Tuesday, September 29, 2009

ಸ್ನೇಹ ಪ್ರೀತಿಗಳನ್ನೇ ದೇವರೆಂದು ನಂಬಿರುವ ಜಿ.ಎಸ್.ಎಸ್.

ಸುವರ್ಣ ಕರ್ನಾಟಕ ಸಂದರ್ಭದ ಈ ಬಾರಿಯ ರಾಜ್ಯೋತ್ಸವದ ಆಚರಣೆಯಲ್ಲಿ ಒಂದು ಮಹತ್ವದ ಸಂಗತಿಯೆಂದರೆ ರಾಷ್ಟ್ರಕವಿ ಗೋವಿಂದಪೈ ಮತ್ತು ರಾಷ್ಟ್ರಕವಿ ಕುವೆಂಪು ಅವರ ನಂತರ ಮತ್ತೋರ್ವ ಮಹತ್ವದ ಸಾಧಕನನ್ನು ನಮ್ಮ ಸರ್ಕಾರ ರಾಷ್ಟ್ರಕವಿಯಾಗಿ ನಾಮಕರಣ ಮಾಡಿ ಗೌರವಿಸುತ್ತಿರುವುದು! ಆ ವಿಶೇಷ ಗೌರವಕ್ಕೆ ಪಾತ್ರರಾಗುತ್ತಿರುವ ವ್ಯಕ್ತಿ ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿ ಮತ್ತು ಸಾಂಸ್ಕೃತಿಕ ನಾಯಕರಾದ ಡಾಜಿ.ಎಸ್.ಶಿವರುದ್ರಪ್ಪ ಅವರು. ತಿಂಗಳ ಹಿಂದೆ ಒಮ್ಮೆ ಜಿ.ಎಸ್.ಎಸ್. ಅವರೊಂದಿಗೆ ಮಾತಾಡಿದಾಗ-" ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಸರ್ಕಾರ ಮತ್ತೊಬ್ಬ ಮಹಾ ಸಾಧಕರನ್ನು ರಾಷ್ಟ್ರ ಕವಿಯಾಗಿ ನಾಮಕರಣ ಮಾಡುತ್ತದೆಂದು ಸುದ್ದಿ... ಆ ಗೌರವ ಅಕಸ್ಮಾತ್ ನಿಮ್ಮ ಪಾಲಾದರೆ...ನಿಮ್ಮ ಸಹಜ ಪ್ರತಿಕ್ರಿಯೆ?" ಎಂದಾಗ, ಜಿಎಸೆಸ್ ಹೇಳಿದರು:"ಆದಾಗ ತಾನೇ ಆ ಪ್ರಶ್ನೆ?"....."ಒಂದು ವೇಳೆ ಆದರೆ?"..ಜಿಎಸೆಸ್ ನಕ್ಕು :"ಕೆ.ಎಸ್.ನರಸಿಂಹಸ್ವಾಮಿ ಅವರು ಹೇಳಿಲ್ಲವಾ? ಮಲ್ಲಿಗೆ ಹಾರ ಕೊರಳಿಗೆ ಭಾರ!"

ಪ್ರಾಯಃ ಇದು ಸಹಜ ಕವಿ ಒಬ್ಬರು ಮಾತ್ರ ನೀಡಬಹುದಾದ ಪ್ರತಿಕ್ರಿಯೆ. ಜಿಎಸೆಸ್ ತಮ್ಮ ಗುರುಗಳಾದ ಕುವೆಂಪು ಅವರನ್ನು ರಾಷ್ಟ್ರಕವಿಯೆಂದು ಗೌರವಿಸಿದ್ದನ್ನು ನೆನೆಸಿಕೊಂಡರು.ಅಂಥ ಗೌರವ ತಮಗೆ ಅನ್ನುವುದು ಅವರಿಗೆ ಸುಲಭವಾಗಿ ಒಪ್ಪಿಕೊಳ್ಳಬಹುದಾದ ಸಂಗತಿಯಾಗಿರಲಿಲ್ಲ. ಅದು ಅವರ ಸ್ವಭಾವಕ್ಕೆ ಸಹಜವಾದ ವಿನಯದ ಅಭಿವ್ಯಕ್ತಿಯಾಗಿತ್ತು.ಆದರೆ ಸದ್ಯದ ಸಂದರ್ಭದಲ್ಲಿ ಒಬ್ಬ ಕವಿ,ವಿಮರ್ಶಕ,ಕಾವ್ಯಚಿಂತಕರಾಗಿ ಜಿಎಸ್ಸೆಸ್ ಬಹು ಎತ್ತರದ ವ್ಯಕ್ತಿಯಾಗಿದ್ದಾರೆ ಅನ್ನುವುದು ನಿರ್ವಿವಾದದ ಸಂಗತಿ.ಜೊತೆಗೆ ಅವರು ಒಬ್ಬ ಸಾಂಸ್ಕೃತಿಕ ನಾಯಕರಾಗಿ ರೂಪಗೊಂಡಿದ್ದಾರೆ ಎನ್ನುವುದು ಇನ್ನೂ ಮಹತ್ವದ ಸಂಗತಿ. ಎಷ್ಟೋ ಜನ ಮಹತ್ವದ ಲೇಖಕರಿಗೆ ಈ ಸಾಂಸ್ಕೃತಿಕ ನಾಯಕತ್ವದ ಪ್ರಭಾವಲಿ ಸಿದ್ಧಿಸಿರುವುದಿಲ್ಲ! ಜಿ.ಎಸ್.ಎಸ್. ತಮ್ಮ ಸುದೀರ್ಘ ಜೀವಿತದ ಹರಹಿನಲ್ಲಿ ಉದ್ದಕ್ಕೂ ತಾವು ತೆಗೆದುಕೊಂಡ ರಾಜಕೀಯ ಸಾಂಸ್ಕೃತಿಕ ನಿಲುವುಗಳಿಂದ ಕರ್ನಾಟಕ ಒಂದು ಎಚ್ಚರದ ಪ್ರಜೆಯಾಗಿ ರೂಪಗೊಂಡಿದ್ದಾರೆ. ಇಂಥ ವ್ಯಕ್ತಿ ಅಖಂಡ ಕರ್ನಾಟಕದ ಬಿಕ್ಕಟ್ಟು ಮತ್ತು ಉಲ್ಲಾಸದ ಘಳಿಗೆಗಳಿಗೆ ಸಾಕ್ಷಿ ಮಿಡಿತಗಳನ್ನು ನೀಡುತ್ತಾ ಬಂದಿರಬೇಕಾಗುತ್ತದೆ.ಕರ್ನಾಟಕದ ಒಟ್ಟಾರೆ ಹಿತ ಈ ಬಗೆಯ ವ್ಯಕ್ತಿತ್ವದ ನಿರಂತರ ನಿಲುವಿನ ಅವಿಭಾಜ್ಯ ಅಂಗವಾಗಿರುತ್ತದೆ. ಒಂದು ಧರ್ಮ, ಒಂದು ರಾಜಕೀಯ ಪಕ್ಷ, ಒಂದು ನಿರ್ದಿಷ್ಟ ಸಂಸ್ಥೆ ,ಒಂದು ಸಾಹಿತ್ಯಕ ಗುಂಪು-ಇವುಗಳೊಂದಿಗೆ ತನ್ನನ್ನು ಸಮೀಕರಿಸಿಕೊಳ್ಳದೆ ಅನಿಕೇತನತ್ವ ಸಾಧಿಸದ ಹೊರತು ಅಖಂಡ ಕರ್ನಾಟಕದ ಸಾಕ್ಷೀಪ್ರಜೆಯಾಗಿ ರೂಪಗೊಳ್ಳುವುದು ಸಾಧ್ಯವಾಗುವುದಿಲ್ಲ.ತಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಲಿ ಅವನ್ನು ಸಮಷ್ಟಿಯ ಹಿತಕ್ಕಾಗಿ ಮೀರಿನಿಲ್ಲುವುದು ಅಗತ್ಯವಾಗುತ್ತದೆ. ತಾವು ನವೋದಯ ಕಾವ್ಯವನ್ನು ಮೆಚ್ಚುವವರಾಗಿರಬಹುದು. ಆದರೆ ನವ್ಯದ ಸತ್ವ ಸಾಮರ್ಥ್ಯಗಳಿಗೆ ತೆರೆದ ಮನಸ್ಸುಳ್ಳವರಾಗಿರಬೇಕಾಗುತ್ತದೆ. ಹೊಸದಾಗಿ ಕಾಣಿಸಿಕೊಳ್ಳುವ ಬಂಡಾಯ ದಲಿತ ಚಳುವಳಿಗಳು ಸಾಮಾಜಿಕ ಸಾಂಸ್ಕೃತಿಕ ನೆಲೆಯಲ್ಲಿ ಅನಿವಾರ್ಯವೆನಿಸಿದಾಗ ಅವನ್ನು ಮೆಚ್ಚಿ ಪ್ರೋತ್ಸಾಹಿಸುವ ಭವಿಷ್ಯದ್ ಹಿತಾಕಾಂಕ್ಷಿಯಾದ ನಿಲುವನ್ನು ಹೊಂದಿರಬೇಕಾಗುತ್ತದೆ. ಇಂತಹ ನಿರ್ಮಮ ನಿಷ್ಠುರತೆ ಕೇವಲ ಸಾಹಿತ್ಯಕ ಸಂದರ್ಭಕ್ಕೆ ಅನ್ವಯಿಸಿ ಮಾತ್ರವಲ್ಲ. ಸಾಮಾಜಿಕ ಸಾಂಸ್ಕೃತಿಕ ಸಂದರ್ಭಗಳಲ್ಲೂ ಜಿ.ಎಸ್.ಎಸ್ ಅವರು ಹೇಗೆ ತಮ್ಮ ನಿರ್ಮಮ ನಿಷ್ಠುರ ಪ್ರಜೆಯನ್ನು ಕಾಯ್ದುಕೊಂಡು ಬಂದಿದ್ದಾರೆ ಅನ್ನುವುದನ್ನು ಇಡೀ ಕನ್ನಡ ನಾಡೇ ಬಲ್ಲುದು.ಅದು ಜಾತಿವಿಷಯದಲ್ಲಿ ಆಗಿರಬಹುದು; ಧರ್ಮದ ವಿಷಯದಲ್ಲಿ ಆಗಿರಬಹುದು; ಭಾಷೆಯ ವಿಷಯದಲ್ಲಿ ಆಗಿರಬಹುದು. ನಮ್ಮಲ್ಲಿ ತೀವ್ರವಾದ ಅಭಿಪ್ರಾಯಭೇದಗಳು ಇರಬಹುದು. ಆದರೆ ನಾವೆಲ್ಲ ಒಟ್ಟು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ಹೊತ್ತಿರುವವರು. ಆದಕಾರಣ ನಾವು ಒಂದುಕಡೆ ಸೇರಿ ಕೂತು ಚರ್ಚೆ ಮಾಡೋಣ. ಸಾಧ್ಯವಾದರೆ ಒಮ್ಮತದ ನಿಲುವಿಗೆ ಬರೋಣ. ಸಾಧ್ಯವಾಗದಿದ್ದರೆ ಪರಸ್ಪರ ಗೌರವ ಇಟ್ಟುಕೊಂಡೆ ಅಭಿಪ್ರಾಯ ಭೇದಗಳನ್ನು ಹೊಂದೋಣ ಎನ್ನುವ ಪ್ರಜಾಪ್ರಭುತ್ವವಾದೀ ನಿಲುವನ್ನು ತಮ್ಮ ಬದುಕಿನ ಉದ್ದಕ್ಕೂ ಪ್ರಕಟಿಸುತ್ತಾ, ನಿತ್ಯದ ಆಚರಣೆಯಲ್ಲಿ ರೂಢಿಸುತ್ತಾ ಬಂದಿರುವವರು ಡಾಜಿ.ಎಸ್.ಶಿವರುದ್ರಪ್ಪನವರು. ರಾಜಕೀಯ ,ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ವಲಯಗಳ ವಿರೋಧೀನೆಲೆಯ ವಕ್ತಾರರೂ ಜಿ.ಎಸ್.ಎಸ್ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡು ಬಂದಿರುವುದು ಇದೇ ಕಾರಣಕ್ಕೆ ಎಂದು ನಾನು ಭಾವಿಸುತ್ತೇನೆ. ಇಂಥ ಸರ್ವ ಸಮ್ಮತ ವ್ಯಕ್ತಿತ್ವವನ್ನು ಹೊಂದಿರುವವರು ಯಾವತ್ತೂ ವಿರಲವೇ. ಸದ್ಯದ ಸಂದರ್ಭದಲ್ಲಿ ಜಿ.ಎಸ್.ಎಸ್. ಅಂತಹ ವಿರಲ ವ್ಯಕ್ತಿಗಳಲ್ಲಿ ಒಬ್ಬರು...ಮತ್ತು ಮುಖ್ಯರು. ಹಾಗಾಗಿ ಅವರನ್ನು ರಾಷ್ಟ್ರಕವಿ ಎಂದು ಸರ್ಕಾರ ಗೌರವಿಸುತ್ತಿರುವುದು ಕನ್ನಡ ನಾಡಿನ ಸಮಷ್ಟಿಪ್ರಜೆಯ ಸಮ್ಮತಿಯ ಚಿಹ್ನೆ ಎಂದು ನಾನು ಭಾವಿಸುತ್ತೇನೆ.

*****

ಕೆಲವು ದೃಷ್ಟಿಯಲ್ಲಿ ನಾನು ತುಂಬಾ ಅದೃಷ್ಟಶಾಲಿ. ೧೯೭೧ರಲ್ಲಿ ನಾನು ಬೆಂಗಳೂರಿಗೆ ನನ್ನ ಹಳ್ಳಿಯಿಂದ ಒಲಸೆ ಬಂದಾಗ ಅನೇಕ ಸಾಹಿತ್ಯ ದಿಗ್ಗಜರು, ಸಾಂಸ್ಕೃತಿಕ ನಾಯಕರು ನನ್ನನ್ನು ತಮ್ಮ ಅಂತರ್ವಲಯಕ್ಕೆ ತೆಗೆದುಕೊಂಡರು. ನಾನು ಅವರ ಆಪ್ತವರ್ಗದಲ್ಲಿ ಒಬ್ಬನಾಗಿ ಹೋದೆ. ಡಾಪುತಿನ, ಡಾಗೋಪಾಲಕೃಷ್ಣ ಅಡಿಗ, ಶ್ರೀ ಕೆ.ಎಸ್.ನರಸಿಂಹಸ್ವಾಮಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಡಾಜಿ.ಎಸ್.ಶಿವರುದ್ರಪ್ಪ -ಅವರಲ್ಲಿ ಮುಖ್ಯರು.ನಾನು ಎಂ.ಎ. ದಲ್ಲಿ ಜಿ.ಎಸ್.ಎಸ್.ಅವರ ವಿದ್ಯಾರ್ಥಿ. ಆಮೇಲೆ ಉದ್ದಕ್ಕೂ ಜಿ.ಎಸ್.ಎಸ್. ನನ್ನ ಜೀವನದಲ್ಲಿ ನಿರ್ಣಾಯಕ ಕ್ಷಣಗಳಲ್ಲಿ ಮಹತ್ವದ ಭೂಮಿಕೆ ನಿರ್ವಹಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿಯನ್ನು ಆಪ್ತ ಸ್ನೇಹಿತನಂತೆ ನಡೆಸಿಕೊಂಡಿದ್ದಾರೆ. ಸ್ನೇಹಿತನನ್ನು ಪರಮಬಂಧುವಿನಂತೆ ನಡೆಸಿಕೊಂಡಿದ್ದಾರೆ. ನನ್ನ ಸಾಹಿತ್ಯಕ ಜೀವನದ ಬಿಕ್ಕಟ್ಟುಗಳಲ್ಲಿ ನನಗೆ ಆಸರೆಯಾಗಿ ನಿಂತವರು ಅವರು. ಹಾಗೇ ಬದುಕಿನ ಕಷ್ಟ ನಿಷ್ಠುರದ ಸಂದರ್ಭಗಳಲ್ಲೂ. ವಿದ್ಯಾರ್ಥಿಗಳ ಬಗ್ಗೆ ಅವರ ಪ್ರೀತಿ ಅಪರಿಮಿತವಾದುದು. ನಮ್ಮ ಈವತ್ತಿನ ಅನೇಕ ಮುಖ್ಯ ಲೇಖಕರು ಜಿ.ಎಸ್.ಎಸ್. ಅವರ ಶಿಷ್ಯರು! ಆ ಶಿಷ್ಯರ ಬಗ್ಗೆ ಯುಕ್ತ ಸಂದರ್ಭಗಳಲ್ಲಿ ಅವರೇ ಸೊಗಸಾದ ಲೇಖನಗಳನ್ನು ಬರೆದು ತಮ್ಮ ಶಿಷ್ಯ ಪ್ರೀತಿಯನ್ನು ಮೆರೆದಿದ್ದಾರೆ.ತಮಗಿಂತ ಕಿರಿಯರ ವಿಷಯ ಇರಲಿ, ತಮ್ಮ ಸಮಕಾಲೀನ ಲೇಖಕರ ಬಗ್ಗೆ ಬರೆಯುವುದು ಕೂಡಾ ತಮ್ಮ ಘನತೆಗೆ ಕುಂದು ಎಂದು ಭಾವಿಸುವ ಅನೇಕ ಲೇಖಕರು ನಮ್ಮ ಸುತ್ತಾ ಇರುವಾಗ ಜಿ.ಎಸ್.ಎಸ್. ಅವರಂತೆ ಶಿಷ್ಯರ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಬರೆಯುವುದು ಆಶ್ಚರ್ಯಕರ ವಿದ್ಯಮಾನವೇ ಸೈ!

ಈ ಶಿಷ್ಯ ಪ್ರೀತಿಗೆ ಶಿವರುದ್ರಪ್ಪನವರು ತಮ್ಮ ಮೂವರು ಮಹಾಗುರುಗಳಿಂದ ಪಡೆದ ಸ್ಫೂರ್ತಿಯೇ ಮುಖ್ಯ ಪ್ರೇರಣೆ ಎಂದು ನಾನು ಭಾವಿಸುತ್ತೇನೆ. ಜಿ.ಎಸ್.ಎಸ್. ಮತ್ತೆ ಮತ್ತೆ ನೆನೆಯುವ ಅವರ ಮೂವರು ಗುರುಗಳೆಂದರೆ ಶ್ರೀ ಕುವೆಂಪು, ಪ್ರೊ.ತೀನಂಶ್ರೀ , ಮತ್ತು ಪ್ರೊ.ತ.ಸು.ಶ್ಯಾಮರಾಯರು! ಕುವೆಂಪು ಎಂದರೆ ಜಿ.ಎಸ್.ಎಸ್. ಅವರಿಗೆ ಎಣೆಯಿಲ್ಲದ ಪ್ರೀತಿ ಗೌರವ. ಕುವೆಂಪು ಬಗ್ಗೆ ಅವರು ಬರೆದಿರುವ ಈ ಪದ್ಯ ಅದನ್ನು ಅತ್ಯಂತ ಸ್ವಾರಸ್ಯಕರವಾಗಿ ನಿರೂಪಿಸಬಲ್ಲುದು:

ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ.

ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವದನ್ನು,
ಕಿರಿಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆವುದನ್ನು,
ಸದ್ದಿರದೆ ಬದುಕುವುದನ್ನು.

ಎಷ್ಟೊಂದು ಕೀಲಿ ಕೈಗಳನ್ನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನ್ನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ

ಸದ್ದು ಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಶಬದಲ್ಲಿ ನೆನೆಯುತ್ತೇನೆ
ಗೌರವದಿಂದ.

ನಕ್ಷತ್ರಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ.

ಕುವೆಂಪು ಅವರ ಬಗ್ಗೆ ಒಂದು ಸಮಗ್ರ ವಿಮರ್ಶಾಗ್ರಂಥವನ್ನು ಬರೆಯಬೇಕೆಂಬುದು ಜಿ.ಎಸ್.ಎಸ್.ಅವರ ಬಹುದಿನದ ಆಶೆಯಾಗಿತ್ತು. ಜಿ.ಎಸ್.ಎಸ್. ಇತ್ತೀಚೆಗೆ ತಮ್ಮ ಆರೋಗ್ಯ ಅಷ್ಟು ಚೆನ್ನಾಗಿರದಿದ್ದರೂ ತಮ್ಮ ನಚ್ಚಿನ ಗುರು ಕುವೆಂಪು ಅವರ ಬಗ್ಗೆ ಒಂದು ಅಚ್ಚುಕಟ್ಟಾದ ವಿಮರ್ಶಾಕೃತಿಯನ್ನು ಬರೆದು ಪ್ರಕಟಿಸಿದ್ದಾರೆ.

ಜಿ.ಎಸ್.ಎಸ್.ಅವರ ಮೇಲೆ ತೀವ್ರವಾದ ಪ್ರಭಾವ ಬೀರಿದ ಅವರ ಇನ್ನೊಬ್ಬ ಗುರು ತೀ.ನಂ.ಶ್ರೀಕಂಠಯ್ಯನವರು. ಕನ್ನದದ ಕೊರಳಲ್ಲಿ ಶ್ರೀಕಂಠಿಕೆ ಎಂದು ತೀ.ನಂ.ಶ್ರೀ ಅವರನ್ನು ಜಿ.ಎಸ್.ಎಸ್. ಕೈವಾರಿಸುತ್ತಾರೆ.ಅಚ್ಚುಕಟ್ಟಿನ ಸ್ವಚ್ಛತೆಯ ಸಂಕೇತವಾದ ತೀನಂಶ್ರೀ ಅವರ ಒಂದೊಂದು ಕೃತಿಯೂ ಕೃತಾರ್ಥ. ಅವರು ಪರಿಪೂರ್ಣತೆಯ ಅತೃಪ್ತ ಅನ್ವೇಷಕ ಮತ್ತು ಪಾಂಡಿತ್ಯ ಪ್ರತಿಭೆಗಳ ಹದವಾದ ಪಾಕ ಎಂಬುದಾಗಿ ತಮ್ಮ ಗುರುಗಳನ್ನು ಮೆಚ್ಚಿಕೊಳ್ಳುತ್ತಾರೆ. ಜಿ.ಎಸ್.ಎಸ್. ವವರ ವ್ಯಕ್ತಿತ್ವ ನಿರ್ಮಿತಿಯಲ್ಲಿ ತೀನಂಶ್ರೀ ಅವರದ್ದು ಗಾಢವಾದ ಪ್ರಭಾವ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.ಇನ್ನು ತಸು ಶ್ಯಾಮರಾಯರಂತೂ ಜಿ.ಎಸ್.ಎಸ್. ಅವರಿಗೆ ತಾಯ್ತನದ ವಾತ್ಸಲ್ಯವನ್ನು ಧಾರೆಯೆರೆದ ಮಹಾನುಭಾವರು. ಶ್ಯಾಮರಾಯರು ಬದುಕಿರುವವರೆಗೂ ಅವರ ಹುಟ್ಟುಹಬ್ಬದ ದಿನ ಜಿ.ಎಸ್.ಎಸ್. ಎಲ್ಲೇ ಇರಲಿ ಮೈಸೂರಿಗೆ ಧಾವಿಸುತ್ತಿದ್ದರು.ಅನೇಕರಿಗೆ ಗೊತ್ತಿರುವಂತೆ ಜಿ.ಎಸ್.ಎಸ್. ಅವರ ಜನಪ್ರಿಯ ಗೀತೆ "ಎದೆತುಂಬಿ ಹಾಡಿದೆನು" ಈ ಶ್ಯಾಮರಾಯರನ್ನು ಉದ್ದೇಶಿಸಿ ಬರೆದ ಹಾಡು.ಅದೀಗ ಸುಗಮ ಸಂಗೀತ ಕಛೇರಿಗಳ ಮಂಗಳ ಗೀತೆಯಾಗಿ ಪರಿಣಮಿಸಿದೆ.ಮೈಸೂರು ಅನಂತಸ್ವಾಮಿಯವರ ಅತ್ಯದ್ಭುತ ಸಂಯೋಜನೆಯಾದ ಎದೆತುಂಬಿ ಹಾಡಿದೆನು ಸುಗಮಸಂಗೀತದ ಮನೋಹರ ಮಂಜುಲ ಗೀತೆಗಳಲ್ಲಿ ಒಂದು.ಜಿ.ಎಸ್.ಎಸ್. ಆಗಾಗ ಹೇಳುತ್ತಿರುತ್ತಾರೆ: "ಇಂಥ ಒಂದು ಗೀತೆ ಜನತೆಯ ಹೃದಯದಲ್ಲಿ ಸ್ಥಾನ ಗಿಟ್ಟಿಸಿತು ಎಂದರೆ ಕವಿಯ ಹೆಸರು ಅಜರಾಮರವಾಗಿಬಿಡುತ್ತದೆ! ಈ ಗೀತೆಗೆ ರಾಗ ಸಂಯೋಜನೆ ಮಾಡಿದ ಅನಂತಸ್ವಾಮಿಅವರನ್ನು ಜಿ.ಎಸ್.ಎಸ್. ಬಹಳ ಪ್ರೀತಿಯಿಂದ ನೆನೆಯುತ್ತಾರೆ.(ಅನಂತಸ್ವಾಮಿ ಅವರು ಆಸ್ಪತ್ರೆಯಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿದ್ದಾಗ ಜಿ.ಎಸ್.ಎಸ್.ಅವರಿಗೆ ಬಹುಪ್ರಿಯರಾದ ಇನ್ನೊಬ್ಬ ಸಂಗೀತ ನಿರ್ದೇಶಕ ಸಿ.ಅಶ್ವಥ್ ಅವರು ಜಿ.ಎಸ್.ಎಸ್. ಮತ್ತು ನನ್ನನ್ನು ಅನಂತಸ್ವಾಮಿ ಅವರನ್ನು ನೋಡಲು ಕರೆದೊಯ್ದಿದ್ದು ನೆನಪಾಗುತ್ತಿದೆ).ಎದೆ ತುಂಬಿ ಹಾಡಿದೆನು ಎಂಬ ಈ ಗೀತೆಯನ್ನು ರತ್ನಮಾಲಾಪ್ರಕಾಶ್ ಅವರ ಕೊರಳಲ್ಲಿ ಕೇಳುವುದೆಂದರೆ ಜಿ.ಎಸ್.ಎಸ್.ಅವರಿಗೆ ಇಂದಿಗೂ ತುಂಬ ಇಷ್ಟ.

ಕುವೆಂಪು ಅವರ ನಂತರ ಬೇಂದ್ರೆ ಮತ್ತು ಪುತಿನ -ಜಿ.ಎಸ್.ಎಸ್ ಅವರಿಗೆ ಬಹು ಪ್ರಿಯರಾದ ಕವಿಗಳು. ಪುತಿನ ಅವರ ಎಣೆಯಿಲ್ಲದ ಪ್ರೀತಿಗೆ ಜಿ.ಎಸ್.ಎಸ್ ಮಾರುಹೋಗಿದ್ದರು. ಅನೇಕ ಬಾರಿ ಜಿ.ಎಸ್.ಎಸ್. ಮತ್ತು ನಾನು ಒಟ್ಟಿಗೇ ಪುತಿನ ಅವರ ಮನೆಗೆ ಹೋಗಿದ್ದೇವೆ. (ಮೊಟ್ಟಮೊದಲು ನನ್ನನ್ನು ಕುವೆಂಪು ಮತ್ತು ಪುತಿನ ಅವರ ಮನೆಗೆ ಕರೆದುಕೊಂಡು ಹೋದವರು ಜಿ.ಎಸ್.ಎಸ್.ಅವರೇ). ಗಂಟೆ ಗಟ್ಟಲೆ ಪುತಿನ ವರೊಂದಿಗೆ ಸರಸ ಸಂಭಾಷಣೆ ನಡೆಸಿದ್ದೇವೆ.ಸಾಯುವ ಕೆಲವು ತಿಂಗಳು ಮುನ್ನ ಪುತಿನ ಅವರು ತಮ್ಮ ಹೆಸರಿನಲ್ಲಿ ಸರ್ಕಾರ ಸ್ಥಾಪಿಸಲಿರುವ ಟ್ರಸ್ಟ್ ನಲ್ಲಿ ಅವರಿಗೆ ತುಂಬ ಪ್ರಿಯರಾದ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರೂ, ಜಿ.ಎಸ್.ಶಿವರುದ್ರಪ್ಪನವರೂ ಇರಬೇಕೆಂದು ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಒಮ್ಮೆ ನನ್ನ ಬಳಿ ಮಾತಾಡುವಾಗ "ನಮ್ಮ ಶಿವರುದ್ರಪ್ಪ ತುಂಬಾ ಗಟ್ಟಿಗ ಕಾಣಯ್ಯ ..!"ಎಂದು ಪುತಿನ ತುಂಬು ಪ್ರೀತಿಯಿಂದ ನುಡಿದದ್ದು ನನಗೆ ನೆನಪಾಗುತ್ತಿದೆ.

ಜಿ.ಎಸ್.ಎಸ್. ಪುತಿನ ಟ್ರಸ್ಟ್ ನ ಅಧ್ಯಕ್ಷರಾದ ಮೇಲೆ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬುದನ್ನು ನಾನು ಹತ್ತಿರದಿಂದ ಬಲ್ಲೆ. ಮೇಲುಕೋಟೆಯ ಪುತಿನ ಮನೆಯನ್ನು ಪುನಾರಚಿಸಿ ನಾಡಿಗೆ ಸಾಂಸ್ಕೃತಿಕ ನೆನಪಾಗಿ ನೀಡುವಾಗ ಒಂದು ದಿನ ಮೊದಲೇ ಜಿ.ಎಸ್.ಎಸ್., ಚೆನ್ನವೀರ ಕನವಿ, ಅಚ್ಯುತಕಾದ್ರಿ, ಕಮಲೇಶ್ ಮತ್ತು ನಾನು ಮೇಲುಕೋಟೆಗೆ ಹೋಗಿದ್ದೆವು.ಇಡೀ ರಾತ್ರಿ ನಾವು ಪುತಿನ ಮನೆಯ ಅಲಂಕರಣ ಕಾರ್ಯದಲ್ಲಿ ತೊಡಗಿದ್ದೆವು. ಯಾವ ಫೋಟೊ ಎಲ್ಲಿರಬೇಕು, ಪುತಿನ ಅವರ ಯಾವ ಕವಿತೆಯ ಸಾಲು ಯಾವ ಗೋಡೆಯ ಮೇಲೆ ಇರಬೇಕು ಎಲ್ಲದರಲ್ಲೂ ಜಿ.ಎಸ್.ಎಸ್. ಅವರ ಮಾರ್ಗದರ್ಶನ! ಮಾರ್ಗದರ್ಶನ ಎಂಬ ಮಾತು ತಪ್ಪು. ಮೊದಲು ಸ್ವತಹ ಅವರು ಮಾಡಲು ಹೊರಡುವುದು. ಆಮೇಲೆ ನಾವು ಅವರಿಗೆ ಅಸರೆಯಾಗಿ ನಿಲ್ಲುವುದು. ದೂರದಿಂದ ನೋಡಿ , ತಲೆದೂಗುತ್ತಾ ಕಣವಿಯವರು(ಇವರು ಜಿಎಸ್ಸೆಸ್ ಅವರ ಪರಮಾಪ್ತ ಗೆಳೆಯರು ಎಂಬುದನ್ನು ಕನ್ನದ ಸಾರಸ್ವತ ಲೋಕ ಬಲ್ಲುದು): " ಈಗ ಅಗ್ದೀ ಚಲು ಆತು ನೋಡ್ರಿ..!" ಎಂದು ಉದ್ಗರಿಸುವುದು. ಹೀಗೆ ಜಿ.ಎಸ್.ಎಸ್ ಕಾರ್ಯಶ್ರದ್ಧೆ, ಸ್ನೇಹಪ್ರೀತಿ, ರುಚಿಶುದ್ಧಿ ಎಲ್ಲಕ್ಕೂ ನಮಗೆ ಆದರ್ಶವಾಗಿ ನಿಂತವರು!

ಊಟ ತಿಂಡಿಗಳಲ್ಲಿ ಜಿ.ಎಸ್.ಎಸ್. ಅವರು ಒಳ್ಳೇ ರಸಿಕರು! ಹೂರಣದ ಹೋಳಿಗೆಯ ಊಟವನ್ನು ಅವರ ಮನೆಯಲ್ಲೇ ಮಾಡಬೇಕು.ಹೋಳಿಗೆ ಹಾಕಿಸಿಕೊಂಡು, ಅದರಮೇಲೆ ತುಪ್ಪ ಸುರುವಿಕೊಂಡು, ಅದಕ್ಕೆ ಕಸಿಮಾವಿನ ಸೀಕರಣೆ ಬೆರೆಸಿಕೊಂಡು ಅದನ್ನೆಲ್ಲಾ ಹದವಾಗಿ ಕಿವುಚಿ ರಸಪಾಕ ಮಾಡಿಕೊಂಡು ಸಶಬ್ದವಾಗಿ ಅದನ್ನು ತಿನ್ನಿವುದು ಜಿ.ಎಸ್.ಎಸ್.ಕ್ರಮ!. " ಹೀಗೆ ....ಹೋಳಿಗೆ ತಿನ್ನಬೇಕಾದ್ದು..!" ಎಂದು ಅವರು ನಮ್ಮತ್ತ ನೋಡುತ್ತಾ ಪಾಪ ತಿಳಿಯದ ಮುಗ್ಧರು ನೀವು ಎಂದು ಅನುಕಂಪೆ ತೋರುವ ಗತ್ತನ್ನು ನೋಡಿಯೇ ಅನುಭವಿಸಬೇಕು! ಹಾಗೇ ವಿದ್ಯಾರ್ಥಿಭವನದ ದೋಸೆ ಅವರಿಗೆ ಪ್ರಿಯವಾದುದು! ಮೈಸೂರಿಗೆ ಹೋದಾಗ ಮೈಲಾರಿ ಹೋಟೆಲ್ ಗೆ ಅವರೇ ನಮ್ಮನ್ನು ಕರೆದೊಯ್ದಾರು! ಆರೋಗ್ಯಕ್ಕೆ ತೊಂದರೆಯಿಲ್ಲ ತಗೊಳ್ಳಿ ತಗೊಳ್ಳಿ ಎಂದು ಉಪಚಾರಮಾಡುವುದು ಬೇರೆ! ಕೊನೆಗೆ ಮಾಣಿ ಬಂದು ಬಿಲ್ಲು ಬಡಿಯುತ್ತಾನೆ. ಅದನ್ನು ಜಿ.ಎಸ್.ಎಸ್. ಇರುವಾಗ ಅವರ ವಿದ್ಯಾರ್ಥಿಗಳು ಹೇಗೆ ತಾನೆ ಮುಟ್ಟುವ ಧೈರ್ಯ ಮಾಡಬಲ್ಲರು! ಚಿಕ್ಕವರಿಗೆ ತಿನ್ನಿಸುವುದು ದೊಡ್ಡವರ ಆಜನ್ಮ ಸಿದ್ಧ ಹಕ್ಕು ಎಂಬ ಘೋಷಣೆಯಲ್ಲಿ ದೃಢವಾದ ವಿಶ್ವಾಸ ಉಳ್ಳವರು ನಮ್ಮ ಮೇಷ್ಟ್ರು! ಅಥವಾ ಆ ಘೋಷಣೆಯನ್ನು ಹುಟ್ಟಿ ಹಾಕಿದವರು ಅವರೇ ಎನ್ನೋಣ!

ಕನ್ನದ ಕಾವ್ಯದಲ್ಲಿ ನಮ್ಮ ಪ್ರತಿಯೊಬ್ಬ ಮುಖ್ಯ ಕವಿಯನ್ನೂ ಒಂದಲ್ಲ ಒಂದು ದನಿ ಕಾಡುತ್ತಾ ಹೋಗುತ್ತದೆ. ಅದು ಮೋಹನ ಮುರಲಿ ಆಗಬಹುದು! ವನಮಾಲಿಯ ವೇಣು ವಾದನ ಇರಬಹುದು. ಅಸರಂತ ಒಂದೇ ಸಮ ಕೂಗುವ ಕೋಗಿಲೆಯ ಕಾಡುವ ಧ್ವನಿ ಇರಬಹುದು! ಜಿ.ಎಸ್.ಎಸ್. ಅವರನ್ನೂ ಒಂದು ಧ್ವನಿ ಕಾಡುತ್ತಾ ಇದೆ! ಅದು ಒಂದು ಒಂದು ಮಗುವಿನ ನೀಳ್ದನಿಯ ರೋದನ!

ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ-
ದೂರದ ಬಿರುಗಾಳಿಯ ಮೊರೆಯಂತೆ
ಮುಗಿಲಿಂದಿಳಿಯುವ ಧಾರಾಕಾರದ
ಮಳೆಯಂತೆ
ದದವನು ಅಪ್ಪಳಿಸುವ ಅಲೆಯಂತೆ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ!

ಕೈಗೆಟುಕದ ರೊಟ್ಟಿಯ ಚೂರಾಗಿದೆಚಂದಿರ
ಬಾನಿನ ತಟ್ಟೆಯಲಿ!
ಹಸಿವಿನ ತುಣುಕುಗಳಂದದಿ ಚಿಕ್ಕೆಗಳುರಿಯುತ್ತಿವೆ
ಶೂನ್ಯದ ಹೊಟ್ಟೇಯಲಿ
ಸೊಕ್ಕಿದ ತೇಗಿನ ತೆರ ಝಗಝಗಿಸಿವೆ
ನಗರದ ಬೆಳಕಿನ ವಿಸ್ತಾರ
ಸುತ್ತಲು ಛಳಿಗಾಳಿಗೆ ನಡುಗತಲಿವೆ
ಎಲೆಯುದುರಿದ ಕೈ ಚಾಚಿದ
ಅನಾಥ ಮರಗಲ ಪರಿವಾರ!


ಪದ್ಯವನ್ನು ಪೂರ್ತಿ ಓದಿದ ಮೇಲೆ ಗೊತ್ತಾಗುತ್ತದೆ ಈ ಮಗು ಮನುಷ್ಯಕುಲದ ದೀನತೆಯ ಪ್ರತೀಕ ಎಂದು. ಈವತ್ತಿನ ಸಾಮಾಜಿಕ ವಿಷಮತೆಯ ಸಂದರ್ಭದಲ್ಲಿ ಮಾನವತೆ ದೀನವಾಗಿ ಅಳುತ್ತಿರುವುದನ್ನು ಈ ಕವಿತೆ ಅದ್ಭುತವಾಗಿ ವರ್ಣಿಸುತ್ತದೆ!

ಶೋಷಿತವರ್ಗದ ಪರವಾದ ಜಿ.ಎಸ್.ಎಸ್.ನಿಲುವು ಆರೋಪಿತವಾದುದಲ್ಲ. ಅವರ ರಕ್ತದ ದಮನಿಯಲ್ಲಿ ಸಹಜವಾಗಿ ಪ್ರವಹಿಸುವಂಥದ್ದು! ಜಿ.ಎಸ್.ಎಸ್.ಜಗತ್ತು ಕಾಯುವ ದೈವದಲ್ಲಿ ನಂಬಿಕೆ ಕಳೆದುಕೊಂಡ ಜಗತ್ತು. ಜಿ.ಎಸ್.ಎಸ್. ದೈವದ ಹಂಗಿಲ್ಲದ ಕವಿ ನಿಜ. ಮನುಷ್ಯನೇ ತನ್ನ ಕರ್ಮಕ್ಕೆ ಹೊಣೆಗಾರಿಕೆ ಒಪ್ಪಿಕೊಂಡು ಬದುಕಬೇಕಾದ ಜಗತ್ತು ಇದು ಎಂದು ಜಿ.ಎಸ್.ಎಸ್ ಕಾವ್ಯ ನಂಬಿದೆ.ಅವರ ಪ್ರಸಿದ್ಧವಾದ ಒಂದು ಕವಿತೆಯೇ ಇದೆಯಲ್ಲ!

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ -ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ!

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೇ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ!

ಮೂವತ್ತೆರಡು ವರ್ಷಗಳ ಹಿಂದೆ ರಚಿತವಾದ ಈ ಗೀತೆ ಜಿ.ಎಸ್.ಎಸ್. ಕಾವ್ಯದ ಕೇಂದ್ರ ಸ್ಪಂದನವನ್ನು ಸೂಚಿಸಬಲ್ಲುದು. ಅಂತರದ ನಿವಾರಣೆ, ಪ್ರೀತಿ ಸ್ನೇಹಗಳ ಆವಾಹನೆ ಅವರ ಕಾವ್ಯದ ಬಹು ಮುಖ್ಯ ಆಶಯವಾಗಿದೆ.

ಸಿ.ಅಶ್ವಥ್ ಈ ಗೀತೆಗೆ ಅದ್ಭುತವಾಗಿ ಸ್ವರಸಂಯೋಜನೆ ಮಾಡಿದ್ದಾರೆ. ದೈವಶ್ರದ್ಧೆಯ ಅವರಿಗೆ ಇಲ್ಲದ ದೇವರು ಅನ್ನುವ ಮಾತು ಒಂದು ನುಂಗಲಾರದ ತುತ್ತು! ಅದನ್ನು ಕಾಣದ ದೇವರು ಕೆಲವರು ತಿದ್ದಿ ಹಾಡಿದ್ದೂ ಉಂಟು! ಜಿ.ಎಸ್.ಎಸ್. ಈ ಕವಿತೆಯಲ್ಲಿ ವ್ಯಕ್ತ ಪಡಿಸಿರುವ ಭಾವ ಸ್ಪಷ್ಟವಾಗಿದೆ. ಕಲ್ಲುಮಣ್ಣಿನ ಗುಡಿಯಲ್ಲಿ ದೇವರು ಇಲ್ಲ ಎಂಬುದೇ ಸೂಚ್ಯಾರ್ಥ! ದೇವರು ಇದ್ದರೆ ಅವನು ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳಲ್ಲಿ ಇದ್ದಾನೆ ಎನ್ನುತ್ತಾರೆ ಅವರು. ಇದು ದೈವವಿರೋಧೀ ನಿಲುವಲ್ಲ. ದೈವದ ವ್ಯಾಖ್ಯಾನದಲ್ಲಿ ಇರುವ ಭಿನ್ನತೆಯ ನಿಲುವು.

ಜಿ.ಎಸ್.ಎಸ್. ಕಾವ್ಯದ ಪರಮ ಲಕ್ಷಣವನ್ನೂ ಈ ಕವಿತೆಯ ಭಾಷಿಕ ಸ್ವರೂಪ ಪ್ರತಿನಿಧಿಸುವಂತಿದೆ. ಜಿ.ಎಸ್.ಎಸ್. ಅವರದ್ದು ವಚನಕಾರರಂತೆ(ಅದರಲ್ಲೂ ಬಸವಣ್ಣನವರಂತೆ) ನೇರವಾಗಿ ಹೃದಯಕ್ಕೆ ತಾಗುವ ಮಾತು. ಅವರ ಯಾವುದೇ ಜನಪ್ರಿಯ ಗೀತೆಯನ್ನು ತೆಗೆದುಕೊಳ್ಳಿ ಅದು ಹೀಗೆ ನೇರ ಮಾತು ಗಾರಿಕೆಯ ಫಲವಾಗಿದೆ. ಆ ನೇರ ಮಾತುಗಾರಿಕೆಗೆ ಕನ್ನಡ ಭಾಷೆಯ ಹೃದಯವನ್ನು ಬಲ್ಲ ನುಡುಗಾರಿಕೆ ಶಕ್ತಿಯನ್ನು ನೀಡುತ್ತದೆ. ಕನ್ನಡದ ಅಚ್ಚ ನುಡಿಗಟ್ಟನ್ನು ಜಿ.ಎಸ್.ಎಸ್. ಅಂತೆ ಬಳಸುವ ಕವಿಗಳು ವಿರಳ.ರಮ್ಯತೆಯನ್ನು ಅದರ ನುಡಿಗಟ್ಟಲ್ಲೇ ಛಿದ್ರಿಸಿ ಹೊಸ ಅರ್ಥವಂತಿಕೆಯನ್ನು ಅವರ ಕಾವ್ಯ ಕಟ್ಟಬಲ್ಲದು. ನಕ್ಷತ್ರಗಳನ್ನು ಶೂನ್ಯದ ಹೊಟ್ಟೆಯಲ್ಲಿ ಉರಿಯುವ ಹಸಿವಿನ ತುಣುಕುಗಳು ಎನ್ನುವಲ್ಲಿ ಇಂಥಾ ಪ್ರಯತ್ನವಿರುವುದನ್ನು ನೋಡಬಹುದು. ಅಸುಂದರವಾದುದನ್ನು ಹೀಗೆ ಕಾವ್ಯದಲ್ಲಿ ಒಳಗೊಳ್ಳಬಲ್ಲ ಕವಿ ರಮ್ಯಮಾರ್ಗದಲ್ಲಿ ಇದ್ದೂ ಒಳ ಬಂಡಾಯ ನಡೆಸುವ ಕವಿಯಾಗಿರುತ್ತಾನೆ. ಜಿ.ಎಸ್.ಎಸ್.ಅಂಥ ಕವಿಯಾಗಿದ್ದಾರೆ.ಖಾಸಗೀ ದುಗುಡ ದುಮ್ಮಾನಗಳನ್ನು ಅವರ ಕಾವ್ಯ ಸಾಮಾಜಿಕ ಪರಿಪ್ರೇಕ್ಷ್ಯದಲ್ಲೇ ಒಳಗೊಳ್ಳುವ ಯತ್ನ ಮಾಡುತ್ತದೆ. ಆದುದರಿಂದಲೇ ಅವರು ಅಖಂಡ ಕರ್ನಾಟಕದ ಹೃದಯಸ್ಪಂದನವನ್ನು ಹಿಡಿಯಬಲ್ಲ ಕವಿಯಾಗಿದ್ದಾರೆ. ಅವರು ರಾಷ್ಟ್ರ ಕವಿಯಾಗುವುದು ಈ ನೆಲೆಯಲ್ಲೂ ಯುಕ್ತವಾದುದು ಅನ್ನಿಸುತ್ತದೆ.ಈ ನೆಲೆಯಲ್ಲಿ ಅವರ ಕಾವ್ಯ ಮತ್ತು ಜೀವಿತದ ಅಧ್ಯಯನ ನಮ್ಮನ್ನು ನಮ್ಮ ನಾಡಿನ ಹೃದಯದ ಹತ್ತಿರಕ್ಕೆ ಕೊಂಡೊಯ್ಯಬಲ್ಲುದು.

**********************
ಜೀವನಪಥ:
ಜನನ:೧೯೨೬,ಫೆಬ್ರವರಿ ೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ
ಶಿಕ್ಷಣ:ಎಂ.ಎ.,ಪಿಎಚ್.ಡಿ,
ಡಾಕ್ಟರೇಟ್: ಸೌಂದರ್ಯಸಮೀಕ್ಷೆ-೧೯೬೦(ಕುವೆಂಪು ಮಾರ್ಗದರ್ಶನದಲ್ಲಿ)
೧೯೪೯ರಲ್ಲಿ ಮಹರಾಜಾ ಕಾಲೇಜಿನಲ್ಲಿ ಕನ್ನದ ಅಧ್ಯಾಪಕ ವೃತ್ತಿ ಪ್ರಾರಮ್ಭ
೧೯೬೩ ರಿಂದ ೧೯೬೬ ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಮತ್ತು ಕನ್ನದ ವಿಭಾಗದ ಮುಖ್ಯರು
೧೯೭೦ ರಿಂದ ೧೯೮೬ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು ಮತ್ತು ನಿರ್ದೇಶಕರು
೧೯೭೪-ಮಾಸ್ಕೋದಲ್ಲಿ ೨೨ದಿನ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ.
೧೯೮೨ರಲ್ಲಿ ರಾಜ್ಯಸಾಹಿತ್ಯ ಅಕಾಡೆಮಿ ಪುರಸ್ಕಾರ.
೧೯೮೪-ಕಾವ್ಯಾರ್ಥ ಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
೧೯೮೭-ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ
೧೯೮೭-೬೧ನೇ ಅ.ಭಾ.ಕನ್ನದ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪದವಿ.
೧೯೯೪-೯೫ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರು.
೧೯೯೮-ಪಂಪ ಪ್ರಶಸ್ತಿ.

Friday, September 18, 2009

ಬಾರೋ ಬಾರೋ ಮಳೆರಾಯ ಸಂಗ್ರಹದ ಕೆಲವು ಕವಿತೆಗಳು ನಿಮ್ಮ ಮಕ್ಕಳಿಗಾಗಿ:





ಮಲ್ಲಿ ಮಲ್ಲಿ ಎಲ್ಲಿಗೆ?

ಮಲ್ಲಿ ಮಲ್ಲಿ ಎಲ್ಲಿಗೆ? ಮಲ್ಲೀಪಟ್ಣದ ಗಲ್ಲಿಗೆ!
ಯಾತಕ್ಕಮ್ಮ ಅಲ್ಲಿಗೆ? ಗೋಲೀ ಮಾಡೋ ಕಲ್ಲಿಗೆ!
ಗೋಲೀಮಾಡೋ ಕಲ್ಲನ್ ತಂದು ಯಾರಿಗೆ ಕೊಡ್ತೀ ಮಲ್ಲಿಗೆ?
ರಾತ್ರಿ ಎಲ್ಲಾ ಅಳ್ತಾ ಇರೋ ಅಡುಗೇಮನೆ ನಲ್ಲಿಗೆ!

ಪೋಲೀ ಗುಂಡ!

ಪೋಲೀ ಗುಂಡ ಬಂದ! ಕೋಳೀವಾಡದಿಂದ!
ಬಗಲಲ್ಲೊಂದು ಕೋಳಿ! ಬೆಳಗಾಯ್ತಣ್ಣ ಏಳೀ!
ಕೂಗ್ತಾ ಇತ್ತು ಕೊಕ್ಕೋ! ಉದ್ರೀಗಾದ್ರೂ ತಕ್ಕೋ!

ರಾಣೀ ಬೆಕ್ಕು-ರಾಜಾ ಬೆಕ್ಕು

ರಾಣೀ ಬೆಕ್ಕು, ರಾಜಾ ಬೆಕ್ಕು ಸಿಕ್ಕಿದ ಇಲಿಗಾಗಿ
ರೇಗಾಡುತ್ತಾ ಕೂಗಾಡುತ್ತಾ ಜಗಳಕ್ಕೇ ರೆಡಿಯಾಗಿ
ನಿಂತಿದ್ದಾಗ ಅಲ್ಲಿಗೆ ಬಂತು ನಾಯಿ-ತೆರೆದೇ ಬಾಯಿ!
ಜಗಳ ಇಲ್ಲ, ಪಗಳ ಇಲ್ಲ ಎರಡೂ ಬೆಕ್ಕು ಮಾಯ!

ಹಿರಿಯೂರಲ್ಲಿ

ಹಿರಿಯೂರಲ್ಲಿ ಕರಿಯಣ್ಣೋರು ಕುರೀ ಕಾಯ್ತಾ ಇದ್ರು!
ಕುರಿ ಕಾಯ್ತಾ ಕಾಯ್ತಾ ಒಮ್ಮೆ ಕರೀ ಬಾವೀಲಿ ಬಿದ್ರು!
ಕರೀಬಾವೀಲಿಲ್ಲ ನೀರು. ಬರೀಕತ್ತಲ ಜೋರು!
ಮೊದಲೇ ಬಿದ್ದೋರ್ ಕೇಳ್ತಾ ಇದ್ರು: "ಈಗ ಬಿದ್ದೋರ್ ಯಾರು?"

ಪಾಪನ ಚಡ್ಡಿ!

ಪುಟ್ಟ ಕಂದ ಹೈ!
ಪಾಪ! ಬರೀ ಮೈ!
ಚಡ್ಡಿ ಕೂಡ ನೈ!
ಥೈ! ಥೈ! ಥೈ!

ತಾತ ಎನ್ನುತ
ಕಣ್ಣ ತಿಕ್ಕುತ
ಅಳುತ ಇದ್ದ ತಾ
ಛೆ! ಛೆ! ಛೆ!

ತಾತ ಬಂದರು!
ಕೊಟ್ಟು ಒಂದು ರೂ
ಚಡ್ಡಿ ತಂದರು!!
ಹ! ಹ! ಹ!

ತೊಡಿಸಿ ನಿಕ್ಕರು
ತಾತ ನಕ್ಕರು
ಝಿಪ್ಪೆ ಚಕ್ಕರ್ರು!!
ಹೊ! ಹೊ! ಹೊ!

ಧೋ ಧೋ ಎಂದು!

ಧೊ! ಧೊ! ಎಂದು ಮಳೆ ಸುರಿವಂದು
ಅರಳಿದ ನಾಯಿಕೊಡೆ!
ಮುರಿಯದ ಹಾಗೆ ಬೀದಿಯ ನಾಯಿ
ನಿಂತಿದೆ ಮೇಲುಗಡೇ!

ಇಂದು ಚಿಕ್ಕ ಕೊಡೆ ಬೆಳೆದರೆ ಮುಂದೆ
ಆಗುವುದೂರಗಲ!
ಚೂರೂ ತೊಯ್ಯದೆ ನಿಲ್ಲುವೆ ಕೆಳಗೆ
ಮುಂದಿನ ಮಳೆಗಾಲ!

ಗಿಲ್! ಗಿಲ್! ಗಿಲ್!

ಗಿಲ್! ಗಿಲ್! ಗಿಲ್!
ಹೋಗ್ಬೇಡ ನಿಲ್!
ಹನಿ ಹನಿ ಮಳೆ ಜತೆ
ತಲೆ ಮೇಲೆ ಕಲ್!!

ನಮ್ಮ ಚೋಟು ನಾಯಿಗೆ

ನಮ್ಮ ಚೋಟು ನಾಯಿಗೆ
ನಾಕು ಫೀಟು ನಾಲಗೆ!
ಈಗ ಚೋಟು ಬೌ ಅಂದರೆ
ಕೇಳಿಸುವುದು ನಾಳೆಗೆ!

ಬಾವಿಯಾಮೆಚಿಪ್ಪಲಿ

ಬಾವಿಯಾಮೆಚಿಪ್ಪಲಿ
ಮಾಡಿಕೊಂಡು ಚಪ್ಪಲಿ
ಉರ್‍ಅ ತಿರುಗುತಿತ್ತು ಕತ್ತೆ
ವಾಕಿಂಗಿನ ನೆಪ್ಪಲಿ!

ಓಟೇ ರೇಟು!

ಒಂದು ಹಳೇ ಕೋಟೆ; ಕೋಟೆ ಒಳಗೊಂದು ಪೇಟೆ;
ಪೇಟೆ ಉದ್ದಕ್ಕು ಮಾರ್ತಾ ಇದ್ದಾರೆ ಒಣಾ ಮಾವಿನ ಓಟೆ!
ಓಟೇ ರೇಟು ಜಾಸ್ತಿ ಅಂದ್ರ ಶ್ರೀಮಾನ್ ಜೆಮ್ ಷೆಡ್ ತಾತ!
"ಓಟೇ ರೇಟೇ ಹಾಗೇ" ಅಂತು ಕುರುಚಲು ಗಡ್ಡದ ಹೋತ!

ಮಿತ್ರರೆ,ಈ ಕವಿತೆಗಳನ್ನ ನಿಮ್ಮ ಮಕ್ಕಳಿಗೆ ಹೇಳಿಕೊಡಿ. ಶುಭಾಶಯಗಳೊಂದಿಗೆ -ಎಚ್.ಎಸ್.ವಿ.

Friday, September 11, 2009

ಬಾರೋ...ಬಾರೋ...ಮಳೆರಾಯ...


ಕರ್ಣಾಟ ಮಾತೆಯಾ ಮಕ್ಕಳಿರ ಕೂಡಿ
ತಾಯ್ನುಡಿಯ ಸೇವೆಯನು ಮನಸಿಟ್ಟು ಮಾಡಿ!
-ಕುವೆಂಪು


ಇದೇ ತಿಂಗಳ ಐದನೇ ತಾರೀಖು ಭಾನುವಾರ ಬೆಳಿಗ್ಗೆ (೫.೯.೨೦೦೯) ನನ್ನ ಹೊಸ ಪುಸ್ತಕ ಬಾರೋ ಬಾರೋ ಮಳೆರಾಯ ಬಿಡುಗಡೆ ಆಯಿತು. ಮಕ್ಕಳಿಗಾಗಿ ನಾನು ಈವರೆಗೆ ಬರೆದಿರುವ ಎಲ್ಲ ಕವಿತೆಗಳ ಸಮಗ್ರ ಸಂಪುಟ ಅದು. ಅಂಕಿತ ಪುಸ್ತಕದ ಗೆಳೆಯರು ತುಂಬ ಚೆನ್ನಾಗಿ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬಾರೋಬಾರೋ ಮಳೆರಾಯ ಒಂದೇ ಅಲ್ಲ. ಈಚೆಗೆ ನಿರಂತರವಾಗಿ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಾ ಇವೆ. ಮಕ್ಕಳಿಗಾಗಿ ಬರೆಯಬೇಕೆಂಬ ಉಮೇದು ಮತ್ತೆ ನಮ್ಮ ಲೇಖಕರಲ್ಲಿ ಮೂಡುತ್ತಾ ಇದೆ. ಇದು ಶುಭ ಲಕ್ಷಣ. ಹಿರಿಯ ಕವಿಗಳಾದ ಚೆನ್ನವೀರ ಕಣವಿಯವರ ಮಕ್ಕಳ ಕವಿತಾ ಸಂಗ್ರಹ ಈಚೆಗೆ ಹೊರಬಂದಿದೆ. ಶ್ರೀನಿವಾಸ ಉಡುಪ, ಎನ್.ಎಸ್.ಎಲ್, ನಾಡಿಗ, ವೈದೇಹಿ, ಆನಂದ ಪಾಟೀಲ, ಲಕ್ಷ್ಮೀಶ ತೋಳ್ಪಾಡಿ ಮತ್ತಿತರ ಮುಖ್ಯ ಲೇಖಕರು ಮಕ್ಕಳಿಗಾಗಿ ನಿರಂತರ ಬರೆಯುತ್ತಾ ಇದ್ದಾರೆ.ಜೊತೆಗೆ ಮಕ್ಕಳ ಸಾಹಿತ್ಯ ಹರಿಗಡಿಯದಂತೆ ಯಾವತ್ತಿನಿಂದಲೂ ನೋಡಿಕೊಂಡಿರುವ ಉತ್ತರಕರ್ನಾಟಕದ ಅಧ್ಯಾಪಕ ಕವಿಗಳು. ಇದೆಲ್ಲಾ ಸಂತೋಷಪಡಬೇಕಾದ ಸಂಗತಿಯೇ. ಆದರೆ ಈ ಸಂತೋಷದ ಮಧ್ಯೆ ನನ್ನನ್ನು ಚಿಂತೆಗೆ ಹಚ್ಚುವ ಸಂಗತಿಯೆಂದರೆ, ಯಾರಿಗಾಗಿ ನಾವು ಮಕ್ಕಳ ಸಾಹಿತ್ಯವನ್ನು ನಿರ್ಮಿಸುತ್ತಿದ್ದೇವೆಯೋ ಆ ಮಕ್ಕಳು ಕನ್ನಡದಿಂದ ದೂರವಾಗುತ್ತಿರುವುದು. ನಗರಗಳಲ್ಲಂತೂ ನೂರಕ್ಕೆ ತೊಂಭತ್ತು ಭಾಗ ಮಕ್ಕಳಿಗೆ ಕನ್ನಡ ಈಗ ಓದುವ ಭಾಷೆಯಾಗಿಲ್ಲ. ಅದು ಕೇವಲ ಮಾತಾಡುವ ಭಾಷೆ. ಅವರೀಗ ಇಂಗ್ಲಿಷ್ ರೈಮ್ಸ್ ಓದುತ್ತಾರೆ. ಹ್ಯಾರೀಪಾಟ್ಟರ್ ಓದುತ್ತಾರೆ. ಕಾಮಿಕ್ಸ್ ನೋಡುತ್ತಾರೆ. ಪಂಜೆ, ಕುವೆಂಪು, ರಾಜರತ್ನಂ, ಹೊಯಿಸಳರ ಹೆಸರೂ ಅವರಿಗೆ ಗೊತ್ತಿಲ್ಲ. ತಪ್ಪು ಮಕ್ಕಳದಲ್ಲ. ಮಕ್ಕಳನ್ನು ಹಾಗೆ ಬೆಳೆಸುತ್ತಿರುವ ಪೋಷಕರದ್ದೂ ಅಲ್ಲ. ಈವತ್ತಿನ ಸಾಮಾಜಿಕ, ಶೈಕ್ಷಣಿಕ ಒತ್ತಡಗಳು ಹಾಗಿವೆ. ಕನ್ನಡದ ಬಗ್ಗೆ ಪ್ರೀತಿಯುಳ್ಳವರೂ ಈಗ ಅಸಾಹಯಕರಾಗಿದ್ದೇವೆ. ಶಾಲೆಗಳಲ್ಲಿ ಮಕ್ಕಳು ಕನ್ನಡ ಕಲಿಯುವ ಅವಕಾಶ ಕಡಿಮೆಯಾಗುತ್ತಾ ಇದೆ. ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸುವಷ್ಟು ವ್ಯವಧಾನ ಈವತ್ತಿನ ತುರ್ತು ಜಗತ್ತಿನಲ್ಲಿ ತಂದೆ ತಾಯಿಯರಿಗೆ ಇಲ್ಲ. ನಗರಗಳಿರಲಿ ಹಳ್ಳಿ ಹಳ್ಳಿಗಳಲ್ಲೂ ಇಂಗ್ಲಿಷ್ ಶಾಲೆಗಳು ತಲೆಯೆತ್ತುತ್ತಾ ಇವೆ. ಕನ್ನಡವನ್ನು ಮಕ್ಕಳಿಗೆ ಕಲಿಸಲು ಈಗ ನಾವು ಯಾವುದಾದರೂ ಪರ್ಯಾಯವ್ಯವಸ್ಥೆಯನ್ನೇ ಕಲ್ಪಿಸಿಕೊಳ್ಳಬೇಕಾಗಿದೆ. ಅಮೆರಿಕೆಯಲ್ಲಿ ನಮ್ಮ ಕನ್ನಡ ಬಂಧುಗಳು ತಮ್ಮ ಮಕ್ಕಳಿಗೆ ಹೇಗಾದರೂ ಮಾಡಿ ಕನ್ನಡ ಕಲಿಸ ಬೇಕೆಂಬ ಸಂಕಲ್ಪದಿಂದ ರಜಾದಿನಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಶಾಲೆಗಳನ್ನು(ಏಕೋಪಾಧ್ಯಾಯ ಶಾಲೆಗಳು) ಪ್ರಾರಂಭಿಸಿದ್ದಾರೆ. ಇದರಿಂದ ಕನ್ನಡ ಓದುವುದು ಮಕ್ಕಳಿಗೆ ತಕ್ಕಮಟ್ಟಿಗಾದರೂ ಪರಿಚಯ ಆಗುತ್ತದೆ. ಹತ್ತಾರು ವರ್ಷಗಳಿಂದ ಇಂಥ ಕನ್ನಡ ಶಾಲೆ ನಡೆಸುತ್ತಿರುವ ಕನ್ನಡಾಭಿಮಾನಿಗಳು ಅಮೆರಿಕಾದಲ್ಲಿ ಇದ್ದಾರೆ. ಹೊರಗೆ ಪಕ್ಕಾ ಇಂಗ್ಲಿಷ್ ವಾತಾವರಣ. ಹಾಗಾಗಿ ಮಕ್ಕಳನ್ನು ಕನ್ನಡದ ಕಡೆ ಸೆಳೆಯುವ ಪ್ರಯತ್ನಗಳು ಅಮೆರಿಕೆಯಲ್ಲಿ ಹೆಚ್ಚು ಫಲಕಾರಿಯಾಗಿಲ್ಲ ಎಂಬುದನ್ನು ಅಲ್ಲಿನ ಗೆಳೆಯರು ವಿಷಾದದಿಂದ ಹೇಳುತ್ತಾರೆ. ಮತ್ತೆ ಕೆಲವರು ಮಕ್ಕಳಿಗೆ ಕನ್ನಡ ಸಂಪರ್ಕ ಉಳಿಯಬೇಕು ಎಂಬ ಸಂಕಲ್ಪದಿಂದ ಅವರನ್ನು ರಜಾದಿನಗಳಲ್ಲಿ ಬೆಂಗಳೂರಿಗೋ, ಧಾರವಾಡಕ್ಕೋ, ಮೈಸೂರಿಗೋ ಕಳಿಸಿಕೊಡುತ್ತಾರೆ. ಇಲ್ಲಿ ಆ ಮಕ್ಕಳು ತಿಂಗಳು ಒಪ್ಪತ್ತು ಇರುವಂತೆ ನೋಡಿಕೊಳ್ಳುತ್ತಾರೆ. ಈ ಉಪಾಯ ತಕ್ಕಮಟ್ಟಿಗೆ ಧನಾತ್ಮಕ ಫಲಿತಾಂಶ ಕೊಟ್ಟಿದೆ. ಪ್ರತಿವರ್ಷವೂ ಮಕ್ಕಳನ್ನು ಹೀಗೆ ಸೀಮಿತ ಕಾಲಾವಧಿಗೆ ಇಂಡಿಯಾಕ್ಕೆ ಕಳಿಸುವುದರಿಂದ ಆ ಮಕ್ಕಳು ಸುಲಲಿತವಾಗಿ ಕನ್ನಡ ಮಾತಾಡುವಂತಾಗಿದೆ. ಅನಿವಾಸೀಭಾರತೀಯರಾದ ನನ್ನ ಮಿತ್ರರೊಬ್ಬರ ಮಗಳು ಅಮೆರಿಕೆಯಲ್ಲಿದ್ದೂ ಸೊಗಸಾಗಿ ಕನ್ನಡ ಮಾತಾಡುತ್ತಾಳೆ. ಈ ಪ್ರಯೋಗವನ್ನು ಇನ್ನೊಂದು ಬಗೆಯಲ್ಲಿ ಬೆಂಗಳೂರು ನಿವಾಸಿಗಳಾದ ನಾವೂ ಮಾಡಬಹುದೇ? ಮಕ್ಕಳನ್ನು ರಜಾದಿನಗಳಲ್ಲಿ ಹಳ್ಳಿಗಳಿಗೆ ಕಳುಹಿಸುವುದು. ಅಲ್ಲಿ ಅವರು ಅಜ್ಜ ಅಜ್ಜಿಯರೊಂದಿಗೋ. ಅತ್ತೆಮಾವಂದಿರೊಂದಿಗೋ ತಿಂಗಳೊಪ್ಪತ್ತು ಇದ್ದು ಬರಲಿ. ಮೂರು ನಾಲಕ್ಕು ವರ್ಷ ಈ ಪ್ರಯೋಗ ಮಾಡುವುದರಿಂದ ಕನ್ನಡ ಮಾತಾಡುವುದು, ಓದುವುದು ಅವರಿಗೆ ಸಾಧ್ಯವಾಗಬಹುದು. ಗ್ರಾಮಗಳು ಹೀಗೆ ನಮ್ಮ ದೇಸೀಯತೆಯನ್ನು ಉತ್ಪಾದಿಸುವ, ಉಳಿಸುವ, ಪ್ರಚೋದಿಸುವ ಕಾರ್ಯಾಗಾರಗಳಾಗಬೇಕಾಗಿದೆ. ಹಳ್ಳಿಯಿಂದ ಮಕ್ಕಳು ರಜಾದಿನಗಳನ್ನು ಮುಗಿಸಿ ಬೆಂಗಳೂರಿಗೆ ಬಂದ ಮೇಲೆ, ಕನ್ನಡ ಹಾಡುಗಳನ್ನು ಕೇಳಲು, ಕನ್ನಡ ನಾಟಕಗಳನ್ನು, ಚಲನಚಿತ್ರಗಳನ್ನು ನೋಡಲು ನಾವು ಅವರನ್ನು ಪ್ರೋತ್ಸಾಹಿಸೋಣ. ಅವರು ಓದುತ್ತಾರೋ ಬಿಡುತ್ತಾರೋ ಒಂದು ಕನ್ನಡ ಪತ್ರಿಕೆ ನಮ್ಮ ಮನೆಗೆ ಬಂದು ಬೀಳುತ್ತಾ ಇರಲಿ. ನಾವು ಮನೆಯಲ್ಲಿ ಹಠತೊಟ್ಟವರಂತೆ ಕನ್ನಡ ಮಾತಾಡೋಣ. ಮಕ್ಕಳು ಕನ್ನಡದಲ್ಲಿ ಮಾತಾಡುವ ವಾತಾವರಣ ಕಲ್ಪಿಸೋಣ. ಶಾಲೆಯಲ್ಲಿ ಅವರು ಹೇಗೂ ಇಂಗ್ಲಿಷ್ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ! ಅವರು ಎಲ್ಲಿ ಸಮಕಾಲೀನ ಸಂದರ್ಭಕ್ಕೆ ನಿರುಪಯುಕ್ತರಾಗಿಬಿಡುತ್ತಾರೋ ಎಂಬ ಆತಂಕ ಬೇಡ. ಶಾಲೆಗಳಲ್ಲಿ ತಪ್ಪಿಯೂ ಅವರು ಕನ್ನಡ ಮಾತಾಡುವುದಿಲ್ಲ. ಮಾತಾಡಿದರೆ ದಂಡ ವಿಧಿಸುವ, ಛೀಮಾರಿ ಹಾಕುವ ವ್ಯವಸ್ಥೆ(!)ಯೂ ಇದೆ ಅಂತ ಕೇಳಿದ್ದೇನೆ. ನನ್ನ ಹೊಸ ಮಕ್ಕಳ ಕವಿತಾ ಸಂಗ್ರಹ ಪ್ರಕಟವಾದ ಬಗ್ಗೆ ತಿಳಿಸಿದೆನಲ್ಲಾ? ಆ ಪುಸ್ತಕದ ಒಂದು ಪ್ರತಿಯನ್ನು ನಿಮ್ಮ ಶಾಲೆಯ ಪುಸ್ತಕಭಂಡಾರಕ್ಕೆ ಕೊಡು ಎಂದು ನಾನು ನನ್ನ ಮೊಮ್ಮಗಳಿಗೆ ಹೇಳಿದಾಗ ಅವಳು ತಕ್ಷಣ ಉತ್ತರಿಸಿದ್ದು: ನಮ್ಮ ಸ್ಕೂಲಲ್ಲಿ ಕನ್ನಡ ಪುಸ್ತಕ ಲೈಬ್ರರಿಯಲ್ಲಿ ಇಡುವಂತಿಲ್ಲ! ಸರ್ಕಾರ ಇಂಥ ಕಡೆ ಮಧ್ಯೆ ಪ್ರವೇಶಿಸಬೇಕಾದ ಅಗತ್ಯವಿದೆ. ಶಿಕ್ಷಣ ಇಲಾಖೆ ಈ ಕೆಲಸವನ್ನು ತಕ್ಕ ಮಟ್ಟಿಗೆ ಮಾಡುತ್ತಾ ಇದೆ. ಆಯ್ದ ಪುಸ್ತಕಗಳನ್ನು ಹಳ್ಳಿ ಹಳ್ಳಿಯ ಶಾಲೆಗಳಿಗೆ ಉಚಿತವಾಗಿ ಹಂಚುವ ಕಾರ್ಯಕ್ರಮ. ಈ ಯೋಜನೆ ಇನ್ನೂ ವಿಸ್ತೃತವಾಗಬೇಕು. ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಿಗೂ ಕನ್ನಡ ಪುಸ್ತಕಗಳನ್ನು ಹಂಚಬೇಕು. ಬಿಟ್ಟಿ ಸಿಕ್ಕುವಾಗ ಯಾರೂ ಬೇಡಾ ಅನ್ನಲಾರರು. ಕನ್ನಡ ಭಾಷೆಯನ್ನ ಒಂದು ಭಾಷೆಯಾಗಿಯಾದರೂ ಕಲಿತ ಮಕ್ಕಳಿಗೆ ವಿಶೇಷ ಅನುಕೂಲಗಳನ್ನು ಸರ್ಕಾರ ಕಲ್ಪಿಸಬೇಕು. ಶಿಷ್ಯವೇತನಗಳನ್ನು ಕೊಡಬೇಕು. ಮುಂದೆ ಅವರು ವೈದ್ಯಕೀಯ, ತಾಂತ್ರಿಕ ಕಾಲೇಜುಗಳಲ್ಲಿ ಓದುವ ಅವಕಾಶ ಕಲ್ಪಿಸಬೇಕು...(ಈಗ ಕಲ್ಪಿಸಿರುವ ಪ್ರೋತ್ಸಾಹ ಏನೇನೂ ಸಾಲದು)!ಇದೆಲ್ಲಾ ಇನ್ನೊಬ್ಬರು ಮಾಡಬೇಕಾದದ್ದು. ಸ್ವತಃ ನಾವು ಮಾಡಬಹುದಾದದ್ದು ಏನು? ಮಕ್ಕಳಿಗೆ ಮನೆಯಲ್ಲೇ ಕನ್ನಡ ಓದಲು ಬರೆಯಲು ಹೇಗಾದರೂ ಮಾಡಿ ಕಲಿಸುವುದು. ಅವರಿಗೆ ಅತ್ತ್ಯುತ್ತಮ ಕನ್ನಡ ಪುಸ್ತಕಗಳನ್ನು ಕೊಂಡುಕೊಟ್ಟು ಅವರ ಕೋಣೆಯಲ್ಲಿ ಪುಟ್ಟ ಒಂದು ಕನ್ನಡ ಪುಸ್ತಕ ಭಂಡಾರ ತೆರೆಯುವುದು.ನಮ್ಮ ಭಾಷೆಯನ್ನು ಮೊದಲು ನಾವು ಪ್ರೀತಿಸತೊಡಗುವುದು. ನಾವು ನಮ್ಮ ಭಾಷೆಯನ್ನು ಪ್ರೀತಿಸ ತೊಡಗಿದರೆ ಮಕ್ಕಳಿಗೂ ನಮ್ಮ ಭಾಷೆಯ ಬಗ್ಗೆ ಗೌರವ ಅಭಿಮಾನ ಆದರ ಮೂಡುವುದು.....ಮಕ್ಕಳೊಂದಿಗೆ ಅಗಾಗ ನಾವು ಕನ್ನಡ ಪುಸ್ತಕದ ಅಂಗಡಿಗಳಿಗೆ ಭೆಟ್ಟಿಕೊಡುವುದು ಒಳ್ಳೆಯ ಪರಿಣಾಮ ಬೀರಬಲ್ಲುದು...ಯಾವುದೇ ಭಾಷೆ ಒಂದು ಸಾಮಾಜಿಕ ಪ್ರತಿಷ್ಠೆಯ ಸೂಚಿಯಾಗುವುದನ್ನು ಮಾತ್ರ ಹೇಗಾದರೂ ಮಾಡಿ ತಪ್ಪಿಸ ಬೇಕಾದದ್ದು ನಾವು ಮುಖ್ಯವಾಗಿ ಮಾಡಬೇಕಾದ ಕೆಲಸ....ಕೊನೆಗೂ ಕನ್ನಡ ಉಳಿಯಬೇಕಾದದ್ದು ಪುಸ್ತಕಗಳಲ್ಲಿ ಅಲ್ಲ; ನಮ್ಮ ಮಕ್ಕಳ ನಾಲಗೆ ಮೇಲೆ.
"ಉಳಿವುದು ಕನ್ನಡ ನಾಳೆ, ಉಳಿದರೆ ಮಕ್ಕಳ ನಾಲಗೆ ಮೇಲೆ"

Thursday, September 3, 2009

ಅಡಿಗರ ನೆನಪು....

ಅಡಿಗರು ಜಯನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ದರು. ನಾನು ಆಗಾಗ ಅವರನ್ನು ಕಾಣಲು ಆ ಮನೆಗೆ ಹೋಗುತ್ತಿದ್ದೆ. ಆಗ ಅವರ ಮನೆಯಲ್ಲಿ ತುಂಬ ಬೆಕ್ಕುಗಳು ಇದ್ದವು. ಅಡಿಗರು ಅವಕ್ಕೆಲ್ಲಾ ನಾಮಕರಣ ಮಾಡಿದ್ದರು. ನಾನು ಅವರೊಂದಿಗೆ ಮಾತಾಡಲು ಕುಳಿತಾಗ ಅವರಿಗೆ ಪ್ರಿಯವಾದ ಬೆಕ್ಕೊಂದು ಕೋಣೆಗೆ ನುಸುಳಿ, ಮಿಯಾವ್ ಮಿಯಾವ್ ಎಂದು ಸ್ವಲ್ಪ ಕಾಲ, ಕಾಲ ಬಳಿ ಸುತ್ತಾಡಿ ಆಮೇಲೆ ಚಂಗನೆ ಹಾರಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಅಡಿಗರು ಬೆಕ್ಕನ್ನು ಮುದ್ದು ಮಾಡುತ್ತ ಅದರ ಸಾಹಸಗಳನ್ನು ಜಾಣ್ಮೆಯನ್ನು ಎಷ್ಟೋ ಹೊತ್ತು ವಿವರಿಸುತ್ತಾ, ಆ ಮಾತಿನಲ್ಲೇ ತನ್ಮಯರಾಗುತ್ತಿದ್ದರು. ರಾತ್ರಿ ಒಂದು ಕಿಟಕಿಯ ಬಾಗಿಲು ಈ ಬೆಕ್ಕಿಗಾಗಿ ತೆರೆದಿಡುತ್ತೇವೆ. ಇವನು ರಾತ್ರಿ ಅಲೆದಾಡಿಕೊಂಡು ಯಾವ ಮಾಯದಲ್ಲೋ ಮತ್ತೆ ಮನೆಯೊಳಗೆ ಬಂದು ಮಲಗಿರುತ್ತಾನೆ. ಮನೆಯೊಳಗೆ ಕೊಳೆ ಮಾಡುವುದಿಲ್ಲ. ಬಹಳ ನೀಟಾದ ಶೋಕೀವಾಲ...ಇತ್ಯಾದಿ ಹೇಳುತ್ತಾ ಇದ್ದರು. ಅವರ ಮಾತಿನಲ್ಲಿ ಬೆಕ್ಕು ಬೆಕ್ಕಾಗಿರಲಿಲ್ಲ. ಮನೆಯ ಒಬ್ಬ ಸದಸ್ಯನಾಗಿತ್ತು. ಹಾಗೇ ಅಡಿಗರಿಗೆ ಅವರ ನಾಯಿಯ ಬಗ್ಗೆಯೂ ಅಪಾರ ಪ್ರೇಮ. ಪುಟ್ಟ ಎಂದು ಆ ನಾಯಿಯ ಹೆಸರು. ಅವನ ಚೇಷ್ಟೆಯನ್ನು ಖುಷಿಯಾಗಿ ವಿವರಿಸುತ್ತಿದ್ದರು. ಅವನಿಗೆ ಚಿಂದಿ ಉಟ್ಟ ಯಾರಾದರು ಕಂಡರೆ ಆಗುವುದಿಲ್ಲ. ಅವರು ರಸ್ತೆ ದಾಟುವವರೆಗೂ ಬಗುಳುತ್ತಾ ಇರುತ್ತಾನೆ. ನೀಟಾಗಿ ಉಡುಪು ಹಾಕಿಕೊಂಡವರು ಬಂದರೆ ಬಾಲ ಕುಣಿಸುತ್ತಾ ಹರ್ಷ ವ್ಯಕ್ತಪಡಿಸುತ್ತಾನೆ-ಹೀಗೆಲ್ಲಾ ತಮ್ಮ ಪ್ರೀತಿಯ ನಾಯಿಯ ಬಗ್ಗೆ ವಿವರ ಕೊಡುತ್ತಾ ಎಷ್ಟೋ ಹೊತ್ತು ಮಾತಾಡುತ್ತಿದ್ದರು.
******
ಅಡಿಗರು ಜಯನಗರದ ಮನೆಯಿಂದ ಬನಶಂಕರಿಗೆ ತಮ್ಮ ಸ್ವಂತ ಮನೆಗೆ ಬಂದಮೇಲೆ ಒಮ್ಮೆ ಅವರ ಮನೆಗೆ ಹೋಗಿದ್ದಾಗ ಬಹಳ ಹೊತ್ತು ಅವರೊಂದಿಗೆ ಮಾತಾಡುತ್ತಾ ಕುಳಿತಿದ್ದರೂ ಅವರ ಪ್ರೀತಿಯ ಬೆಕ್ಕು ಕಾಣಿಸಲೇ ಇಲ್ಲ. ಸಾರ್...ನಿಮ್ಮ ಬೆಕ್ಕು ಕಾಣ್ತಾ ಇಲ್ಲವಲ್ಲಾ..? ಎಂದೆ. ಅಡಿಗರ ಮುಖ ಸ್ವಲ್ಪ ಸಪ್ಪಗಾಯಿತು. ಆ ಮನೆಯಿಂದ ಬರುವಾಗ ಅವನು ಎಲ್ಲೋ ಹೊರಗೆ ಹೋಗಿದ್ದ. ಎಷ್ಟು ಕಾದರೂ ಬರಲಿಲ್ಲ. ಇಲ್ಲಿಗೆ ಬಂದ ಮೇಲೆ ಅವನನ್ನು ಹುಡುಕಿಕೊಂಡು ಎಷ್ಟೋ ಬಾರಿ ಆ ಮನೆಯ ಹತ್ತಿರ ಹೋಗಿದ್ದೇವೆ. ಕೆಲವೊಮ್ಮೆ ಕಾಣುತ್ತಾನೆ. ಆದರೆ ಆ ಮನೆಯನ್ನು ಬಿಟ್ಟು ಬರಲು ಅವನಿಗೆ ಇಷ್ಟವಿಲ್ಲ. ಬೆಕ್ಕುಗಳಿಗೆ ಸಾಕಿದ ವ್ಯಕ್ತಿಗಳಿಗಿಂತ , ತಾನು ಬೆಳೆದ ಸ್ಥಳ ಮುಖ್ಯ ಎನ್ನುತ್ತಾರೆ. ನಮ್ಮನ್ನು ಬಿಟ್ಟಿರಲು ಅವನಿಗೂ ತುಂಬ ದುಃಖವಾಗಿರಬೇಕು. ಆದರೆ ಆ ಮನೆಯನ್ನು ಬಿಟ್ಟು ಬರುವುದು ಇನ್ನೂ ಹೆಚ್ಚುದುಃಖಕರ ಅನ್ನಿಸಿರಬೇಕು ಅವನಿಗೆ...!ಎಂದು ಸ್ವಲ್ಪ ಕಾಲ ಆ ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು.
*****
ಅಡಿಗರ ಪ್ರೀತಿಪಾತ್ರ ನಾಯಿಯೇನೋ ಅವರನ್ನು ಹೊಸಮನೆಗೆ ಹಿಂಬಾಲಿಸಿತ್ತು. ನಾನು ಯಾವಾಗ ಹೋದರೂ ಅದರ ಬಗುಳು, ಮತ್ತು ಸಂತೋಷಾಧಿಕ್ಯದಿಂದಲೋ, ಬೇಸರದಿಂದಲೋ ಗಿರಿಗಿಟ್ಟಲೆಸುತ್ತುವ ಸ್ವಾಗತ ನನಗೆ ದೊರಕುತ್ತಾ ಇತ್ತು. ಮನೆಯನ್ನು ಪ್ರವೇಶಿಸಿದ ಕೂಡಲೇ ಒಂದು ವರಾಂಡ. ಅದಕ್ಕೆ ಹೊಂದಿಕೊಂಡಂತೆ ಅಡಿಗರ ಬರೆಯುವ ಕೋಣೆ ಇತ್ತು. ಅವರ ಟೇಬಲ್ಲಿನ ಮೇಲೆ ಕಿಟ್ಟೆಲ್ಲಿಂದ ಹಿಡಿದು ಎಲ್ಲ ಡಿಕ್ಷ್ಣರಿಗಳೂ ಇರುತ್ತಿದ್ದವು. ಮಾತಾಡುವಾಗ ಯಾವುದೇ ಶಬ್ದದ ಬಗ್ಗೆ ಅನುಮಾನ ಉಂಟಾದರೂ ತಕ್ಷಣ ಡಿಕ್ಷ್ಣರಿ ತೆರೆದು ಆ ಪದವನ್ನು ಹುಡುಕಿ ಅನುಮಾನ ಬಗೆಹರಿಸಿಕೊಳ್ಳುವವರೆಗೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಆಗ ದೂರದರ್ಶನದಲ್ಲಿ ಇದೀಗ ದೆಹಲಿಗೆ ಎಂಬ ಪ್ರಕಟಣೆ ಪದೇ ಪದೇ ಬರುತ್ತಾ ಇತ್ತು. ಅಡಿಗರು ಆ ಪ್ರಕಟಣೆ ಬಂದಾಗ -ಇದೇನಯ್ಯಾ...? ಇದೀಗ ದೆಹಲಿಗೆ...! ಇದೀಗ ಎನ್ನುವುದು ತಪ್ಪು ಪ್ರಯೋಗ..ಈ ಬಗ್ಗೆ ದೂರದರ್ಶನದವರಿಗೆ ಬರೆದೆ ಕೂಡಾ. ಅವರೇನೂ ತಿದ್ದಿಕೊಳ್ಳಲಿಲ್ಲ...ಎಂದು ಬೇಸರ ವ್ಯಕ್ತಪಡಿಸಿದರು.
*******
ಹೆಚ್ಚುಕಮ್ಮಿ ಅದೇ ದಿನಗಳಲ್ಲಿ ನನ್ನ ಸಿಂದಬಾದನ ಆತ್ಮಕಥೆ ಎನ್ನುವ ಕವನಸಂಗ್ರಹ ಪ್ರಕಟವಾಯಿತು. ಆ ಪುಸ್ತಕವನ್ನು ಪ್ರಕಟಿಸಿದ ನರಹಳ್ಳಿಯವರು ಅದರ ಬಿಡುಗಡೆಯ ಕಾರ್ಯಕ್ರಮವನ್ನು ಶೇಷಾದ್ರಿಪುರಮ್ ಕಾಲೇಜಿನಲ್ಲಿ ಇಟ್ಟುಕೊಂಡಿದ್ದರು. ಅಡಿಗರು ಪುಸ್ತಕವನ್ನು ಬಿಡುಗಡೆ ಮಾಡಿದರು. ಸಿಂದಬಾದನ ಆತ್ಮಕಥೆ ಎಂದಿದ್ದರೆ ಸಾಕಾಗಿತ್ತು. ಸಿಂದಾಬಾದನ ಎಂದು ದೀರ್ಘ ಎಳೆಯುವ ಅಗತ್ಯವಿರಲಿಲ್ಲ ಎಂದು ನಗುತ್ತಾ ಹೇಳಿದರು.
********
ನಾನು ಎಂ.ಎ. ಓದುತ್ತಿರುವಾಗ(೧೯೭೨-೭೩) ಕರ್ನಾಟಕಸಂಘಕ್ಕೆ ಅಧ್ಯಕ್ಷನಾಗಿದ್ದೆ. ಅಡಿಗರನ್ನು ಒಮ್ಮೆ ವಿಶೇಷ ಉಪನ್ಯಾಸಕ್ಕೆ ಕರೆದಿದ್ದೆವು. ನನಗೆ ಆಗ ಸಭೆಯಲ್ಲಿ ಮಾತಾಡುವ ಅಭ್ಯಾಸವಿರಲಿಲ್ಲ. ಗಾಭರಿಯಲ್ಲಿ ಅಡಿಗರು ಉಪನ್ಯಾಸ ಮಾಡುತ್ತಾರೆ ಎನ್ನುವ ಬದಲು ಪ್ರವಚನ ಮಾಡುತ್ತಾರೆ ಎಂದುಬಿಟ್ಟೆ! ಅಡಿಗರು ತಾವು ಮಾತಾಡುವಾಗ -ನಾನು ಉಪನ್ಯಾಸ ನೀಡಲಿಕ್ಕೆ ಬಂದಿದ್ದೇನೆ; ಪ್ರವಚನ ಕೊಡಲಿಕ್ಕಲ್ಲ...! ಎಂದರು. ಇಂಥದೇ ಇನ್ನೊಂದು ಪ್ರಸಂಗ: ನನ್ನ ವಿಮುಕ್ತಿ ಕವಿತೆಯನ್ನು ಅವರಿಗೆ ಓದಲಿಕ್ಕೆ ಕೊಟ್ಟಿದ್ದೆ. ಓದಿ ಹಿಂದಿರುಗಿಸುವಾಗ ಕಾರ್ಮುಖ ಎನ್ನುವ ಪ್ರಯೋಗ ಸರಿಯೇ ಯೋಚನೆ ಮಾಡಿ ಎಂದರು. ಆ ರಾತ್ರಿ ಮತ್ತೆ ಅಡಿಗರಿಂದ ದೂರವಾಣಿ. ಕಾರ್ಮುಖ ಇಟ್ಟುಕೊಳ್ಳಿ..ಪರವಾಗಿಲ್ಲ...ಕಾವ್ಯದಲ್ಲಿ ಬರುವ ಅವನ ವ್ಯಕ್ತಿತ್ವಕ್ಕೆ ಈ ಅಪಪ್ರಯೋಗ ಧ್ವನಿಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದರು.
**********
ಅಡಿಗರಿಗೆ ಹೊಸದಾಗಿ ಏನಾದರೂ ಬರೆದಾಗ ಓದಲಿಕ್ಕೆ ಕೊಡುತ್ತಿದ್ದೆ. ಅವರು ಓದುವಾಗ ಕಾತರದಿಂದ ಅವರು ಏನನ್ನುವರೋ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ. ಪದ್ಯವಾದರೆ ಒಂದು ಸಲ ಮೇಲಿಂದ ಕೆಳಗೆ ಉದ್ದಕ್ಕೂ ಕಣ್ಣಾಡಿಸಿ...ಚೆನ್ನಾಗಿದೆ-ಎನ್ನುತ್ತಿದ್ದರು. ಅವರಿಗೆ ಇಷ್ಟವಾಗದಿದ್ದರೆ-ಏನೂ ಹೇಳದೆ ಸುಮ್ಮನೆ ತಲೆಕೊಡವುತ್ತಿದ್ದರು. ನನಗೆ ಪದ್ಯ ಅವರಿಗೆ ಹಿಡಿಸಲಿಲ್ಲ ಎಂಬುದು ಖಾತ್ರಿಯಾಗುತ್ತಿತ್ತು. ಅಡಿಗರೂ ತಾವು ಬರೆದದ್ದನ್ನು ಕಿರಿಯರಿಗೆ ತೋರಿಸಲಿಕ್ಕೆ ಸಂಕೋಚಪಡುತ್ತಿತಲಿಲ್ಲ. ಅವರ ಅನೇಕ ಪದ್ಯಗಳನ್ನು ಹಸ್ತಪ್ರತಿಯಲ್ಲೇ ಓದಿದ್ದೇನೆ. ನಮಗೆ ಅನ್ನಿಸಿದ್ದು ಏನೋ ಹೇಳಿದರೆ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು.
***********
ಆಗ ಅಡಿಗರು ಏನು ಬರೆದರೂ ರೋಮಾಂಚಿತರಾಗುವ ಓದುಗವರ್ಗವಿತ್ತು. ಒಮ್ಮೆ ನನ್ನ ಗೆಳೆಯರೊಬ್ಬರು ಬಂದು ಅಡಿಗರು ಹೊಸ ಪದ್ಯ ಬರೆದಿದ್ದಾರೆ. ಅದರಲ್ಲಿ ಗಂಗಾನದಿಯನ್ನು ಗಂಗಜ್ಜಿ ಎಂದು ಕರೆದಿದ್ದಾರೆ! ಎಂಥ ಅದ್ಭುತ ಪ್ರಯೋಗ ಅಲ್ವಾ?-ಎಂದು ಕಣ್ಣು ಬಾಯಿ ಅರಳಿಸಿದರು. ಅಡಿಗರ ಕೆಲವು ಪ್ರತಿಮೆಗಳು ನನ್ನನ್ನು ಸಹಜವಾಗಿಯೇ ಬೆರಗುಪಡಿಸುತ್ತಿದ್ದವು. ಒಮ್ಮೆ ಮುಗ್ಧವಾಗಿ ಇಂಥಾ ಪ್ರತಿಮೆಗಳು ನಿಮಗೆ ಹೇಗೆ ಹೊಳೆಯುತ್ತವೆ? ಎಂದು ಕೇಳಿದೆ. ಅವು ಧೊಪ್ಪನೆ ಆಕಾಶದಿಂದ ನನ್ನ ಮುಂದೆ ಬಂದು ಬೀಳುತ್ತವೆ! ಎಂದು ನಗುತ್ತಾ ಹೇಳಿದ್ದರು. ನನ್ನ ಸೌಗಂಧಿಕಾ ಕವಿತೆಯನ್ನು ಅಡಿಗರಿಂದ ಓದಿಸಿ ಅಭಿಪ್ರಾಯ ತಿಳಿಯಬೇಕು ಎಂದು ತುಸು ಅಧೈರ್ಯದಿಂದಲೇ ಅವರ ಮನೆಗೆ ಹೋಗಿದ್ದೆ. ಅಧೈರ್ಯ ಯಾಕೆ ಎಂದರೆ ಸೌಗಂಧಿಕಾ ಪದ್ಯವನ್ನು ನಾನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದೆ. ಆ ಸಮಯದಲ್ಲಿ(೧೯೭೭) ಫ್ರೀವರ್ಸ್ ತುಂಬಾ ಚಲಾವಣೆಯಲ್ಲಿತ್ತು. ಅಡಿಗರು ಫ್ರೀವರ್ಸ್, ಮತ್ತು ಸಾಲಿನ ಕೊನೆಯಲ್ಲಿ ಮುಕ್ತಾಯವಾಗದೆ ಮುಂದಿನ ಸಾಲಿಗೆ ಪ್ರವಹಿಸುವ ರೀತಿಯ ಲಯಬದ್ಧ ಲಲಿತರಗಳೆಯ ಓಟದ ಚೌಪದಿಗಳನ್ನು ಬರೆಯುತ್ತಿದ್ದರು. ಷಟ್ಪದಿಯಲ್ಲಿ ಪದ್ಯ ಬರೆದಿದ್ದು ಹಿನ್ನೆಡೆಯಾಯಿತೇನೋ ಎನ್ನುವ ಆತಂಕ ನನಗಿತ್ತು. ಆದರೆ ಅಡಿಗರು ಪದ್ಯ ಓದಿ , ಗಂಭೀರವಾಗಿ ತಲೆದೂಗಿ -ಕೊಡಿ..ಇದನ್ನು ಸಾಕ್ಷಿಯಲ್ಲಿ ಹಾಕೋಣ ಎಂದರು. ಇದು ಸಸ್ಪೆನ್ಸಾಗಿ ಇರಲಿ ಸಾರ್...ನಾನು ಸಾಕ್ಷಿಗೆ ನೀವು ಓದಿ ಒಪ್ಪಿರುವ, ಸಿಂದಾಬಾದನ ಆತ್ಮಕಥೆ ಕೊಡುತ್ತೇನೆ -ಎಂದೆ.
********
ಕಡೆ ಕಡೆಯ ದಿನಗಳಲ್ಲಿ ಅಡಿಗರು ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು. ಒಮ್ಮೆ ಅವರ ಮನೆಗೆ ಹೋಗಿದ್ದಾಗ ತಮ್ಮ ಕಥಾಸಂಗ್ರಹಕ್ಕೆ ಮುನ್ನುಡಿ ಬರೆಯಲು ಕೇಳಿದರು. ನಿಮಗೆ ಏನು ಅನ್ನಿಸುತ್ತೋ ಅದನ್ನು ಬರೆಯಿರಿ. ಸಂಕೋಚ ಬೇಡ..ಎಂದರು. ಅಡಿಗರು ನನಗೆ ಮುನ್ನುಡಿ ಬರೆಯಲು ಹೇಳಿದ್ದು ನನ್ನ ಮೇಲೆ ಅವರಿಗಿದ್ದ ಪ್ರೀತಿಯನ್ನು ತೋರಿಸುವುದಕ್ಕೆ ಅವರು ಕಂಡುಕೊಂಡ ದಾರಿ ಎಂಬುದು ನನ್ನ ತಿಳುವಳಿಕೆ. ಇಂಥಾ ಪ್ರೀತಿಯನ್ನು ಅನೇಕ ಸಾಹಿತ್ಯದಿಗ್ಗಜಗಳಿಂದ ನಾನು ಪಡೆದಿದ್ದೇನೆ. ಇದು ನನ್ನ ಭಾಗ್ಯ ಎನ್ನುವುದು ನನ್ನ ಭಾವನೆ.
*********
ಅಡಿಗರ ಆರೋಗ್ಯ ದಿನೇ ದಿನೇ ಹಸಗೆಡುತ್ತಿತ್ತು. ಅವರನ್ನು ಆ ಸ್ಥಿತಿಯಲ್ಲಿ ನೋಡುವಾಗ ಸಂಕಟವಾಗುತ್ತಿತ್ತು. ಯಾರಾದರೂ ಆಪ್ತರು ಹೋದಾಗ ಅವರ ಕಣ್ಣಿಂದ ನೀರು ಬರುತ್ತಿತ್ತು. ಅವರಿಗೆ ಸಮಾಧಾನ ಹೇಳುವಷ್ಟು ನಾವು ದೊಡ್ಡವರಾಗಿರಲಿಲ್ಲ. ದೂರವಾಣಿ ಮೂಲಕ ಕರೆ ಮಾಡಿ-ಬಂದು ಹೋಗಯ್ಯ ಎನ್ನುತ್ತಿದ್ದರು. ಒಮ್ಮೆ ಹೋದಾಗ ಉಪನಿಷತ್ತಿನ ಬಗ್ಗೆ ಇರುವ ಒಂದು ಪುಸ್ತಕವನ್ನು ಸಹಿಮಾಡಿ ನನಗೆ ಆಶೀರ್ವಾದ ರೂಪವಾಗಿ ಕೊಟ್ಟು, ಇದನ್ನ ಗಂಭೀರವಾಗಿ ಅಭ್ಯಾಸ ಮಾಡು ಎಂದರು. ಅಡಿಗರ ಆಶಿರ್ವಾದದ ಕುರುಹಾಗಿ ಆ ಪುಸ್ತಕವನ್ನು ಈಗಲೂ ಜತನವಾಗಿ ಇಟ್ಟುಕೊಂಡಿದ್ದೇನೆ.
---