ಅದಕ್ಕೆ ಆ ಬಗೆಯ ತೀವ್ರತೆಯೂ ಇಲ್ಲ; ನಿಗೂಢತೆಯೂ ಇಲ್ಲ. ಭಾವನಿಬಿಡವಾದ ಒಂದು ಪ್ರಪತ್ತಿ ಭಾವ ಅಲ್ಲಿ ಹೃದ್ಯವಾದ ಅಭಿವ್ಯಕ್ತಿಯನ್ನು ಪಡೆಯುವುದು. ಅಷ್ಟೆ. ಮಾಸ್ತಿಯವರ ಘನವಾದ ಕವಿತೆಗಳು ಅವರ ಕಥನಾತ್ಮಕ ಕವಿತೆಗಳೇ ಆಗಿವೆ. ಕಾರಣ ಅವು ಬದುಕನ್ನು ಅದರ ಎಲ್ಲ ಸೂಕ್ಷ್ಮತೆ ಮತ್ತು ಆಳದಲ್ಲಿ ಸ್ಪರ್ಶಿಸಲು ಹವಣಿಸುತ್ತವೆ. ರಾಮನವಮಿ, ಮೂಕನ ಮಕ್ಕಳು, ಗೌಡರ ಮಲ್ಲಿ ಮತ್ತು ನವರಾತ್ರಿಯ ಕೆಲವು ಕವನಗಳು ಮಾಸ್ತಿಯವರ ಘನವಾದ ಶಕ್ತಿಯ ಸಂಪರ್ಕಕ್ಕೆ ನಮ್ಮನ್ನು ತರುತ್ತವೆ. ಕಥನಕ್ಕೆ ಸಹಜವಾದ ಬಹಿರ್ಮುಖತೆ, ವಾಚಾಳತ್ವ ಅಲ್ಲಿ ಇದೆ ನಿಜ. ಹಾಗಾಗಿಯೇ ಅವರ ಅತ್ಯಂತ ಸಮರ್ಥವಾದ ರಾಮನವಮಿಯಲ್ಲೂ ಅತಿಮಾತಿನ ಜಾಳು ಇದೆ. ಎಂಥ ಬಿಗಿಯಾದ ಸಂದರ್ಭವನ್ನೂ ಮಾಸ್ತಿ ಅಳ್ಳಕ ಮಾಡಿಬಿಡುತ್ತಾರೆ ಎಂದು ಮತ್ತೆ ಮತ್ತೆ ಅನ್ನಿಸುತ್ತದೆ. ಆದರೆ ಒಟ್ಟಂದದಲ್ಲಿ ಆ ಕವಿತೆಗಳು ಮಾಡಿಸುವ ಜೀವನ ದರ್ಶನ ಘನವಾದುದಾಗಿರುತ್ತದೆ. ಅವರ ಗದ್ಯದ ಸದ್ಯತನ, ಮಾತಿನ ಸಹಜತೆ, ಲಯದ ಮಂದ್ರಸ್ಥಾಯಿ, ಯಾವತ್ತೂ ಅತಿಗೊಳ್ಳದ ಭಾವಕ್ಷಮತೆ ನಮ್ಮನ್ನು ಆದ್ಯಂತವಾಗಿ ಮತ್ತು ಸಾವಧಾನವಾಗಿ ಆವರಿಸಿಕೊಳ್ಳುತ್ತವೆ. ಮಾಸ್ತಿಯವರದ್ದು ಆರ್ಷೇಯ ನಂಬುಗೆಯ ಕಾವ್ಯವೋ , ಆಧುನಿಕ ಕಾವ್ಯವೋ?, ಮೌಲ್ಯಶೋಧಕ ಕಾವ್ಯವೋ, ಮೌಲ್ಯಾರಾಧಕ ಕಾವ್ಯವೋ? ಅವರಲ್ಲಿ ಕಾಣುವುದು ಧಾರ್ಮಿಕತೆಯೋ ಆಧ್ಯಾತ್ಮಿಕತೆಯೋ? ಅವರದ್ದು ಪ್ರತಿಮಾ ನಿರ್ಮಿತಿಯ ಕಾವ್ಯವೋ, ಸ್ವಭಾವೋಕ್ತಿಯ ಕಾವ್ಯವೋ? ಮಾಸ್ತಿಯವರದ್ದು ಸಮಾಧಾನದ ಕಾವ್ಯವೋ, ದುರಂತದ ಅರಿವಿನ ಕಾವ್ಯವೋ? ಅದು ಪರುಷವಾಕ್ಯದ ಕಾವ್ಯವೋ, ಪ್ರಸನ್ನ ಮಾತಿನ ಕಾವ್ಯವೋ? ಆಕಾಶಕ್ಕೆ ಜಿಗಿಯುವ ಕಾವ್ಯವೋ, ನೆಲಕ್ಕೆ ಅಂಟಿಕೊಂಡಿರುವ ಕಾವ್ಯವೋ? ಕೇಡಿನ ಎಚ್ಚರವುಳ್ಳ ಕಾವ್ಯವೋ, ಮಂಗಳಾಯತನದ ಕಾವ್ಯವೋ?- ಮುಂತಾದ ಯುಗಳ ಪ್ರಶ್ನೆಗಳನ್ನು ಎತ್ತಿಕೊಂಡು ಕನ್ನಡ ವಿಮರ್ಶೆ ಮೊದಲಿನಿಂದಲೂ ಚರ್ಚಿಸುತ್ತಾ ಬಂದಿದೆ. ಮುಗಳಿ, ಕೀರ್ತಿನಾಥ ಕುರ್ತಕೋಟಿ, ಚಂದ್ರಶೇಖರ ನಂಗಲಿಯಂಥ ವಿಮರ್ಶಕರೂ, ವಿಸೀ, ಅಡಿಗ, ಕೆ ಎಸ್ ನ ಮೊದಲಾದ ಕವಿಗಳೂ ಈ ಪ್ರಶ್ನೆಗಳನ್ನು ಎತ್ತಿಕೊಂಡು ಮಾಸ್ತಿಕಾವ್ಯದ ಬಗ್ಗೆ ಒಳನೋಟಗಳುಳ್ಳ ವಿಮರ್ಶೆಯನ್ನು ಬರೆದಿದ್ದಾರೆ. ಈ ಪ್ರಶ್ನೆಗಳು ಮಾಸ್ತಿಯವರ ಕಾವ್ಯ ಮತ್ತು ಮನೋಧರ್ಮಗಳನ್ನು ಆಳದಲ್ಲಿ ಪೃತ್ಥಕ್ಕರಿಸಿರುವುದರಿಂದ ಮುಖ್ಯವೆನಿಸುತ್ತವೆ. ಆದರೆ ನಾವು ಈವತ್ತು ಕೇಳಬೇಕಾದದ್ದು ಈ ನಿರ್ದಿಷ್ಟ ಸ್ವರೂಪದ ಕಾವ್ಯದಿಂದ ನಾವು ಪಡೆಯಬಹುದಾದದ್ದು ಏನನ್ನು ಎಂಬುದನ್ನು. ಕವಿಯ ಮತ್ತು ಕಾವ್ಯದ ಮನೋಧರ್ಮ ಮತ್ತು ಸ್ವರೂಪಗಳನ್ನು ಯಾರಿಗೂ ತೊಡೆದುಹಾಕಲಿಕ್ಕಾಗುವುದಿಲ್ಲ. ಆದರೆ ಈ ಮನೋಧರ್ಮ ಮತ್ತು ಈ ಮನೋಧರ್ಮ ನಿರ್ಮಿಸಿರುವ ಕಾವ್ಯ ಬದುಕಿನ ಪರಾಂಬರಿಕೆಗೆ ಓದುಗ ಸಮುದಾಯಕ್ಕೆ ನೀಡುವ ಒಳನೋಟಗಳು ಯಾವುವು ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಸಮಾಜ ಮತ್ತು ವ್ಯಕ್ತಿಜೀವಿತದ ಗರಿಷ್ಠ ಅರಳುವಿಕೆಗೆ ಆರ್ಷೇಯ ನಂಬಿಕೆ ಮತ್ತು ಶ್ರದ್ಧಾಜೀವನವು ಒಂದು ಬಗೆಯ ಸಂಪನ್ನವಾದ ಮಣ್ಣು ನೀರು ಬಿಸಿಲು ಒದಗಿಸುತ್ತದೆ ಎಂಬುದನ್ನು ಮಾಸ್ತಿ ಕಾವ್ಯ ಪ್ರತಿಪಾದಿಸುತ್ತಿದೆ. ಅದಕ್ಕಾಗಿ ಯುಕ್ತವಾದ ಮತ್ತು ನಂಬಿಕೆಗೆ ಅರ್ಹವಾದ ಕೆಲವು ಜೀವನ ದೃಷ್ಟಾಂತಗಳನ್ನು ಒದಗಿಸುವಲ್ಲಿ ಅವರ ಕಥನಕವಿತೆಗಳು ಅತ್ಯಂತ ಪ್ರಾಮಾಣಿಕ ಮತ್ತು ನಿರ್ವಂಚನೆಯ ನೆಲೆಯಲ್ಲಿ ತೊಡಗಿಕೊಂಡಿವೆ. ಸಮಾಜಮುಖತೆಯನ್ನೇ ಒಂದು ಗುಣಮೌಲ್ಯವಾಗಿ ರೂಪಿಸಿಕೊಳ್ಳುವಲ್ಲಿ ಮಾಸ್ತಿಯವರ ಕಾವ್ಯ ಘನವತ್ತಾದ ಸಾಧನೆ ಮಾಡಿದೆ. ಅವರಿಗೆ ಸಮಾಜಪುರುಷ ಮಾತ್ರವಲ್ಲ, ಅಂತರಂಗದ ದೈವವೂ ಕೂಡಾ ಬಹಿರಂಗದಲ್ಲೇ, ಆಪ್ತ ಸನ್ನಿಧಿಯಲ್ಲೇ ಆವಿರ್ಭವಿಸಬೇಕಾಗಿದೆ!(ಬ್ರಹ್ಮಾಂಡವನ್ನು ನೋಡದೆ ದೇವರ ಕಾಣ್ಬರೆ?).

ನನ್ನ ಈವರೆಗಿನ ಹೇಳಿಕೆಗಳನ್ನು ದೃಢೀಕರಿಸುವ ಕನ್ನಡದ ಇಬ್ಬರು ಮಹತ್ವದ ಕವಿಗಳ ಗದ್ಯ ಮತ್ತು ಪದ್ಯರೂಪೀ ಮಾತುಗಳನ್ನು ಒಟ್ಟಿಗೇ ಇಟ್ಟು ನನ್ನ ಟಿಪ್ಪಣಿಯನ್ನು ಮುಗಿಸುತ್ತೇನೆ. ಅಡಿಗರು ಮಾಸ್ತಿಯವರ ಕವಿತೆಯನ್ನು ಕುರಿತು ಬರೆಯುತ್ತಾರೆ: "ಬಾಳಿನ ವೈವಿಧ್ಯದಲ್ಲಿ, ಸುಖ ದುಃಖಗಳಲ್ಲಿ, ಉಬ್ಬರ ಇಳಿತಗಳಲ್ಲಿ, ಏರು ತಗ್ಗುಗಳಲ್ಲಿ, ಎಲ್ಲೂ ತೂಕ ತಪ್ಪದಂತೆ, ಧೃತಿಗೆಡದಂತೆ, ಶಾಂತವಾಗಿ, ಪ್ರಜೆಯ ಬೆಳಕಿನಲ್ಲಿ ಶುದ್ಧವಾಗಿ, ಸಮೃದ್ಧವಾಗಿ ವ್ಯಕ್ತವಾಗುವ ಮಾಸ್ತಿಯವರ ಅಂತರಂಗದ ಅನುಭವದ ಅಭಿವ್ಯಕ್ತಿಗೆ ಬೆಳದಿಂಗಳ ಪ್ರಶಾಂತಿ, ಹೂವುಗಳ ಮೃದತ್ವ, ಬಯಲಲ್ಲಿ ಹರಿಯುವ ಅಗಲ ಕಿರಿದಾದ ಹೊಳೆಯ ಸ್ಫಟಿಕ ನಿರ್ಮಲ ಜಲದ ಪಾರದರ್ಶಕತೆ ಇದೆ. ಇವರ ಸಾಹಿತ್ಯಕ್ಕೆ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸಬಲ್ಲ ಯುಗಾಂತರಕಾರಕ ಆವೇಶ, ತೀವ್ರತೆ, ತಲಸ್ಪರ್ಶಿತ್ವ, ಆಕಾಶೋಡ್ಡಯನ ಇಲ್ಲ. ಅದು ಪುರಾತನವಾದೊಂದು ಸಮಾಜದ ಸ್ಥಿರ ಮೌಲ್ಯಗಳಲ್ಲಿ ಬೇರೂರಿ ನಿಂತದ್ದು. ಸಜ್ಜನನೊಬ್ಬನ ತುಂಬು ಬದುಕಿನ ಕೊಂಬೆ ಕೊಂಬೆಗಳಲ್ಲೂ ತುಂಬಿ ಮಾಗಿ ಹಣ್ಣಾಗಿರುವ ರೀತಿಯ ಕೃತಿರಾಶಿಯಿದು....ಮಾಸ್ತಿಯವರ ಕವಿತೆ ತಣಿಸುವ ಕವಿತೆ. ಇದು ಬಹಳ ಆಳಕ್ಕೆ ಇಳಿದು ಮನಸ್ಸಿನ ಮೂಲವನ್ನು ಕೆದಕಿ ಬೆದಕಿ ನೋಡುವುದಿಲ್ಲ. ಪ್ರಜೆಯ ಕೆಳಕ್ಕೆ ಇರುವ ದಾನವತ್ವ ಪಶುತ್ವಗಳಿಗೆ ಮುಖಾಮುಖಿ ಆಗುವುದಿಲ್ಲ. ಕನಸುಗಳ ರೆಕ್ಕೆ ಬಿಚ್ಚಿ ನಮಗೆ ದೂರದ ಅಂತರಾಳಗಳ ಯಾತ್ರೆ ಮಾಡಿಸುವುದಿಲ್ಲ. ರುದ್ರವೂ ಭೀಕರವೂ ಆದ ತಮಸ್ಸನ್ನು ಮರೆಸಿ ಬದುಕಿನಲ್ಲಿರುವ ಚೆಲುವನ್ನೂ ನಲಿವನ್ನೂ ನಗುವನ್ನೂ ಬೆಳಕನ್ನೂ ತೋರಿಸುತ್ತದೆ. ಆದ ಕಾರಣವೇ ಈ ಕವಿತೆ ನಮಗೆ ಸಂಪೂರ್ಣ ತೃಪ್ತಿಯನ್ನು ಕೊಡುವುದಿಲ್ಲ. ಆದರೆ ಎಷ್ಟನ್ನು ಕೊಡಲು ಉದ್ದೇಶಿಸಿರುತ್ತದೋ ಅಷ್ಟನ್ನು ಮಾತ್ರ ಕೊಟ್ಟೇಕೊಡುತ್ತದೆ. ಅದು ಎಷ್ಟನ್ನು ನೀಡುತ್ತದೋ ಅಷ್ಟೂ ಮಹತ್ವದ್ದು. ಮರೆಯಬಾರದ್ದು. ಆದಕಾರಣ ಮಾಸ್ತಿಯವರ ಕಾವ್ಯಾಭ್ಯಾಸ ಮನಸ್ಸಿಗೆ ತಂಪನ್ನು ನೀಡುವುದಲ್ಲದೆ ನಮ್ಮ ಅರಕೆಗಳನ್ನೆಷ್ಟೋ ತುಂಬಲೂ ಸಮರ್ಥವಾಗಿದೆ. ಎಲ್ಲ ಕಾಲಗಳಲ್ಲೂ ಕಾವ್ಯಾಭ್ಯಾಸಿಗಳು , ಸಾಹಿತ್ಯಪ್ರಿಯರು ಮತ್ತೆ ಮತ್ತೆ ಮಾಸ್ತಿಯವರ ಕವಿತೆಗಳ ಕಡೆ ಬರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ."

ಕನ್ನಡದ ಇನ್ನೊಬ್ಬ ಮಹತ್ವದ ಕವಿ ಕೆ.ಎಸ್.ನ ಅವರು ಮಾಸ್ತಿಯವರ ಬಗ್ಗೆ ಬರೆದ ಕವಿತೆ, ಮಾಸ್ತಿಯವರ ಕಾವ್ಯವನ್ನು ಇನ್ನೊಂದು ನೆಲೆಯಲ್ಲಿ ಕೈವಾರಿಸುತ್ತದೆ.


ಮಾಸ್ತಿಯವರ ಕವಿತೆ
ಮಾಸ್ತಿಯವರಾಸ್ತಿ ಆ ಸಣ್ಣಕತೆಗಳೇ ಎಂದು
ಸಾಂಬಶಾಸ್ತ್ರಿಯ ಸಿದ್ಧಾಂತ. ಕೇಶವಮೂರ್ತಿ
ಶ್ರೀನಿವಾಸರ ಕವಿತೆ ಒಣ ಗದ್ಯವೇ ಎಂದು
ಎಗರಿ ಬೀಳುವನು. ಈ ಸಂಶಯವೇ ಕವಿಕೀರ್ತಿ.
ಪರಿಚಿತ ಕವಿಗಳೆಲ್ಲ ಬರಿದೆ ರಾರಾಜಿಪರು
ಪ್ರಾಚೀನ ಪ್ರಾರಬ್ಧ ಹೊತ್ತು. ಅದ ಹೊಗಳುವರು
ಶ್ರೀನಿವಾಸರ ಕೃತಿಯನೇನೆಂದು ಮೆಚ್ಚುವರು?
ಗಡವಿಲ್ಲ, ದಲ್ಲಿಲ್ಲ, ಮೇಣ್-ಬತ್ತಿ ಹೊಗೆಯಿಲ್ಲ.
ಅಪ್ರಕೃತ ಸಂಸ್ಕೃತದವಾಂತರದ ಧಗೆಯಿಲ್ಲ.
ಇಲ್ಲಿ ಜೀವನದಂತೆ ಕವಿತೆ; ಜೀವದ ಉಸಿರು.
ಮಳೆಬಿದ್ದ ಸಂಜೆ ಬೀದಿಯಲಿ ಸಾವಿರ ಬೆಳಕು,
ಹಸುರು ನಗೆ, ಕೆಂಪು ಗಾಯಗಳು. ಬಂಡೆಯನ್ನುತ್ತು
ಬೆಳೆದ ಮೂಗಿಂಗೆ ಈ ಸಹಜ ಕವಿತೆಯ ಮುತ್ತು
ಗ್ರಾಹ್ಯವಾದೀತೆ? ಇದಕಿಲ್ಲ ಕವಿತೆಯ ಹೆಸರು!


ಅಡಿಗರದ್ದು ವಿಮರ್ಶಾತ್ಮಕ ಮೆಚ್ಚುಗೆ. ಕೆ ಎಸ್ ನ ಅವರದ್ದು ಕಾವ್ಯಾದರದ ಮೆಚ್ಚುಗೆ. ಈ ಇಬ್ಬಗೆಯ ಮಾತುಗಳ ಅಖಂಡ ಗ್ರಹಿಕೆ ಮಾಸ್ತಿಯವ ಕಾವ್ಯದ ಅನುಸಂಧಾನಕ್ಕೆ ಹದವಾದ ನೆಲೆಯೊಂದನ್ನು ಕಲ್ಪಿಸಬಲ್ಲದೆಂಬುದು ನನ್ನ ವಿಶ್ವಾಸ.