Monday, August 31, 2009

ವಂದನೆಗಳು

ನನ್ನ ಬ್ಲಾಗ್ ಗಮನಿಸಿ ಪ್ರತಿಕ್ರಿಯಿಸಿರುವ ಮಿತ್ರರಿಗೆ ತುಂಬ ಆಭಾರಿಯಾಗಿದ್ದೇನೆ.ಪ್ರೀತಿಯಿಂದ-ಎಚ್.ಎಸ್.ವಿ

Sunday, August 30, 2009

ಆಲಯವನ್ನು ಹೊಕ್ಕ ಆಕಾಶ : ಶ್ರೀರಾಮಚಂದ್ರ

ಬಿಸಿಲಧಗೆ ನಿಧಾನವಾಗಿ ಏರುತ್ತಿರುವಂತೆ ಮತ್ತೆ ರಾಮನವಮಿ ಬರುತ್ತಿದೆ.ತಕ್ಷಣ ನೆನಪು ನನ್ನ ಬಾಲ್ಯದ ದಿನಗಳತ್ತ ಹಾಯುತ್ತಿದೆ. ಚನ್ನಗಿರಿಯಲ್ಲಿ ಆ ಬೆಳಿಗ್ಗೆ ಬಂಡಿಗಳ ಹಿಂದೆ ಬಂಡಿ ಬೆಟ್ಟದ ಮೇಲಿನ ಆಂಜನೇಯನ ಗುಡಿಗೆ ಹೊರಟಿದ್ದವು. ನನ್ನ ಗೆಳೆಯರು ಹೇಳಿದರು. ಈವತ್ತು ಮಧ್ಯಾಹ್ನ ನಾವು ಬೆಟ್ಟದ ಗುಡಿಗೆ ಹೋಗೋಣ...ರಾಮನವಮಿ ಅಲ್ಲವಾ? ಅಲ್ಲಿ ರುಚಿರುಚಿಯಾದ ಕೋಸಂಬರಿ, ತಿಳಿಮಜ್ಜಿಗೆ, ಪಾನಕ ಕೊಡುತ್ತಾರೆ. ಓಹೋ....ನಾನೂ ಬರುತ್ತೇನೆ...!


ಮನೆಯಲ್ಲಿ ನಮ್ಮ ಅಜ್ಜಿ ಪೂಜೆಗೆ ಸಿದ್ಧಮಾಡುತ್ತಿದ್ದರು.ಹಸೆಹಾಕಿ ಹಾಕಿ, ನಡುಮನೆಯಲ್ಲೇ ರಾಮದೇವರ ಫಟ ಇಟ್ಟಿದ್ದರು! ಆ ಫಟ ಈ ರಾಮನವಮಿಗಾಗಿಯೇ ದಾವಣಗೆರೆಯಿಂದ ತಂದದ್ದು...!ಯಥಾಪ್ರಕಾರ ರಾಮದೇವರ ಫ಼್ಯಾಮಿಲಿ ಫೋಟೊ!ನಡುವೆ ರಾಮ.ಪಕ್ಕದಲ್ಲಿ ಸೀತಾದೇವಿ.ಹಿಂದೆ ಚಾಮರ ಹಾಕುತ್ತಿರುವ ಲಕ್ಷ್ಮಣ, ಶತ್ರುಘ್ನ. ಚತ್ರಿ ಹಿಡಿದಿರುವ ಭರತ. ಕಾಲ ಬುಡದಲ್ಲಿ ಪಾದಸೇವೆ ಮಾಡುತ್ತಿರುವ ಆಂಜನೇಯ.ಆ ಈ ಪಕ್ಕ ಲಂಕಾಧೀಶ ವಿಭೀಷಣ...ಸುಗ್ರೀವಾದಿ ಕಪಿವೀರರು....! ಇದನ್ನು ಫ್ಯಾಮಿಲಿ ಫೋಟೊ ಅನ್ನದೆ ಇನ್ನೇನೆಂದು ಕರೆಯೋಣ? ಭಾರತದ ಆದ್ಯಂತ ರಾಮ ಪೂಜಿತನಾಗುವುದೇ ಹೀಗೆ. ರಥದ ಮೇಲೆ ಕೂತು ಧನುಸ್ಸನ್ನು ಬಾಗಿಸಿ , ಬಾಣವನ್ನು ಯಾವುದೋ ಅಜಾತ ವೈರಕ್ಕೆ ಗುರಿಹೂಡಿ ನಿಂತಿರುವ ರಾಮ ಇತ್ತೀಚಿನ ಕಲ್ಪನೆ ! ಶ್ರೀ ರಾಮನನ್ನು ಹೀಗೆ ನಾನು ಕಲ್ಪಿಸಲೇ ಆರೆ. ಪತ್ನಿ, ತಮ್ಮಂದಿರು, ಗೆಳೆಯರು, ಆಳುಕಾಳುಗಳೊಂದಿಗೆ ಪೂಜೆ ಕೈಗೊಳ್ಳುವ ರಾಮ ನನ್ನ ದೃಷ್ಟಿಯಲ್ಲಿ ನಿಜವಾದ ಅರ್ಥದಲ್ಲಿ ಒಂದು ಕುಟುಂಬ ದೈವ. ರಾಮನ ಪೂಜೆ ಅಂದರೆ ಒಂದು ಕುಟುಂಬ ವ್ಯವಸ್ಥೆಯ ಆರಾಧನೆ!ಗಂಡ-ಹೆಂಡತಿ-ಮಗುವಿನ ಆಧುನಿಕ ವಿಭಿಜಿತ ಕುಟುಂಬವಲ್ಲ ಇದು!ತಮ್ಮಂದಿರು, ನಾದಿನಿಯರು, ಸೇವಕರು, ಗೆಳೆಯರು ಎಲ್ಲ ಒಟ್ಟಿಗೇ ನಗುನಗುತ್ತಾ ಸ್ಮಿತವದನರಾಗಿ ಒಗ್ಗೂಡಿರುವ ಅವಿಭಾಜ್ಯ ಕೂಡುಕುಟುಂಬ! ಈ ಕುಟುಂಬ ವಾನರ ಜಾತಿಯ ಆಂಜನೇಯ ಸುಗ್ರೀವರನ್ನು ಒಳಗೊಳ್ಳುತ್ತದೆ. ರಾಕ್ಷಸ ಮತದ ವಿಭೀಷಣನನ್ನೂ ಒಳಗೊಳ್ಳುತ್ತದೆ. ಭಲ್ಲೂಕ ಮತದ ಜಾಂಬವನಿಗೂ ಇಲ್ಲಿ ಗೌರವಾನ್ವಿತ ಸ್ಥಾನವಿದೆ.ಅಂದರೆ ರಾಮನ ಮನೆಯಲ್ಲಿ, ಮನೆಯ ಖಾಸಗಿ ಫಟದಲ್ಲಿ ಅಯೋಧ್ಯೆ ಮಾತ್ರ ಇಲ್ಲ. ಕಿಷ್ಕಿಂಧ, ಮತ್ತು ಸ್ವರ್ಣ ಲಂಕೆಯೂ ಇವೆ.ಆರ್ಯ, ದ್ರಾವಿಡ, ಗುಡ್ಡಗಾಡಿನ ಸಂಸ್ಕ್ರುತಿ ಎಲ್ಲ ಇವೆ. ಅದಕ್ಕೇ ಇದು ಆಕಾಶವನ್ನು ಒಳಗೊಂಡ ಆಲಯ ಅಂತ ಮತ್ತೆ ಮತ್ತೆ ನನಗೆ ಅನ್ನಿಸುತ್ತದೆ.ವಸುಧೈವಕ ಕುಟುಂಬ ಅಂದರೆ ಇದೇ ಇರಬಹುದೇ? ಬೇರೆ ಬೇರೆ ಸಮಾಜಗಳನ್ನು, ಬೇರೆ ಬೇರೆ ಜಾತಿಧರ್ಮಗಳನ್ನು ಒಪ್ಪಿಡಿಯಲ್ಲಿ ಹಿಡಿಯುವ ಹಸನ್ಮುಖಗಳ ಒಂದು ಅವಿಭಾಜ್ಯ ಕುಟುಂಬ! ರಕ್ತ ಸಂಬಂಧಿಗಳನ್ನು ಮಾತ್ರವಲ್ಲ , ಗೆಳೆಯರು , ಆಳು ಕಾಳುಗಳನ್ನೂ ಒಂದೇ ಪಂಕ್ತಿಯಲ್ಲಿ ಆಲಂಗಿಸಿಕೊಳ್ಳುವ ಕುಟುಂಬ ವ್ಯವಸ್ಥೆ!


ಬೇರೆ ದೇವರುಗಳ ದೇವಾಲಯಗಳಲ್ಲಿ ಇಂಥ ಚಿತ್ರವನ್ನು ನಾನು ನೋಡಿಲ್ಲ! ಗರ್ಭಾಂಕಣದಲ್ಲಿ ಪ್ರಧಾನ ದೈವ ಮಾತ್ರ ಆರಾಧಿತವಾಗುತ್ತದೆ ; ಪೂಜಾಕೈಂಕರ್ಯಗಳನ್ನು ಕೈಗೊಳ್ಳುತ್ತದೆ.ವಿಷ್ಣು ದೇವಾಲಯಗಳಲ್ಲಿ ಮೂರ್ತಿಯ ಎದೆಯಲ್ಲಾದರೂ ಲಕ್ಷ್ಮಿಯ ಸನ್ನಿಧಾನವಿರುತ್ತದೆ. ಲಿಂಗಾಕಾರಿಯಾದ ಶಿವನಂತೂ ನಿಜಕ್ಕೂ ಏಕಾಂಗಿ! ಗರ್ಭಾಂಕಣದ ಹೊರಗೆ ಮನೆಯ ಪೋರ್ಟಿಕೋದಲ್ಲಿ ಪಾರ್ಕ್ ಮಾಡಿರುವ ವಾಹನದಂತೆ ಬಸವಣ್ಣ ಕೂತಿದ್ದಾನೆ! ಅದು ಮನೆಯೊಳಗೆ ಮನೆಯೊಡೆಯ ಇದ್ದಾನೆ ಎಂಬುದಕ್ಕೆ ಗುರುತು!....ಏಕದೇವೋಪಾಸನೆಗೆ ರಾಮದೇವಾಲಯಗಳು ಒಂದು ಸಾಂಕೇತಿಕ ಅಸಮ್ಮತಿ ತೋರಿದ ಹಾಗೆ ಇವೆ. ಪುರಿಯ ಜಗನ್ನಾಥನ ಗುಡಿಯಲ್ಲಿ ಬಲರಾಮ, ಕೃಷ್ಣ, ಸುಭದ್ರೆಯರ ಪೂಜೆ ಒಟ್ಟಿಗೇ ನಡೆಯುತ್ತಿದೆ! ಅದನ್ನು ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು. ಅಣ್ಣ -ತಮ್ಮ -ತಂಗಿ..ಈ ಸೋದರ ಪ್ರೇಮದ ಆರಾಧನೆ ಮೆಚ್ಚಬೇಕಾದ್ದೆ! ರಾಮನ ಗುಡಿಯಲ್ಲಿ ಇಡೀ ಕುಟುಂಬವೇ ಆರಾಧ್ಯದೈವವಾಗಿರುತ್ತಾ, ಬಹಳ ಹಿಂದೆಯೇ ಒಂದು ಹೊಸ ಮೌಲ್ಯವನ್ನು ನಮ್ಮ ಹಿರೀಕರು ಎತ್ತಿಹಿಡಿದಿದ್ದಾರೆ! ಅಣ್ಣ ತಮ್ಮಂದಿರ ಜಗಳವೇ ಮುಖ್ಯ ಸಂಘರ್ಷದ ವಿಷಯವಾಗಿರುವ ಮಹಾಭಾರತದ ಕಥೆ ನೆನಪಾಗುತ್ತಿದೆ. ಪಾಂಡವರು ಕೌರವರು ಹೀಗೆ ಒಟ್ಟಿಗೇ ಆರಾಧಿತವಾಗುವ ಚಿತ್ರ ಅನೂಹ್ಯವಾದುದು. ಇಂಥ ಚಿತ್ರವೊಂದನ್ನು ಕುಮಾರವ್ಯಾಸಭಾರತದಲ್ಲಿ ಕೃಷ್ಣನೇನೋ ಒಂದು ಕನಸು ಎಂಬ ಹಾಗೆ ನಮ್ಮ ಕಣ್ಣಮುಂದೆ ಚಿತ್ರಿಸುತ್ತಾನೆ! ಉದ್ಯೋಗ ಪರ್ವದಲ್ಲಿ ಅಂಥ ಒಂದು ಚಿತ್ರ ಬರುತ್ತದೆ. ಅದು ಕರ್ಣಭೇದನ ಸಂದರ್ಭ.ಒಂದು ವೇಳೆ ಕರ್ಣ ಪಾಂಡವರ ಪಕ್ಷಕ್ಕೆ ಬಂದರೆ ಪಾಂಡವರು ಹಿರಿಯಣ್ಣ ಎಂದು ಅವನನ್ನು ಗೌರವಿಸುತ್ತಾರೆ. ದುರ್ಯೋಧನ ಕರ್ಣನ ಪ್ರಾಣ ಮಿತ್ರನಾದ ಕಾರಣ ಅವನು ರಾಜ್ಯವನ್ನು ಕರ್ಣನಿಗೇ ಒಪ್ಪಿಸುತ್ತಾನೆ. ಕುರುಕ್ಷೇತ್ರ ಯುದ್ಧವೇ ನಡೆಯುವುದಿಲ್ಲ. ಆಗ ಅವರೆಲ್ಲಾ ಒಟ್ಟಿಗೇ ಕೂತ ಚಿತ್ರ ಹೇಗಿರುತ್ತದೆ?

ಕೃಷ್ಣ ವರ್ಣಿಸುತ್ತಾನೆ :


ಎಡದ ಮೈಯಲಿ ಕೌರವೇಂದ್ರರ

ಗಡಣ. ಬಲದಲಿ ಪಾಂಡುತನಯರ

ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು

ನಡುವೆ ನೀನೋಲಗದಲೊಪ್ಪುವ ಕಡುವಿಲಾಸವ ಬಿಸುಟು ಕುರುಪತಿ

ನುಡಿಸೆ ಜೀಯ ಹಸಾದವೆಂಬುದು ಕಷ್ಟನಿನಗೆಂದ

ಕೃಷ್ಣ ಕೊಡುವ ಈ ಕನಸಿನ ಚಿತ್ರ ಕರ್ಣನಿಗೆ ಅಪ್ರಿಯವಾದುದು. ಕೃಷ್ಣ ಕೂಡ ಈ ಕನಸು ಒಡೆಯಲಿಕ್ಕೇ ಹೊರಟವನು. ಅದು ಬೇರೆ ವಿಷಯ . ಆದರೆ ನನ್ನ ಮನಸ್ಸಿಗೆ ಹಿಡಿಸಿದ್ದು ಈ ಚಿತ್ರ ಮತ್ತು ರಾಮನ ಕುಟುಂಬಚಿತ್ರಕ್ಕೂ ಇರುವ ಸಾಮ್ಯ ಮತ್ತು ವೈಷಮ್ಯದ ಹೊಳಹು.ಮಹಾಭಾರತ ಇಂಥ ಒಂದು ಚಿತ್ರ ಅಸಾಧ್ಯ ಎನ್ನುತ್ತದೆ. ಏಕೆಂದರೆ ಯಾವುದೇ ಗದ್ದುಗೆಯಲ್ಲೂ ಇಬ್ಬರು ಕೂಡಲು ಅಸಾಧ್ಯ ಎನ್ನುತ್ತದೆ ಮಹಾಭಾರತ. ರಾಮಾಯಣ ಒಂದು ಗದ್ದುಗೆಯಲ್ಲಿ ನಾವೆಲ್ಲಾ ಒಟ್ಟಿಗೇ ಮಂದಸ್ಮಿತದೊಂದಿಗೆ ಆಸೀನರಾಗುವುದು ಸಾಧ್ಯ ಎನ್ನುತ್ತದೆ.


ಹಾಗೆ ನೋಡಿದರೆ ರಾಮನಿಗೆ ಗದ್ದುಗೆ ಅನಿವಾರ್ಯ ಎನ್ನಿಸಿಯೇ ಇಲ್ಲ. ಭರತನಿಗೆ ಎಷ್ಟು ಸುಲಭವಾಗಿ ಗದ್ದುಗೆಯನ್ನು ಬಿಟ್ಟುಕೊಟ್ಟು ವನವಾಸಕ್ಕೆ ಅವನು ಸಿದ್ಧನಾಗುತ್ತಾನೆ! ಹದಿನಾಲಕ್ಕು ವರ್ಷದ ಅವಧಿಯಲ್ಲಿ ಒಮ್ಮೆಯಾದರು ಸೀತೆಯಾಗಲೀ ರಾಮನಾಗಲಿ ಅಯೋಧ್ಯೆಯ ರಾಜಕಾರಣದ ಬಗ್ಗೆ ಚಿಂತಿಸುವುದಿಲ್ಲ. ಮಹಾಭಾರತದಲ್ಲಿ ಪಾಂಡವರನ್ನು ನೋಡಿ...!ಸದಾ ಅವರಿಗೆ ಹಸ್ತಿನಾವತಿಯ ಗದ್ದುಗೆಯದೇ ಚಿಂತೆ. ಸದಾ ಕಾಡುವ ಬೆಂಕಿಯ ನೆನಪು ಅದು. ಅದಕ್ಕೆ ಕೊಂಚ ಬೂದಿ ಮುಸುಕಿದರೂ ಅದನ್ನೂದಿ ಊದಿ ಗಾಳಿ ಹಾಕುವ ದ್ರೌಪದಿ!ಈ ಗಾಳಿಬೆಂಕಿಯ ಅಪವಿತ್ರ ಮೈತ್ರಿಯನ್ನು ಅದೆಷ್ಟು ಕೀರ್ತಿಸುತ್ತದೆ ಮಹಾಭಾರತ. ರನ್ನನ ಗದಾಯುದ್ಧ ಹೇಳುತ್ತದೆ: ದ್ರೌಪದಿ ಬೆಂಕಿಯ ಮಗಳು. ಭೀಮ ಗಾಳಿಯ ಮಗ. ಅವರಿಬ್ಬರೂ ಕೂಡಿದಾಗ ಕೌರವ ವಂಶವನ್ನು ದಹಿಸದೆ ಬಿಡುತ್ತಾರೆಯೇ? ದಾಂಪತ್ಯಕ್ಕೆ ಎಂತಹ ವಿಷಮ ರೂಪಕ. ಮನುಕುಲದ ತಂದೆ ತಾಯಿ ನಾವು ಆಗೋಣ ಎಂದು ಆಧುನಿಕ ಕನ್ನಡ ಕಾವ್ಯ ಹಪಹಪಿಸುತ್ತಿದೆ. ಮನುಕುಲದ ನಾಶ ಮಾಡುವ ಗಾಳಿಬೆಂಕಿಯ ಸಂಗಮ ನಾವಾಗೋಣ ಎಂದು ರನ್ನನ ಮಹಾಭಾರತದ ನಾಯಕ ನಾಯಕಿ ಆಶಿಸುತ್ತಾರೆ!


ರಾಮಾಯಣದ ಭರತನ ಬಗ್ಗೆ ಯೋಚಿಸೋಣ. ಎಂಥ ಮಹಾತ್ಮ ಅವನು! ಅಣ್ಣ ಬಿಟ್ಟುಕೊಟ್ಟರೂ ಗದ್ದುಗೆ ತನಗೆ ಬೇಡ ಅನ್ನುವವನು ಅವನು. ಗದ್ದುಗೆಯಮೇಲೆ ಅಣ್ಣನ ಪಾದುಕೆಗಳನ್ನು ಇಟ್ಟು ಪೂಜಿಸಿದವನು.ಇದು ಆದಿಪುರಾಣದ ಬಾಹುಬಲಿಯ ನಿಲುವಿಗಿಂತ ಭಿನ್ನವಾದುದು! ನನಗೆ ಗದ್ದುಗೆ ಬೇಡ, ಪ್ರಜಾಪರಿಪಾಲನೆಗೆ ಗದ್ದುಗೆಯ ಅಗತ್ಯವಿಲ್ಲ ಎನ್ನುತ್ತಾನೆ ಭರತ! ತನ್ನ ತಾಯಿ ಸಿಂಹಾಸನ ತನಗೆ ದೊರಕಿಸಲು ಮಾಡಿದ ಎಲ್ಲ ಯತ್ನಗಳಿಗೂ ಭರತನೇ ಪ್ರಥಮ ವಿರೋಧಿ! ಆಧುನಿಕ ಭಾರತದಲ್ಲಿ ಅಪರೂಪ ಅಲ್ಲವೇ ಇಂಥ ದೃಶ್ಯ?ತಾಯಿ ತಂದೆ ಮಕ್ಕಳಿಗೆ ಅಧಿಕಾರದ ಹಸ್ತಾಂತರವನ್ನು ಮಾಡಲಿಕ್ಕೆ ಎಂತೆಂಥಾ ರಾಜಕೀಯ ಚದುರಂಗದಾಟದಲ್ಲಿ ತೊಡಗುವುದಿಲ್ಲ ಈವತ್ತು? ಅಧಿಕಾರವನ್ನು ಧಿಕ್ಕರಿಸಿ ಹೊರಡುವ ರಾಮ , ಗದ್ದುಗೆ ಕೈನಿಲುಕಿನಲ್ಲಿದ್ದರೂ ಅದರ ಕಡೆ ಕಡೆಗಣ್ಣೂ ಹಾಯಿಸದ ಭರತ ಬಹಳ ದೊಡ್ಡ ಮೌಲ್ಯಗಳನ್ನು ಪ್ರತಿನಿಧಿಸುವಂತಿದ್ದಾರೆ!


ಕುಟುಂಬಸಂಘಟನೆ ರಾಮಾಯಣ ಎತ್ತಿಹಿಡಿಯುವ ಮೌಲ್ಯವಾಗಿದೆ. ಕುಟುಂಬ ವಿಘಟನೆ ಅನಿವಾರ್ಯವೆನ್ನುವುದನ್ನು ಮಹಾಭಾರತ ಧ್ವನಿಸುತ್ತಿದೆ. ಮಹಾಭಾರತದಲ್ಲಿ ಕೃಷ್ಣನಿಗೆ ನಡೆಯುವುದು ಅಗ್ರಪೂಜೆ.ಒಬ್ಬನನ್ನೇ ಒಂದು ಗದ್ದುಗೆಯಲ್ಲಿ ಕೂಡಿಸಿ ನಡೆಸುವ ಆರಾಧನೆ. ರಾಜಸೂಯಯಾಗದಲ್ಲಿ ಎಂತೆಂಥ ಉತ್ಪಾತಗಳಿಗೆ ಈ ಅಗ್ರಪೂಜೆ ಕಾರಣವಾಯಿತು ನೋಡಿ! ಪೂಜಾಗೃಹದಲ್ಲೇ ಕೃಷ್ಣನ ವೈರಿಯಾದ ಶಿಶುಪಾಲನ ಕೊಲೆಯೇ ಆಗಿಹೋಯಿತು! ಆ ಶಿಶುಪಾಲ ಮತ್ಯಾರೂ ಅಲ್ಲ. ಕೃಷ್ಣನ ಸೋದರತ್ತೆಯ ಮಗ. ಇಡಿ ಮಹಾಭಾರತವೇ ಬಂಧುವಿನಾಶದ ಕಥೆಯಾಗಿದೆ. ಕುರುಕ್ಷೇತ್ರದಲ್ಲಿ ಕೂಡ ಹೊರಗಿನವರು ಯಾರೂ ಇಲ್ಲ. ಅಲ್ಲಿ ನಂಟರು ಪರಸ್ಪರ ಹೊಡೆದಾಡಿಕೊಂಡು ಸತ್ತಿದ್ದಾರೆ. ಹಿರಿಯರ, ತಾಯಿ ತಂದೆಯರ, ಗುರುಗಳ ಮಾತನ್ನು ಅಲ್ಲಿ ಹೊಸಪೀಳಿಗೆಯ ಜನ ಕೇಳುತ್ತಿಲ್ಲ. ದುರ್ಯೋಧನ ತನಗೆ ತೋರಿದ್ದನ್ನೇ ಮಾಡುವವನಾಗಿದ್ದಾನೆ. ತಂದೆ ತಾಯಿ ಅಜ್ಜ ಗುರು ಯಾರ ಮಾತನ್ನು ಕೇಳಿದ್ದರು ಯುದ್ಧದ ವಿನಾಶ ತಪ್ಪುತ್ತಿತ್ತು!


ಪಿತೃವಾಕ್ಯಪರಿಪಾಲನೆ ಎನ್ನುವುದು ರಾಮನಿಗೆ ಅನುಲ್ಲಂಘನೀಯವಾದ ಜೀವ ಮೌಲ್ಯವಾಗಿದೆ. ತಾಯಿಯ ಬಗ್ಗೆ ಅವನಿಗೆ ಅದೆಂಥಾ ಗೌರವ. ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಶ್ರೇಷ್ಠವಾದುದು ಅನ್ನುವವನು ಅವನು.ಕುಟುಂಬ ಎನ್ನುವ ವಿಶ್ವವನ್ನು ರಾಮಪ್ರಜೆ ಕೈವಾರಿಸುತ್ತದೆ. ಹಾಗೇ ವಿಶ್ವ ಎನ್ನುವ ಕುಟುಂಬವನ್ನು. ಅದಕ್ಕೇ ರಾಮ ಎಂದರೆ ಆಲಯವನ್ನು ಹೊಕ್ಕ ಆಕಾಶ ಎನ್ನುತ್ತೇನೆ ನಾನು! ರಾಮನದು ಬದ್ಧವ್ಯಕ್ತಿತ್ವ ಎನ್ನಲಾರೆ! ರಾಮನದು ಮೌಲ್ಯಬದ್ಧ ವ್ಯಕ್ತಿತ್ವ ಎನ್ನುತ್ತೇನೆ. ಅದಕ್ಕೆ ವಿರುದ್ಧವಾಗಿರುವ ರಾಮಜೀವನದ ಎಳೆಗಳನ್ನು ಈಗ ಪುನರ್ನೇಯ್ಗೆಗೆ ಒಳ ಪಡಿಸಿ ಪುರುಷೋತ್ತಮ ತತ್ವವನ್ನು ಮತ್ತೆ ಈ ಕಾಲಕ್ಕೆ ತಕ್ಕ ರೂಪಕವಾಗಿ ಕಡೆದುಕೊಳ್ಳ ಬೇಕಾಗಿದೆ.


ನನ್ನ ಅಳಿಲು ರಾಮಾಯಣದಲ್ಲಿ ರಾಮ ತನಗೆ ಸೇತುಬಂಧನ ಕಾರ್ಯದಲ್ಲಿ ಸಹಕರಿಸಿದ ಅಳಿಲಿನ ಪ್ರೀತಿಗೆ ಸೋತು ನಿನಗೆ ಬೇಕಾದ ವರ ಕೇಳು ಕೊಡುತ್ತೇನೆ ಅನ್ನುತ್ತಾನೆ. ಆಗ ಅಳಿಲುಮರಿ ನೀನು ನನ್ನ ಜೋಡಿ ಕಬಡಿ ಆಡುತ್ತೀಯ ಎಂದು ಕೇಳುತ್ತದೆ! ರಾಮ ಆಗ ನಕ್ಕು ಆಹಾ ಎಂಥಾ ಬೇಡಿಕೆ...ಎನ್ನುತ್ತಾ ತನ್ನ ಬತ್ತಳಿಕೆ ಬಿಲ್ಲು ಲಕ್ಷ್ಮಣನಿಗೆ ಹಿಡಿದುಕೊಳ್ಳಲು ಕೊಟ್ಟು ಅಳಿಲಿನೊಂದಿಗೆ ಕಬಡಿ ಆಡಲು ಸಿದ್ಧನಾಗುತ್ತಾನೆ! ಬಿಲ್ಲು ಬಾಣ ಮೈಯಿಂದ ಇಳಿಸಿದಾಗ ಎಷ್ಟು ಹಗುರ ಆಗುತ್ತದೆ ಅವನಿಗೆ . ಆಹಾ ಈಗ ಹಗುರಾಯಿತು ಅನ್ನುತ್ತಾನೆ. ಕೋದಂಡವನ್ನು ಕೆಳಗಿಟ್ಟು ಅಳಿಲನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ರಾಮ ನನ್ನ ಆದರ್ಶವಾಗಿದ್ದಾನೆ!


ರಾಮನ ಫೋಟೋದಲ್ಲಿ ಈಗ ಒಂದು ಖಾಲಿಬಿದ್ದ ಜಾಗವಿದೆ.ಅದು ಶ್ರೀರಾಮನ ಹೆಗಲು. ಆ ಹೆಗಲಿನ ಮೇಲೆ ಹಾವಿನ ಹೆಡೆಯ ಹಾಗೆ ಬಾಗಿರುವ ಕೋದಂಡದ ಕೊಂಕು ಕಾಣುತ್ತಿದೆ. ಫೋಟೋಗ್ರಾಫರ್ ಹೇಳುತ್ತಾನೆ. ಸರ್...ದಯವಿಟ್ಟು ಆ ಬಿಲ್ಲನ್ನು ತೆಗೆದು ಕೆಳಗಿಡಿ...ಅಲ್ಲಿ ಈ ಪುಟ್ಟ ಅಳಿಲುಮರಿ ಕೂಡಿಸಿಕೊಳ್ಳಿ...!


ಕುಟುಂಬಪೂಜೆಯ ಮೂರ್ತರೂಪವಾದ ರಾಮಸಂಸಾರದ ಪರ್ಯಾಯ ಪ್ರತೀಕವಾಗಿ ಈಗ ನಮ್ಮ ಭಾರತದ ಚಿತ್ರವನ್ನು ದಯವಿಟ್ಟು ಕಲ್ಪಿಸಿಕೊಳ್ಳಿ. ನಡುವೆ ತಾಯಿ ಭಾರತಿ. ಮಕ್ಕಳು ಮೊಮ್ಮಕ್ಕಳು ಬಂಧುಗಳು ಬಳಗದವರು ಬೀಗರು ಬಿಜ್ಜರು ಹೊರದೇಶದ ಅತಿಥಿಗಳು...ಸ್ವಲ್ಪ ನಗಿ ಪ್ಲೀಝ್...ಇದು ಸರ್ವ ಜನಾಂಗದ ಶಾಂತಿಯ ತೋಟ...ಇದೇ ನಮ್ಮ ಗ್ರೂಪ್ ಫೋಟೋದ ಶೀರ್ಷಿಕೆ ಕೂಡ...

Tuesday, August 4, 2009

ಪರಸ್ಪರ

ನನ್ನ ಹೊಸ ಕವಿತೆಗಳನ್ನ, ಮತ್ತು ಆಗಾಗ ಬರೆವ ಲೇಖನಗಳನ್ನ ಸಾಹಿತ್ಯಾಭಿಮಾನಿಗಳ ಗಮನಕ್ಕೆ ತರಬೇಕೆಂಬ ಅಪೇಕ್ಷೆಯಿಂದ "ಪರಸ್ಪರ" ಪ್ರಾರಂಭವಾಗಿದೆ. ಕಾವ್ಯಾಭಿಮಾನಿಗಳು ತಮ್ಮ ಸ್ಪಂದನ ತಿಳಿಸಿದರೆ ತುಂಬ ಸಂತೋಷವಾಗುವುದು. ಉತ್ತರಾಯಣ ಪದ್ಯವನ್ನು ನನ್ನ ಅನಿವಾಸೀಭಾರತೀಯ ಗೆಳೆಯರು ಓದಬೇಕೆಂದು ಅಪೇಕ್ಷೆ ಪಟ್ಟರು. ಅವರಿಗೆಲ್ಲ ಕೃತಿಯನ್ನು ಕಳಿಸುವುದು ಸಾಧ್ಯವಾಗಲಿಲ್ಲ. ಈಗ ಪರಸ್ಪರದ ಮೂಲಕ ನನ್ನ ದೂರದ ಗೆಳೆಯರಿಗೂ ಈ ಕವಿತೆ ಓದಿಸುವುದು ಸಾಧ್ಯವಾಗುತ್ತಿದೆ. ನನ್ನ ಪತ್ನಿ ಅಕಾಲಿಕ ಮರಣಕ್ಕೆ ತುತ್ತಾದಾಗ ಬರೆದ ಪದ್ಯ ಇದು. ಬದುಕು ಮತ್ತು ಸಾವಿನ ಬಗ್ಗೆ ಚಿಂತಿಸುವ ಈ ಪದ್ಯದ ಬಗ್ಗೆ ನನ್ನ ಹೊಸ ಮಿತ್ರರ ಅನಿಸಿಕೆ ತಿಳಿಯಲು ಕುತೂಹಲವಿದೆ.-ಎಚ್.ಎಸ್.ವಿ.

Saturday, August 1, 2009

ಉತ್ತರಾಯಣ


ಬತ್ತಿ ಸುಟ್ಟು, ಎಣ್ಣೆ ತೀರಿ, ಉದ್ವಿಗ್ನದೀಪ ನಿಷ್ಪಂದ ಶಾಂತ.
ಮತ್ತೆ ಬತ್ತಿ ಪೋಣಿಸಿ, ಎಣ್ಣೆ ರೆಡಿಮಾಡಿ, ದೀಪ ಹಚ್ಚಿಟ್ಟಾಗ
ಖಾಲಿ ಗೋಡೆಯ ನಡುವೆ ಒಂದು ನಿಶ್ಶಬ್ದ ನಿರುಂಬಳ ನಗೆ.
ದೀಪಶಿಖಿಯಿಂದೇಳುತ್ತಿದೆ ಸುರುಳಿ ಸುರುಳಿ ಕಪ್ಪು ಹೊಗೆ

ಕಣ್ಣಿಂದ ನೀರು ಸುರಿಯುತ್ತೆ ತನಗೆ ತಾನೇ, ಗಂಟಲಲ್ಲಿ
ಬೆಂಕಿ ಉರಿಯುತ್ತೆ ತನಗೆ ತಾನೇ, ಶುರುವಾಗಿದೆ ಬಟ್ಟಂಬಯಲಲ್ಲಿ
ನಿರಂತರ ನೆಪ್ಪಿನ ನಾಟಕ...ಶಬ್ದದ ಹಂಗಿಲ್ಲದ ಮಾತು;
ಬಣ್ಣದ ಹಂಗಿಲ್ಲದ ರೂಪು; ಗಾಳಿಯ ಹಂಗಿಲ್ಲದ ಉಸಿರಾಟ.

ಈಗ ನನ್ನ ನಾಟಕದಲ್ಲಿ ನಾನೇ ಅಭಿನೇತೃ, ನಾನೇ ಪ್ರೇಕ್ಷಕ.
ನೋಡುತ್ತಿದ್ದೇನೆ ನನ್ನನ್ನ ನಾನೇ...ಮುಗಿಲಿಲ್ಲದೆ ಮಳೆ ಸುರಿಯುತ್ತಿದೆ...
ಗಾಳಿಯಿಲ್ಲದೆ ಸೆರಗು ಹಾರುತ್ತಿದೆ...ಚಂದ್ರನಿಲ್ಲದ ಬೆಳದಿಂಗಳಲ್ಲಿ
ನಗುತ್ತಿದ್ದಾಳೆ ನನ್ನಾಕೆ-ಯಾವ ಗುರಿಯೂ ಇಲ್ಲದ ಕಟ್ಟಾ ಖಾಸಗಿ ನಗೆ.

ಕನ್ನಡಿಯಾಚೆ ಪ್ರತಿಬಿಂಬ...ಹಿಡಿಯಲು ಕೈ ಚಾಚಿದರೆ
ಅಡ್ಡನಿಂತಿದೆ ಬೂತಗನ್ನಡಿ...ಕನ್ನಡಿಯನ್ನು ಒಡೆಯುವಂತಿಲ್ಲ
ಪ್ರತಿಬಿಂಬವನ್ನು ಹಿಡಿಯುವಂತಿಲ್ಲ...ಕನ್ನಡಿಯ ಸುತ್ತಾ
ಕತ್ತಲು...ಕನ್ನಡಿಯೊಳಗಿದೆ ಬೆಳಕು -ದೀಪದ ಕಣ್ಣು ಧಿಗ್ಗನುರಿಯುತ್ತ.



ಪಶ್ಚಿಮವಾಹಿನಿಯಲ್ಲಿ ನಡುಹಗಲ ಬಿಸಿಲಲ್ಲೂ ತಣ್ಣಗೆ
ಕೊರೆಯುವ ನದಿ. ಮೆಲ್ಲಗೆ ಕಾಲೂರಿ ನದಿಗಿಳಿದಾಗ
ಗದಗುಟ್ಟುತ್ತಿದೆ ಇಡೀ ಶರೀರ...ಗಂಟು ಬಿಚ್ಚಿ
ಕುಡಿಕೆಯಲ್ಲಿದ್ದ ಕನಕಾಂಬರಿ, ಮಲ್ಲಿಗೆ ತೆಗೆದು ಮೆಲ್ಲಗೆ

ಅಲೆಯ ಮೇಲಿಟ್ಟಾಗ ಹೊತ್ತುಕೊಂಡೊಯ್ಯುತ್ತಿವೆ
ಹೆಗಲಬದಲಾಯಿಸುತ್ತ ಓಡೋಡಿ ಬರುವ ಅಲೆ.
ಬೆಳ್ಳಗೆ ಹುಡಿ ಹುಡಿ ಮೂಳೆತುಂಡ
ಕನಸೊಡೆಯದಂತೆ ಮೆಲ್ಲಗಿಳಿಸಿ ನಿದ್ದೆಗೆ
ನೀರಲ್ಲಿ ಡಬಕ್ಕನೆ ಅದ್ದಿದರೆ ತಲೆ, ಬರೀ ಕತ್ತಲೆ

ಕಿವಿಯೊನ್ನೊತ್ತುವ ಪ್ರವಾಹದ ಸದ್ದು. ತಿರುಗಿ
ತಲೆ ಎತ್ತಿದಾಗ ಕಡಲ ಕಡೆ ಯಾನ ಹೊರಟಿವೆ
ಅಸಂಖ್ಯ ಪುಟ್ಟ ಪುಟಾಣಿ ಹಾಯಿ ದೋಣಿ. ತನ್ನ ಗುರಿಯತ್ತ
ಹರಿವ ಹೊಳೆಯಲ್ಲಿ ಮೆಲ್ಲಗೆ
ಕರಗುತ್ತಾ ಕರಗುತ್ತಾ....


ಕಣ್ಣಿದೆ; ಕಾಣಿಸುತ್ತಿಲ್ಲ. ಕಿವಿಯಿದೆ; ಕೇಳಿಸುತ್ತಿಲ್ಲ.
ನಾಲಗೆಯಿದೆ; ನುಡಿಯುತ್ತಿಲ್ಲ. ನೀನಿದ್ದೀಯ-ಇಲ್ಲದ ಹಾಗೆ.
ಕ್ರಿಯಾಹೀನ ಕಾರ್ಯವ್ಯವಸ್ಥೆಯ ಮುಚ್ಚಿಟ್ಟ ಸಂಪುಟವೇ...
ನೀನು ತೆರೆದ ಕಣ್ಣಿಂದ ಮತ್ತೆ ನೋಡಬಹುದೆಂದು ಕಾಯುತ್ತಿರುವೆ.

ಯಾರೋ ಪರದೆ ಎಳೆಯುತ್ತಿದ್ದಾರೆ. ಮುಗಿಯಿತು ಸ್ವಾಮಿ ನಾಟಕ.
ನೀವಿನ್ನು ಹಿಡಿಯಿರಿ ಮನೆ ದಾರಿ. ಅಕ್ಕ ನೀನಿದ್ದಾಗಲೇ
ಬೆಕ್ಕು ಕೊಂಡು ಹೋಯಿತು. ನಾಕೂ ಮಂದಿ ಮಕ್ಕಳು, ಸೊಸೆಯಂದಿರು,
ಪಾಣಿಗ್ರಹಣ ಮಾಡಿದ ಪತಿ ಸುತ್ತಾ ನಿಂತಿರುವಾಗಲೇ ಹೋಗಿಬಿಟ್ಟೆ!

ಬಿದ್ದು ಹೋಗಿತ್ತು ಕಾಲು. ಕಾಲಕ್ಕಿಲ್ಲವೇ ಇಲ್ಲ ಕಾಲಿನ ಮರ್ಜಿ.
ಮಣ್ಣಲ್ಲಿ ಮೈಯೂರಿದ ಮೇಲೆ ಇದ್ದಲ್ಲೇ ವಿಶ್ವವಿಭ್ರಮಣೆ.
"ಏಳಿ ಊರು ಬಂತು" ಎಂದು ಹೇಳಲೇ ಇಲ್ಲ ನೀನು.
ನನಗೂ ಮೈಮರೆವೆ. ಅರ್ಧ ಪಂಚೆ ಸುತ್ತಿಕೊಂಡು ಹೆಂಡತಿ ಹೊರಟಾಗ ಹೊರಕ್ಕೆ,
ಗಂಡನಿಗಿನ್ನೂ ಮರಣಾಂತಿಕ ನಿದ್ದೆ.



ಬಾ ಬಾ ಕಪ್ಪು ಹಕ್ಕಿಯೇ...ನಿನಗೆ ಯಾವತ್ತೂ ಹೀಗೆ
ಅನ್ನವಿಟ್ಟು ಕಾಯ್ದಿರಲಿಲ್ಲ. ಆತಂಕದಿಂದ ಕುದಿಯುತ್ತಿದ್ದಾರೆ
ನೆರೆದ ಹತ್ತೂ ಸಮಸ್ತರು.
ಒಲ್ಲೆನೆನ್ನ ಬೇಡ...ಹೀಗೆ ನಿಷ್ಕರುಣೆಯಿಂದ ತಲೆಯೊನೆಯ ಬೇಡ.
ಕುಪ್ಪಳಿಸಿ ಕುಪ್ಪಳಿಸಿ ಹತ್ತಿರ ಬಂದು ಮತ್ತೆ ಮತ್ತೆ ಹಿಂದಕ್ಕೆ ಜಿಗಿಯ ಬೇಡ.

ಎಷ್ಟು ಕೂರಾಗಿದೆಯಲ್ಲ ನಿನ್ನ ಕಣ್ಣು. ಯಾವುದೋ ಘನಂದಾರಿ ಪಾರ್ಟಿ
ಯೆಂದು ಸುಳ್ಳು ಬಗುಳಿ ತಡವಾಗಿ ಬಂದಿದ್ದುಂಟು ಮನೆಗೆ. ಸದ್ಯ ನಿನಗೆ
ನಿದ್ದೆ ಬಂದಿದ್ದರೆ ಸಾಕು. ಮೆಲ್ಲಗೆ ಕಾರಿಂದಿಳಿದು ಬಂದಾಗ ಬಾಗಿಲಿಗೆ
ಕೂತೇ ಇದ್ದೀಯ ನೀನು ಕುರ್ಚಿಯಲ್ಲಿ ತೂಕಡಿಸುತ್ತಾ

ಟೀವಿಯಲ್ಲಿ ತನ್ನ ಪಾಡಿಗೆ ತಾನು
ನಡೆದಿದೆ ಅಳುಬುರುಕ ನಾಟಕ. ಕಣ್ಣಲ್ಲಿ ಹೀಗೆ ಚೂರಿ
ಬಚ್ಚಿಡಬಾರದು. ಬಾ ಬಾ ಕಪ್ಪು ಹಕ್ಕಿಯೇ...ಹೊಟ್ಟೆಕುದಿಯೊಂದಿಗೆ
ನಿನಗಾಗಿ ಕಾಯುತ್ತಿದ್ದೇವೆ...ಕ್ಷಮಿಸಿ ಸರ್ವಾಪರಾಧವನ್ನ ಮುಟ್ಟು ಮಿಟ್ಟಿಗೆ ಅನ್ನ.



ನಿರುಪಯುಕ್ತ ನಿನ್ನೀ ದೇಹ. ತಿನ್ನಲಿಕ್ಕಿಲ್ಲ, ಉಣ್ಣಲಿಕ್ಕಿಲ್ಲ
ಕೊಡಲಿಕ್ಕಿಲ್ಲ, ಪಡಲಿಕ್ಕಿಲ್ಲ. ಯಕೃತ್ತಿನ ವಿಕೃತಿಗೆ
ತುತ್ತು ಇಡೀ ಒಡಲು. ರಸಸರಸ್ಸಾಗಿ ಉನ್ಮುಖಸುಖೋನ್ಮಾದದಲ್ಲಿ
ತೇಲಿಸಿ ಮುಳುಗಿಸಿ ಸುಳಿಸುತ್ತಿ ತಳಕ್ಕೆಳೆದ ಇದೇ ದೇಹ ಈಗ
ತತ್ತರಸುವಡಿಗೆ ವ್ಯರ್ಥ ಭಾರ.



ಅಲ್ಲಲ್ಲ...
ನಿನ್ನ ಒಡಲೀಗ ಸೇವಾಕಾರ್ಯಕ್ಕೆ ತೆರೆದ
ಪವಿತ್ರಕ್ಷೇತ್ರ; ಮೆಲ್ಲಮೆಲ್ಲಗೆ ಕಾಲೊತ್ತುವೆ..ಕಣ್ಣಲ್ಲಿ
ತೇಲಿಹೋಗುವ ಕ್ಷಣನೆಮ್ಮದಿ ಅಲೆ ಹುಟ್ಟಿಸಿದ್ದೇ ಈ ಕೈಯ ಕೈಂಕರ್ಯ
ಇಗೋ ಹಿಡಿದ ತೊಡೆಯ ಸ್ನಾಯುಗೆ ನಿಷ್ಕಾಮದಿಂದ ಮೂವೊತ್ತಿಮೆತ್ತಿ

ಮೃದುವಾಗಿ ಆಡಿಸುವೆ ಕೈ, ಹಾಯೆನಿಸಿ ನಿರಾಳವಾಗುವ ಉಸಿರಾಟವಾಲಿಸುತ್ತಾ.
ಸ್ಪೂನಲ್ಲಿ ಗುಟುಕು ಗುಟುಕು ಗಂಜಿಯೂಡಿಸುತ್ತಾ ತುಟಿಯೊದ್ದೆಯಲ್ಲಿ ಮೆಲ್ಲಗೆ
ಅರಳಿ ಬಾಡುವ ನಗೆಯೆಸಳು ನೋಡುವೆ. ನಿರುಪಯುಕ್ತವಲ್ಲ ಈ ದೇಹ.
ಸೇವಾಯೋಗಕ್ಕೆ ಈಗಷ್ಟೇ ನನ್ನಿಷ್ಟದೈವ ತೆರೆದ ಸೇವಾಕ್ಷೇತ್ರ. ಮೆಲ್ಲಗೆ

ಬಿಗಿಮಾಡಿ ತಿರುಪು, ವೀಣೆಯೆತ್ತಿ ತೊಡೆಮೇಲಿಟ್ಟು, ನಿಧಾನ ಮಿಡಿದಾಗ ತಂತಿ,
ತುಟಿ ಮಧ್ಯೆ ಸದ್ದಿಲ್ಲದೆ ತಲೆಯೆತ್ತುವ ನಿರಾಕಾರ ಓಂಕಾರವಾಲಿಸುವೆ ಕಿವಿಗೊಟ್ಟು.



ಕೈಯಲ್ಲಿದೆ ಹತ್ತು ವರ್ಷಗಳ ಹಿಂದೆ ತೆಗೆಸಿದ್ದ ಫೋಟೊ.
ಕೇಮರಾ ಎಂದರೆ ಮೊದಲಿಂದಲೂ ವಿಚಿತ್ರ ಭಯ ನಿನಗೆ.
ನಗುತ್ತಿದ್ದಾಕೆ ಸಹಜ ಇದ್ದಕ್ಕಿದ್ದಂತೆ ಗುಮ್ಮಾಗಿದ್ದೀ.
ಸ್ಮೈಲ್ ಪ್ಲೀಸ್ ಅಮ್ಮಾ...ಬಲವಂತವಾಗಿ ಎಳೆದು ತಂದ

ನಗುವಿನ ಮಸ್ಲಿನ್ ಫರದೆ ಕ್ಷಣಾರ್ಧದಲ್ಲಿ ಕೆಳಕ್ಕೆ
ಜಾರಿ ಮತ್ತದೇ ಜೋಲು ಮುಖ...ಈಗ ಕೋತಿ ಕುಣಿಯುತ್ತಾನೆ
ಕೊನೆ ಮಗ...ತಾಯಿದೇವಿ ಕೇಮರಾ ಮರೆತು ಥಟ್ಟನೆ ನಕ್ಕದ್ದು
ಶಾಶ್ವತ ಉಳಿದು ಬಿಟ್ಟಿದೆ ತೊಳೆದಿಟ್ಟ ಫಟದಲ್ಲಿ

ಸತ್ತಮೇಲೆ ಸತ್ತವರ ಫಟದ ಅರ್ಥವೇ ಬದಲಾಗಿ ಹೋಗಿ
ದೆ ಶಿವಶಿವಾ! ಹಳೆಯ ಹಕ್ಕಿ ಹಾರಿ ಹೊಸದೊಂದು ಹಕ್ಕಿ ಫರ್ರನೆ
ಎಗರಿ ಬಂದು ಕೂತಿದೆ ಕಟ್ಟಿನ ಮೇಲೆ, ಈಗ ಬಿಟ್ಟೂ ಬಿಡದ ಮಳೆ. ಕಾಲ ಕೆಳಗೆ
ನಡೆದಾಡುವ ರೋಡಲ್ಲೇ ತಣ್ಣಗೆ ಹರಿದುಹೋದಂತೆ ಅಂಕುಡೊಂಕು ಹೊಳೆ.



ಆವತ್ತು ಮಳೆಮಿಂಚಿನಿರುಳು.ಯಾವತ್ತಿನಂತೆ
ಹೋಗಿತ್ತು ವಿದ್ಯುತ್ತು.ತೊಯ್ದು ತೊಪ್ಪಡಿಯಾಗಿ
ಮನೆಗೆ ಬಂದಾಗ ಏನೇನೂ ಕಾಣುತ್ತಿಲ್ಲ.
ಹೇಗೊ ಬಾಗಿಲ ತೆಗೆದು ಒಳಗೆ ಬಂದೆ .

ಕತ್ತಲ ಮುಸುಕಲ್ಲಿ ಸೋಫಕುರ್ಚಿಗಳೆಲ್ಲ ಗಪ್ಪುಚುಪ್ಪು.
ಇನ್ನು ಕಡ್ಡಿಪೆಟ್ಟಿಗೆಗಾಗಿ ದರಿದ್ರ ಪತ್ತೆದಾರಿ
ಹಾಳಾದದ್ದು ಸಿಗಲಿಲ್ಲ.
ಸಿಡಿಮಿಡಿ.
ರಜ ಎಂದು ಮಕ್ಕಳಿಗೆ
ಸಂಜೆಯೇ ಹಿಡಿದಿದ್ದೆ
ಚಿತ್ರದುರ್ಗದ ರೈಲು.
ಚಡಪಡಿಕೆ ಈಗ.
ಹೋಗಿದ್ದರಾಗಿತ್ತು ನಾಳೆಯೋ ನಾಡಿದ್ದೊ...
ಅಥವ ಮುಂದಿನ ವಾರ.
ಕದ್ಡಿಪೆಟ್ಟಿಗೆಗಾಗಿ ತಡಕಾಟ ನಡೆದೆ ಇದೆ.

ಅರೆ ಅರೆ! ಅಡುಗೆ ಮನೆ ಕಿಡಕಿಯಲ್ಲಿಡುತ್ತಿದ್ದೆಯಲ್ಲವೆ ಅದನ್ನ?
ಅಲ್ಲೆ ಕೆಳಗಡೆ ಹಣತೆ.
ಕಡ್ಡಿಗೀರಿದೆ.

ದೀಪವಷ್ಟೇ ಮೊದಲು ಕಂಡದ್ದು

ಆಮೇಲೆ ತಡವಾಗಿ

ಪ್ಲಾಸ್ಕು
ಬಿಸಿ ಅಡುಗೆ
ಕಾಸಿದ ಹಾಲು
ಹಾಳು ಕಳಕಳಿ ಅಕ್ಕರಾಸ್ತೆ ಕವಿತೆಯ ಸಾಲು.



ಇದು ಹರಳ ಬಳೆ. ಹವಳದ ಹಾರವಿದು. ಇದು
ಚೈನು. ವಂಕಿಯುಂಗುರವಿದು. ಇದು ಸವೆದು ಮಾಸಿದ ಕಾಲ್ಗೆಜ್ಜೆ.
ಇದು ಹರಿದ ಮುತ್ತಿನ ಹಾರ. ಇವು ಚೂರು ಪಾರು
ಮುರಿದಾಭರಣ ತುಣುಕು. ಹಂಚಿಬಿಡಿ ಸೊಸೆಯರಿಗೆ.

ಇದು ಧಾರೆ ಸೀರೆ. ಇದಿದೆಯಲ್ಲಾ ಇದು ಮಗ ಮದುವೆಗುಡಿಸಿದ್ದು.
ಇದು ಹೊಸಮನೆಯ ಗೃಹಪ್ರವೇಶದಲ್ಲಿ ಬಂದದ್ದು
ತೌರಿಂದ. ಇದು ನಿಮಗೂ ಗುಟ್ಟು ಬಿಟ್ಟು ಕೊಡದೆ
ಕಾಸಿಗೆ ಕಾಸು ಕೂಡಿಕ್ಕಿ ಕೊಂಡ ನಕ್ಕಿ ಮಿರುಗಿನ ತಿಳಿ ಗುಲಾಬಿ

ಜರತಾರಿ ಪತ್ತಲ. ಈ ಎಲ್ಲ ಕಳಚಿ ಬೆತ್ತಲೆ ನಿಂತ
ನಿರಾಭರಣ ಸುಂದರಿ ನಾನು. ಜಗ್ಗುವ ಬೊಜ್ಜು. ಜೋತು
ಸುಕ್ಕಿದ ಮೊಲೆ. ಬತ್ತಿದ ನಿತಂಬ. ಮೈ ಮುಚ್ಚ
ಲಾರದ ಅರೆನರೆ ಬೆರೆತ ಕುರುಚಲು ಮುಡಿ.

ಬಾ ಬಾ ತಿರುಗುಣಿ ಹಲ್ಲು ಹೀರಿ ಉಗಿದ ಕಬ್ಬೇ ಎನ್ನುತ್ತಾ ತಬ್ಬಿ ಎಳೆದಾಗ
ತೂಗುಮಂಚಕ್ಕೆ, ಒದ್ದೆ ಕಣ್ಣಿಗೆ ಉಪ್ಪುಪ್ಪು ಮುದ್ದು. ನಿಧಾನ ಬೆನ್ನ ಮೇಲೆ
ಕೈ ಆಡಿಸುತ್ತಾ ಬತ್ತಿದ ತೊರೆಯನ್ನೊತ್ತಿಕೊಳ್ಳುತ್ತೇನೆ
ಎದೆಗೆ. ಇಂಗಿದ ಇಮ್ಮುಖೀ ಹೊಳೆಗೀಗ ಜಿನುಗುವ ನಾಲಕ್ಕು ನೀರ್ಗಣ್ಣು.

೧೦

ಒಂಬತ್ತು ತಿಂಗಳು ಸಾಕು ಮತ್ತೆ ಹುಟ್ಟಲಿಕ್ಕೆ.
ಹನ್ನೆರಡು ತಿಂಗಳಾದವು ನೀನು ಹೋಗಿ ಗೊತ್ತೇ ಇಲ್ಲದ
ಪರಸ್ಥಳಕ್ಕೆ. ಬಂದಿರಬೇಕಲ್ಲ ಮತ್ತೆ ಮೂರು ತಿಂಗಳ ಚಿಗುರಾಗಿ
ಯಾರೋ ಉತ್ತ ನೆಲಕ್ಕೆ?
ಕಿಟಕಿಯಲ್ಲಿಣುಕುವ ದಾಸವಾಳವೇ? ಕಣಗಿಲೆ ಮೇಲೆ ಸರಸರ ಹರಿವಳಿಲೆ?

ವಿನಾಕಾರಣ ದೀಪ ಸುತ್ತುವ ಪತಂಗವೇ? ಎಳೆಗಂದಮ್ಮನ ತುಟಿಯಂಚಲ್ಲಿ
ಜಿನುಗುವ ಜೊಲ್ಲುನಗೆಯೇ? ಎಲ್ಲಿರಬಹುದೆಂದು ಹುಡುಕುತ್ತಿದ್ದೇನೆ
ನಿನ್ನಕ್ಕರೆಯ ಆಲಿಬಿಂದು. ನಡೆಯುತ್ತಿದೆ ಕೊನೆಯಿರದ ಪತ್ತೇದಾರಿ.
ಉರಿಯುವ ನಂದಾದೀಪದ ಕತ್ತಲ್ಲಿ ಸುಡುಸುಡುತ್ತೇರುತ್ತಿರುವ

ಎಣ್ಣೆಯ ಮೇಲ್ಮುಖೀ ಬೆಂಕಿಗುಟುಕು ನೀಲಾಂಜನದ ಕುತ್ತಿಗೆಗಲ್ಲದೆ ತಿಳಿಯದು
ಮತ್ತಾರಿಗೂ.

೧೧

ಊದುಬತ್ತಿಯ ಬಳ್ಳಿ ಕೇವಲ ಕಂಪಾಗಿ ಕರಗಿ ಹೋಯಿತೆ ಗಾಳಿಬಯಲಲ್ಲಿ?
ರಪ ರಪ ರಾಚಿದ ಜರಡಿಮಳೆ ತೇವ ತೇಲಿಸಿ ಮೇಲೆ ಮಣ್ಣಲ್ಲಿಂಗಿ ಹೋಯಿತೆ?
ತಣ್ಣೀರಲ್ಲಿ ಮೀಹಕ್ಕಿಳಿದ ಅಗ್ನಿಪಿಂಡದ ದಾಹ
ತಣಿದು ತೇಲಿತೇ ಕೊಳದ ಮೇಲೊಂದು ಬೆಳಕಿನ ಹೆಣ?

೧೨

ಮರವೆತ್ತಿದೆ ತನ್ನ ಅಷ್ಟೂ ಬೋಳು ಕೈ ಆಕಾಶಕ್ಕೆ
ಕ್ಷಣ ಕ್ಷಣಕ್ಕೆ ದೂರ ದೂರ... ಅಂಗೈಯಗಲದ ಗಾಳಿಪರವಶ ಮೋಡ-
ರಾಮಗಿರಿಯಿಂದಲಕೆಗೂ ನಿಲುಕದೆ, ಹಿಮಾಲಯದ, ಗಸಗಸ ಮಸೆದ ಕಲಶಕ್ಕೆ,
ಯಾರೋ ಎಸೆದ ವಿಚ್ಛಿದ್ರ ಕಣ್ಣೊದ್ದೆ ಕರವಸ್ತ್ರ.

೧೩

ಕಣ್ಮುಚ್ಚಿದಾಗ ನೀನು.... ಪಕ್ಕೆಯಲ್ಲಿ ಬಚ್ಚಿಟ್ಟುಕೊಂಡಿದ್ದ
ರೆಕ್ಕೆಗಳ ಛಕ್ಕನೆಳೆದು ಹೊರಕ್ಕೆ
ಶೂನ್ಯಕ್ಕೆಗರಿ ಹಾರಿಯೇ ಹೋಯಿತು
ಹುಣ್ಣಿವೆಗಿಂಡಿ ಕಚ್ಚಿದಾಕಾಶಪಕ್ಷಿ.

ಕಣ್ಮುಚ್ಚಿದಾಗ ನೀನು.... ನೆಲದಾಯಿ ಕೆಚ್ಚಲ ಸಾಲು
ಪಾತಾಳದಾಳಕ್ಕೆ ಬೊಕ್ಕ ಬೋರಲೆ ಬಿದ್ದು ಗೋಧೂಳಿಯಲ್ಲಿ
ಮಣ್ಣಲ್ಲಿ ಮಣ್ಣು.

ಕಣ್ಮುಚ್ಚಿದಾಗ ನೀನು...ಓತಪ್ರೋತ ನುಗ್ಗುತ್ತಿದ್ದಾ
ವೇಶಿತ ನದಿ ನದ ಹಳ್ಳವೆಲ್ಲ
ಸುಯ್ಯೆಂದರೆಕ್ಷಣದಲ್ಲಿಂಗಿ ಹೋದವು
ಕಾದ ಕಾವಲಿ ಎಣ್ಣೆಗಿಮಟು ನೆಲದಲ್ಲಿ.

ನೀನೆಳೆದಾಗ ಕೊನೆಯುಸಿರು...
ನೆಲವನ್ನಾವರಿಸಿ ಬಳಸಿದ್ದ
ಗಾಳಿಸೀರೆಯು ಜಾರಿ
ನಿಷ್ಕಂಪವಾಯಿತಡಿಗಿಳಿದಿದ್ದ ಜೋಲು ಮುಡಿ.

ಸಂಜೆಯುರಿಲಿಂಗಕ್ಕೆ
ನಿಗಿ ನಿಗೀ ತಾರೆಮರದೆತ್ತರದ ಪ್ರಣತಿಯಲಿ
ಕೊನೆಸುತ್ತಿನಾರತಿಯನ್ನೆತ್ತಿ
ಉಳಿದದ್ದು ಕೊನೆಗೆ ಉರಿಗಣ್ಣ ರೆಪ್ಪೆಗೆ ಕಪ್ಪು.

ಪಂಚಭೂತದ ಪಿಂಡ ಮತ್ತೆ ಅಲುಗುತ್ತುಂಟು
ಈಗಷ್ಟೆ ಹುಟ್ಟಿ
ಕಣ್ತೆರೆವ ಕೂಸಿನ ಜೋಡಿ
ತಿರುಗಿ ಹುಟ್ಟುವ ವೃತ್ತರೂಪೀ ಚಲನಕ್ಕೆ.

೧೪

ಆಗಿತ್ತು
ಕಣ್ಣು ನಕ್ಷತ್ರಗೂಡು. ಬಾನಾಡಿ ಬಂದು ನೆಲೆಸುವುವು ಇಲ್ಲಿ ಒಂದು ಕ್ಷಣ
ನಿಮಿಷ ನಿಮಿಷದ ನಡುವೆ ಅನಿಮಿಷತೆ

ಎತ್ತಿಕೊಡು ಮಧುಪಾತ್ರೆ
ಹೊಂಡದಲ್ಲಿ ಅಲೆಯ ಒತ್ತಡಕ್ಕೆ ತೊನೆದಾಡುತ್ತಿವೆ
ದುಂಬಿಗಳ ಭಾರಕ್ಕೆ ತಾವರೆಯ ಮೊಗ್ಗು.
ಹಿಂದೆ ಅಕಾಶ
ತೆರೆದ ಕಿಡಕಿಗೆ ಫರದೆ
ಜಗ್ಗಿದರೆ ಬಗ್ಗುವುದು ಭೂಮಿಗೇ ಬೆಳ್ದಿಂಗಳಿನ ರೆಂಬೆ
ಉದುರುವುವು ಸೂಜಿಮಲ್ಲಿಗೆ ನಿನ್ನ ತುರುಬಿಂದ

ಹೊಸಹಸಲೆ ಗುಂಗುರಿನ ಸ್ಪ್ರಿಂಗು
ತೊಡೆನಡುವೆ ಹೊತ್ತುರಿವ ಪಂಜು
ಒಂದೊಂದು ಕೇಶಕ್ಕು ವಿದ್ಯುತ್ತಿನಾವೇಶ
ಆಳುವೇಳುವ ಸ್ನಿಗ್ಧಲೀಲೆ
ಮೈಯೋ ಒಂದು ತೆರೆದಿಟ್ಟ ಮಧುಶಾಲೆ
ಎಲ್ಲ
ಕೆಲವೇ ಕ್ಷಣಕ್ಕೆ ಮುಗಿದು

ದೇಹಗಳಾಗ ಗಂಧರ್ವರೀಸಾಡಿ ಹೋದ ಜೋಡಿಕೊಳ.

೧೫

ಪ್ಲೀಜ್ ಕಣ್ಮುಚ್ಚಿ ನೀವು. ಬಟ್ಟೆಬಿಚ್ಚಲಿಕ್ಕಿದೆ.
ಕಿಸಿದ ಲಂಗದ ಮೇಲೆ ಹೊಚ್ಚ ಹೊಸ ಸೀರೆ.
ಹೊಂಬಣ್ಣ ಚುಕ್ಕಿ ಮೈತುಂಬ ಗರಿ ಗರಿ ಬೇರೆ
ಮೊದಲಿಂದಲೂ ಅಷ್ಟೆ ಸುಳಿಗೆ ಬೈತಲೆ ಓರೆ.

ಬೆನ್ನ ಹಿಂದಿನ ಹುಕ್ಕು ಹಾಕಿ ಬಿಡಿ ಮತ್ತೆ. ಬಿಚ್ಚುವುದು
ಸುಲಭ-ಹಾಕುವುದಲ್ಲ ನೆನಪಿಡಿ. ಅಗೊ ಅಗೋ
ಅಲ್ಲಿಗೇಕೋಡುತ್ತೆ ಈ ಪೋಲಿ ಕೈ?
ಕಡಿವಾಣವೇ ಇಲ್ಲ ಕುದುರೆಗೆ.ಈಗೀಗ

ಮೈ ಕಾದ ಕಾವಲಿ. ತಲೆಯೊ ಸಿಡಿಮಿಡಿ ಸ್ಟೌ.
ಹೆಕ್ಕತ್ತು ಬೆಂಕಿ ಜಾರ್ಬಂಡೆ. ಆಳಕ್ಕಿಳಿದ ಕಣ್ಣು
ಕಾಫಿಬಸಿ ಇಂಗುತ್ತಿರುವ ಬೋಸಿ. ಉಸಿರು
ಬಿಸಿಯೋಡಲ್ಲಿ ಹಾಯುವ ಹಬೆ.

ಅನಾಮತ್ತೆತ್ತಿ ಅದ್ದಿಬಿಡಿ ಯಾವುದಾದರೂ
ತಣ್ಣನೆ ಹೊಳೆಯಲ್ಲಿ.

೧೬

ಅದೇನು ಭಾರ ಶರೀರ. ನಿಧಾನ...ನಿಧಾನ..
ಹಾಗೆ ಹಾಗೇ ಹಿಡಿದುಕೊಳ್ಳುತ್ತೆ ತೊಡೆ. ಒತ್ತೊತ್ತಿ ಬರುತ್ತೆ ಉಸಿರು.
ಇಡೀ ಒಡಲ ತುಂಬಿ ಹೊರಕ್ಕುಕ್ಕುತ್ತಿದೆ ನೋವು. ತುಟಿಯೊಣಗುತ್ತ
ಗಂಟಲಾರುತ್ತ, ಉರಿಗೊಳ್ಳಿ ಇಕ್ಕಟ್ಟಿನಲ್ಲಿ ಭಗಭಗ ಬೇಗೆ.

ಬಿಟ್ಟುಬಿಡಿ. ಬಿಟ್ಟುಬಿಡಿ ನನ್ನ. ಒತ್ತಿ ಬರುತ್ತಿದೆ ನಿದ್ದೆ.
ಮುಚ್ಚುತ್ತಿವೆ ತಮಗೆ ತಾವೇ ಕಣ್ಣು. ಬರುತ್ತೀನಿನ್ನು.
ಝಾಡಿಸಿ ಗಂಟು ಗಂಟು ಮೆತ್ತೆ, ಬರೀಬೆತ್ತಲು
ಮೈಚಾಚುವೆ ಮಣ್ಣಲ್ಲಿ. ಬೆಳಗಾಗದಿರಲಿನ್ನು ಮತ್ತೆ.

೧೭

ಕೊನೆಕೊನೆಗೆ ಮಣ್ಣೆಂದರೇನು ಮೋಹವೊ ನಿನಗೆ
ಮೆಲ್ಲಗೆ ಕಾಲೆಳೆಯುತ್ತ ಹೋಗಿ ಹಿತ್ತಲಿಗೆ ಕುರ್ಜಿಗೆ ಸಮೇತ
ಒದ್ದೆ ನೆಲ ಕುಕ್ಕುತ್ತ ಗಸಗಸ ಉಸಿರಿಕ್ಕುತ್ತ
ಕೈ ಸಾಗದಿದ್ದಾಗಲೂ ನಡೆಯಲೇಬೇಕು ಕೈತುಂಬ ಕೈಂಕರ್ಯ.

ಮುಷ್ಠಿ ತುಂಬ ಮುಚ್ಚಿಟ್ಟುಕೊಂಡ ಬಣ್ಣ ಬಣ್ಣದ ಬೀಜ
ತದೇಕಚಿತ್ತೇಕಾಗ್ರತೆಯಿಂದ ಧ್ಯಾನಿಸುತ್ತ ಮಂಕು ಕಣ್ಣಲ್ಲಿ
ಮೆಲ್ಲಗೆ ಬದಮಾಡಿ ಮಣ್ಣಲ್ಲಿ ಬಣ್ಣದ ಬಿತ್ತವ
ನ್ನೊತ್ತೊತ್ತಿ ಬಚ್ಚಿಡುತ್ತಾ ಪುಟ್ಟ ಮಗುವಂತೆ

ಒಳಗೊಳಗೇ ಕುಲುಕುಲು ನಗುತ್ತಿ. ಇದ್ಯಾವ ಬಾಲ ಲೀಲೆಯೋ
ಈ ಅಕಾಲ ಮುಪ್ಪಲ್ಲಿ! ನೀನು ಹೋದ ಮೇಲೆ
ಬೆಳ್ಮೊಳಕೆ ಬದಿಯಲ್ಲಿ ಬಗಿದು ನೋಡಿದರೆ ಫಳಕ್ಕನೆ
ಹೊಳೆಯುತ್ತವೆ ಮಂಚಗುದುಮುರುಗಿಯಲ್ಲೊಡೆದ ಹಲವಾರು ಬಳೆ ಚೂರು.

೧೮

ಇದೇನು ರೀ ..ಈಪಾಟಿ ಸುಕ್ಕು ನನ್ನೀ ಮುಂಗೈ ಮೇಲೆ?
ಕೆನ್ನೆ ಮೇಲೆ? ಜಾರು ಬಾರೆಯ ಹಣ್ಣಗಲ್ಲದಲ್ಲಿ?
ಮೊನ್ನೆ ತಾನೇ ಬಣ್ಣ ಬಳಿದ ಗೋಡೆಯ ಮೇಲೆ?
ಕೆಲಸದ ಹೆಣ್ಣು ತಿಕ್ಕಿ ತಿಕ್ಕಿ ಒರೆಸಿದ ಕಿಡಕಿ ಹರಳಿನ ಮೇಲೆ?

೧೯

ಬಿಂದಿಗೆ ಬಿಂದಿಗೆ ತಣ್ಣೀರು ಸುರಿದು ಹಣೆಯಲ್ಲಿದ್ದ
ಬಿಂದಿ ಕರಗಿ ಮುಚ್ಚಿದ ಕಣ್ಣಂಚಿಂದ ಹರಿಯುತಿದೆ ಕೆನ್ನೀರು.
ಮೂಗ ತುದಿಯಲ್ಲೊಂದು ವಜ್ರದ ನತ್ತು-ಹೊತ್ತಿಲ್ಲ ಗೊತ್ತಿಲ್ಲ-
ಹೊಳೆಯುತ್ತಿದೆ. ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಈ ನಕ್ಷತ್ರ.

೨೦

ಮಹಡಿಗೆ ಬಂದು ನೋಡಿದರೆ ಖೋಲಿ ತುಂಬಾ
ಕುಬುಸ, ಸೀರೆ, ಬ್ರೇಜಿಯರ್ ಚೆಲ್ಲಾಪಿಲ್ಲಿ.
ಬರಿಮೈ ನದರೇ ಇಲ್ಲದೆ ಒಂದೊಂದೇ ಸೀರೆ
ಕೊಡವಿ ಕೊಡವಿ ಹುಡುಕುತ್ತಿದ್ದೀ!

ಅಯ್ಯಯ್ಯೋ..ಇದೇನು ರಾಣಾರಂಪೆಂದರೆ
ಇಲ್ಲೇ ಎಲ್ಲೋ ಇಟ್ಟಿದ್ದೆ ಎಂದು ಸಣ್ಣಗೆ ಮುಲುಕುತ್ತಿ.
ಹದಿನಾರರ ಹದಿಹಯದ ಕುಬುಸ ಬೆದಕುತ್ತಿ.
ಹಳೆಯ ಬಟ್ಟೆಗಳಲ್ಲಿ ಕಳೆದುಹೋದದ್ದೇನು ?

೨೧

ನೀನು ಹುಟ್ಟಿದ ಕ್ಷಣವೇ ಹುಟ್ಟಿಸಿದೆ ಅಮ್ಮನ್ನ
ನಗೆಮಿಂಚಿನೊಡನೆ ಸಂಚಲಿಸುವಪ್ಪನ್ನ
ಅಕ್ಕ ಅಣ್ಣಂದಿರಾಡೊಂಬಲದ ಮನೆಯನ್ನ
ಮನೆಮುಂದಿನರಳಿಮರವ ಹೆಬ್ಬಾವಂತೆ ನುಂಗುತ್ತಿರುವ

ಬಸಿರಿಮರವನ್ನ, ಹಾದಿಬದಿ ಸದಾ ಉಗ್ಗುತ್ತಿದ್ದ ಬಾಯ್ಬಡುಕಿ
ಚಚ್ಚೌಕ ಸೀನೀರ ಬಾವಿಯನ್ನ, ಯಕ್ಷಿಣಿಯ ಹಸ್ತಮುದ್ರಿಕೆಯ
ವಿಲಕ್ಷಣ ತಿರುಪಿನಂತಿರುವ ರಾಮಗಿರಿಗುಡ್ಡವನ್ನ
ಬಂಡೆಸಂದಿಗಳಿಂದ ಚಿಮ್ಮಿ ಚಾಮರವಿಕ್ಕೊ

ಹೊನ್ನೆ ಹೂ ಮರವನ್ನ, ಮರಕ್ಕೆ ಹಗ್ಗವಕಟ್ಟಿ
ಗಾಳಿತೂಗುತ್ತಿರುವ ಸಾದುಗಪ್ಪಿನ ನೆರಳ ಕೂಸುಮರಿಯನ್ನ
ಮಾಸದಿರಲೆಂದು ವರ್ಣಮಯ ಗುಡ್ಡಕ್ಕೆ ಹೊದ್ದಿಸಿದ ಹಾಗಿರುವ
ಆಕಾಶ ನೆಟ್ಟನ್ನ, ನೀನು ಹುಟ್ಟಿದ ಕ್ಷಣವೆ

ಹುಟ್ಟಿಸಿದೆ. ನೀನು ಬೆಳೆದಂತೆ ಬೆಳೆದು, ನೀನು ಕುಣಿದಂತೆ
ಕುಣಿದು, ನೀನು ನಮೆದಂತೆ ನಮೆದು, ನೀನು ನಿರಾಳ ಮಲಗಿ
ಮುಚ್ಚಿದ ಹಾಗೆ ಕಣ್ಣು, ನಿನ್ನಾ ಸಮಸ್ತ ಜಗತ್ತೂ
ನಿನ್ನೊಂದಿಗೇ ಸತ್ತು ಮುಚ್ಚಿತ್ತು ಕಣ್ಣು. ನಿನ್ನ ಜಗತ್ತಿಗಿದೋ

ನನ್ನ ಜಗತ್ತಿನ ಕೊನೆಯ ವಿದಾಯ...

೨೨

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿನಗೆ?
ಕಣ್ಣಿಗಂಟಿದ ಕನಸೇ...ಅರಿವಲ್ಲಿಂಗಿದ ಜಿನುಗು ಬೆವರೇ
ಬಾಯೊಳಗುಳಿದ ನಾಲಗೆಯೆಂಜಲ ಮೈಲಿಗೆ ಮುತ್ತೆ...
ವಿದ್ಯುತ್ಪಾತವನ್ನ ತಂತಿಮುಖೇನ ಒಳಕ್ಕಿಳಿಸಿಕೊಳ್ಳೋ

ಒದ್ದೆಮೈ ಮಣ್ಣೆ...!ನಿನ್ನ ಮರವಾಗಲೆನ್ನ ಕೈಗೋಲು.
ಬಾಡಿಯುದುರಿದ ನಗೆಪಕಳೆಯೆನ್ನ ಉರಿಗಣ್ಣಿಗೆಣ್ಣೆ.
ಜಗುಳಿದ ಕಣ್ಣಹನಿಯೆನ್ನ ಮಣ್ಣ ಪ್ರಣತಿಯ ನಿಶ್ಚಲ ಮೂಕ ಸನ್ನೆ.
ಮೈಬೆಂಕಿ, ಆರುತ್ತಿರುವಗ್ಗಿಷ್ಟಿಕೆಯ ಕೊನೆಯ ಕೆಂಡ.

೨೩

ಅಲೆಯ ಬಲೆ ಬೀಸಿ ಯಾರಾದರೂ ಹೊಳೆಯ ಹೆಡೆಮುರಿಕಟ್ಟಿ.
ದಯಮಾಡಿ ಸೂರ್ಯಛತ್ರಿಯ ಹಿಡಿದು ಸುಡುವ ನೆತ್ತಿಗೆ ನೆರಳ ನೀಡಿ.
ಏನಾದರೂ ಮಾಡಿ, ಕಾಲಕಸ ನೆರಳನ್ನು ಬಿಸಿಲಿಂದ ಪಾರುಮಾಡಿ.
ಯಾರೊ ರಚಿಸಿದ ಕವಿತೆ ಹರಿದು ಚಲ್ಲಾಪಿಲ್ಲಿ ಆಕಾಶಪಟದಲ್ಲಿ-

ಪದ ಪಂಕ್ತಿ ಹಂಗಿಲ್ಲದೋದಿಕೊಳ್ಳಿ...

೨೪

ಛಂದಸ್ಸು ಹೇಳಿದ್ದು:

ಮಳ್ಳಿ ಮೀನಿನ ಸುತ್ತ ಒತ್ತು ನೀರಿನ ಕವಚ;
ಮಣ್ಣ ಗೋಳಕ್ಕೆ ಆಕಾಶ ಕವಚ!
ನಕ್ಷತ್ರದುಂಗುರಕ್ಕಿರುಳ ಶಾಪದ ಕವಚ;
ಲಿಂಗಕ್ಕಾಲಿಂಗನದ ನಿರ್ವಯಲ ಕವಚ!

ಶಾಂತಿರಸ್ತು

ಈಗಲೂ ಅಷ್ಟೆ

ಅವಳು ಹೋಗಿಯೆ ಬಿಟ್ಟಳೆಂದರೆ ನಂಬುವುದೇ ಇಲ್ಲ
ನಾನು. ಎಂಜಿ ರೋಡಿರಲಿ ಗಾಂಧಿಬಜಾರಿಗೂ ಒಬ್ಬಳೇ
ಹೋದವಳಲ್ಲ. ಪಿಕ್ನಿಕ್ಕಿಗೆ ಹೇಗೋ ಹಾಗೇ ಕ್ಲಿನಿಕ್ಕಿಗೂ
ಒಟ್ಟಿಗೇ ಹೋಗಿಬಂದದ್ದು ನಾವು ಜಗಳಪಗಳ ಸಮೇತ.
ಸಿನಿಮಾ ನಾಟಕ ರಾಮನವಮಿ ಕಚೇರಿ-ಒಟ್ಟಿನಲಿ
ಬೆಂಗಳೂರಲ್ಲೂ ನಾನಿರಬೇಕು ಜತೆಯಲ್ಲೆ. ಹೀಗಿರುವಾಗ
ಹೋಗಿಬಿಟ್ಟಳೆ ಪರಸ್ಥಳಕ್ಕೆ ಎಡಗೈಬೀಸಿಕೊಂಡೊಬ್ಬಳೇ?
ದಾರಿಯಲಿ ಜೋಲಿಗೀಲಿ ಹೊಡೆದರೆ ಯಾರಿದ್ದಾರೆ ಪಕ್ಕ?
ಜನನಿಬಿಡ ರಸ್ತೆಯಲಿ ನಡೆಯುವುದೆಂದರವಳಿಗೆ
ಬಲೇ ಖುಷಿ. ನನಗಿಷ್ಟ ಸಾಲ್ಮರದ ಮಬ್ಬಿಳಿದ ರಸ್ತೆ.
ಗುಡಿಗಿಡಿಯೆಂದರೆ ಮುಗಿಯಿತು. ಚಪ್ಪಲಿ ಮೆಟ್ಟಿ ನಿಂತಳೆಂದೇ
ಬೀದಿಯಲಿ. ನಾನಿನ್ನೂ ಕಾರ ಕೀ ಹುಡುಕುತ್ತ ಮನೆಯಲ್ಲಿ.

ಪುಸ್ತಕ ಹಿಡಿದರೆ ಮುಗೀತು ಜಗತ್ತೇ ಬೇಡ ಎಂದು ಗೊಣಗುತ್ತ
ಈಗಲೂ ನಿಂತಿರಬೇಕಾಕೆ ನನಗಾಗಿ ಬೀದಿತಿರುವಲ್ಲಿ ಕಾಯುತ್ತ.