Tuesday, September 29, 2009

ಸ್ನೇಹ ಪ್ರೀತಿಗಳನ್ನೇ ದೇವರೆಂದು ನಂಬಿರುವ ಜಿ.ಎಸ್.ಎಸ್.

ಸುವರ್ಣ ಕರ್ನಾಟಕ ಸಂದರ್ಭದ ಈ ಬಾರಿಯ ರಾಜ್ಯೋತ್ಸವದ ಆಚರಣೆಯಲ್ಲಿ ಒಂದು ಮಹತ್ವದ ಸಂಗತಿಯೆಂದರೆ ರಾಷ್ಟ್ರಕವಿ ಗೋವಿಂದಪೈ ಮತ್ತು ರಾಷ್ಟ್ರಕವಿ ಕುವೆಂಪು ಅವರ ನಂತರ ಮತ್ತೋರ್ವ ಮಹತ್ವದ ಸಾಧಕನನ್ನು ನಮ್ಮ ಸರ್ಕಾರ ರಾಷ್ಟ್ರಕವಿಯಾಗಿ ನಾಮಕರಣ ಮಾಡಿ ಗೌರವಿಸುತ್ತಿರುವುದು! ಆ ವಿಶೇಷ ಗೌರವಕ್ಕೆ ಪಾತ್ರರಾಗುತ್ತಿರುವ ವ್ಯಕ್ತಿ ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿ ಮತ್ತು ಸಾಂಸ್ಕೃತಿಕ ನಾಯಕರಾದ ಡಾಜಿ.ಎಸ್.ಶಿವರುದ್ರಪ್ಪ ಅವರು. ತಿಂಗಳ ಹಿಂದೆ ಒಮ್ಮೆ ಜಿ.ಎಸ್.ಎಸ್. ಅವರೊಂದಿಗೆ ಮಾತಾಡಿದಾಗ-" ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಸರ್ಕಾರ ಮತ್ತೊಬ್ಬ ಮಹಾ ಸಾಧಕರನ್ನು ರಾಷ್ಟ್ರ ಕವಿಯಾಗಿ ನಾಮಕರಣ ಮಾಡುತ್ತದೆಂದು ಸುದ್ದಿ... ಆ ಗೌರವ ಅಕಸ್ಮಾತ್ ನಿಮ್ಮ ಪಾಲಾದರೆ...ನಿಮ್ಮ ಸಹಜ ಪ್ರತಿಕ್ರಿಯೆ?" ಎಂದಾಗ, ಜಿಎಸೆಸ್ ಹೇಳಿದರು:"ಆದಾಗ ತಾನೇ ಆ ಪ್ರಶ್ನೆ?"....."ಒಂದು ವೇಳೆ ಆದರೆ?"..ಜಿಎಸೆಸ್ ನಕ್ಕು :"ಕೆ.ಎಸ್.ನರಸಿಂಹಸ್ವಾಮಿ ಅವರು ಹೇಳಿಲ್ಲವಾ? ಮಲ್ಲಿಗೆ ಹಾರ ಕೊರಳಿಗೆ ಭಾರ!"

ಪ್ರಾಯಃ ಇದು ಸಹಜ ಕವಿ ಒಬ್ಬರು ಮಾತ್ರ ನೀಡಬಹುದಾದ ಪ್ರತಿಕ್ರಿಯೆ. ಜಿಎಸೆಸ್ ತಮ್ಮ ಗುರುಗಳಾದ ಕುವೆಂಪು ಅವರನ್ನು ರಾಷ್ಟ್ರಕವಿಯೆಂದು ಗೌರವಿಸಿದ್ದನ್ನು ನೆನೆಸಿಕೊಂಡರು.ಅಂಥ ಗೌರವ ತಮಗೆ ಅನ್ನುವುದು ಅವರಿಗೆ ಸುಲಭವಾಗಿ ಒಪ್ಪಿಕೊಳ್ಳಬಹುದಾದ ಸಂಗತಿಯಾಗಿರಲಿಲ್ಲ. ಅದು ಅವರ ಸ್ವಭಾವಕ್ಕೆ ಸಹಜವಾದ ವಿನಯದ ಅಭಿವ್ಯಕ್ತಿಯಾಗಿತ್ತು.ಆದರೆ ಸದ್ಯದ ಸಂದರ್ಭದಲ್ಲಿ ಒಬ್ಬ ಕವಿ,ವಿಮರ್ಶಕ,ಕಾವ್ಯಚಿಂತಕರಾಗಿ ಜಿಎಸ್ಸೆಸ್ ಬಹು ಎತ್ತರದ ವ್ಯಕ್ತಿಯಾಗಿದ್ದಾರೆ ಅನ್ನುವುದು ನಿರ್ವಿವಾದದ ಸಂಗತಿ.ಜೊತೆಗೆ ಅವರು ಒಬ್ಬ ಸಾಂಸ್ಕೃತಿಕ ನಾಯಕರಾಗಿ ರೂಪಗೊಂಡಿದ್ದಾರೆ ಎನ್ನುವುದು ಇನ್ನೂ ಮಹತ್ವದ ಸಂಗತಿ. ಎಷ್ಟೋ ಜನ ಮಹತ್ವದ ಲೇಖಕರಿಗೆ ಈ ಸಾಂಸ್ಕೃತಿಕ ನಾಯಕತ್ವದ ಪ್ರಭಾವಲಿ ಸಿದ್ಧಿಸಿರುವುದಿಲ್ಲ! ಜಿ.ಎಸ್.ಎಸ್. ತಮ್ಮ ಸುದೀರ್ಘ ಜೀವಿತದ ಹರಹಿನಲ್ಲಿ ಉದ್ದಕ್ಕೂ ತಾವು ತೆಗೆದುಕೊಂಡ ರಾಜಕೀಯ ಸಾಂಸ್ಕೃತಿಕ ನಿಲುವುಗಳಿಂದ ಕರ್ನಾಟಕ ಒಂದು ಎಚ್ಚರದ ಪ್ರಜೆಯಾಗಿ ರೂಪಗೊಂಡಿದ್ದಾರೆ. ಇಂಥ ವ್ಯಕ್ತಿ ಅಖಂಡ ಕರ್ನಾಟಕದ ಬಿಕ್ಕಟ್ಟು ಮತ್ತು ಉಲ್ಲಾಸದ ಘಳಿಗೆಗಳಿಗೆ ಸಾಕ್ಷಿ ಮಿಡಿತಗಳನ್ನು ನೀಡುತ್ತಾ ಬಂದಿರಬೇಕಾಗುತ್ತದೆ.ಕರ್ನಾಟಕದ ಒಟ್ಟಾರೆ ಹಿತ ಈ ಬಗೆಯ ವ್ಯಕ್ತಿತ್ವದ ನಿರಂತರ ನಿಲುವಿನ ಅವಿಭಾಜ್ಯ ಅಂಗವಾಗಿರುತ್ತದೆ. ಒಂದು ಧರ್ಮ, ಒಂದು ರಾಜಕೀಯ ಪಕ್ಷ, ಒಂದು ನಿರ್ದಿಷ್ಟ ಸಂಸ್ಥೆ ,ಒಂದು ಸಾಹಿತ್ಯಕ ಗುಂಪು-ಇವುಗಳೊಂದಿಗೆ ತನ್ನನ್ನು ಸಮೀಕರಿಸಿಕೊಳ್ಳದೆ ಅನಿಕೇತನತ್ವ ಸಾಧಿಸದ ಹೊರತು ಅಖಂಡ ಕರ್ನಾಟಕದ ಸಾಕ್ಷೀಪ್ರಜೆಯಾಗಿ ರೂಪಗೊಳ್ಳುವುದು ಸಾಧ್ಯವಾಗುವುದಿಲ್ಲ.ತಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಲಿ ಅವನ್ನು ಸಮಷ್ಟಿಯ ಹಿತಕ್ಕಾಗಿ ಮೀರಿನಿಲ್ಲುವುದು ಅಗತ್ಯವಾಗುತ್ತದೆ. ತಾವು ನವೋದಯ ಕಾವ್ಯವನ್ನು ಮೆಚ್ಚುವವರಾಗಿರಬಹುದು. ಆದರೆ ನವ್ಯದ ಸತ್ವ ಸಾಮರ್ಥ್ಯಗಳಿಗೆ ತೆರೆದ ಮನಸ್ಸುಳ್ಳವರಾಗಿರಬೇಕಾಗುತ್ತದೆ. ಹೊಸದಾಗಿ ಕಾಣಿಸಿಕೊಳ್ಳುವ ಬಂಡಾಯ ದಲಿತ ಚಳುವಳಿಗಳು ಸಾಮಾಜಿಕ ಸಾಂಸ್ಕೃತಿಕ ನೆಲೆಯಲ್ಲಿ ಅನಿವಾರ್ಯವೆನಿಸಿದಾಗ ಅವನ್ನು ಮೆಚ್ಚಿ ಪ್ರೋತ್ಸಾಹಿಸುವ ಭವಿಷ್ಯದ್ ಹಿತಾಕಾಂಕ್ಷಿಯಾದ ನಿಲುವನ್ನು ಹೊಂದಿರಬೇಕಾಗುತ್ತದೆ. ಇಂತಹ ನಿರ್ಮಮ ನಿಷ್ಠುರತೆ ಕೇವಲ ಸಾಹಿತ್ಯಕ ಸಂದರ್ಭಕ್ಕೆ ಅನ್ವಯಿಸಿ ಮಾತ್ರವಲ್ಲ. ಸಾಮಾಜಿಕ ಸಾಂಸ್ಕೃತಿಕ ಸಂದರ್ಭಗಳಲ್ಲೂ ಜಿ.ಎಸ್.ಎಸ್ ಅವರು ಹೇಗೆ ತಮ್ಮ ನಿರ್ಮಮ ನಿಷ್ಠುರ ಪ್ರಜೆಯನ್ನು ಕಾಯ್ದುಕೊಂಡು ಬಂದಿದ್ದಾರೆ ಅನ್ನುವುದನ್ನು ಇಡೀ ಕನ್ನಡ ನಾಡೇ ಬಲ್ಲುದು.ಅದು ಜಾತಿವಿಷಯದಲ್ಲಿ ಆಗಿರಬಹುದು; ಧರ್ಮದ ವಿಷಯದಲ್ಲಿ ಆಗಿರಬಹುದು; ಭಾಷೆಯ ವಿಷಯದಲ್ಲಿ ಆಗಿರಬಹುದು. ನಮ್ಮಲ್ಲಿ ತೀವ್ರವಾದ ಅಭಿಪ್ರಾಯಭೇದಗಳು ಇರಬಹುದು. ಆದರೆ ನಾವೆಲ್ಲ ಒಟ್ಟು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ಹೊತ್ತಿರುವವರು. ಆದಕಾರಣ ನಾವು ಒಂದುಕಡೆ ಸೇರಿ ಕೂತು ಚರ್ಚೆ ಮಾಡೋಣ. ಸಾಧ್ಯವಾದರೆ ಒಮ್ಮತದ ನಿಲುವಿಗೆ ಬರೋಣ. ಸಾಧ್ಯವಾಗದಿದ್ದರೆ ಪರಸ್ಪರ ಗೌರವ ಇಟ್ಟುಕೊಂಡೆ ಅಭಿಪ್ರಾಯ ಭೇದಗಳನ್ನು ಹೊಂದೋಣ ಎನ್ನುವ ಪ್ರಜಾಪ್ರಭುತ್ವವಾದೀ ನಿಲುವನ್ನು ತಮ್ಮ ಬದುಕಿನ ಉದ್ದಕ್ಕೂ ಪ್ರಕಟಿಸುತ್ತಾ, ನಿತ್ಯದ ಆಚರಣೆಯಲ್ಲಿ ರೂಢಿಸುತ್ತಾ ಬಂದಿರುವವರು ಡಾಜಿ.ಎಸ್.ಶಿವರುದ್ರಪ್ಪನವರು. ರಾಜಕೀಯ ,ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ವಲಯಗಳ ವಿರೋಧೀನೆಲೆಯ ವಕ್ತಾರರೂ ಜಿ.ಎಸ್.ಎಸ್ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡು ಬಂದಿರುವುದು ಇದೇ ಕಾರಣಕ್ಕೆ ಎಂದು ನಾನು ಭಾವಿಸುತ್ತೇನೆ. ಇಂಥ ಸರ್ವ ಸಮ್ಮತ ವ್ಯಕ್ತಿತ್ವವನ್ನು ಹೊಂದಿರುವವರು ಯಾವತ್ತೂ ವಿರಲವೇ. ಸದ್ಯದ ಸಂದರ್ಭದಲ್ಲಿ ಜಿ.ಎಸ್.ಎಸ್. ಅಂತಹ ವಿರಲ ವ್ಯಕ್ತಿಗಳಲ್ಲಿ ಒಬ್ಬರು...ಮತ್ತು ಮುಖ್ಯರು. ಹಾಗಾಗಿ ಅವರನ್ನು ರಾಷ್ಟ್ರಕವಿ ಎಂದು ಸರ್ಕಾರ ಗೌರವಿಸುತ್ತಿರುವುದು ಕನ್ನಡ ನಾಡಿನ ಸಮಷ್ಟಿಪ್ರಜೆಯ ಸಮ್ಮತಿಯ ಚಿಹ್ನೆ ಎಂದು ನಾನು ಭಾವಿಸುತ್ತೇನೆ.

*****

ಕೆಲವು ದೃಷ್ಟಿಯಲ್ಲಿ ನಾನು ತುಂಬಾ ಅದೃಷ್ಟಶಾಲಿ. ೧೯೭೧ರಲ್ಲಿ ನಾನು ಬೆಂಗಳೂರಿಗೆ ನನ್ನ ಹಳ್ಳಿಯಿಂದ ಒಲಸೆ ಬಂದಾಗ ಅನೇಕ ಸಾಹಿತ್ಯ ದಿಗ್ಗಜರು, ಸಾಂಸ್ಕೃತಿಕ ನಾಯಕರು ನನ್ನನ್ನು ತಮ್ಮ ಅಂತರ್ವಲಯಕ್ಕೆ ತೆಗೆದುಕೊಂಡರು. ನಾನು ಅವರ ಆಪ್ತವರ್ಗದಲ್ಲಿ ಒಬ್ಬನಾಗಿ ಹೋದೆ. ಡಾಪುತಿನ, ಡಾಗೋಪಾಲಕೃಷ್ಣ ಅಡಿಗ, ಶ್ರೀ ಕೆ.ಎಸ್.ನರಸಿಂಹಸ್ವಾಮಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಡಾಜಿ.ಎಸ್.ಶಿವರುದ್ರಪ್ಪ -ಅವರಲ್ಲಿ ಮುಖ್ಯರು.ನಾನು ಎಂ.ಎ. ದಲ್ಲಿ ಜಿ.ಎಸ್.ಎಸ್.ಅವರ ವಿದ್ಯಾರ್ಥಿ. ಆಮೇಲೆ ಉದ್ದಕ್ಕೂ ಜಿ.ಎಸ್.ಎಸ್. ನನ್ನ ಜೀವನದಲ್ಲಿ ನಿರ್ಣಾಯಕ ಕ್ಷಣಗಳಲ್ಲಿ ಮಹತ್ವದ ಭೂಮಿಕೆ ನಿರ್ವಹಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿಯನ್ನು ಆಪ್ತ ಸ್ನೇಹಿತನಂತೆ ನಡೆಸಿಕೊಂಡಿದ್ದಾರೆ. ಸ್ನೇಹಿತನನ್ನು ಪರಮಬಂಧುವಿನಂತೆ ನಡೆಸಿಕೊಂಡಿದ್ದಾರೆ. ನನ್ನ ಸಾಹಿತ್ಯಕ ಜೀವನದ ಬಿಕ್ಕಟ್ಟುಗಳಲ್ಲಿ ನನಗೆ ಆಸರೆಯಾಗಿ ನಿಂತವರು ಅವರು. ಹಾಗೇ ಬದುಕಿನ ಕಷ್ಟ ನಿಷ್ಠುರದ ಸಂದರ್ಭಗಳಲ್ಲೂ. ವಿದ್ಯಾರ್ಥಿಗಳ ಬಗ್ಗೆ ಅವರ ಪ್ರೀತಿ ಅಪರಿಮಿತವಾದುದು. ನಮ್ಮ ಈವತ್ತಿನ ಅನೇಕ ಮುಖ್ಯ ಲೇಖಕರು ಜಿ.ಎಸ್.ಎಸ್. ಅವರ ಶಿಷ್ಯರು! ಆ ಶಿಷ್ಯರ ಬಗ್ಗೆ ಯುಕ್ತ ಸಂದರ್ಭಗಳಲ್ಲಿ ಅವರೇ ಸೊಗಸಾದ ಲೇಖನಗಳನ್ನು ಬರೆದು ತಮ್ಮ ಶಿಷ್ಯ ಪ್ರೀತಿಯನ್ನು ಮೆರೆದಿದ್ದಾರೆ.ತಮಗಿಂತ ಕಿರಿಯರ ವಿಷಯ ಇರಲಿ, ತಮ್ಮ ಸಮಕಾಲೀನ ಲೇಖಕರ ಬಗ್ಗೆ ಬರೆಯುವುದು ಕೂಡಾ ತಮ್ಮ ಘನತೆಗೆ ಕುಂದು ಎಂದು ಭಾವಿಸುವ ಅನೇಕ ಲೇಖಕರು ನಮ್ಮ ಸುತ್ತಾ ಇರುವಾಗ ಜಿ.ಎಸ್.ಎಸ್. ಅವರಂತೆ ಶಿಷ್ಯರ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಬರೆಯುವುದು ಆಶ್ಚರ್ಯಕರ ವಿದ್ಯಮಾನವೇ ಸೈ!

ಈ ಶಿಷ್ಯ ಪ್ರೀತಿಗೆ ಶಿವರುದ್ರಪ್ಪನವರು ತಮ್ಮ ಮೂವರು ಮಹಾಗುರುಗಳಿಂದ ಪಡೆದ ಸ್ಫೂರ್ತಿಯೇ ಮುಖ್ಯ ಪ್ರೇರಣೆ ಎಂದು ನಾನು ಭಾವಿಸುತ್ತೇನೆ. ಜಿ.ಎಸ್.ಎಸ್. ಮತ್ತೆ ಮತ್ತೆ ನೆನೆಯುವ ಅವರ ಮೂವರು ಗುರುಗಳೆಂದರೆ ಶ್ರೀ ಕುವೆಂಪು, ಪ್ರೊ.ತೀನಂಶ್ರೀ , ಮತ್ತು ಪ್ರೊ.ತ.ಸು.ಶ್ಯಾಮರಾಯರು! ಕುವೆಂಪು ಎಂದರೆ ಜಿ.ಎಸ್.ಎಸ್. ಅವರಿಗೆ ಎಣೆಯಿಲ್ಲದ ಪ್ರೀತಿ ಗೌರವ. ಕುವೆಂಪು ಬಗ್ಗೆ ಅವರು ಬರೆದಿರುವ ಈ ಪದ್ಯ ಅದನ್ನು ಅತ್ಯಂತ ಸ್ವಾರಸ್ಯಕರವಾಗಿ ನಿರೂಪಿಸಬಲ್ಲುದು:

ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ.

ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವದನ್ನು,
ಕಿರಿಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆವುದನ್ನು,
ಸದ್ದಿರದೆ ಬದುಕುವುದನ್ನು.

ಎಷ್ಟೊಂದು ಕೀಲಿ ಕೈಗಳನ್ನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನ್ನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ

ಸದ್ದು ಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಶಬದಲ್ಲಿ ನೆನೆಯುತ್ತೇನೆ
ಗೌರವದಿಂದ.

ನಕ್ಷತ್ರಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ.

ಕುವೆಂಪು ಅವರ ಬಗ್ಗೆ ಒಂದು ಸಮಗ್ರ ವಿಮರ್ಶಾಗ್ರಂಥವನ್ನು ಬರೆಯಬೇಕೆಂಬುದು ಜಿ.ಎಸ್.ಎಸ್.ಅವರ ಬಹುದಿನದ ಆಶೆಯಾಗಿತ್ತು. ಜಿ.ಎಸ್.ಎಸ್. ಇತ್ತೀಚೆಗೆ ತಮ್ಮ ಆರೋಗ್ಯ ಅಷ್ಟು ಚೆನ್ನಾಗಿರದಿದ್ದರೂ ತಮ್ಮ ನಚ್ಚಿನ ಗುರು ಕುವೆಂಪು ಅವರ ಬಗ್ಗೆ ಒಂದು ಅಚ್ಚುಕಟ್ಟಾದ ವಿಮರ್ಶಾಕೃತಿಯನ್ನು ಬರೆದು ಪ್ರಕಟಿಸಿದ್ದಾರೆ.

ಜಿ.ಎಸ್.ಎಸ್.ಅವರ ಮೇಲೆ ತೀವ್ರವಾದ ಪ್ರಭಾವ ಬೀರಿದ ಅವರ ಇನ್ನೊಬ್ಬ ಗುರು ತೀ.ನಂ.ಶ್ರೀಕಂಠಯ್ಯನವರು. ಕನ್ನದದ ಕೊರಳಲ್ಲಿ ಶ್ರೀಕಂಠಿಕೆ ಎಂದು ತೀ.ನಂ.ಶ್ರೀ ಅವರನ್ನು ಜಿ.ಎಸ್.ಎಸ್. ಕೈವಾರಿಸುತ್ತಾರೆ.ಅಚ್ಚುಕಟ್ಟಿನ ಸ್ವಚ್ಛತೆಯ ಸಂಕೇತವಾದ ತೀನಂಶ್ರೀ ಅವರ ಒಂದೊಂದು ಕೃತಿಯೂ ಕೃತಾರ್ಥ. ಅವರು ಪರಿಪೂರ್ಣತೆಯ ಅತೃಪ್ತ ಅನ್ವೇಷಕ ಮತ್ತು ಪಾಂಡಿತ್ಯ ಪ್ರತಿಭೆಗಳ ಹದವಾದ ಪಾಕ ಎಂಬುದಾಗಿ ತಮ್ಮ ಗುರುಗಳನ್ನು ಮೆಚ್ಚಿಕೊಳ್ಳುತ್ತಾರೆ. ಜಿ.ಎಸ್.ಎಸ್. ವವರ ವ್ಯಕ್ತಿತ್ವ ನಿರ್ಮಿತಿಯಲ್ಲಿ ತೀನಂಶ್ರೀ ಅವರದ್ದು ಗಾಢವಾದ ಪ್ರಭಾವ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.ಇನ್ನು ತಸು ಶ್ಯಾಮರಾಯರಂತೂ ಜಿ.ಎಸ್.ಎಸ್. ಅವರಿಗೆ ತಾಯ್ತನದ ವಾತ್ಸಲ್ಯವನ್ನು ಧಾರೆಯೆರೆದ ಮಹಾನುಭಾವರು. ಶ್ಯಾಮರಾಯರು ಬದುಕಿರುವವರೆಗೂ ಅವರ ಹುಟ್ಟುಹಬ್ಬದ ದಿನ ಜಿ.ಎಸ್.ಎಸ್. ಎಲ್ಲೇ ಇರಲಿ ಮೈಸೂರಿಗೆ ಧಾವಿಸುತ್ತಿದ್ದರು.ಅನೇಕರಿಗೆ ಗೊತ್ತಿರುವಂತೆ ಜಿ.ಎಸ್.ಎಸ್. ಅವರ ಜನಪ್ರಿಯ ಗೀತೆ "ಎದೆತುಂಬಿ ಹಾಡಿದೆನು" ಈ ಶ್ಯಾಮರಾಯರನ್ನು ಉದ್ದೇಶಿಸಿ ಬರೆದ ಹಾಡು.ಅದೀಗ ಸುಗಮ ಸಂಗೀತ ಕಛೇರಿಗಳ ಮಂಗಳ ಗೀತೆಯಾಗಿ ಪರಿಣಮಿಸಿದೆ.ಮೈಸೂರು ಅನಂತಸ್ವಾಮಿಯವರ ಅತ್ಯದ್ಭುತ ಸಂಯೋಜನೆಯಾದ ಎದೆತುಂಬಿ ಹಾಡಿದೆನು ಸುಗಮಸಂಗೀತದ ಮನೋಹರ ಮಂಜುಲ ಗೀತೆಗಳಲ್ಲಿ ಒಂದು.ಜಿ.ಎಸ್.ಎಸ್. ಆಗಾಗ ಹೇಳುತ್ತಿರುತ್ತಾರೆ: "ಇಂಥ ಒಂದು ಗೀತೆ ಜನತೆಯ ಹೃದಯದಲ್ಲಿ ಸ್ಥಾನ ಗಿಟ್ಟಿಸಿತು ಎಂದರೆ ಕವಿಯ ಹೆಸರು ಅಜರಾಮರವಾಗಿಬಿಡುತ್ತದೆ! ಈ ಗೀತೆಗೆ ರಾಗ ಸಂಯೋಜನೆ ಮಾಡಿದ ಅನಂತಸ್ವಾಮಿಅವರನ್ನು ಜಿ.ಎಸ್.ಎಸ್. ಬಹಳ ಪ್ರೀತಿಯಿಂದ ನೆನೆಯುತ್ತಾರೆ.(ಅನಂತಸ್ವಾಮಿ ಅವರು ಆಸ್ಪತ್ರೆಯಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿದ್ದಾಗ ಜಿ.ಎಸ್.ಎಸ್.ಅವರಿಗೆ ಬಹುಪ್ರಿಯರಾದ ಇನ್ನೊಬ್ಬ ಸಂಗೀತ ನಿರ್ದೇಶಕ ಸಿ.ಅಶ್ವಥ್ ಅವರು ಜಿ.ಎಸ್.ಎಸ್. ಮತ್ತು ನನ್ನನ್ನು ಅನಂತಸ್ವಾಮಿ ಅವರನ್ನು ನೋಡಲು ಕರೆದೊಯ್ದಿದ್ದು ನೆನಪಾಗುತ್ತಿದೆ).ಎದೆ ತುಂಬಿ ಹಾಡಿದೆನು ಎಂಬ ಈ ಗೀತೆಯನ್ನು ರತ್ನಮಾಲಾಪ್ರಕಾಶ್ ಅವರ ಕೊರಳಲ್ಲಿ ಕೇಳುವುದೆಂದರೆ ಜಿ.ಎಸ್.ಎಸ್.ಅವರಿಗೆ ಇಂದಿಗೂ ತುಂಬ ಇಷ್ಟ.

ಕುವೆಂಪು ಅವರ ನಂತರ ಬೇಂದ್ರೆ ಮತ್ತು ಪುತಿನ -ಜಿ.ಎಸ್.ಎಸ್ ಅವರಿಗೆ ಬಹು ಪ್ರಿಯರಾದ ಕವಿಗಳು. ಪುತಿನ ಅವರ ಎಣೆಯಿಲ್ಲದ ಪ್ರೀತಿಗೆ ಜಿ.ಎಸ್.ಎಸ್ ಮಾರುಹೋಗಿದ್ದರು. ಅನೇಕ ಬಾರಿ ಜಿ.ಎಸ್.ಎಸ್. ಮತ್ತು ನಾನು ಒಟ್ಟಿಗೇ ಪುತಿನ ಅವರ ಮನೆಗೆ ಹೋಗಿದ್ದೇವೆ. (ಮೊಟ್ಟಮೊದಲು ನನ್ನನ್ನು ಕುವೆಂಪು ಮತ್ತು ಪುತಿನ ಅವರ ಮನೆಗೆ ಕರೆದುಕೊಂಡು ಹೋದವರು ಜಿ.ಎಸ್.ಎಸ್.ಅವರೇ). ಗಂಟೆ ಗಟ್ಟಲೆ ಪುತಿನ ವರೊಂದಿಗೆ ಸರಸ ಸಂಭಾಷಣೆ ನಡೆಸಿದ್ದೇವೆ.ಸಾಯುವ ಕೆಲವು ತಿಂಗಳು ಮುನ್ನ ಪುತಿನ ಅವರು ತಮ್ಮ ಹೆಸರಿನಲ್ಲಿ ಸರ್ಕಾರ ಸ್ಥಾಪಿಸಲಿರುವ ಟ್ರಸ್ಟ್ ನಲ್ಲಿ ಅವರಿಗೆ ತುಂಬ ಪ್ರಿಯರಾದ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರೂ, ಜಿ.ಎಸ್.ಶಿವರುದ್ರಪ್ಪನವರೂ ಇರಬೇಕೆಂದು ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಒಮ್ಮೆ ನನ್ನ ಬಳಿ ಮಾತಾಡುವಾಗ "ನಮ್ಮ ಶಿವರುದ್ರಪ್ಪ ತುಂಬಾ ಗಟ್ಟಿಗ ಕಾಣಯ್ಯ ..!"ಎಂದು ಪುತಿನ ತುಂಬು ಪ್ರೀತಿಯಿಂದ ನುಡಿದದ್ದು ನನಗೆ ನೆನಪಾಗುತ್ತಿದೆ.

ಜಿ.ಎಸ್.ಎಸ್. ಪುತಿನ ಟ್ರಸ್ಟ್ ನ ಅಧ್ಯಕ್ಷರಾದ ಮೇಲೆ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬುದನ್ನು ನಾನು ಹತ್ತಿರದಿಂದ ಬಲ್ಲೆ. ಮೇಲುಕೋಟೆಯ ಪುತಿನ ಮನೆಯನ್ನು ಪುನಾರಚಿಸಿ ನಾಡಿಗೆ ಸಾಂಸ್ಕೃತಿಕ ನೆನಪಾಗಿ ನೀಡುವಾಗ ಒಂದು ದಿನ ಮೊದಲೇ ಜಿ.ಎಸ್.ಎಸ್., ಚೆನ್ನವೀರ ಕನವಿ, ಅಚ್ಯುತಕಾದ್ರಿ, ಕಮಲೇಶ್ ಮತ್ತು ನಾನು ಮೇಲುಕೋಟೆಗೆ ಹೋಗಿದ್ದೆವು.ಇಡೀ ರಾತ್ರಿ ನಾವು ಪುತಿನ ಮನೆಯ ಅಲಂಕರಣ ಕಾರ್ಯದಲ್ಲಿ ತೊಡಗಿದ್ದೆವು. ಯಾವ ಫೋಟೊ ಎಲ್ಲಿರಬೇಕು, ಪುತಿನ ಅವರ ಯಾವ ಕವಿತೆಯ ಸಾಲು ಯಾವ ಗೋಡೆಯ ಮೇಲೆ ಇರಬೇಕು ಎಲ್ಲದರಲ್ಲೂ ಜಿ.ಎಸ್.ಎಸ್. ಅವರ ಮಾರ್ಗದರ್ಶನ! ಮಾರ್ಗದರ್ಶನ ಎಂಬ ಮಾತು ತಪ್ಪು. ಮೊದಲು ಸ್ವತಹ ಅವರು ಮಾಡಲು ಹೊರಡುವುದು. ಆಮೇಲೆ ನಾವು ಅವರಿಗೆ ಅಸರೆಯಾಗಿ ನಿಲ್ಲುವುದು. ದೂರದಿಂದ ನೋಡಿ , ತಲೆದೂಗುತ್ತಾ ಕಣವಿಯವರು(ಇವರು ಜಿಎಸ್ಸೆಸ್ ಅವರ ಪರಮಾಪ್ತ ಗೆಳೆಯರು ಎಂಬುದನ್ನು ಕನ್ನದ ಸಾರಸ್ವತ ಲೋಕ ಬಲ್ಲುದು): " ಈಗ ಅಗ್ದೀ ಚಲು ಆತು ನೋಡ್ರಿ..!" ಎಂದು ಉದ್ಗರಿಸುವುದು. ಹೀಗೆ ಜಿ.ಎಸ್.ಎಸ್ ಕಾರ್ಯಶ್ರದ್ಧೆ, ಸ್ನೇಹಪ್ರೀತಿ, ರುಚಿಶುದ್ಧಿ ಎಲ್ಲಕ್ಕೂ ನಮಗೆ ಆದರ್ಶವಾಗಿ ನಿಂತವರು!

ಊಟ ತಿಂಡಿಗಳಲ್ಲಿ ಜಿ.ಎಸ್.ಎಸ್. ಅವರು ಒಳ್ಳೇ ರಸಿಕರು! ಹೂರಣದ ಹೋಳಿಗೆಯ ಊಟವನ್ನು ಅವರ ಮನೆಯಲ್ಲೇ ಮಾಡಬೇಕು.ಹೋಳಿಗೆ ಹಾಕಿಸಿಕೊಂಡು, ಅದರಮೇಲೆ ತುಪ್ಪ ಸುರುವಿಕೊಂಡು, ಅದಕ್ಕೆ ಕಸಿಮಾವಿನ ಸೀಕರಣೆ ಬೆರೆಸಿಕೊಂಡು ಅದನ್ನೆಲ್ಲಾ ಹದವಾಗಿ ಕಿವುಚಿ ರಸಪಾಕ ಮಾಡಿಕೊಂಡು ಸಶಬ್ದವಾಗಿ ಅದನ್ನು ತಿನ್ನಿವುದು ಜಿ.ಎಸ್.ಎಸ್.ಕ್ರಮ!. " ಹೀಗೆ ....ಹೋಳಿಗೆ ತಿನ್ನಬೇಕಾದ್ದು..!" ಎಂದು ಅವರು ನಮ್ಮತ್ತ ನೋಡುತ್ತಾ ಪಾಪ ತಿಳಿಯದ ಮುಗ್ಧರು ನೀವು ಎಂದು ಅನುಕಂಪೆ ತೋರುವ ಗತ್ತನ್ನು ನೋಡಿಯೇ ಅನುಭವಿಸಬೇಕು! ಹಾಗೇ ವಿದ್ಯಾರ್ಥಿಭವನದ ದೋಸೆ ಅವರಿಗೆ ಪ್ರಿಯವಾದುದು! ಮೈಸೂರಿಗೆ ಹೋದಾಗ ಮೈಲಾರಿ ಹೋಟೆಲ್ ಗೆ ಅವರೇ ನಮ್ಮನ್ನು ಕರೆದೊಯ್ದಾರು! ಆರೋಗ್ಯಕ್ಕೆ ತೊಂದರೆಯಿಲ್ಲ ತಗೊಳ್ಳಿ ತಗೊಳ್ಳಿ ಎಂದು ಉಪಚಾರಮಾಡುವುದು ಬೇರೆ! ಕೊನೆಗೆ ಮಾಣಿ ಬಂದು ಬಿಲ್ಲು ಬಡಿಯುತ್ತಾನೆ. ಅದನ್ನು ಜಿ.ಎಸ್.ಎಸ್. ಇರುವಾಗ ಅವರ ವಿದ್ಯಾರ್ಥಿಗಳು ಹೇಗೆ ತಾನೆ ಮುಟ್ಟುವ ಧೈರ್ಯ ಮಾಡಬಲ್ಲರು! ಚಿಕ್ಕವರಿಗೆ ತಿನ್ನಿಸುವುದು ದೊಡ್ಡವರ ಆಜನ್ಮ ಸಿದ್ಧ ಹಕ್ಕು ಎಂಬ ಘೋಷಣೆಯಲ್ಲಿ ದೃಢವಾದ ವಿಶ್ವಾಸ ಉಳ್ಳವರು ನಮ್ಮ ಮೇಷ್ಟ್ರು! ಅಥವಾ ಆ ಘೋಷಣೆಯನ್ನು ಹುಟ್ಟಿ ಹಾಕಿದವರು ಅವರೇ ಎನ್ನೋಣ!

ಕನ್ನದ ಕಾವ್ಯದಲ್ಲಿ ನಮ್ಮ ಪ್ರತಿಯೊಬ್ಬ ಮುಖ್ಯ ಕವಿಯನ್ನೂ ಒಂದಲ್ಲ ಒಂದು ದನಿ ಕಾಡುತ್ತಾ ಹೋಗುತ್ತದೆ. ಅದು ಮೋಹನ ಮುರಲಿ ಆಗಬಹುದು! ವನಮಾಲಿಯ ವೇಣು ವಾದನ ಇರಬಹುದು. ಅಸರಂತ ಒಂದೇ ಸಮ ಕೂಗುವ ಕೋಗಿಲೆಯ ಕಾಡುವ ಧ್ವನಿ ಇರಬಹುದು! ಜಿ.ಎಸ್.ಎಸ್. ಅವರನ್ನೂ ಒಂದು ಧ್ವನಿ ಕಾಡುತ್ತಾ ಇದೆ! ಅದು ಒಂದು ಒಂದು ಮಗುವಿನ ನೀಳ್ದನಿಯ ರೋದನ!

ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ-
ದೂರದ ಬಿರುಗಾಳಿಯ ಮೊರೆಯಂತೆ
ಮುಗಿಲಿಂದಿಳಿಯುವ ಧಾರಾಕಾರದ
ಮಳೆಯಂತೆ
ದದವನು ಅಪ್ಪಳಿಸುವ ಅಲೆಯಂತೆ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ!

ಕೈಗೆಟುಕದ ರೊಟ್ಟಿಯ ಚೂರಾಗಿದೆಚಂದಿರ
ಬಾನಿನ ತಟ್ಟೆಯಲಿ!
ಹಸಿವಿನ ತುಣುಕುಗಳಂದದಿ ಚಿಕ್ಕೆಗಳುರಿಯುತ್ತಿವೆ
ಶೂನ್ಯದ ಹೊಟ್ಟೇಯಲಿ
ಸೊಕ್ಕಿದ ತೇಗಿನ ತೆರ ಝಗಝಗಿಸಿವೆ
ನಗರದ ಬೆಳಕಿನ ವಿಸ್ತಾರ
ಸುತ್ತಲು ಛಳಿಗಾಳಿಗೆ ನಡುಗತಲಿವೆ
ಎಲೆಯುದುರಿದ ಕೈ ಚಾಚಿದ
ಅನಾಥ ಮರಗಲ ಪರಿವಾರ!


ಪದ್ಯವನ್ನು ಪೂರ್ತಿ ಓದಿದ ಮೇಲೆ ಗೊತ್ತಾಗುತ್ತದೆ ಈ ಮಗು ಮನುಷ್ಯಕುಲದ ದೀನತೆಯ ಪ್ರತೀಕ ಎಂದು. ಈವತ್ತಿನ ಸಾಮಾಜಿಕ ವಿಷಮತೆಯ ಸಂದರ್ಭದಲ್ಲಿ ಮಾನವತೆ ದೀನವಾಗಿ ಅಳುತ್ತಿರುವುದನ್ನು ಈ ಕವಿತೆ ಅದ್ಭುತವಾಗಿ ವರ್ಣಿಸುತ್ತದೆ!

ಶೋಷಿತವರ್ಗದ ಪರವಾದ ಜಿ.ಎಸ್.ಎಸ್.ನಿಲುವು ಆರೋಪಿತವಾದುದಲ್ಲ. ಅವರ ರಕ್ತದ ದಮನಿಯಲ್ಲಿ ಸಹಜವಾಗಿ ಪ್ರವಹಿಸುವಂಥದ್ದು! ಜಿ.ಎಸ್.ಎಸ್.ಜಗತ್ತು ಕಾಯುವ ದೈವದಲ್ಲಿ ನಂಬಿಕೆ ಕಳೆದುಕೊಂಡ ಜಗತ್ತು. ಜಿ.ಎಸ್.ಎಸ್. ದೈವದ ಹಂಗಿಲ್ಲದ ಕವಿ ನಿಜ. ಮನುಷ್ಯನೇ ತನ್ನ ಕರ್ಮಕ್ಕೆ ಹೊಣೆಗಾರಿಕೆ ಒಪ್ಪಿಕೊಂಡು ಬದುಕಬೇಕಾದ ಜಗತ್ತು ಇದು ಎಂದು ಜಿ.ಎಸ್.ಎಸ್ ಕಾವ್ಯ ನಂಬಿದೆ.ಅವರ ಪ್ರಸಿದ್ಧವಾದ ಒಂದು ಕವಿತೆಯೇ ಇದೆಯಲ್ಲ!

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ -ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ!

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೇ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ!

ಮೂವತ್ತೆರಡು ವರ್ಷಗಳ ಹಿಂದೆ ರಚಿತವಾದ ಈ ಗೀತೆ ಜಿ.ಎಸ್.ಎಸ್. ಕಾವ್ಯದ ಕೇಂದ್ರ ಸ್ಪಂದನವನ್ನು ಸೂಚಿಸಬಲ್ಲುದು. ಅಂತರದ ನಿವಾರಣೆ, ಪ್ರೀತಿ ಸ್ನೇಹಗಳ ಆವಾಹನೆ ಅವರ ಕಾವ್ಯದ ಬಹು ಮುಖ್ಯ ಆಶಯವಾಗಿದೆ.

ಸಿ.ಅಶ್ವಥ್ ಈ ಗೀತೆಗೆ ಅದ್ಭುತವಾಗಿ ಸ್ವರಸಂಯೋಜನೆ ಮಾಡಿದ್ದಾರೆ. ದೈವಶ್ರದ್ಧೆಯ ಅವರಿಗೆ ಇಲ್ಲದ ದೇವರು ಅನ್ನುವ ಮಾತು ಒಂದು ನುಂಗಲಾರದ ತುತ್ತು! ಅದನ್ನು ಕಾಣದ ದೇವರು ಕೆಲವರು ತಿದ್ದಿ ಹಾಡಿದ್ದೂ ಉಂಟು! ಜಿ.ಎಸ್.ಎಸ್. ಈ ಕವಿತೆಯಲ್ಲಿ ವ್ಯಕ್ತ ಪಡಿಸಿರುವ ಭಾವ ಸ್ಪಷ್ಟವಾಗಿದೆ. ಕಲ್ಲುಮಣ್ಣಿನ ಗುಡಿಯಲ್ಲಿ ದೇವರು ಇಲ್ಲ ಎಂಬುದೇ ಸೂಚ್ಯಾರ್ಥ! ದೇವರು ಇದ್ದರೆ ಅವನು ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳಲ್ಲಿ ಇದ್ದಾನೆ ಎನ್ನುತ್ತಾರೆ ಅವರು. ಇದು ದೈವವಿರೋಧೀ ನಿಲುವಲ್ಲ. ದೈವದ ವ್ಯಾಖ್ಯಾನದಲ್ಲಿ ಇರುವ ಭಿನ್ನತೆಯ ನಿಲುವು.

ಜಿ.ಎಸ್.ಎಸ್. ಕಾವ್ಯದ ಪರಮ ಲಕ್ಷಣವನ್ನೂ ಈ ಕವಿತೆಯ ಭಾಷಿಕ ಸ್ವರೂಪ ಪ್ರತಿನಿಧಿಸುವಂತಿದೆ. ಜಿ.ಎಸ್.ಎಸ್. ಅವರದ್ದು ವಚನಕಾರರಂತೆ(ಅದರಲ್ಲೂ ಬಸವಣ್ಣನವರಂತೆ) ನೇರವಾಗಿ ಹೃದಯಕ್ಕೆ ತಾಗುವ ಮಾತು. ಅವರ ಯಾವುದೇ ಜನಪ್ರಿಯ ಗೀತೆಯನ್ನು ತೆಗೆದುಕೊಳ್ಳಿ ಅದು ಹೀಗೆ ನೇರ ಮಾತು ಗಾರಿಕೆಯ ಫಲವಾಗಿದೆ. ಆ ನೇರ ಮಾತುಗಾರಿಕೆಗೆ ಕನ್ನಡ ಭಾಷೆಯ ಹೃದಯವನ್ನು ಬಲ್ಲ ನುಡುಗಾರಿಕೆ ಶಕ್ತಿಯನ್ನು ನೀಡುತ್ತದೆ. ಕನ್ನಡದ ಅಚ್ಚ ನುಡಿಗಟ್ಟನ್ನು ಜಿ.ಎಸ್.ಎಸ್. ಅಂತೆ ಬಳಸುವ ಕವಿಗಳು ವಿರಳ.ರಮ್ಯತೆಯನ್ನು ಅದರ ನುಡಿಗಟ್ಟಲ್ಲೇ ಛಿದ್ರಿಸಿ ಹೊಸ ಅರ್ಥವಂತಿಕೆಯನ್ನು ಅವರ ಕಾವ್ಯ ಕಟ್ಟಬಲ್ಲದು. ನಕ್ಷತ್ರಗಳನ್ನು ಶೂನ್ಯದ ಹೊಟ್ಟೆಯಲ್ಲಿ ಉರಿಯುವ ಹಸಿವಿನ ತುಣುಕುಗಳು ಎನ್ನುವಲ್ಲಿ ಇಂಥಾ ಪ್ರಯತ್ನವಿರುವುದನ್ನು ನೋಡಬಹುದು. ಅಸುಂದರವಾದುದನ್ನು ಹೀಗೆ ಕಾವ್ಯದಲ್ಲಿ ಒಳಗೊಳ್ಳಬಲ್ಲ ಕವಿ ರಮ್ಯಮಾರ್ಗದಲ್ಲಿ ಇದ್ದೂ ಒಳ ಬಂಡಾಯ ನಡೆಸುವ ಕವಿಯಾಗಿರುತ್ತಾನೆ. ಜಿ.ಎಸ್.ಎಸ್.ಅಂಥ ಕವಿಯಾಗಿದ್ದಾರೆ.ಖಾಸಗೀ ದುಗುಡ ದುಮ್ಮಾನಗಳನ್ನು ಅವರ ಕಾವ್ಯ ಸಾಮಾಜಿಕ ಪರಿಪ್ರೇಕ್ಷ್ಯದಲ್ಲೇ ಒಳಗೊಳ್ಳುವ ಯತ್ನ ಮಾಡುತ್ತದೆ. ಆದುದರಿಂದಲೇ ಅವರು ಅಖಂಡ ಕರ್ನಾಟಕದ ಹೃದಯಸ್ಪಂದನವನ್ನು ಹಿಡಿಯಬಲ್ಲ ಕವಿಯಾಗಿದ್ದಾರೆ. ಅವರು ರಾಷ್ಟ್ರ ಕವಿಯಾಗುವುದು ಈ ನೆಲೆಯಲ್ಲೂ ಯುಕ್ತವಾದುದು ಅನ್ನಿಸುತ್ತದೆ.ಈ ನೆಲೆಯಲ್ಲಿ ಅವರ ಕಾವ್ಯ ಮತ್ತು ಜೀವಿತದ ಅಧ್ಯಯನ ನಮ್ಮನ್ನು ನಮ್ಮ ನಾಡಿನ ಹೃದಯದ ಹತ್ತಿರಕ್ಕೆ ಕೊಂಡೊಯ್ಯಬಲ್ಲುದು.

**********************
ಜೀವನಪಥ:
ಜನನ:೧೯೨೬,ಫೆಬ್ರವರಿ ೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ
ಶಿಕ್ಷಣ:ಎಂ.ಎ.,ಪಿಎಚ್.ಡಿ,
ಡಾಕ್ಟರೇಟ್: ಸೌಂದರ್ಯಸಮೀಕ್ಷೆ-೧೯೬೦(ಕುವೆಂಪು ಮಾರ್ಗದರ್ಶನದಲ್ಲಿ)
೧೯೪೯ರಲ್ಲಿ ಮಹರಾಜಾ ಕಾಲೇಜಿನಲ್ಲಿ ಕನ್ನದ ಅಧ್ಯಾಪಕ ವೃತ್ತಿ ಪ್ರಾರಮ್ಭ
೧೯೬೩ ರಿಂದ ೧೯೬೬ ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಮತ್ತು ಕನ್ನದ ವಿಭಾಗದ ಮುಖ್ಯರು
೧೯೭೦ ರಿಂದ ೧೯೮೬ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು ಮತ್ತು ನಿರ್ದೇಶಕರು
೧೯೭೪-ಮಾಸ್ಕೋದಲ್ಲಿ ೨೨ದಿನ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ.
೧೯೮೨ರಲ್ಲಿ ರಾಜ್ಯಸಾಹಿತ್ಯ ಅಕಾಡೆಮಿ ಪುರಸ್ಕಾರ.
೧೯೮೪-ಕಾವ್ಯಾರ್ಥ ಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
೧೯೮೭-ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ
೧೯೮೭-೬೧ನೇ ಅ.ಭಾ.ಕನ್ನದ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪದವಿ.
೧೯೯೪-೯೫ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರು.
೧೯೯೮-ಪಂಪ ಪ್ರಶಸ್ತಿ.

7 comments:

  1. ಸಾರ್, ನಮ್ಮ ನಡುವೆ ಇರುವ ರಾಷ್ಟ್ರಕವಿಗಳ, ನಾವು ಓದುತ್ತಿರುವ ರಾಷ್ಟ್ರಕವಿಗಳ ಬಗ್ಗೆ ನಮಗೆ ಗೊತ್ತಿರದ ವಿಚಾರಗಳ, ಅವರ ಸಾಹಿತ್ಯ-ಜೀವನದರ್ಶನ-ಗುರುಪ್ರೇಮ ಹೀಗೆ ಹಲವಾರು ಮಜಲುಗಳನ್ನು ನಿಮ್ಮ ಲೇಖನ ತೆರೆದಿಟ್ಟಿದೆ.

    ReplyDelete
  2. ಜಿ.ಎಸ್.ಎಸ್ ಅವರ ಬಗ್ಗೆ ನಮಗೆ ಗೊತ್ತಿಲ್ಲದ ಹಲವಾರು ವಿಷಯಗಳನ್ನು ತಿಳಿಸಿದ್ದೀರಿ ಧನ್ಯವಾದಗಳು,ರಾಷ್ಟ್ರ ಕವಿಯಾಗುವುದು ನಮ್ಮೆಲ್ಲರಿಗೆ ಹೆಮ್ಮೆಯ ಹಾಗು ಸಂತಸದ ವಿಷಯ..ಕನ್ನಡ ನಾಡಿಗೆ ಕನ್ನಡ ರತ್ನಗಳು ನಮ್ಮ ಮಹಾನ್ ಕವಿಗಳು,

    ReplyDelete
  3. ನಮಸ್ಕಾರ ಸರ್.
    ಸನ್ಮಾನ್ಯ ಜಿ.ಎಸ್.ಎಸ್. ಅವರನ್ನು ಕುರಿತ ಆಪ್ತ ಬರಹ ಗುರು ಶಿಷ್ಯರಿಗೆ ತಮ್ಮ ಗುರುಗಳ ಬಗ್ಗೆ ತಿಳಿಸಿಹೇಳಿದಂತಿದೆ. ಜೊತೆಗೆ ಅವರ ಕವಿತೆಗಳ ಉದಾಹರಣೆ- ಊಟದ ಜೊತೆಗಿನ ಮೈಸೂರ್ ಪಾಕ್, ಪರಮಾನ್ನ, ಸೀಕರಣೆ. ಇಂದಿನ ದಿನ ಧನ್ಯವಾಯ್ತು ಇದನ್ನೋದಿ.

    ReplyDelete
  4. ಸರ್, ಜಿ.ಎಸ್.ಎಸ್. ಬಗ್ಗೆ ಬಹಳ ವೈನೋದಿಕವಾಗಿ, ಆಪ್ತವಾಗಿ ಬರೆದಿದ್ದೀರಿ,ತು೦ಬ ಇಷ್ಟವಾದ ಬರಹ. ಗುರು-ಶಿಷ್ಯ ಪರ೦ಪರೆ ಹೀಗೆ ಮುಂದುವರಿಯಲಿ. ಅ೦ದ ಹಾಗೆ ನನ್ನದು ಒಂದು ಬ್ಲಾಗಿದೆ, ಕವನ-ಲೇಖನ ಬರೆಯುತ್ತೇನೆ. ತಾವು ಓದಿ ಕಿವಿಹಿ೦ಡಿದರೆ ಸ೦ತೋಷವಾಗುತ್ತದೆ.
    http://www.nirpars.blogspot.com/

    ReplyDelete
  5. ನಲ್ವರೆ,

    "ದದವನು ಅಪ್ಪಳಿಸುವ ಅಲೆಯಂತೆ" ಎಂಬ ಸಾಲಿನಲ್ಲಿರುವ ’ದದವನು’ ಪದದ ತಿಳಿವೇನೆಂದು ಕೋರಿ ಒಬ್ಬರು ನಮ್ಮ ಬರಹ.ಕಾಂನ ನಿಘಂಟು/ಪದನೆರಿಕೆಗೆ ಕೋರಿಕೆ ಸಲ್ಲಿಸಿದ್ದಾರೆ.

    ಅತ್ತ ಗಮನಿಸಲಾಗಿ ನನಗೆ ’ದದವನು’ ಎಂಬುದು ’ದಡವನು’ ಎಂದು ಬರೆಯುವಾಗ, ಇಲ್ಲವೇ ಅಚ್ಚೆಸುಗವಾಗ ಆದ ಬೆರಳುತಪ್ಪೆಂದು ಅನಿಸುವುದು.

    ಈ ಗೊಂದಲವನ್ನು ತುಸು ನೀಗಿಸು.

    ನಲ್ಮೆ ಹಾಗು ನನ್ನಿ
    ಮಹೇಶ ಬೋಗಾದಿ
    ಬರಹ.ಕಾಂ, ಪದನೆರಿಕೆ-ಅಂಕೆಗಾರ/ನಿಘಂಟು-ನಿರ್ವಾಹಕ

    ReplyDelete
  6. ಧನ್ಯೋಸ್ಮಿ ಕವಿವರ್ಯ. ನಿಮ್ಮ ನೆರಳಿನಲ್ಲಿ ನಾವಿದ್ದೇವೆ ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ. ನಿಮ್ಮ ಈ ಒಡನಾಟಗಳ ಸಾಂಸ್ಕೃತಿಕ ಅನುಭವವನ್ನು ನಮಗೆ ಉಣಿಸುತ್ತಿರುವ ನಿಮಗೆ ನನ್ನ ನಮನ

    ReplyDelete
  7. ಧನ್ಯೋಸ್ಮಿ ಕವಿವರ್ಯ. ನಿಮ್ಮ ನೆರಳಿನಲ್ಲಿ ನಾವಿದ್ದೇವೆ ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ. ನಿಮ್ಮ ಈ ಒಡನಾಟಗಳ ಸಾಂಸ್ಕೃತಿಕ ಅನುಭವವನ್ನು ನಮಗೆ ಉಣಿಸುತ್ತಿರುವ ನಿಮಗೆ ನನ್ನ ನಮನ

    ReplyDelete